'ಗರ್ಭಪಾತಕ್ಕೆ ಅಪ್ಪ ಒತ್ತಾಯಿಸಿದ್ದು ಯಾಕೆ ಅಂತ ಈಗ ತಿಳಿಯುತ್ತಿದೆ!'
ಮಿರ್ಯಾಲಗುಡ(ತೆಲಂಗಾಣ), ಸೆಪ್ಟೆಂಬರ್ 17: 'ಗರ್ಭಪಾತ ಮಾಡಿಸಿಕೊಳ್ಳುವಂತೆ ಅಪ್ಪ ನನ್ನನ್ನು ಪದೇ ಪದೇ ಪೀಡಿಸುತ್ತಿದ್ದುದು ಏಕೆ ಎಂಬುದು ನನಗೆ ಈಗ ತಿಳಿಯುತ್ತಿದೆ!' ಎಂದು ಮಿರ್ಯಾಲಗುಡದಲ್ಲಿ ಕೊಲೆಯಾದ ಪ್ರಣಯ್ ಪತ್ನಿ ಅಮೃತಾ ತಮ್ಮ ಅನುಮಾನ ಹೊರಹಾಕಿದ್ದಾರೆ.
ತೆಲಂಗಾಣದ ಬರ್ಬರ ಹತ್ಯೆ, ಮೊದಲೇ ಎಚ್ಚರಿಕೆ ನೀಡಿದ್ದ ಪೊಲೀಸರು!
'ಪ್ರಣಯ್ ಕೊಲೆಯಾಗುವ ಎರಡು ದಿನ ಮೊದಲು ಗರ್ಭಪಾತ ಮಾಡಿಸಿಕೊಳ್ಳುವಂತೆ ನನ್ನ ತಂದೆ ನನ್ನನ್ನು ಪೀಡಿಸಿದ್ದರು. ನಾನು ಪ್ರಣಯ್ ನನ್ನು ಮದುವೆಯಾದ ಮೇಲೆ ಅಪ್ಪ ನನ್ನೊಂದಿಗೆ ಮಾತನಾಡಿದ್ದೇ ಕಡಿಮೆ. ಅವರು ನನಗೆ ಅಪರೂಪಕ್ಕೆ ಫೋನ್ ಮಾಡಿದರೂ ಪ್ರಣಯ್ ನನ್ನು ಬಿಟ್ಟು ಮನೆಗೆ ವಾಪಸ್ ಬರುವಂತೆ ಕೇಳುತ್ತಿದ್ದರು. ಆದರೆ ಪ್ರಣಯ್ ಹತ್ಯೆಗೂ ಎರಡು ದಿದನ ಮೊದಲು ಕರೆ ಮಾಡಿದ್ದ ಅವರು ನನ್ನ ಬಳಿ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ್ದರು. ಆದರೆ ನಾನು ಅದಕ್ಕೆ ಒಪ್ಪಲಿಲ್ಲ. ಅವರು ಗರ್ಭಪಾತ ಮಾಡಿಸಿಕೊಳ್ಳುವಂತೆ ನನ್ನನ್ನು ಒತ್ತಾಯಿಸಿದ್ದು ಏಕೆ ಎಂಬುದು ಈಗ ತಿಳಿಯುತ್ತಿದೆ. ಪ್ರಣಯ್ ನನ್ನು ಕೊಂದ ನಂತರ ತಮ್ಮ ಹಾದಿಗೆ ನನ್ನ ಮಗು ಮುಳುವಾಗುವುದು ಅವರಿಗೆ ಬೇಕಿರಲಿಲ್ಲ. ಪ್ರಣಯ್ ಸಾವಿನ ನಂತರ ನಾನು ಮತ್ತೆ ಅವರ ಬಳಿ ಹಿಂದಿರುಗುವುದಕ್ಕಿದ್ದ ಅಡ್ಡಿ ಎಂದರೆ ನನ್ನ ಹೊಟ್ಟೆಯಲ್ಲಿದ್ದ ಭ್ರೂಣ. ಆದ್ದರಿಂದ ಆ ಭ್ರೂಣವನ್ನೇ ತೆಗೆಸಲು ಅವರು ಪ್ರಯತ್ನಿಸಿದ್ದರು' ಎಂದು ಅಮೃತಾ ದೂರಿದ್ದಾರೆ.
ನನ್ನ ಗಂಡನನ್ನು ಅಪ್ಪ ಮಾತ್ರ ಕೊಲ್ಲಿಸಲು ಸಾಧ್ಯ: ಗರ್ಭಿಣಿ ಅಮೃತಾ ಮಾತು
ಇಪ್ಪತ್ತೊಂದು ವರ್ಷ ವಯಸ್ಸಿನ ಅಮೃತಾ ಮತ್ತು 24 ವರ್ಷ ವಯಸ್ಸಿನ ಪ್ರಣಯ್ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರ ಜಾತಿ ಮತ್ತು ಮತ ಬೇರೆ ಎಂಬ ಕಾರಣಕ್ಕೆ ಇಬ್ಬರ ಕುಟುಂಬಸ್ಥರಿಗೂ ಈ ಮದುವೆ ಇಷ್ಟವಿರಲಿಲ್ಲ. ಆದರೆ ಮನೆಯವರ ವಿರೋಧದ ನಡುವೆಯೂ ಜನವರಿಯಲ್ಲಿ ಮದುವೆಯಾಗಿದ್ದ ಈ ದಂಪತಿಯನ್ನು ಪ್ರಣಯ್ ಮನೆಯವರು ಸ್ವೀಕರಿಸಿದ್ದರು.
ಮೂರು ತಿಂಗಳ ಗರ್ಭಿಣಿಯಾಗಿದ್ದ ಅಮೃತಾ, ಕಳೆದ ಶುಕ್ರವಾರ ಅಂದರೆ ಸೆ.14 ರಂದು ತೆಲಂಗಾಣದ ಮಿರ್ಯಾಲಗುಡದ ಜ್ಯೋತಿ ಆಸ್ಪತ್ರೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಹೊರಗಿದ್ದ ಪ್ರಣಯ್ ನನ್ನು ಕೆಲ ಅಪರಿಚಿತ ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಪ್ರಣಯ್ ಸಾವಿಗೆ ತನ್ನ ತಂದೆ ಮಾರುತಿ ರಾವ್ ಅವರೇ ಕಾರಣ. ಅವರಲ್ಲದೆ ಇನ್ನ್ಯಾರೂ ಪ್ರಣಯ್ ನನ್ನು ಕೊಲ್ಲುವುದಕ್ಕೆ ಸಾಧ್ಯವೇ ಇಲ್ಲ ಎಂದು ಅಮೃತಾ ದೂರಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ.