2025ರ ವೇಳೆಗೆ 220 ವಿಮಾನ ನಿಲ್ದಾಣ ನಿರ್ಮಾಣ ಗುರಿ
ನವದೆಹಲಿ, ಮಾರ್ಚ್ 23; "ವಿಮಾನಯಾನ ಖಾತೆ ಭಾರತದ ಆರ್ಥಿಕತೆಯ ಪ್ರಮುಖ ಆಧಾರವಾಗಿದೆ. 2025ರ ವೇಳೆಗೆ 220 ವಿಮಾನ ನಿಲ್ದಾಣಗಳನ್ನು ನಿರ್ಮಿಸುವ ಗುರಿ ಸರ್ಕಾರದ ಮುಂದಿದೆ" ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದರು.
2022-23ನೇ ಸಾಲಿನ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿದ ಸಚಿವರು, "ಕೋವಿಡ್ ಸಂದರ್ಭದ ಬಳಿಕ ದೇಶಿಯ ಮತ್ತು ಅಂತರಾಷ್ಟ್ರೀಯ ವಿಮಾನ ಸೇವೆ ನೀಡುವ ವಿಚಾರದಲ್ಲಿ ಸಾಕಷ್ಟು ಅಭಿವೃದ್ದಿಯಾಗಿದೆ" ಎಂದರು.
ಕೊವಿಡ್-19 ನಿಯಮಗಳ ಸಡಿಲ; ಭಾರತದಲ್ಲಿ ವಿಮಾನ ಪ್ರಯಾಣ ಸುಗಮ
"ಆಹಾರ ಉತ್ಪನ್ನಗಳನ್ನು ಸಾಗಣೆ ಮಾಡುವ ಕಾರ್ಗೋ ವಿಮಾನಗಳ ಬೇಡಿಕೆ ಶೇ 30ರಷ್ಟು ಜಾಸ್ತಿಯಾಗಿದೆ. ಮುಂದಿನ ದಿನಗಳಲ್ಲಿ 133 ವಿಮಾನಗಳು ಹಾರಾಟ ನಡೆಸಲಿವೆ. 33 ಹೊಸ ಕಾರ್ಗೋ ನಿಲ್ದಾಣಗಳನ್ನು ನಿರ್ಮಿಸಲಾಗುತ್ತದೆ" ಎಂದು ಸಚಿವರು ವಿವರಣೆ ನೀಡಿದರು.
ಮಾ. 27ರಿಂದ ಅಂತಾರಾಷ್ಟ್ರೀಯ ವಿಮಾನ ಆರಂಭ
"ವಿಮಾನದ ಪೈಲೆಟ್ ಲೈಸೆನ್ಸ್ ನೀಡುವ ಪ್ರಕ್ರಿಯೆಯನ್ನು ಸರ್ಕಾರ ಸರಳೀಕರಣಗೊಳಿಸಿದೆ. ದೇಶದಲ್ಲಿ ಹೊಸದಾಗಿ 15 ಪೈಲೆಟ್ ತರಬೇತಿ ಶಾಲೆಗಳನ್ನು ಆರಂಭಿಸಲಾಗುತ್ತದೆ. ಇದರಿಂದಾಗಿ ಉದ್ಯೋಗವು ಸೃಷ್ಟಿಯಾಗಲಿದೆ" ಎಂದರು.
ಕೊಪ್ಪಳ ವಿಮಾನ ನಿಲ್ದಾಣ; ಸ್ಥಳ ಪರಿಶೀಲಿಸಿ ವರದಿ ತಯಾರಿಕೆಗೆ ಸೂಚನೆ
"ಕಳೆದ 7 ದಿನಗಳಲ್ಲಿ 3.82 ಲಕ್ಷ ಜನರು ವಿಮಾನ ಪ್ರಯಾಣ ಮಾಡಿದ್ದಾರೆ. 2018-19ರಲ್ಲಿ 34.5 ಕೋಟಿ ಜನರು ವಿಮಾನ ಪ್ರಯಾಣ ಮಾಡಿದ್ದರು. ಇದನ್ನು ಮೂರು ಪಟ್ಟು ಹಚ್ಚಿಸುವ ಗುರಿಯನ್ನು ಇಲಾಖೆ ಹೊಂದಿದೆ" ಎಂದು ಕಲಾಪದಲ್ಲಿ ವಿವರಿಸಿದರು.
'ಉಕ್ರೇನ್ನಲ್ಲಿ ಸಿಲುಕಿದ್ದ ಭಾರತೀಯರನ್ನು ರಕ್ಷಣೆ ಮಾಡಲು 90 ವಿಮಾನಗಳನ್ನು ಬಳಕೆ ಮಾಡಲಾಗಿದೆ. ಭಾರತೀಯ ವಾಯುಪಡೆ 4-ಸಿ17 ವಿಮಾನಗಳ ಕಾರ್ಯಾಚರಣೆ ನಡೆಸಿದೆ. ಇದಕ್ಕಾಗಿ ವಾಯುಪಡೆಯನ್ನು ಅಭಿನಂದಿಸುತ್ತೇನೆ" ಎಂದು ಸಚಿವರು ಹೇಳಿದರು.
