ತೆರಿಗೆ ಕಡಿತ, ಸಹಾಯಧನ ಹಣದುಬ್ಬರದ ವಿರುದ್ದ ಸರ್ಕಾರದ ಸಮರ
ನವದೆಹಲಿ, ಮೇ 22; ಕೇಂದ್ರ ಸರ್ಕಾರ ಹಣ ದುಬ್ಬರ ನಿಯಂತ್ರಿಸಲು, ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಯಲು ದೊಡ್ಡ ಹೆಜ್ಜೆ ಇಟ್ಟಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಕಡಿತ, ಎಲ್ಪಿಜಿ ಸಿಲಿಂಡರ್ಗಳಿಗೆ ಸಹಾಯಧನವನ್ನು ಘೋಷಣೆ ಮಾಡಿದೆ.
ಶನಿವಾರ ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಪೆಟ್ರೋಲ್ ಮೇಲಿನ ತೆರಿಗೆ 8 ರೂ. ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು 6 ರೂ. ಕಡಿತಗೊಳಿಸುವುದಾಗಿ ಘೋಷಣೆ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ನಾಯಕರು ತೆರಿಗೆ ಕಡಿತದ ತೀರ್ಮಾನವನ್ನು ಶ್ಲಾಘಿಸಿದರು.
ಪೆಟ್ರೋಲ್-ಡೀಸೆಲ್ ದರ ಇಳಿಕೆಗೆ ಕರ್ನಾಟಕದಲ್ಲಿ ಹೇಗಿದೆ ಬಿಜೆಪಿ ನಾಯಕರ ಪ್ರತಿಕ್ರಿಯೆ?
ಇದರಿಂದಾಗಿ ಲೀಟರ್ ಪೆಟ್ರೋಲ್ ಬೆಲೆ 9.5 ರೂ. ಮತ್ತು ಪ್ರತಿ ಲೀಟರ್ ಡೀಸೆಲ್ ಬೆಲೆ 6 ರೂ. ಕಡಿತವಾಗಿದೆ. ಕೇಂದ್ರ ತೆರಿಗೆ ಕಡಿತ ಮಾಡಿದ ಬಳಿಕ ವಿವಿಧ ರಾಜ್ಯಗಳು ಸಹ ತೆರಿಗೆ ಕಡಿತ ಮಾಡಿದ್ದು, ಜನರು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ತೆರಿಗೆ ಇಳಿಕೆ ಮಾಡಿದ್ದರಿಂದ ಕೇಂದ್ರ ಸರ್ಕಾರಕ್ಕೆ ವಾರ್ಷಿಕ 1 ಲಕ್ಷ ಕೋಟಿ ಆದಾಯ ನಷ್ಟವಾಗಲಿದೆ ಎಂದು ಅಂದಾಜು ಮಾಡಲಾಗಿದೆ.
ಕೇಂದ್ರ + ರಾಜ್ಯ: ಕೇರಳದಲ್ಲಿ ಪೆಟ್ರೋಲ್ 12, ಡೀಸೆಲ್ 9 ರೂಪಾಯಿ ಇಳಿಕೆ
"ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಗೆ ಅನುಗುಣವಾಗಿ ದೇಶದಲ್ಲಿ ಇಂಧನ ದರ ಹೆಚ್ಚಾಗುವುದನ್ನು ತಪ್ಪಿಸಲು ಎಕ್ಸೈಸ್ ಸುಂಕ ಕಡಿತ ಮಾಡಲಾಗಿದೆ" ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ರಾಜ್ಯಗಳಿಂದಲೂ ತೆರಿಗೆ ಕಡಿತ
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ತೆರಿಗೆ ಕಡಿತ ಮಾಡಿದ ಬಳಿಕ, "ಎಲ್ಲಾ ರಾಜ್ಯಗಳೂ ಅದರಲ್ಲಿಯೂ ವಿಶೇಷವಾಗಿ 2021ರ ನವೆಂಬರ್ನಲ್ಲಿ ತೆರಿಗೆ ಕಡಿತವನ್ನು ಮಾಡದ ರಾಜ್ಯಗಳು, ಕೇಂದ್ರ ಸರ್ಕಾರದ ರೀತಿಯಲ್ಲಿಯೇ ತೆರಿಗೆ ಕಡಿತ ಮಾಡಿ ಸಾಮಾನ್ಯ ಜನರಿಗೆ ಬೆಲೆ ಏರಿಕೆಯಿಂದ ತುಸು ನೆಮ್ಮದಿ ನೀಡುವಂತೆ ನಾನು ಒತ್ತಾಯಿಸಲು ಬಯಸುತ್ತೇನೆ" ಎಂದು ಹೇಳಿದರು.
