ಕೃಷ್ಣಾ ನದಿ ನೀರಿನ ಮರು ಹಂಚಿಕೆಗೆ ತೆಲಂಗಾಣದಿಂದ ಬೇಡಿಕೆ
ನವದೆಹಲಿ, ಅಕ್ಟೋಬರ್ 08: ಕೃಷ್ಣಾ ನದಿ ನೀರು ಹಂಚಿಕೆ ವಿವಾದ ಪುನಃ ಆರಂಭವಾಗುವ ಸಾಧ್ಯತೆ ಇದೆ. ತೆಲಂಗಾಣ ಸರ್ಕಾರ ಇತ್ತೀಚೆಗೆ ಸಲ್ಲಿಸಿದ್ದ ಮನವಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು, ಕರ್ನಾಟಕದ ಹಿತಾಸಕ್ತಿ ಬಗ್ಗೆ ಮತ್ತೊಮ್ಮೆ ಪ್ರಶ್ನೆ ಎದ್ದಿದೆ.
ಕೃಷ್ಣಾ ನದಿ ನೀರನ್ನು ಹೊಸದಾಗಿ ಹಂಚಿಕೆ ಮಾಡುವಂತೆ ನ್ಯಾಯಮಂಡಳಿಗೆ ನಿರ್ದೇಶನ ನೀಡಬೇಕು ಎಂಬುದು ತೆಲಂಗಾಣ ಸರ್ಕಾರದ ಮನವಿಯಾಗಿದೆ. ಮಂಗಳವಾರ ಈ ಕುರಿತು ಸಭೆ ನಡೆದಿದೆ.
ಕೊಯ್ನಾ ಜಲಾಶಯದಿಂದ ಸತತ ನೀರು ಬಿಡುಗಡೆ; ಕೃಷ್ಣಾ ನದಿ ಹೊರಹರಿವು ಹೆಚ್ಚಳ
ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ. ಸಿ. ಚಂದ್ರಶೇಖರ್ ರಾವ್ ಅವರೊಂದಿಗೆ ನಡೆದ ಸಭೆಯಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಪಾಲ್ಗೊಂಡಿದ್ದರು.
ಬಸವ ಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 2.48 ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ
ಕೃಷ್ಣಾ ಹಾಗೂ ಗೋದಾವರಿ ನದಿ ವ್ಯಾಪ್ತಿಯ ನೀರಾವರಿ ಯೋಜನೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಕೃಷ್ಣಾ ನದಿ ನೀರನ್ನು ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶಗಳಿಗೆ ಹಂಚಿಕೆ ಮಾಡಲಾಗಿದೆ. ಕೃಷ್ಣಾ ಜಲವಿವಾದ ನ್ಯಾಯಮಂಡಳಿ 2010ರಲ್ಲಿ ನೀರು ಹಂಚಿಕೆ ಮಾಡಿ ತೀರ್ಪು ನೀಡಿದೆ.
ಭಾರೀ ಮಳೆ: ನಾರಾಯಣಪುರ ಜಲಾಶಯ ಭರ್ತಿ, ಕೃಷ್ಣಾ ನದಿಗೆ ನೀರು ಬಿಡುಗಡೆ
2014ರಲ್ಲಿ ಹೊಸದಾಗಿ ರಚನೆಯಾದ ತೆಲಂಗಾಣ ರಾಜ್ಯ ಕೃಷ್ಣಾ ನದಿ ನೀರಿನ ಮರು ಹಂಚಿಕೆ ಕೋರಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದೆ. ಸರ್ಕಾರ ಈ ಅರ್ಜಿಯನ್ನು ವಾಪಸ್ ಪಡೆದರೆ ಪ್ರಕರಣವನ್ನು ಹೊಸದಾಗಿ ಪರಿಗಣಿಸುವಂತೆ ನ್ಯಾಯಮಂಡಳಿಗೆ ಸೂಚನೆ ನೀಡಲಾಗುತ್ತದೆ ಎಂದು ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ.
