'ನಿತೀಶ್ ಮಹಾಘಟಬಂಧನ್ ಸೇರಿದರೆ ತೇಜಸ್ವಿ ಯಾದವ್ ಸಿಎಂ ಅಭ್ಯರ್ಥಿ'
ಪಾಟ್ನಾ, ಜೂನ್ 25: ಬಿಹಾರ ರಾಜಕೀಯದಲ್ಲಿ ಮತ್ತೆ ತುರುಸಿನ ಬೆಳವಣಿಗೆಗಳು ನಡೆಯುತ್ತಿವೆ. ಜೆಡಿಯು ಮತ್ತು ಬಿಜೆಪಿ ಮೈತ್ರಿ ಸರಕಾರದಲ್ಲಿ ಮತ್ತೆ ಮುಸುಕಿನ ಗುದ್ದಾಟ ಆರಂಭವಾಗಿದೆ. 2019ರ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಎರಡೂ ಪಕ್ಷಗಳ ನಡುವೆ ಸೀಟು ಹೊಂದಾಣಿಕೆಯ ಚರ್ಚೆ ಆರಂಭವಾಗಿದ್ದು, ಬೆನ್ನಿಗೆ ಅಸಮಧಾನ ಹೊಗೆಯಾಡುತ್ತಿದೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಮತ್ತೆ 'ಮಹಾಘಟಬಂಧನ್' ವಾಪಾಸಾಗಿ ಎಂಬ ಒತ್ತಾಯಗಳೂ ಕೇಳಿ ಬರುತ್ತಿವೆ. "ಮುಖ್ಯಮಂತ್ರಿ ಹುದ್ದೆ ಬಿಟ್ಟು ಕೊಟ್ಟು ನಿತೀಶ್ ಕುಮಾರ್ ಅವರು ಮಹಾಘಟಬಂಧನ್ ಸೇರುವುದಾದರೆ, ನನ್ನ ಪ್ರಕಾರ 2020ರ ಬಿಹಾರ ಚುನಾವಣೆಯಲ್ಲಿ ತೇಜಸ್ವಿ ಯಾದವ್ ಅವರು ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ," ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಹಿಂದೂಸ್ಥಾನಿ ಅವಾಮ್ ಮೋರ್ಚಾ ಅಧ್ಯಕ್ಷ ಜೀತನ್ ರಾಂ ಮಾಂಜಿ ಹೇಳಿದ್ದಾರೆ.
ಬಿಹಾರದಲ್ಲಿ ಜೆಡಿಯು-ಬಿಜೆಪಿ ಬ್ರೇಕ್ ಅಪ್ ಸೂಚನೆ?!
2015ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಯು, ಆರ್.ಜೆ.ಡಿ ಮತ್ತು ಕಾಂಗ್ರೆಸ್ ಮಹಾಘಟಬಂಧನ್ ಹೆಸರಿನಲ್ಲಿ ಒಟ್ಟಾಗಿ ಸ್ಪರ್ಧೆಗೆ ಇಳಿದಿದ್ದವು. ಮತ್ತು ಕ್ರಮವಾಗಿ 71 ,80 ಮತ್ತು 27 ಸೀಟುಗಳು ಸೇರಿ 243 ರಲ್ಲಿ 178 ಸೀಟುಗಳನ್ನು ಬಾಚಿಕೊಂಡಿದ್ದವು.
ಹೆಚ್ಚಿನ ಸ್ಥಾನಗಳನ್ನು ಪಡೆದರೂ ಆರ್.ಜೆ.ಡಿ., ಜೆಡಿಯುನ ನಿತೀಶ್ ಕುಮಾರ್ ಅವರಿಗೆ ಮುಖ್ಯಮಂತ್ರಿ ಪದವಿ ಬಿಟ್ಟು ಕೊಟ್ಟಿತು. ಮೂರು ವರ್ಷ ಆರ್.ಜೆ.ಡಿ ಜೊತೆ ಸರಕಾರ ನಡೆಸಿದ ನಿತೀಶ್ ನಂತರ ಬಿಜೆಪಿ ಸಖ್ಯಕ್ಕೆ ಜಾರಿದರು.
ಬಿಜೆಪಿ ಜೊತೆಗೆ ಬಂದು ನಿತೀಶ್ ತಮ್ಮ ಸರಕಾರ ಉಳಿಸಿಕೊಂಡರೂ ಅವರಿಗೆ ಕಮಲ ಪಕ್ಷದ ಮೈತ್ರಿ ಮೊದಲ ದಿನದಿಂದಲೂ ಸರಿ ಬರುತ್ತಿಲ್ಲ. ಒಂದಲ್ಲ ಒಂದು ಕಾರಣಕ್ಕೆ ಆಗಾಗ ಮನಸ್ತಾಪಗಳು ಕಾಣಿಸುತ್ತಲೇ ಇವೆ. ಈ ಕಾರಣಕ್ಕೆ ಅವರು ಮತ್ತೆ ಮಹಾಘಟಬಂಧನ್ ಗೆ ವಾಪಸ್ ಬರಬಹುದು ಎಂದುಕೊಳ್ಳಲಾಗಿದೆ.
ಇನ್ನೊಂದು ತಂದೆ ಲಾಲೂ ಪ್ರಸಾದ್ ಯಾದವ್ ಜೈಲು ಸೇರಿದ ನಂತರ ಮಗ ತೇಜಸ್ವಿ ಯಾದವ್ ರಾಜಕೀಯದಲ್ಲಿ ಮಿಂಚುತ್ತಿದ್ದಾರೆ. ಇದೇ ವೇಳೆ ಅವರು ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಎಂಬ ಮಾತನ್ನು ಮಾಜಿ ಸಿಎಂ ಒಬ್ಬರು ಹೇಳಿರುವುದು ಬಿಹಾರ ರಾಜಕೀಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.