ಅತ್ಯಾಚಾರ ಆರೋಪಿಗಳ ಎನ್ಕೌಂಟರ್: ಸುಪ್ರೀಂಕೋರ್ಟ್ ಮಹತ್ವದ ನಿರ್ಧಾರ
ನವದೆಹಲಿ, ಡಿಸೆಂಬರ್ 11: ತೆಲಂಗಾಣದಲ್ಲಿ ನಡೆದ ಪಶುವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಎನ್ಕೌಂಟರ್ ಮಾಡಿದ ಘಟನೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿಯೊಬ್ಬರು ಸ್ವತಂತ್ರ ತನಿಖೆ ನಡೆಸಲಿದ್ದಾರೆ.
ತೆಲಂಗಾಣ ಪ್ರಕರಣದ ವಿವಾದದ ಕುರಿತು ತನಿಖೆಗೆ ನಿವೃತ್ತ ನ್ಯಾಯಮೂರ್ತಿ ಅವರನ್ನು ತನಿಖೆಗಾಗಿ ನೇಮಿಸುವ ಆದೇಶವವನ್ನು ಗುರುವಾರ ಪ್ರಕಟಿಸುವುದಾಗಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ತಿಳಿಸಿದರು. ಅವರು ದೆಹಲಿಯಿಂದ ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದರು.
ಆಗ ಬಾರದ ಮಾನವ ಹಕ್ಕು ಆಯೋಗದವರು ಈಗೇಕೆ ಬರುತ್ತೀರಿ?: ದಿಶಾ ಕುಟುಂಬದ ಆಕ್ರೋಶ
ಈ ಪ್ರಕರಣದ ಬಗ್ಗೆ ತೆಲಂಗಾಣ ಹೈಕೋರ್ಟ್ ಈಗಾಗಲೇ ಪರಿಶೀಲನೆ ನಡೆಸುತ್ತಿದೆ ಎನ್ನುವುದು ತಮ್ಮ ಗಮನದಲ್ಲಿದೆ ಎಂದರು. ಡಿ 6ರಂದು ನಡೆದ ಎನ್ಕೌಂಟರ್ನಲ್ಲಿ ಭಾಗಿಯಾದ ಪೊಲೀಸ್ ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಗುರುವಾರ ನಡೆಸಲಿದೆ.
ಘಟನೆಯ ಮರುಸೃಷ್ಟಿಗಾಗಿ ಅಪರಾಧ ನಡೆದ ಸ್ಥಳಕ್ಕೆ ಕರೆದೊಯ್ದಾಗ ಆರೋಪಿಗಳು ಹಲ್ಲೆ ನಡೆಸಿ, ಆಯುಧವನ್ನು ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ್ದರು. ಆತ್ಮರಕ್ಷಣೆಗಾಗಿ ಅವರನ್ನು ಕೊಲ್ಲಬೇಕಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಅರ್ಜಿ ಸಲ್ಲಿಸಿದ್ದ ವಕೀಲ
ಮಹಿಳೆಯರ ಮೇಲೆ ಹೆಚ್ಚಾಗುತ್ತಿರುವ ಅಪರಾಧ ಪ್ರಕರಣಗಳನ್ನು ತಡೆಯಲು ಪೊಲೀಸರು ವಿಫಲರಾಗುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರ ಗಮನವನ್ನು ಬೇರೆಡೆಗೆ ತಿರುಗಿಸಲು ನಕಲಿ ಎನ್ಕೌಂಟರ್ ಮಾಡಲಾಗಿದೆ ಎಂದು ಆರೋಪಿಸಿದ್ದ ವಕೀಲ ಜಿ.ಎಸ್. ಮಣಿ, ಸ್ವತಂತ್ರ ತನಿಖೆಗೆ ಒತ್ತಾಯಿಸಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸುಪ್ರೀಂಕೋರ್ಟ್ ಒಪ್ಪಿಕೊಂಡಿದೆ.
