ತೆಲಂಗಾಣ ಎನ್ಕೌಂಟರ್: ತನಿಖಾ ಸಮಿತಿ ರಚಿಸಿದ ಸುಪ್ರೀಂಕೋರ್ಟ್
ನವದೆಹಲಿ, ಡಿಸೆಂಬರ್ 12: ಇತ್ತೀಚೆಗೆ ತೆಲಂಗಾಣದಲ್ಲಿ ನಡೆದ ಪಶುವೈದ್ಯೆ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳ ಎನ್ಕೌಂಟರ್ ಹಿಂದಿನ ಸತ್ಯಾಸತ್ಯತೆಗಳನ್ನು ತಿಳಿಯಲು ತನಿಖೆ ನಡೆಸುವ ಸಲುವಾಗಿ ಸುಪ್ರೀಂಕೋರ್ಟ್ ಗುರುವಾರ ಮೂವರು ಸದಸ್ಯರ ತನಿಖಾ ಆಯೋಗವನ್ನು ರಚಿಸಿದೆ.
ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ವಿ.ಎಸ್ ಸಿರ್ಪುರ್ಕರ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಬಾಂಬೆ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ರೇಖಾ ಬಲ್ಡೋಟಾ ಮತ್ತು ಸಿಬಿಐನ ಮಾಜಿ ಮುಖ್ಯಸ್ಥ ಬಿ. ಕಾರ್ತಿಕೇಯನ್ ಈ ಸಮಿತಿಯ ಇನ್ನಿಬ್ಬರು ಸದಸ್ಯರಾಗಿದ್ದಾರೆ.
ತನಿಖೆಯನ್ನು ಪೂರ್ಣಗೊಳಿಸಿ ವರದಿ ಸಲ್ಲಿಸಲು ಈ ತ್ರಿಸದಸ್ಯ ಸಮಿತಿಗೆ ಸುಪ್ರೀಂಕೋರ್ಟ್ ಆರು ತಿಂಗಳ ಕಾಲಾವಕಾಶ ನೀಡಿದೆ. ಅಲ್ಲದೆ, ಮುಂದಿನ ಆದೇಶದವರೆಗೂ ಯಾವುದೇ ನ್ಯಾಯಾಲಯ ಅಥವಾ ಪ್ರಾಧಿಕಾರವು ಈ ಪ್ರಕರಣವನ್ನು ವಿಚಾರಣೆ ನಡೆಸಲು ಮುಂದಾಗುವಂತಿಲ್ಲ ಎಂದೂ ಸೂಚಿಸಿದೆ.
ಅತ್ಯಾಚಾರ ಆರೋಪಿಗಳ ಎನ್ಕೌಂಟರ್: ಸುಪ್ರೀಂಕೋರ್ಟ್ ಮಹತ್ವದ ನಿರ್ಧಾರ
ಹೀಗಾಗಿ ಆರೋಪಿಗಳ ಎನ್ಕೌಂಟರ್ಗೆ ಸಂಬಂಧಿಸಿದಂತೆ ತೆಲಂಗಾಣ ಸರ್ಕಾರ ರಚಿಸಿರುವ ಎಸ್ಐಟಿ ಮತ್ತು ರಾಷ್ಟ್ರೀಯ ಮಾನವಹಕ್ಕುಗಳ ಆಯೋಗ (ಎನ್ಎಚ್ಆರ್ಸಿ) ಆರಂಭಿಸಿರುವ ತನಿಖೆಗಳನ್ನು ಸುಪ್ರೀಂಕೋರ್ಟ್ನ ಮುಂದಿನ ಆದೇಶದವರೆಗೂ ಸ್ಥಗಿತಗೊಳಿಸಬೇಕಾಗುತ್ತದೆ.
ತನಿಖೆಯ ಅಗತ್ಯವಿದೆ
ಎನ್ಕೌಂಟರ್ ಘಟನೆ ನಡೆದ ಬಗೆಯನ್ನು ಗಮನಿಸಿದಾಗ ಅದರ ಕುರಿತು ತನಿಖೆ ನಡೆಸುವುದು ಅಗತ್ಯವಾಗಿರುವುದು ತೋರುತ್ತದೆ ಎಂದು ತೆಲಂಗಾಣ ಸರ್ಕಾರದ ಪರವಾಗಿ ಹಾಜರಿದ್ದ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ಅವರಿಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ಹೇಳಿದರು.
ಆಗ ಬಾರದ ಮಾನವ ಹಕ್ಕು ಆಯೋಗದವರು ಈಗೇಕೆ ಬರುತ್ತೀರಿ?: ದಿಶಾ ಕುಟುಂಬದ ಆಕ್ರೋಶ
ಅರ್ಜಿ ಸಲ್ಲಿಸಿದ್ದ ವಕೀಲರು
ತೆಲಂಗಾಣದಲ್ಲಿ ನಡೆದ ಅತ್ಯಾಚಾರ ಪ್ರಕರಣದ ನಾಲ್ವರು ಆರೋಪಿಗಳ ಎನ್ಕೌಂಟರ್ ಪ್ರಕರಣದ ವಿರುದ್ಧ ವಕೀಲರಾದ ಜಿ.ಎಸ್. ಮಣಿ ಮತ್ತು ಪ್ರದೀಪ್ ಕುಮಾರ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದ್ದರು. ಈ ಆರೋಪಿಗಳ ಎನ್ಕೌಂಟರ್ಗೆ ಸಂಬಂಧಿಸಿದಂತೆ ನಿಷ್ಪಕ್ಷಪಾತ ತನಿಖೆಯ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿತು.
