ಬಿಜೆಪಿ-ಕಾಂಗ್ರೆಸ್ ಹೊರತಾದ ತೃತೀಯ ರಂಗ ಕನಸು: ಪ್ರವಾಸ ಆರಂಭಿಸಿದ ಕೆಸಿಆರ್
ಹೈದರಾಬಾದ್, ಮೇ 21: 2024 ಲೋಕಸಭಾ ಚುನಾವಣೆಗೆ ಮುನ್ನ ರಾಷ್ಟ್ರ ರಾಜಕಾರಣಕ್ಕೆ ಸೇರುವ ಆಲೋಚನೆಯಲ್ಲಿರುವ ತೆಲಂಗಾಣ ರಾಷ್ಟ್ರೀಯ ಸಮಿತಿ ಪಕ್ಷದ ಮುಖ್ಯಸ್ಥ ಹಾಗೂ ತೆಲಂಗಾಣ ಮುಖ್ಯಮಂತ್ರಿ ಬಹುರಾಜ್ಯಗಳ ಪ್ರವಾಸವನ್ನು ಆರಂಭಿಸಿದ್ದಾರೆ. ಪಕ್ಷವನ್ನು ದಕ್ಷಿಣ ಭಾರತದಿಂದಾಚೆಗೆ ತೆಗೆದುಕೊಂಡು ಹೋಗಬೇಕೆಂಬ ಮಹದಾಸೆಯನ್ನು ಹೊಂದಿರುವ ಕೆಸಿಆರ್ ನವದೆಹಲಿಗೆ ತೆರಳಿದ್ದು, ಉತ್ತರ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಟಿಆರ್ಎಸ್ ಪಕ್ಷದ ಕಚೇರಿಯ ಪ್ರಕಟಣೆಯ ಪ್ರಕಾರ, ಚಂದ್ರಶೇಖರ್ ರಾವ್, ಮುಂದಿನ ಕೆಲವು ವಾರಗಳಲ್ಲಿ ದೆಹಲಿ, ಚಂಡೀಗಢ, ಕರ್ನಾಟಕ, ಪಶ್ಚಿಮ ಬಂಗಾಳ, ಬಿಹಾರ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಹೊರತುಡಿಸಿ ವಿವಿಧ ಪಕ್ಷಗಳ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ. ಮತ್ತು ಪಕ್ಷದ ಮೂಲಗಳ ಪ್ರಕಾರ ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಆರ್ಥಿಕ ತಜ್ಞರು ಕೂಡ ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ.
ಈಗಾಗಲೆ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕೂಡ ಕೆಸಿಆರ್ ಅವರನ್ನು ದೆಹಲಿಯ ಅವರ ಮನೆಗೆ ತೆರಳಿ ರಾಷ್ಟ್ರ ರಾಜಕೀಯದ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ఉత్తరప్రదేశ్ మాజీ సీఎం, సమాజ్వాది పార్టీ అధినేత శ్రీ అఖిలేష్ యాదవ్, ముఖ్యమంత్రి శ్రీ కేసీఆర్ గారితో సమావేశమయ్యారు.
— TRS Party (@trspartyonline) May 21, 2022
ఢిల్లీ లోని సీఎం కేసిఆర్ గారి అధికారిక నివాసంలో వారి భేటీ కొనసాగుతున్నది. ఈ సందర్భంగా పలు జాతీయ అంశాల పై ఇరువురు నేతలు చర్చిస్తున్నారు. pic.twitter.com/Undb60eCPx
ಮೃತ ರೈತ ಕುಟುಂಬಸ್ಥರ ಭೇಟಿ
ಡೆಲ್ಲಿ ಮತ್ತು ಚಂಡೀಗಡದಲ್ಲಿ ರಾಜಕೀಯ ನಾಯಕರ ಭೇಟಿಯ ನಂತರ ತೆಲಂಗಾಣ ಮುಖ್ಯಮಂತ್ರಿ ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳ ವಿರುದ್ಧ ಹೋರಾಟ ನಡೆಸುವ ವೇಳೆ ಮೃತಪಟ್ಟ 600 ಕ್ಕೂ ಹೆಚ್ಚು ರೈತರ ಕುಟುಂಬಸ್ಥರನ್ನು ಭೇಟಿ ಮಾಡಲಿದ್ದಾರೆ. ಕಳೆದ ವರ್ಷ ನವೆಂಬರ್ನಲ್ಲಿ ಕೆಸಿಆರ್ ಕಾನೂನು ಹೋರಾಟದ ವೇಳೆ ನಡೆದ ಸಂಘರ್ಷದಲ್ಲಿ ಮೃತಪಟ್ಟಿದ್ದ ರೈತ ಕುಟುಂಬಸ್ಥರಿಗೆ ತಲಾ 3 ಲಕ್ಷ ಪರಿಹಾರ ಘೋಷಿಸಿದ್ದರು. ಆದರೆ ಅವರ ಈ ಉದ್ದೇಶ ಉತ್ತಮವಾಗಿದ್ದರೂ ರಾಜ್ಯದಲ್ಲಿನ ರೈತರನ್ನು ಕಡೆಗಣಿಸಿದ್ದಾರೆ ಎಂದು ಟೀಕೆಗೆ ಗುರಿಯಾಗಿತ್ತು.
