'ಅಮೃತಾ, ನೀನು ನಿಮ್ಮಪ್ಪನನ್ನು ಎಂದೋ ಸಾಯಿಸಿದ್ದೀಯಾ!'
ತೆಲಂಗಾಣದ ಮರ್ಯಾದಾ ಹತ್ಯೆಯ ಪ್ರಕರಣದ ಕುರಿತು ಇಡೀ ದೇಶದಲ್ಲೂ ಆಕ್ರೋಶ ವ್ಯಕ್ತವಾಗಿದೆ. ಮುಗ್ಧ ದಂಪತಿಯನ್ನು ಬೇರೆ ಮಾಡಿದ ಅಮೃತಾ ತಂದೆಯ ವಿರುದ್ಧ ಇಡೀ ದೇಶವೂ ಧ್ವನಿ ಎತ್ತುತ್ತಿದ್ದರೆ, ಕೆಲವರು ಅಮೃತಾ ತಂದೆಯ ಪರ ಅಭಿಯಾನ ಆರಂಭಿಸಿದ್ದಾರೆ.
ಫೇಸ್ ಬುಕ್ ಯೂಸರ್ ಒಬ್ಬರು ಮಾರುದ್ದದ ಪೋಸ್ಟ್ ಹಾಕಿ, ಅಮೃತಾ ಅವರಿಗೆ ಪತ್ರ ಬರೆದಿದ್ದಾರೆ! ತೆಲಂಗಾಣದ ಮಿರ್ಯಾಲಗುಡದಲ್ಲಿ ಸೆ.14 ರಂದು ನಡೆದ ಪ್ರಣಯ್ ಎಂಬ ಯುವಕನ ಹತ್ಯೆಗೆ ಸಂಬಂಧಿಸಿದಂತೆ ಪ್ರಣಯ್ ಪತ್ನಿ ಅಮೃತಾ ಅವರ ತಂದೆ ಮಾರುತಿ ರಾವ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ತೆಲಂಗಾಣ ಹತ್ಯೆ: ಅಮ್ಮನಿಗೆ ಮಾಡಿದ ಫೋನ್ ಕರೆಗಳೇ ಪತಿಯ ಜೀವಕ್ಕೆ ಮುಳುವಾದವೇ?
ಮಾರುತಿ ರಾವ್ ಅವರ ಬಂಧನವನ್ನು ಖಂಡಿಸಿರುವ ಅವರು, ಅಮೃತಾ ಅವರು ಪಾಲಕರ ಇಷ್ಟದ ಹೊರತಾಗಿಯೂ ಬೇರೆ ಜಾತಿಯ ಯುವಕನನ್ನು ಮದುವೆಯಾಗಿದ್ದು ತಪ್ಪು ಎಂದಿದ್ದಾರೆ. ಫೆಸ್ ಬುಕ್ ನಲ್ಲಿ ಅವರು ಹಾಕಿದ ಮಾರುದ್ದದ ಪತ್ರದ ವಿವರ ಇಲ್ಲಿದೆ.
ನಿಮ್ಮಪ್ಪನನ್ನು ನೀನು ಎಂದೋ ಸಾಯಿಸಿದ್ದೀಯಾ!
