ಏಪ್ರಿಲ್.20ರಿಂದ ಬದಲಾಗುತ್ತಾ ಭಾರತದ ಚಿತ್ರಣ; ಟೀ ಬೆಳೆಗಾರರ ನಿರೀಕ್ಷೆ
ಶಿಮ್ಲಾ, ಏಪ್ರಿಲ್.17: ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ದೇಶಾದ್ಯಂತ ಲಾಕ್ ಡೌನ್ ಘೋಷಿಸಿರುವುದು ಸಾಕಷ್ಟು ಉದ್ಯಮಗಳಿಗೆ ಹೊಡೆತ ಕೊಟ್ಟಿದೆ. ಕೃಷಿ ವಲಯದಲ್ಲೂ ಲಾಕ್ ಡೌನ್ ನಿಂದ ರೈತರ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದರ ಲಿಸ್ಟ್ ಗೆ ಟೀ ಬೆಳೆಗಾರರು ಕೂಡಾ ಸೇರಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಟೀ ಉದ್ಯಮಕ್ಕೆ ಲಾಕ್ ಡೌನ್ ನಿಂದ ತೀವ್ರ ಹಿನ್ನಡೆ ಆಗುತ್ತಿದೆ. ಕೆಲಸದ ವೇಗ ಕುಗ್ಗಿದ್ದು ಸಾಗಾಟ ಮಾಡಲಾಗದೇ ಟೀ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಧರ್ಮಸಾಲಾ ಟೀ ಕಂಪನಿಯ ಮ್ಯಾನೇಜರ್ ಅಮನ್ ಪಾಲ್ ಸಿಂಗ್ ತಿಳಿಸಿದ್ದಾರೆ.
ಮೋದಿ ಲಾಕ್ಡೌನ್-2 ಭಾಷಣ: ದಾಖಲೆ ಮಟ್ಟದಲ್ಲಿ ಜನರ ವೀಕ್ಷಣೆ
ಭಾರತದಲ್ಲಿ ಲಾಕ್ ಡೌನ್ ಘೋಷಣೆ ಆದಾಗಿನಿಂದ ಟೀ ಕೀಳುವ ಪ್ರಕ್ರಿಯೆ ನಿಂತು ಹೋಗಿತ್ತು. ಮಾರ್ಚ್.30ರಂದು ಅತಿ ಕಡಿಮೆ ಕಾರ್ಮಿಕರನ್ನು ಬಳಸಿಕೊಂಡು ಸ್ವಚ್ಛತೆಯನ್ನು ಕಾಯ್ದುಕೊಂಡು ಕಾರ್ಯ ಚಟುವಟಿಕೆ ಪುನಾರಂಭ ಮಾಡಲು ಅನುಮತಿ ಪಡೆದುಕೊಂಡೆವು. ಅದಾಗಿಯೂ ಕೆಲಸ ವೇಗ ಮತ್ತು ಸಾಗಾಟದ ತೊಂದರೆ ಅನುಭವಿಸುತ್ತಿದ್ದೇವೆ ಎಂದು ಸಿಂಗ್ ಹೇಳಿದ್ದಾರೆ.
ಯುರೋಪ್ ಭಾಗದಲ್ಲಿ ಅತಿಹೆಚ್ಚು ಬೇಡಿಕೆ
ಹಿಮಾಚಲ ಪ್ರದೇಶದಲ್ಲಿ ಬೆಳೆಯುವ ಟೀಗೆ ಏಪ್ರಿಲ್ ತಿಂಗಳಿನಲ್ಲಿ ಅತಿಯಾದ ಬೇಡಿಕೆ ಇರುತ್ತದೆ. ಯುರೋಪ್ ಹಾಗೂ ಕೋಲ್ಕತ್ತಾ ಮಾರುಕಟ್ಟೆಗಳಲ್ಲಿ ಹೆಚ್ಚು ಡಿಮ್ಯಾಂಡ್ ಹೊಂದಿರುತ್ತಿತ್ತು. ಸದ್ಯ ಯುರೋಪ್ ಮಾರುಕಟ್ಟೆಗಳೆಲ್ಲ ಬಂದ್ ಆಗಿರುವುದರಿಂದ ಎಲ್ಲ ಟೀಯನ್ನು ಕೋಲ್ಕತ್ತಾ ಮಾರುಕಟ್ಟೆಗೆ ಕಳುಹಿಸಿಕೊಡಲಾಗುತ್ತಿದೆ. ಆದರೆ ಇದಕ್ಕೂ ಕೂಡಾ ಸರಿಯಾದ ರೀತಿಯ ಸಾರಿಗೆ ವ್ಯವಸ್ಥೆ ಸಿಗುತ್ತಿಲ್ಲ ಎಂದು ಸಿಂಗ್ ಆರೋಪಿಸಿದ್ದಾರೆ.
