50 ಲಕ್ಷ ರೂ ಪರಿಹಾರ ಕೊಡಿ: ತೆಲಂಗಾಣ ಅತ್ಯಾಚಾರ ಆರೋಪಿಗಳ ಸಂಬಂಧಿಕರಿಂದ ಒತ್ತಾಯ
ಹೈದರಾಬಾದ್, ಡಿಸೆಂಬರ್ 20: ಪಶುವೈದ್ಯೆ ದಿಶಾ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಪೊಲೀಸರಿಂದ ಎನ್ಕೌಂಟರ್ಗೆ ಒಳಗಾದ ಆರೋಪಿಗಳ ಮೃತದೇಹಗಳ ಹಸ್ತಾಂತರದ ಕುರಿತಾದ ಅರ್ಜಿ ವಿಚಾರಣೆ ತೆಲಂಗಾಣ ಹೈಕೋರ್ಟ್ನಲ್ಲಿ ಶುಕ್ರವಾರ ನಡೆಯಲಿದೆ.
ದಿಶಾ ಅತ್ಯಾಚಾರ ಪ್ರಕರಣದ ನಾಲ್ವರು ಆರೋಪಿಗಳನ್ನು ಡಿ. 6ರಂದು ಎನ್ಕೌಂಟರ್ನಲ್ಲಿ ಹತ್ಯೆ ಮಾಡಲಾಗಿತ್ತು. ಅವರ ಮೃತದೇಹಗಳನ್ನು ಅಂತ್ಯಸಂಸ್ಕಾರ ಮಾಡದೆ ಇನ್ನೂ ಸಂರಕ್ಷಿಸಿ ಇಡಲಾಗಿದೆ.
ಹೈದರಾಬಾದ್ ಎನ್ ಕೌಂಟರ್; ಪೊಲೀಸರಿಗೆ ಹೊಸ ಸಂಕಷ್ಟ!
ಆರೋಪಿಗಳ ಮೃತದೇಹಗಳನ್ನು ಪುನರ್ ಪರಿಶೀಲನೆ ಮಾಡಬೇಕು ಮತ್ತು ಅವುಗಳನ್ನು ಅವರ ಕುಟುಂಬದವರಿಗೆ ಹಸ್ತಾಂತರ ಮಾಡಬೇಕು ಎಂದು ಕೋರಿ ಅಸೋಸಿಯೇಷನ್ ಆಫ್ ಪೀಪಲ್ಸ್ ಲಾಯರ್ ಸಂಘಟನೆಯ ರಾಘವೇಂದ್ರ ಪ್ರಸಾದ್ ಎಂಬುವವರು ಅರ್ಜಿ ಸಲ್ಲಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ತನಿಖಾ ಸಂಸ್ಥೆ ಮತ್ತು ನ್ಯಾಯಾಲಯಗಳು ಆದೇಶ ನೀಡುವಂತಿಲ್ಲ ಹಾಗೂ ತನಿಖೆ ನಡೆಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದ್ದರಿಂದ ಮುಖ್ಯ ನ್ಯಾಯಮೂರ್ತಿ ರಾಘವೇಂದ್ರ ಸಿಂಗ್ ಚೌಹಾಣ್ ಮತ್ತು ನ್ಯಾಯಮೂರ್ತಿ ಎ. ಅಭಿಷೇಕ್ ರೆಡ್ಡಿ ಅವರನ್ನು ಒಳಗೊಂಡ ನ್ಯಾಯಪೀಠ, ಅರ್ಜಿ ವಿಚಾರಣೆಗೆ ನಿರಾಕರಿಸಿತ್ತು.
ವಿಚಾರಣೆ ನಡೆಸಲು ಅವಕಾಶ
ಆದರೆ ಅರ್ಜಿದಾರರ ಪರ ವಕೀಲ ಎಂ. ವೆಂಕಣ್ಣ, ಮೃತದೇಹಗಳಿಂದ ಸಾಕ್ಷ್ಯಗಳನ್ನು ಸಂಗ್ರಹಿಸಲು ಮತ್ತು ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸುವಂತೆ ಹೈಕೋರ್ಟ್ಗೆ ಸುಪ್ರೀಂಕೋರ್ಟ್ ಸೂಚಿಸಿರುವ ಹೊಸ ಆದೇಶವನ್ನು ನ್ಯಾಯಪೀಠಕ್ಕೆ ಗಮನಕ್ಕೆ ತಂದಿದ್ದರು.