"ಅಮೃತಾ, ನಿಮ್ಮ ತಂದೆಯೇ ನಿನ್ನ ಪತಿ ಪ್ರಣಯ್ ನನ್ನು ಕೊಂದಿದ್ದು ಎಂದಿದ್ದೆಯಲ್ಲ, ನೀನು ಈಗಾಗಲೇ ಮಾನಸಿಕವಾಗಿ ನಿನ್ನ ತಂದೆಯನ್ನು ಕೊಂದಿದ್ದೀಯಾ ಎಂಬ ಅರಿವು ನಿನಗಿದೆಯಾ? ಅವರು ಎಷ್ಟೆಲ್ಲ ಕಷ್ಟಪಟ್ಟು ನಿನ್ನನ್ನು ಬೆಳೆಸಿದರು? ನಿನಗಾಗಿ ಏನೆಲ್ಲ ಮಾಡಿದರು? ವಿದ್ಯೆ ಕೊಟ್ಟರು, ನಿನ್ನನ್ನು ಮನೆಯ ಮಹಾಲಕ್ಷ್ಮಿ ಎಂದರು... ಈ ಎಲ್ಲವನ್ನೂ ಮರೆತೇ ಬಿಟ್ಟೆಯಾ? ನಿನ್ನ ತಂದೆಗೆ ಮರಣದಂಡನೆಯಾಗಬೇಕು ಎಂದು ಬಯಸುವ ನಿನ್ನ ಮನಸ್ಸು ಅದೆಷ್ಟು ಕ್ರೂರಿಯಾಗಿರಬಹುದು?" ಎಂದು ಫೇಸ್ ಬುಕ್ ನಲ್ಲಿ ವ್ಯಕ್ತಿಯೊಬ್ಬರು ಬರೆದಿದ್ದಾರೆ.
ನಿನಗೆ ಜನ್ಮ ನೀಡಿದ್ದೇ ಅವರು ಮಾಡಿದ ತಪ್ಪು!
"ಮಾರುತಿ ರಾವ್ ಅವರು ಮಾಡಿದ ಅತಿ ದೊಡ್ಡ ತಪ್ಪು ಯಾವುದು ಗೊತ್ತಾ? ನಿನಗೆ ಜನ್ಮನೀಡಿದ್ದು! ಎಷ್ಟು ವರ್ಷಗಳಿಂದ ನೀನು ಅವರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದೀಯಾ ಅನ್ನೋದು ಗೊತ್ತಾ? ನನಗೇನಾದರೂ ಮದುವೆಯಾಗಿ, ಮಗಳು ಹುಟ್ಟಿದರೆ ಆಕೆ ನಿನ್ನಂತೆ ಮಾತ್ರ ಆಗದಿದ್ದರೆ ಸಾಕು ಎಂದು ದೇವರಲ್ಲಿ ಬೇಡುತ್ತೇನೆ" ಎಂದು ಸಹ ಅವರು ಉದ್ವೇಗ ಭರಿತ ಭಾವದಲ್ಲಿ ಬರೆದಿದ್ದಾರೆ.
ಸ್ಫೋಟಕ ಮಾಹಿತಿ: ಪ್ರಣಯ್ ಹತ್ಯೆಗೆ 4 ಬಾರಿ ನಡೆದಿತ್ತು ಸಂಚು!
ಶಾಲೆಗೆ ಕಳಿಸಿದರೆ ನೀನು ಮಾಡಿದ್ದೇನು?
'ಮನೆಯ ಮಹಾಲಕ್ಷ್ಮಿ ನೀನು. ಓದಿ ದೊಡ್ಡ ಮನುಷ್ಯಳಾಗು ಎಂದು ನಿನ್ನನ್ನು ಶಾಲೆಗೆ ಕಳಿಸಿದರೆ ನೀನು ಮಾಡಿದ್ದೇನು? ಒಂಬತ್ತನೇ ತರಗತಿ ಓದುವಾಗಲೇ ಪ್ರೀತಿಯಲ್ಲಿ ಬಿದ್ದೆ. ನಿನ್ನನ್ನು ಶಾಲೆಗೆ ಕಳಿಸಿದ್ದು, ಓದುವುದಕ್ಕೋ, ಪ್ರೀತಿ-ಪ್ರೇಮ ಎಂದು ಓಡಾಡುವುದಕ್ಕೋ? ತಮ್ಮ ಮಕ್ಕಳ ಬಗ್ಗೆ ಪಾಲಕರು ಎಷ್ಟೆಲ್ಲ ಕನಸು ಕಾಣುತ್ತಾರೆ ಗೊತ್ತಾ? ಅವರಿಗೆ ನೀನು ನೀಡುವ ಉಡುಗೊರೆ ಇದೇನಾ?' ಎಂದು ಅವರು ಪ್ರಶ್ನಿಸಿದ್ದಾರೆ.