"ಪ್ರಪಂಚದ ಇತರ ದೇಶದಲ್ಲಿ ಶೇ 5ರಷ್ಟು ಮಹಿಳಾ ಪೈಲೆಟ್ಗಳು ಇದ್ದಾರೆ. ಭಾರತಲ್ಲಿ ಶೇ 15ರಷ್ಟು ಮಹಿಳಾ ಪೈಲೆಟ್ಗಳು ಇದ್ದಾರೆ. ಇದು ಮಹಿಳಾ ಸಶಕ್ತಿಕರಣಕ್ಕೆ ಉದಾಹರಣೆಯಾಗಿದೆ. ಕಳೆದ 20-25 ವರ್ಷಗಳಲ್ಲಿ ವಿಮಾನಯಾನ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ" ಎಂದರು.
ಉತ್ತರ ಪ್ರದೇಶದಲ್ಲಿ 5 ವಿಮಾನ ನಿಲ್ದಾಣ; ಪ್ರಧಾನಿ ನರೇಂದ್ರ ಮೋದಿ 2021ರ ನವೆಂಬರ್ 25ರಂದು ಉತ್ತರ ಪ್ರದೇಶದ ಗೌತಮಬುದ್ಧ ನಗರದ ಜೆವಾರ್ನಲ್ಲಿ 'ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ' ಶಂಕುಸ್ಥಾಪನೆ ಮಾಡಿದರು. ಈ ನಿಲ್ದಾಣ ಆರಂಭವಾದ ಬಳಿಕ ಉತ್ತರ ಪ್ರದೇಶ ರಾಜ್ಯವು 5 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ಭಾರತದ ಏಕೈಕ ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಕುಶಿನಗರ ವಿಮಾನ ನಿಲ್ದಾಣ ಮತ್ತು ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಅನೇಕ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಉತ್ತರ ಪ್ರದೇಶ ಸಾಕ್ಷಿಯಾಗಿದೆ. ಈ ವಿಮಾನ ನಿಲ್ದಾಣವು ದೆಹಲಿ ಎನ್ಸಿಆರ್ನಲ್ಲಿ ಬರುವ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಲಿದೆ. ಈ ನಿಲ್ದಾಣ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯಕವಾಗಲಿದೆ.
ಈ ವಿಮಾನ ನಿಲ್ದಾಣ ಬಹುಮಾದರಿ ಸಾರಿಗೆ ಕೇಂದ್ರವನ್ನು ಹೊಂದಿರಲಿದೆ. ಮೆಟ್ರೋ ಮತ್ತು ಹೈಸ್ಪೀಡ್ ರೈಲು ನಿಲ್ದಾಣಗಳು, ಟ್ಯಾಕ್ಸಿ, ಬಸ್ ಸೇವೆಗಳು ಮತ್ತು ಖಾಸಗಿ ಪಾರ್ಕಿಂಗ್ ವ್ಯವಸ್ಥೆಯನ್ನು ಒಳಗೊಂಡಿರುವ ಭೂಸಾರಿಗೆ ಕೇಂದ್ರವನ್ನು ಇಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ.
ಇದು ರಸ್ತೆ, ರೈಲು ಮತ್ತು ಮೆಟ್ರೋದೊಂದಿಗೆ ವಿಮಾನ ನಿಲ್ದಾಣದ ತಡೆರಹಿತ ಸಂಪರ್ಕವನ್ನು ಸಕ್ರಿಯಗೊಳಿಸುತ್ತದೆ. ನೋಯ್ಡಾ ಮತ್ತು ದೆಹಲಿಯಿಂದ ವಿಮಾನ ನಿಲ್ದಾಣಕ್ಕೆ ತಡೆರಹಿತ ಮೆಟ್ರೋ ಸೇವೆಯ ಮೂಲಕ ಸಂಪರ್ಕ ಕಲ್ಪಿಸಲಾಗುತ್ತದೆ.
ಹತ್ತಿರದ ಎಲ್ಲಾ ಪ್ರಮುಖ ರಸ್ತೆಗಳು ಮತ್ತು ಹೆದ್ದಾರಿಗಳಾದ ಯಮುನಾ ಎಕ್ಸ್ಪ್ರೆಸ್ವೇ, ವೆಸ್ಟರ್ನ್ ಪೆರಿಫೆರಲ್ ಎಕ್ಸ್ಪ್ರೆಸ್ವೇ, ಈಸ್ಟರ್ನ್ ಪೆರಿಫೆರಲ್ ಎಕ್ಸ್ಪ್ರೆಸ್ವೇ, ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇ ಮತ್ತು ಇತರ ಪ್ರಮುಖ ಹೆದ್ದಾರಿಗಳನ್ನು ವಿಮಾನ ನಿಲ್ದಾಣಕ್ಕೆ ಸಂಪರ್ಕಿಸಲಾಗುತ್ತದೆ. ವಿಮಾನ ನಿಲ್ದಾಣವನ್ನು ಉದ್ದೇಶಿತ ದೆಹಲಿ-ವಾರಾಣಸಿ ಹೈಸ್ಪೀಡ್ ರೈಲ್ ಸೇವೆಯೊಂದಿಗೆ ಸಂಪರ್ಕಿಸಲಾಗುತ್ತದೆ.