ಟೀ ಬೆಳೆಗಾರರಿಗೆ ಶೇ.30 ರಿಂದ 40ರಷ್ಟು ನಷ್ಟ
ಸಾರಿಗೆ ವ್ಯವಸ್ಥೆ ಅಭಾವದಿಂದಾಗಿ ಟೀ ಬೆಳೆಯನ್ನು ಸಾಗಾಟ ಮಾಡುವುದಕ್ಕೆ ಆಗುತ್ತಿಲ್ಲ. ಬೆಳೆದ ಟೀ ಎಲ್ಲವನ್ನು ಇಲ್ಲಿಯೇ ಸಂಗ್ರಹಿಸಿ ಇಡಲಾಗುತ್ತಿದೆ. ಈ ಪರಿಸ್ಥಿತಿಯು ಹೀಗೆಯೇ ಮುಂದುವರಿದರೆ ಶೇ.30 ರಿಂದ 40ರಷ್ಟು ನಷ್ಟವಾಗುವ ಭೀತಿಯಲ್ಲಿ ಟೀ ಬೆಳೆಗಾರರು ಇದ್ದಾರೆ.
ಏಪ್ರಿಲ್.20ರ ನಂತರ ಬದಲಾಗುತ್ತಾ ದೇಶದ ಚಿತ್ರಣ?
ಭಾರತ ಲಾಕ್ ಡೌನ್ ನಿಂದಾಗಿ ಅಂತರ್ ರಾಜ್ಯ ಸಾರಿಗೆಗೆ ಕಡಿವಾಣ ಹಾಕಲಾಗಿದೆ. ಏಪ್ರಿಲ್.20ರ ನಂತರವಾದರೂ ಕೇಂದ್ರ ಸರ್ಕಾರವು ಬೇರೆ ರಾಜ್ಯಗಳಿಗೆ ಸರಕು ಸಾಗಾಣಿಕೆಗೆ ಅವಕಾಶ ಕಲ್ಪಿಸಿ ಕೊಟ್ಟರೆ ಟೀ ಬೆಳೆಗಾರರಿಗೆ ಆಗುವ ನಷ್ಟವನ್ನು ಸ್ವಲ್ಪ ಪ್ರಮಾಣದಲ್ಲಿ ಆದರೂ ತಗ್ಗಿಸಬಹುದು ಎಂಬ ವಿಶ್ವಾಸವನ್ನು ಸಿಂಗ್ ವ್ಯಕ್ತಪಡಿಸಿದ್ದಾರೆ.
ಟೀ ತೋಟದ ಕಾರ್ಮಿಕರಿಗೂ ಆರ್ಥಿಕ ಸಂಕಷ್ಟ
ಟೀ ಮತ್ತು ಕಾಫಿ ಉದ್ಯಮಕ್ಕೆ ಅಷ್ಟೇ ಅಲ್ಲದೇ ಈ ತೋಟಗಳಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ನೂರಾರು ಮಂದಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ದಿನಗೂಲಿ ಲೆಕ್ಕದಲ್ಲಿ ದುಡಿಯುತ್ತಿದ್ದ ಕಾರ್ಮಿಕರಿಗೆ ಕೆಲಸವಿಲ್ಲದಂತೆ ಆಗಿದೆ. ಇದನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮುಖಕ್ಕೆ ಮಾಸ್ಕ್ ಧರಿಸಿ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿಕೊಂಡು ಕಾಫಿ ತೋಟಗಳಲ್ಲಿ ಕಾರ್ಯಚಟುವಟಿಕೆಗಳನ್ನು ಆರಂಭಿಸಲು ಅನುಮತಿ ನೀಡಬೇಕು ಎಂದು ಕಾರ್ಮಿಕರೊಬ್ಬರು ಮನವಿ ಮಾಡಿಕೊಳ್ಳುತ್ತಿದ್ದಾರೆ.