ಐಬಿ ಗುಪ್ತಚರ ಸಂಸ್ಥೆಯ ನೂತನ ಮುಖ್ಯಸ್ಥರಾಗಿ ತಪನ್ ಕುಮಾರ್ ಡೇಕಾ
ನವದೆಹಲಿ, ಜೂನ್ 24: ಇಂಟೆಲಿಜೆನ್ಸ್ ಬ್ಯೂರೋ (Intelligence Bureau) ಗುಪ್ತಚರ ಸಂಸ್ಥೆಯ ನೂತನ ಮುಖ್ಯಸ್ಥರಾಗಿ ತಪನ್ ಕುಮಾರ್ ಡೇಕಾ ಅವರನ್ನು ನೇಮಕ ಮಾಡಲಾಗಿದೆ. ಐಬಿಯ ವಿಶೇಷ ನಿರ್ದೇಶಕರಾಗಿದ್ದ ತಪನ್ ಅವರನ್ನು ಈಗ ನಿರ್ದೇಶಕರಾಗಿ ನೇಮಿಸಲಾಗಿದೆ.
ಹಾಲಿ ಐಬಿ ಮುಖ್ಯಸ್ಥ ಅರವಿಂದ್ ಕುಮಾರ್ ಅವರ ಸೇವಾವಧಿ ಜೂನ್ 30ಕ್ಕೆ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ತಪನ್ ಕುಮಾರ್ ಡೇಕಾ ನೇಮಕ ಮಾಡಲಾಗಿದೆ. ತಪನ್ ಅವರ ಸೇವಾವಧಿ ಎರಡು ವರ್ಷಗಳ ಕಾಲ ಇರಲಿದೆ. ಜೂನ್ 30ಕ್ಕೆ ಅವರು ಅಧಿಕಾರ ಸ್ವೀಕರಿಸಲಿದ್ದಾರೆ.
ರಾಷ್ಟ್ರಪತಿ ಚುನಾವಣೆಗೆ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ನಾಮಪತ್ರ
ಹಿಮಾಚಲಪ್ರದೇಶ ಕೇಡರ್ನ 1988ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿರುವ ತಪನ್ ಕುಮಾರ್ ಡೇಕಾ ಈಶಾನ್ಯ ಭಾರತದ ರಾಜ್ಯಗಳ ವಿಚಾರದಲ್ಲಿ ಪರಿಣಿತಿ ಹೊಂದಿದ್ದಾರೆ. 2019ರಲ್ಲಿ ಸಿಎಎ ವಿರುದ್ಧ ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆ ಮತ್ತು ಹಿಂಸಾಚಾರ ನಡೆದಾಗ ಕೇಂದ್ರ ಗೃಹ ಸಚಿವ ಅಮಿತ್ ಶಾ ತಪನ್ ಕುಮಾರ್ ಅವರನ್ನು ಅಸ್ಸಾಮ್ಗೆ ಕಳುಹಿಸಿದ್ದರು.
ಸದ್ಯ, ತಪನ್ ಕುಮಾರ್ ಅವರು ಐಬಿಯ ವಿಶೇಷ ನಿರ್ದೇಶಕರಾಗಿ ಕಾರ್ಯಾಚರಣೆ ವಿಭಾಗದ ನೇತೃತ್ವ ವಹಿಸಿದ್ದಾರೆ. ಕಳೆದ ಎರಡು ವರ್ಷಗಳಿಂದಲೂ ಅವರು ಉಗ್ರಗಾಮಿಗಳು ಮತ್ತು ಧಾರ್ಮಿಕ ಭಯೋತ್ಪಾದನೆ ವಿಚಾರದಲ್ಲಿ ಬಹಳ ಮಾಹಿತಿ ಹೊಂದಿದ್ದಾರೆನ್ನಲಾಗಿದೆ.