'ಪ್ರಣಯ್ ನನಗೆ ನೀಡಿದ ಅತ್ಯಮೂಲ್ಯ ಉಡುಗೊರೆ ನನ್ನ ಗರ್ಭದಲ್ಲಿದೆ'
ಪಾಲಕರಿಗೆ ಸೆಡ್ಡು ಹೊಡೆದು ಓಡಿಹೋದೆ!
"ಅಮೃತಾ, ನೀನು ಹುಡುಗನೊಬ್ಬನ ಪ್ರೇಮದ ಬಲೆಗೆ ಬಿದ್ದು, ಪಾಲಕರಿಗೂ ತಿಳಿಸದೆ ಓಡಿಹೋದೆ. ಅವರನ್ನು ಒಪ್ಪಿಸಲೂ ಪ್ರಯತ್ನಿಸಲಿಲ್ಲ. ನಿನಗೆ ಜನ್ಮವನ್ನು ನೀಡಿದ್ದು ನಿನ್ನ ಪಾಲಕರು. ಅವರು ಜನ್ಮವನ್ನೇ ನೀಡದಿದ್ದರೆ ನಿನಗೆ ಇಷ್ಟೆಲ್ಲ ಮಾಡುವುದಕ್ಕೆ ಸಾಧ್ಯವಿತ್ತಾ? ನಿನ್ನಂಥ ಮಗಳು ನಮಗ್ಯಾರಿಗೂ ಬೇಕಿಲ್ಲ" ಎಂದು ಅವರು ಬರೆದಿದ್ದಾರೆ.
ಏನಿದು ಘಟನೆ?
ಕ್ರಿಶ್ಚಿಯನ್ ಪರಿಶಿಷ್ಟ ಜಾತಿಗೆ ಸೇರಿದ್ದ ಪ್ರಣಯ್ ಮತ್ತು ಹಿಂದೂ ವೈಶ್ಯ ಸಮುದಾಯಕ್ಕೆ ಸೇರಿದ್ದ ಅಮೃತಾ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಈ ಮದುವೆ ಇಬ್ಬರ ಕುಟುಂಬಕ್ಕೂ ಇಷ್ಟವಿರಲಿಲ್ಲ. ಪ್ರಣಯ್ ಕುಟುಂಬ ಕೆಲ ದಿನಗಳ ನಂತರ ದಂಪತಿಯನ್ನು ಒಪ್ಪಿಕೊಂಡರೂ ಅಮೃತಾ ಕುಟುಂಬ ಮಾತ್ರ ದ್ವೇಷ ಸಾಧಿಸುತ್ತಲೇ ಇತ್ತು. ಕಳೆದ ಜನವರಿಯಲ್ಲಿ ಮದುವೆಯಾಗಿದ್ದ ದಂಪತಿ, ಆಗಸ್ಟ್ ನಲ್ಲಿ ಆರತಕ್ಷತೆ ಸಹ ಆಚರಿಸಕೊಂಡಿದ್ದರು. ಗರ್ಭಿಣಿ ಪತ್ನಿಯನ್ನು ಕಳೆದ ಶುಕ್ರವಾರ(ಸೆ.14) ತೆಲಂಗಾಣದ ಮಿರ್ಯಾಲಗುಡದ ಜ್ಯೋತಿ ಆಸ್ಪತ್ರೆಗೆ ಪತಿ ಪ್ರಣಯ್ ಕರೆದೊಯ್ದಿದ್ದ ಸಮಯದಲ್ಲಿ ಅಪರಿಚಿತ ದುಷ್ಕರ್ಮಿಗಳು ಬಂದು ಪ್ರಣಯ್ ನನ್ನು ಪತ್ನಿಯೆದರೇ ಕೊಂದಿದ್ದರು.