ಡೆಲ್ಲಿ-ಪಂಜಾಬ್ ಸಿಎಂಗಳ ಜೊತೆ ಚರ್ಚೆ
ಶನಿವಾರ ಆಮ್ ಆದ್ಮಿ ಪಕ್ಷದ ನಾಯಕ ಮತ್ತು ಡೆಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಜೊತೆಗೆ ಲೋಕಸಭಾ ಚುನಾವಣೆಯ ಬಗ್ಗೆ ಚರ್ಚೆ ನಡೆಸಲಿದ್ದಾರೆ. ನಂತರ ಇವರಿಬ್ಬರ ಸಮ್ಮುಖದಲ್ಲಿ ಮೃತ ರೈತ ಕುಟುಂಬಗಳಿಗೆ 3 ಲಕ್ಷ ರೂಪಾಯಿಗಳ ಚೆಕ್ಗಳನ್ನು ಹಸ್ತಾಂತರಿಸಲಿದ್ದಾರೆ ಎಂದು ತಿಳಿದುಬಂದಿದೆ.
ಎಚ್ಡಿ ದೇವೇಗೌಡರ ಜೊತೆಗೆ ಚರ್ಚೆ
ಡೆಲ್ಲಿ ಪ್ರವಾಸದ ನಂತರ ಕೆಸಿಆರ್ ತಮ್ಮ ಪ್ರವಾಸದ ಮುಂದಿನ ಭಾಗವಾಗಿ ಕರ್ನಾಟಕಕ್ಕೆ ಬರಲಿದ್ದಾರೆ. ಅವರು ಬೆಂಗಳೂರಿನಲ್ಲಿ ಜಾತ್ಯತೀತ ಜನತಾ ದಳದ ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರನ್ನು ಭೇಟಿ ಮಾಡಲಿದ್ದಾರೆ. ಈ ಭೇಟಿಯ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ವಿರೋಧಿ ಮೂರನೇ ರಂಗ ರಚನೆಯ ಕುರಿತು ದೇವೇಗೌಡರೊಂದಿಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
ವೆಸ್ಟ್ ಬೆಂಗಾಲ್, ಬಿಹಾರ ಪ್ರವಾಸ
ಕರ್ನಾಟಕ ಪ್ರವಾಸ ಮುಗಿಯುತ್ತಿದ್ಧಂತೆ ಚಿಕ್ಕ ವಿರಾಮ ತೆಗೆದುಕೊಂಡು ಹೈದರಾಬಾದ್ಗೆ ವಾಪಾಸ್ ಆಗಲಿರುವ ಕೆಸಿಆರ್, ನಂತರ ಪಶ್ಚಿಮ ಬಂಗಾಳ ಮತ್ತು ಬಿಹಾರ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಅಲ್ಲಿನ ನಾಯಕರ ಜೊತೆ ತೃತೀಯ ರಂಗದ ಬಗ್ಗೆ ಸಂವಾದ ನಡೆಸಲಿದ್ದಾರೆ. ಈ ಭೇಟಿಯ ವೇಳೆ ಭಾರತ-ಚೀನಾ ಸೈನಿಕರ ನಡುವಿನ ಗಲ್ವಾನ್ ಕಣಿವೆಯಲ್ಲಿ ನಡೆದಿದ್ದ ಗಲಾಟೆಯಲ್ಲಿ ಪ್ರಾಣ ಕಳೆದುಕೊಂಡ ಕುಟುಂಬಸ್ಥರನ್ನು ಭೇಟಿ ಮಾಡಿ, ಆರ್ಥಿಕ ನೆರವು ನೀಡಲಿದ್ದಾರೆ ಎಂದು ತಿಳಿದುಬಂದಿದೆ.