ಗಾಯತ್ರಿ ಪ್ರಜಾಪತಿ ನಿರೀಕ್ಷಣಾ ಜಾಮೀನು ನಿರಾಕರಿಸಿದ ಸುಪ್ರೀಂ
ಗಾಯತ್ರಿ ಪ್ರಜಾಪತಿ ಮೇಲೆ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ, ಇನ್ನೊಬ್ಬ ಮಹಿಳೆ ಮತ್ತು ಆಕೆಯ ಅಪ್ರಾಪ್ತ ವಯಸ್ಕ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪವನ್ನು ಹೊರಿಸಲಾಗಿದೆ.
ಲಖನೌ, ಮಾರ್ಚ್ 06 : ಅತ್ಯಾಚಾರದ ಆರೋಪ ಹೊತ್ತು ತಲೆಮರೆಸಿಕೊಂಡಿರುವ ಉತ್ತರಪ್ರದೇಶದ ಮಂತ್ರಿ ಗಾಯತ್ರಿ ಪ್ರಜಾಪತಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ಸೋಮವಾರ ತಿರಸ್ಕರಿಸಿದೆ.
ಜಾಮೀನು ಬೇಕಿದ್ದರೆ ಸಂಬಂಧಿತ ನ್ಯಾಯಾಲಯವನ್ನು ಸಂಪರ್ಕಿಸಬೇಕಾಗಿ ಸೂಚನೆ ನೀಡಿದೆ. ಈ ನಡುವೆ ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿರುವ ಗಾಯತ್ರಿ ಪ್ರಜಾಪತಿ ಅವರನ್ನು ಬಂಧಿಸಲು ಉತ್ತರಪ್ರದೇಶದ ಪೊಲೀಸರು ಭಾರೀ ಬಲೆ ಬೀಸಿದ್ದಾರೆ.
ಬಂಧನವನ್ನು ತಪ್ಪಿಸಿಕೊಳ್ಳಲು ಗಾಯತ್ರಿ ಪ್ರಜಾಪತಿ ದೇಶಬಿಟ್ಟು ಪರಾರಿಯಾಗಬಹುದು ಎಂಬ ಮಾಹಿತಿ ಗುಪ್ತಚರ ದಳದಿಂದ ಬಂದಿದ್ದರಿಂದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಭಾರೀ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ.
ಗಾಯತ್ರಿ ಪ್ರಜಾಪತಿ ಮೇಲೆ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ, ಇನ್ನೊಬ್ಬ ಮಹಿಳೆ ಮತ್ತು ಆಕೆಯ ಅಪ್ರಾಪ್ತ ವಯಸ್ಕ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪವನ್ನು ಹೊರಿಸಲಾಗಿದೆ.[ಅತ್ಯಾಚಾರ ಆರೋಪಿ ಎಸ್ ಪಿ ಶಾಸಕ ಪ್ರಜಾಪತಿ ಬಂಧನಕ್ಕೆ ವ್ಯಾಪಕ ಜಾಲ]
ಅಚ್ಚರಿಯ ಸಂಗತಿಯೆಂದರೆ, ಇಂಥ ಗಂಭೀರ ಆರೋಪವನ್ನು ಗಾಯತ್ರಿ ಪ್ರಜಾಪತಿ ಎದುರಿಸುತ್ತಿದ್ದರೂ ಅವರನ್ನು ಸಂಪುಟದಿಂದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಕಿತ್ತುಹಾಕದಿರುವುದು. ಇದು ಕೂಡ ಭಾರೀ ಟೀಕೆಗೆ ಗ್ರಾಸವಾಗಿದೆ.
ಗಾಯತ್ರಿಯ ವಿರುದ್ಧ ಈಗಾಗಲೆ ಜಾಮೀನುರಹಿತ ವಾರಂಟ್ ಅನ್ನು ಹೊರಡಿಸಲಾಗಿದೆ. ಆತನ ಪಾಸ್ಪೋರ್ಟನ್ನು ಹಿಂತೆಗೆದುಕೊಳ್ಳಲಾಗಿದ್ದು, ಅವರನ್ನು ಹುಡುಕಲು ಸುತ್ತೋಲೆಯನ್ನು ಕೂಡ ಹೊರಡಿಸಲಾಗಿದೆ. ಆತನ ವಿರುದ್ಧ ಸಲ್ಲಿಸಲಾಗಿರುವ ಎಫ್ಐಆರ್ ಅನ್ನು ರದ್ದುಪಡಿಸಲು ಕೋರ್ಟ್ ನಿರಾಕರಿಸಿದೆ.
ಅವರು ದೇಶ ಬಿಟ್ಟು ತೊಲಗಲು ಯತ್ನಿಸುತ್ತಿರುವುದು ವಲಸೆ ಇಲಾಖೆಯ ಗಮನಕ್ಕೆ ಬಂದರೆ, ಯಾವುದೇ ಸಹಕಾರ ತೋರದೆ ಭದ್ರತಾ ಸಿಬ್ಬಂದಿಗೆ ತಿಳಿಸಬೇಕಾಗಿ ಆದೇಶ ನೀಡಲಾಗಿದೆ. ಮತ್ತೊಂದು ಅಚ್ಚರಿಯ ಸಂಗತಿಯೆಂದರೆ, ಆತನಿಗೆ ವೈ ಕೆಟಗರಿಯ ಭದ್ರತೆ ನೀಡಲಾಗಿತ್ತು.