ಮೃತದೇಹ ಸಂರಕ್ಷಿಸಲು ಸೂಚನೆ
ಡಿ. 6ರಂದು ಎನ್ಕೌಂಟರ್ಗೆ ಒಳಗಾದ ಆರೋಪಿಗಳ ಮೃತದೇಹವನ್ನು ಮರುಪರಿಶೀಲನೆಗೆ ಒಳಪಡಿಸಬೇಕು ಎಂಬ ಮನವಿ ಪುರಸ್ಕರಿಸಿದ್ದ ತೆಲಂಗಾಣ ಹೈಕೋರ್ಟ್ ಡಿ. 13ರವರೆಗೂ ಮೃತದೇಹಗಳನ್ನು ಕಾಪಾಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಬಳಿಕ ಸುಪ್ರೀಂಕೋರ್ಟ್, ಮುಂದಿನ ಆದೇಶ ನೀಡುವವರೆಗೂ ಮೃತದೇಹಗಳನ್ನು ಸಂರಕ್ಷಿಸಿಡುವಂತೆ ಹೇಳಿತ್ತು.
ಹೈದರಾಬಾದ್ ಪಶುವೈದ್ಯೆ ಅತ್ಯಾಚಾರಿಗಳ ಬಗ್ಗೆ ಹೊರಬಿತ್ತು ಸ್ಫೋಟಕ ಮಾಹಿತಿ
ಸಿಬಿಐ ತನಿಖೆ ನಡೆಯಲಿ
ದಿಶಾ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಎನ್ಕೌಂಟರ್ಗೆ ಒಳಗಾದ ನಾಲ್ವರು ಆರೋಪಿಗಳ ಸಂಬಂಧಿಕರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಈ ಎನ್ಕೌಂಟರ್ ಅನುಮಾನಾಸ್ಪದವಾಗಿದ್ದು, ಹತ್ಯೆಯ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಸೈಬರಾಬಾದ್ ಪೊಲೀಸ್ ಕಮಿಷನರ್ ವಿಶ್ವನಾಥ್ ಸಿ ಸಜ್ಜನರ್ ಅವರ ನಡವಳಿಕೆಯ ಕುರಿತೂ ಸಿಬಿಐ ತನಿಖೆಯಾಗಬೇಕು ಎಂದು ಮನವಿ ಮಾಡಿದ್ದಾರೆ.
50 ಲಕ್ಷ ರೂ. ಪರಿಹಾರ ಕೊಡಿ
ಎನ್ಕೌಂಟರ್ನಲ್ಲಿ ಮೃತಪಟ್ಟ ಎಲ್ಲ ನಾಲ್ವರು ಆರೋಪಿಗಳ ಕುಟುಂಬದವರಿಗೆ ತಲಾ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಸಂಬಂಧಿಕರು ಸುಪ್ರೀಂಕೋರ್ಟ್ಗೆ ಸಲ್ಲಿಸಿರುವ ಅರ್ಜಿಯಲ್ಲಿ ಕೋರಿದ್ದಾರೆ.
ತೆಲಂಗಾಣ ಎನ್ಕೌಂಟರ್: ತನಿಖಾ ಸಮಿತಿ ರಚಿಸಿದ ಸುಪ್ರೀಂಕೋರ್ಟ್
ಎನ್ಕೌಂಟರ್ ಪ್ರಕರಣದ ತನಿಖೆಗೆ ಸುಪ್ರೀಂಕೋರ್ಟ್ ಡಿ. 12ರಂದು ನಿವೃತ್ತ ನ್ಯಾಯಮೂರ್ತಿ ವಿ.ಎಸ್. ಸಿರ್ಪುರ್ಕರ್ ನೇತೃತ್ವದಲ್ಲಿ ಮೂವರು ಸದಸ್ಯರ ತನಿಖಾ ಆಯೋಗ ರಚಿಸಿತ್ತು. ಆರು ತಿಂಗಳ ಒಳಗೆ ಈ ಆಯೋಗ ವರದಿ ಸಲ್ಲಿಸಬೇಕಿದೆ. ನ್ಯಾಯವಾದಿ ಕೆ. ಪರಮೇಶ್ವರ್ ಅವರನ್ನು ಆಯೋಗದ ವಕೀಲರನ್ನಾಗಿ ನೇಮಿಸಲಾಗಿದೆ. ತನ್ನ ಮುಂದಿನ ಆದೇಶದವರೆಗೂ ಯಾವ ನ್ಯಾಯಾಲಯವೂ ಈ ಕುರಿತು ಆದೇಶ ನೀಡುವಂತಿಲ್ಲ ಮತ್ತು ತನಿಖಾ ಸಂಸ್ಥೆಗಳು ತನಿಖೆ ಕೈಗೊಳ್ಳುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.