ನೀರು ಹಂಚಿಕೆ ಮಾಡಿ ಕೃಷ್ಣಾ ಜಲವಿವಾದ ನ್ಯಾಯಮಂಡಳಿಯು 2010ರಲ್ಲೇ ಐತೀರ್ಪು ನೀಡಿದೆ. ಈ ತೀರ್ಪಿನ ಕುರಿತು ಸ್ಪಷ್ಟೀಕರಣ ಕೋರಿ ಸಲ್ಲಿಸಿದ್ದ ಎಲ್ಲಾ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬ್ರಿಜೇಶ್ ಕುಮಾರ್ ನೇತೃತ್ವದ ನ್ಯಾಯಮಂಡಳಿ 2013ರಲ್ಲಿ ಅಂತಿಮ ವರದಿ ಸಲ್ಲಿಸಿದೆ.
2013ರ ಅಂತಿಮ ಐ-ತೀರ್ಪಿನ ಅಧಿಸೂಚನೆಯನ್ನು ಪ್ರಕಟಿಸುವಂತೆ ಕೇಂದ್ರದ ಮೇಲೆ ಕರ್ನಾಟಕ ಸರ್ಕಾರ ಒತ್ತಡ ಹೇರುತ್ತಿದೆ. ಆದರೆ, ಕೇಂದ್ರ ಸರ್ಕಾರ ನೀರಿನ ಹಂಚಿಕೆ ಬಗ್ಗೆ ಹೊಸದಾಗಿ ಪರಿಗಣನೆ ಮಾಡುವಂತೆ ನ್ಯಾಯಮಂಡಳಿಗೆ ಸೂಚನೆ ನೀಡಿದರೆ ಕರ್ನಾಟಕಕ್ಕೆ ಹಿನ್ನಡೆ ಆಗಲಿದೆ.
2010ರ ಐ ತೀರ್ಪಿನ ಅನ್ವಯ ಕರ್ನಾಟಕಕ್ಕೆ 911, ಆಂಧ್ರಕ್ಕೆ 1001 ಹಾಗೂ ಮಹಾರಾಷ್ಟ್ರಕ್ಕೆ 666 ಟಿಎಂಸಿ ಅಡಿ ನೀರು ಹಂಚಿಕೆ ಮಾಡಲಾಗಿದೆ. ಕರ್ನಾಟಕಕ್ಕೆ ನೀಡಿದ್ದ 4 ಟಿಎಂಸಿ ಅಡಿ ನೀರನ್ನು ಕಡಿತಗೊಳಿಸಿ ಆಂಧ್ರಕ್ಕೆ ಹೆಚ್ಚುವರಿಯಾಗಿ ನೀಡಿತ್ತು.
"ನ್ಯಾಯ ಮಂಡಳಿಯ ಕೃಷ್ಣಾ ನದಿ ನೀರು ಹಂಚಿಕೆ ಪ್ರಕರಣವನ್ನು ಹೊಸದಾಗಿ ವಿಚಾರಣೆ ಮಾಡಿದರೆ ಮಾತ್ರ ತನಗೆ ನ್ಯಾಯ ಸಿಗಲಿದೆ" ಎಂದು ತೆಲಂಗಾಣ ಸರ್ಕಾರ ಸುಪ್ರೀಂಕೋರ್ಟ್ನಲ್ಲಿ ವಾದವನ್ನು ಮಂಡಿಸಿದೆ.
ಕರ್ನಾಟಕದ ಪರ ವಕೀಲರಾದ ಮೋಹನ್ ಕಾತರಕಿ ಅವರು ಈ ಕುರಿತು ಮಾಹಿತಿ ನೀಡಿದ್ದು, "ಕೃಷ್ಣಾ ನದಿ ನೀರಿನ ಮರು ಹಂಚಿಕೆ ಮತ್ತು ಮರು ವಿಚಾರಣೆಯನ್ನು ಕೋರಲು ತೆಲಂಗಾಣ ರಾಜ್ಯಕ್ಕೆ ಅವಕಾಶವಿಲ್ಲ" ಎಂದು ಹೇಳಿದ್ದಾರೆ.