ನೀತಿ ಆಯೋಗದ ಹೊಸ ಸಿಇಒ- ಪರಮೇಶ್ವರನ್ ಅಯ್ಯರ್
|
ಮುಜಾಹಿದೀನ್ಗೆ ಗುದ್ದು
ತಪನ್ ಕುಮಾರ್ ಡೇಕಾ ಬಹಳ ಚಾಣಾಕ್ಷ್ಯ ಎನಿಸಿದ್ದಾರೆ. ಅಪಾಯಕಾರಿಯಾಗಿ ಬೆಳೆಯುತ್ತಿದ್ದ ಇಂಡಿಯನ್ ಮುಜಾಹಿದೀನ್ ಎಂಬ ಭಯೋತ್ಪಾದನಾ ಸಂಘಟನೆಯ ಬುಡವನ್ನೇ ಅಲುಗಾಡಿಸಿ ಬೀಳಿಸಿದವರು. ಅಸ್ಸಾಮ್ನಲ್ಲೇ ಹೆಚ್ಚು ಕಾರ್ಯಾರಣೆ ನಡೆಸಿದರೂ ದೇಶದೆಲ್ಲೆಡೆ ಇರುವ ಇಸ್ಲಾಮೀ ಭಯೋತ್ಪಾದನೆಯನ್ನು ಬಹಳ ನಿಕಟವಾಗಿ ಗಮನಿಸುತ್ತಾ ಬಂದಿದ್ದಾರೆ. 2008ರ 26/11 ಮುಂಬೈ ಉಗ್ರ ದಾಳಿ ಘಟನೆಯನ್ನು ತನಿಖೆ ನಡೆಸಿದವರಲ್ಲಿ ಇವರೂ ಇದ್ದಾರೆ.
ಭಯೋತ್ಪಾದನೆ ವಿಚಾರದಲ್ಲಿ ಉಗ್ರರ ಅನೇಕ ಸುಳಿವು, ತಂತ್ರಗಳನ್ನು ಚೆನ್ನಾಗಿ ಬಲ್ಲ ತಪನ್ ಕುಮಾರ್ ಡೇಕಾ ಅವರಿಗೆ ಆ ಕಾರಣಕ್ಕೇ ಈಗ ಐಬಿ ಮುಖ್ಯಸ್ಥ ಸ್ಥಾನ ಒಲಿದುಬಂದಿದೆ.
|
ರಾ ಮುಖ್ಯಸ್ಥರಾಗಿ ಸಮಂತ್ ಗೋಯಲ್ ಮುಂದುವರಿಕೆ
ಇದೇ ವೇಳೆ, ಭಾರತದ ಮತ್ತೊಂದು ಗುಪ್ತಚರ ಸಂಸ್ಥೆ ರೀಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (RAW- Research and Analysis Wing) ನ ಮುಖ್ಯತಸ್ಥರಾಗಿ ಸಮಂತ್ ಗೋಯಲ್ ಅವರನ್ನೇ ಮುಂದುವರಿಸಲಾಗುತ್ತಿದೆ. ರಾ ಮುಖ್ಯಸ್ಥ ಗೋಯಲ್ ಅವರ ಅವಧಿಯನ್ನು ಇನ್ನೂ ಒಂದು ವರ್ಷ ವಿಸ್ತರಿಸಿ ಕೇಂದ್ರ ಗೃಹ ಇಲಾಖೆ ಆದೇಶ ಹೊರಡಿಸಿದೆ.
|
ನೀತಿ ಆಯೋಗ್ಗೆ ನೂತನ ಸಿಇಒ
ಇದೇ ವೇಳೆ ಕೇಂದ್ರ ಸರಕಾರ ನೀತಿ ಆಯೋಗ್ (NITI Ayog) ಸಂಸ್ಥೆಗೆ ನೂತನ ಸಿಇಒ ಆಗಿ ಪರಮೇಶ್ವರನ್ ಅಯ್ಯರ್ ಅವರನ್ನು ನೇಮಕ ಮಾಡಿದೆ. ಈಗಿನ ಸಿಇಒ ಅಮಿತಾಬ್ ಕಾಂತ್ ಅವರ ಅವಧಿ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಅಯ್ಯರ್ ನೇಮಕವಾಗಿದೆ. ಇವರ ಸೇವಾವಧಿ 2 ವರ್ಷಕ್ಕೆ ನಿಗದಿಯಾಗಿದೆ. ಜೂನ್ 30ರಂದು ಅಮಿತಾಬ್ ಕಾಂತ್ ಅಧಿಕಾರಾವಧಿ ಮುಕ್ತಾಯವಾಗುತ್ತದೆ.