ಕೇಂದ್ರ ಸರ್ಕಾರದ ತೆರಿಗೆ ಕಡಿತದ ಬಳಿಕ ಕರ್ನಾಟಕ, ಕೇರಳ ಸೇರಿದಂತೆ ವಿವಿಧ ರಾಜ್ಯಗಳು ತೆರಿಗೆ ಕಡಿತ ಮಾಡುವುದಾಗಿ ಘೋಷಣೆ ಮಾಡಿವೆ.
ಸಿಲಿಂಡರ್ ಪಡೆಯಲು ಸಬ್ಸಿಡಿ
ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಮಾತ್ರ ಕಡಿಮೆ ಮಾಡಿಲ್ಲ. ಸಿಲಿಂಡರ್ ಖರೀದಿಗೆ ಸಹ ಸಬ್ಸಿಡಿ ಘೋಷಣೆ ಮಾಡಲಾಗಿದೆ. ಉಜ್ವಲ ಯೋಜನೆ ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್ಗೆ 200 ಸಬ್ಸಿಡಿಯನ್ನು ನೀಡಲಾಗುತ್ತದೆ. ಈ ಯೋಜನೆಯಡಿ ಒಂದು ವರ್ಷಕ್ಕೆ 12 ಸಿಲಿಂಡರ್ ನೀಡಲಾಗುತ್ತದೆ. ಈ ಯೋಜನೆಯಡಿ 9 ಕೋಟಿ ಫಲಾನುಭವಿಗಳು ಇದ್ದಾರೆ. ಹೀಗೆ ಸಬ್ಸಿಡಿ ನೀಡುವುದರಿಂದ ಸರ್ಕಾರಕ್ಕೆ ವಾರ್ಷಿಕ 6,100 ಕೋಟಿ ರೂ. ಆದಾಯ ಕಡಿತವಾಗುವ ನಿರೀಕ್ಷೆ ಇದೆ.
|
ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ
ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಇಳಿಕೆ ಮಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ. 'ನಮಗೆ ಯಾವಾಗಲೂ ಜನರೇ ಮೊದಲು' ಎಂದು ಟ್ವೀಟ್ ಮಾಡಿದ್ದಾರೆ. 'ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಇಳಿಕೆ ವಿವಿಧ ವಲಯಗಳ ಮೇಲೆ ಪರಿಣಾಮ ಬೀರಲಿದೆ' ಎಂದು ಹೇಳಿದ್ದಾರೆ.
100 ರೂ. ಗಡಿ ದಾಟಿದ್ದ ದರಗಳು
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ತೆರಿಗೆ ಕಡಿತ ಮಾಡಿರುವುದು ಇದೇ ಮೊದಲಲ್ಲ. 2021ರ ನವೆಂಬರ್ನಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಮೇಲೆ 5 ಮತ್ತು ಡೀಸೆಲ್ ಮೇಲೆ 10 ರೂ. ತೆರಿಗೆ ಕಡಿತ ಮಾಡಿತ್ತು. 2022ರಲ್ಲಿ ಮಾರ್ಚ್ 22ರಿಂದ ಏಪ್ರಿಲ್ 6ರ ತನಕ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ ಮೇಲಿನ ದರವನ್ನು ಪ್ರತಿ ಲೀಟರ್ಗೆ 10 ರೂ. ಏರಿಕೆ ಮಾಡಿವೆ. ಇದರಿಂದಾಗಿ ವಿವಿಧ ರಾಜ್ಯಗಳಲ್ಲಿ ಪೆಟ್ರೋಲ್ ದರ 100 ರೂ. ಗಡಿ ದಾಟಿತ್ತು.