ತೆಲಂಗಾಣ ವಿಚಾರಣೆ ತೊಂದರೆಯಿಲ್ಲ
ಎನ್ಕೌಂಟರ್ ಪ್ರಕರಣದ ತನಿಖೆ ನಡೆಸಲು ಸೂಕ್ತ ನಿವೃತ್ತ ನ್ಯಾಯಮೂರ್ತಿಯ ಹೆಸರಿಗಾಗಿ ಸುಪ್ರೀಂಕೋರ್ಟ್ ಹುಡುಕಾಟ ನಡೆಸಿದೆ. ಸಿಜೆಐ ಎಸ್ಎ ಬೊಬ್ಡೆ ನೇತೃತ್ವದ ನ್ಯಾಯಮೂರ್ತಿಗಳಾದ ಎಸ್ಎ ನಜೀರ್ ಮತ್ತು ಸಂಜೀವ್ ಖನ್ನಾ ಅವರನ್ನು ಒಳಗೊಂಡ ಮೂವರು ಸದಸ್ಯರ ನ್ಯಾಯಪೀಠವು ತೆಲಂಗಾಣ ಹೈಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ಮುಂದುವರಿಸಲು ಯಾವುದೇ ತೊಂದರೆಯಿಲ್ಲ ಎಂದಿತು.
ನನ್ನನ್ನೂ ಅಲ್ಲೇ ಸಾಯಿಸಿ: ಅತ್ಯಾಚಾರ ಆರೋಪಿಯ ಪತ್ನಿ
ನ್ಯಾಯ ಪ್ರತೀಕಾರವಾಗಬಾರದು
ಇತ್ತೀಚಿನ ಘಟನೆಗಳನ್ನು ಉಲ್ಲೇಖಿಸಿದ ಸಿಜೆಐ, ಈ ವಾರಾಂತ್ಯದಲ್ಲಿ ಅಪರಾಧಗಳ ನ್ಯಾಯಾಂಗ ವ್ಯವಸ್ಥೆ ಪ್ರಕರಣಗಳ ವಿಲೇವಾರಿಯಲ್ಲಿನ ಸಡಿಲತೆಯಡೆಗಿನ ತನ್ನ ಸ್ಥಿತಿಯನ್ನು ಅವಲೋಕಿಸಬೇಕು ಮತ್ತು ಅಪರಾಧ ಪ್ರಕರಣಗಳ ವಿಲೇವಾರಿಗೆ ತೆಗೆದುಕೊಳ್ಳುವ ಸಮಯದ ಬಗ್ಗೆ ಮರುಪರಿಶೀಲನೆ ನಡೆಸಬೇಕು. ನ್ಯಾಯವು ಎಂದಿಗೂ ತಕ್ಷಣವೇ ನೀಡಲು ಸಾಧ್ಯವಿಲ್ಲ ಮತ್ತು ಅದು ಪ್ರತೀಕಾರವಾದರೆ ನ್ಯಾಯದ ಗುಣವನ್ನು ಕಳೆದುಕೊಳ್ಳುತ್ತದೆ ಎಂದು ಪುನರುಚ್ಚರಿಸಿದರು.
ಡಿ. 13ರವರೆಗೂ ಮೃತದೇಹ ರಕ್ಷಿಸಲು ಸೂಚನೆ
ಎನ್ಕೌಂಟರ್ ನಡೆದ ದಿನ ಡಿ. 9ರವರೆಗೂ ಮೃತ ಆರೋಪಿಗಳ ದೇಹಗಳನ್ನು ಸಂರಕ್ಷಿಸಿ ಇರುವಂತೆ ತೆಲಂಗಾಣ ಸರ್ಕಾರಕ್ಕೆ ಸೂಚಿಸಿದ್ದ ಅಲ್ಲಿನ ಹೈಕೋರ್ಟ್, ಅದನ್ನು ಡಿ. 13ರವರೆಗೂ ಕಾಪಾಡಿಕೊಳ್ಳುವಂತೆ ಸೋಮವಾರ ಮತ್ತೆ ಆದೇಶಿಸಿತ್ತು. ಮೃತದೇಹಗಳು ಯಾವುದೇ ರೀತಿಯಲ್ಲಿ ಹಾಳಾಗದಂತೆ ಸಂರಕ್ಷಿಸಲು ಹೈದರಾಬಾದ್ನ ಗಾಂಧಿ ಆಸ್ಪತ್ರೆಗೆ ಹವಾನಿಯಂತ್ರಿತ ಆಂಬುಲೆನ್ಸ್ಗಳಲ್ಲಿ ಸಾಗಿಸುವಂತೆ ಸೂಚನೆ ನೀಡಿತ್ತು.
ಎನ್ಕೌಂಟರ್ ಮಾಡಿದ್ದೇಕೆ, ನೈಜ ಕಾರಣ ಬಿಚ್ಚಿಟ್ಟ ಪೊಲೀಸ್ ಆಯುಕ್ತ ವಿಶ್ವನಾಥ್