ಪಕ್ಷಾತೀತ ತನಿಖೆಯ ಅಗತ್ಯವಿದೆ
'ತೆಲಂಗಾಣದಲ್ಲಿ ಪಶುವೈದ್ಯೆಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಆರೋಪಿಗಳ ಎನ್ಕೌಂಟರ್ ಹತ್ಯೆಗಳ ಕುರಿತು ಪಕ್ಷಾತೀತ ತನಿಖೆ ನಡೆಯಬೇಕು ಎಂಬ ಅಭಿಪ್ರಾಯವನ್ನು ನಾವು ಪರಿಗಣಿಸುತ್ತಿದ್ದೇವೆ. ಎನ್ಕೌಂಟರ್ ಕುರಿತಂತೆ ನಿಮ್ಮ (ತೆಲಂಗಾಣ) ಆಯಾಮದ ಪ್ರತಿಪಾದನೆಯನ್ನು ತನಿಖೆಗೆ ಒಳಪಡಿಸಬೇಕಿದೆ' ಎಂದು ನ್ಯಾಯಪೀಠ ಹೇಳಿದೆ.
ನನ್ನನ್ನೂ ಅಲ್ಲೇ ಸಾಯಿಸಿ: ಅತ್ಯಾಚಾರ ಆರೋಪಿಯ ಪತ್ನಿ
ಪೊಲೀಸರಿಗೆ ಗುಂಡೇಟು ಬಿದ್ದಿಲ್ಲ
'ಆರೋಪಿಗಳು ಕಲ್ಲು ಮತ್ತು ಬಡಿಗೆಯಿಂದ ಹಲ್ಲೆ ನಡೆಸಿರುವುದರಿಂದ ಪೊಲೀಸರು ಗಾಯಗೊಂಡಿದ್ದಾರೆ. ಆದರೆ ಯಾವ ಪೊಲೀಸರೂ ಗುಂಡಿನಿಂದ ಗಾಯಗೊಂಡಿಲ್ಲ. ಪೊಲೀಸರು ತಪ್ಪಿತಸ್ಥರು ಎಂದು ನಾವು ಹೇಳುತ್ತಿಲ್ಲ. ನಮಗೆ ಅದು ತಿಳಿದಿಲ್ಲ. ನಾವು ತನಿಖೆಗೆ ಆದೇಶಿಸುತ್ತೇವೆ ಮತ್ತು ನೀವು ಅದಕ್ಕೆ ಸಹಕಾರ ನೀಡುತ್ತೀರಿ' ಎಂದು ನ್ಯಾಯಮೂರ್ತಿಗಳಾದ ಎಸ್ಎ ನಜೀರ್ ಮತ್ತು ಸಂಜೀವ್ ಖನ್ನಾ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿತು.
ಸುದ್ದಿ ಪ್ರಕಟಿಸುವಂತಿಲ್ಲ
ಈ ಪ್ರಕರಣದ ತನಿಖೆಗೆ ಈಗಾಗಲೇ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಲಾಗಿದೆ ಎಂದು ತೆಲಂಗಾಣ ಸರ್ಕಾರದ ಪ್ರತಿಪಾದನೆಯನ್ನು ಸುಪ್ರೀಂಕೋರ್ಟ್ ತಳ್ಳಿ ಹಾಕಿತು. 'ಎಸ್ಐಟಿಯನ್ನು ಅತ್ಯಾಚಾರ ಆರೋಪಿಗಳ ಸಾವಿಗೆ ಕಾರಣವನ್ನು ತಿಳಿಯಲು ರಚಿಸಲಾಗಿದೆಯೇ ವಿನಾ, ತಪ್ಪಿತಸ್ಥರ ವಿಚಾರಣೆಗೆ ಅಲ್ಲ' ಎಂದು ಹೇಳಿತು. ಅರ್ಜಿದಾರ ಎಂಎಲ್ ಶರ್ಮಾ ಅವರ ಮನವಿಯಂತೆ, ತನಿಖಾ ಸಮಿತಿ ನಡೆಸುವ ವಿಚಾರಣೆಯ ವಿವರಗಳನ್ನು ವರದಿ ಮಾಡದಂತೆ ವಿದ್ಯುನ್ಮಾನ ಹಾಗೂ ಮುದ್ರಣ ಮಾಧ್ಯಮಗಳಿಗೆ ನೋಟಿಸ್ ಜಾರಿಮಾಡಿತು.