1981 ಬ್ಯಾಚ್ನ ಉತ್ತರ ಪ್ರದೇಶ ಕೇಡರ್ನ ಐಎಎಸ್ ಅಧಿಕಾರಿಯಾಗಿರುವ ಪರಮೇಶ್ವನ್ ಅಯ್ಯರ್ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮಾಜಿ ಕಾರ್ಯದರ್ಶಿಯಾಗಿದ್ದಾರೆ. 2009ರಲ್ಲಿ ಆಡಳಿತ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದ ಅವರು, ವಿಶ್ವಸಂಸ್ಥೆಯಲ್ಲಿ ಹಿರಿಯ ಗ್ರಾಮೀಣ ನೀರು ನೈರ್ಮಲ್ಯ ತಜ್ಞರಾಗಿ ಕೆಲಸ ಮಾಡಿದ್ದಾರೆ.
ಐಬಿ ಮತ್ತು ರಾ ಮಧ್ಯೆ ವ್ಯತ್ಯಾಸ ಏನು?
ಇಂಟೆಲಿಜೆನ್ಸ್ ಬ್ಯೂರೋ ಸ್ಥಾಪನೆಯಾಗಿದ್ದು 1887ರಲ್ಲಿ. ಆಗ ಇದನ್ನು ಸೆಂಟ್ರಲ್ ಸ್ಪೆಷನ್ ಬ್ರ್ಯಾಂಚ್ ಎಂದು ಕರೆಯಲಾಗಿತ್ತು. ಭಾರತದ ಆಂತರಿಕ ಭದ್ರತೆ ಮತ್ತು ಕೌಂಟರ್-ಇಂಟೆಲಿಜೆನ್ಸ್ ಕಾರ್ಯಕ್ಕಾಗಿ ರಚಿಸಿದ ಗುಪ್ತಚರ ಸಂಸ್ಥೆ ಇದಾಗಿದೆ. ಇದು ವಿಶ್ವದಲ್ಲೇ ಅತ್ಯಂತ ಹಳೆಯ ಗುಪ್ತಚರ ಸಂಸ್ಥೆಗಳಲ್ಲಿ ಒಂದು.
1968ರವರೆಗೂ ಭಾರತದ ಆಂತರಿಕ ಭದ್ರತೆ ಮತ್ತು ವಿದೇಶ ಗುಪ್ತಚರ ಕಾರ್ಯಾಚರಣೆ ಎರಡನ್ನೂ ಐಬಿಯೇ ನೋಡಿಕೊಳ್ಳುತ್ತಿತ್ತು. ನಂತರ ವಿದೇಶಗಳಲ್ಲಿ ಗುಪ್ತಚಾರಿಕೆ ಮಾಡಲೆಂದೇ ರೀಸರ್ಚ್ ಅಂಡ್ ಅನಾಲಿಸಿಸ್ ವಿಂಗ್ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಈ ಹಿನ್ನೆಲೆಯಲ್ಲಿ ಐಬಿಯ ಕಾರ್ಯವ್ಯಾಪ್ತಿ ಭಾರತದ ಆಂತರಿಕ ಭದ್ರತೆ ಮತ್ತು ಗುಪ್ತಚಾರ ಕಾರ್ಯಕ್ಕೆ ಸೀಮಿತವಾಗಿದೆ.
(ಒನ್ಇಂಡಿಯಾ ಸುದ್ದಿ)