ಜಾಹೀರಾತು ವಿವಾದಕ್ಕೆ ಕ್ಷಮೆ ಕೋರಿದ ತನಿಷ್ಕ್: ತಣಿಯದ ನೆಟ್ಟಿಗರ ಆಕ್ರೋಶ
ನವದೆಹಲಿ, ಅಕ್ಟೋಬರ್ 14: ಅಂತರ್ಧರ್ಮೀಯ ಮದುವೆಯ ಕುರಿತಾದ ಜಾಹೀರಾತು ವಿವಾದ ಸೃಷ್ಟಿಸಿದ ಬಳಿಕ ತನಿಷ್ಕ್ ಆಭರಣ ಸಂಸ್ಥೆ ಅದನ್ನು ಹಿಂದಕ್ಕೆ ಪಡೆದುಕೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ತನಿಷ್ಕ್ ಜಾಹೀರಾತಿನ ಪರ ಮತ್ತು ವಿರೋಧದ ಚರ್ಚೆ ಜೋರಾಗಿ ನಡೆಯುತ್ತಿದೆ.
'ಭಾವನೆಗಳಿಗೆ ಘಾಸಿ ಮಾಡುವ ಸಂಗತಿಗಳ ಬಗ್ಗೆ ತೀವ್ರ ಖೇದವಾಗಿದೆ' ಎಂದಿರುವ ತನಿಷ್ಕ್, ಭಾವನೆಗಳಿಗೆ ನೋವನ್ನುಂಟುಮಾಡಿರುವುದನ್ನು, ನಮ್ಮ ಉದ್ಯೋಗಿಗಳು, ಪಾಲುದಾರರು ಮತ್ತು ಸಿಬ್ಬಂದಿಯ ಒಳಿತಿಗಾಗಿ ತನ್ನ ಜಾಹೀರಾತನ್ನು ಹಿಂದಕ್ಕೆ ಪಡೆದುಕೊಳ್ಳುವುದಾಗಿ ತಿಳಿಸಿದೆ.
ಅವಹೇಳನಾಕಾರಿ ಜಾಹೀರಾತು: ನಟ ಅಕ್ಷಯ್ ಕುಮಾರ್ ವಿರುದ್ಧ ಮರಾಠ ಸಂಘಟನೆ ದೂರು
'ಈ ಸವಾಲಿನ ಸಮಯಗಳಲ್ಲಿ ಜೀವನದ ವಿಭಿನ್ನ ಮೂಲಗಳು, ಸ್ಥಳೀಯ ಸಮುದಾಯಗಳು ಮತ್ತು ಕುಟುಂಬಗಳಿಂದ ಬಂದ ಜನರು ಒಟ್ಟಿಗೆ ಬರುವುದನ್ನು ಸಂಭ್ರಮಿಸುವ ಮತ್ತು ಏಕತೆಯ ಸೌಂದರ್ಯವನ್ನು ಸಂಭ್ರಮಿಸುವ ಉದ್ದೇಶ ಏಕತ್ವಂ ಆಂದೋಲನದ ಹಿಂದೆ ಇತ್ತು. ಈ ಚಿತ್ರವು ತನ್ನ ಮೂಲ ಉದ್ದೇಶಕ್ಕೆ ವಿರುದ್ಧವಾದ ವಿಭಿನ್ನ ಹಾಗೂ ತೀವ್ರತರದ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ' ಎಂದು ತನಿಷ್ಕ್ ಹೇಳಿಕೆ ನೀಡಿದೆ. ಮುಂದೆ ಓದಿ.
ಲವ್ ಜಿಹಾದ್ಗೆ ಪ್ರಚಾರ
ತನಿಷ್ಕ್ ಆಭರಣ ಬ್ರ್ಯಾಂಡ್ನ ವಿಡಿಯೋ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶಕ್ಕೆ ತುತ್ತಾಗಿತ್ತು. ಸೋಮವಾರ ಟ್ವಿಟ್ಟರ್ನಲ್ಲಿ 'ತನಿಷ್ಕ್ ಬಹಿಷ್ಕರಿಸಿ' ಎಂಬ ಹ್ಯಾಷ್ಟ್ಯಾಗ್ ಟ್ರೆಂಡಿಂಗ್ನಲ್ಲಿತ್ತು. ಆಭರಣ ಬ್ರ್ಯಾಂಡ್ 'ಲವ್ ಜಿಹಾದ್'ಅನ್ನು ಪ್ರಚುರಪಡಿಸುತ್ತಿದೆ ಎಂದು ಅನೇಕರು ಆರೋಪಿಸಿದ್ದರು. ನೆಟ್ಟಿಗರ ಕೋಪಕ್ಕೆ ಗುರಿಯಾಗುತ್ತಿದ್ದಂತೆಯೇ ತನಿಷ್ಕ್, ಎಲ್ಲ ಮಾಧ್ಯಮಗಳಿಂದ ಜಾಹೀರಾತನ್ನು ತೆಗೆದುಹಾಕಿತ್ತು.
ಏನಿದು ಜಾಹೀರಾತು?
ಮುಸ್ಲಿಂ ಕುಟುಂಬವು ಹಿಂದೂ ಧರ್ಮದ ಸೊಸೆಯ ಸೀಮಂತ ಕಾರ್ಯಕ್ರಮವನ್ನು ಹಿಂದೂ ಸಂಪ್ರದಾಯದಂತೆ ನಡೆಸಲು ತಯಾರಿ ನಡೆಸುತ್ತಿರುವುದನ್ನು ಈ 45 ಸೆಕೆಂಡುಗಳ ಜಾಹೀರಾತಿನಲ್ಲಿ ತೋರಿಸಲಾಗಿತ್ತು. ಈ ವಿಡಿಯೋ ಲವ್ ಜಹಾದ್ಗೆ ಪ್ರಚೋದನೆ ನೀಡುವಂತಿದೆ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿತ್ತು.
ಕೇಂದ್ರ ಸರ್ಕಾರ ಅತೀ ಹೆಚ್ಚು ಜಾಹೀರಾತು ಕೊಟ್ಟಿದ್ದು ಹಿಂದಿ ಪತ್ರಿಕೆಗಳಿಗೆ!
ಗುಜರಾತ್ ಮಳಿಗೆ ಮೇಲೆ ದಾಳಿ
ಸಾಮಾಜಿಕ ಜಾಲತಾಣಗಳಲ್ಲಿ ತನಿಷ್ಕ್ ಜಾಹೀರಾತು ಆಕ್ರೋಶಕ್ಕೆ ತುತ್ತಾದ ಬೆನ್ನಲ್ಲೇ, ಗುಜರಾತ್ನಲ್ಲಿ ತನಿಷ್ಕ್ ಮಳಿಗೆಯೊಂದರ ಮೇಲೆ ದಾಳಿ ನಡೆದಿದೆ. ಗಾಂಧಿಧಾಮದ ಆಭರಣ ಮಳಿಗೆಗೆ ನುಗ್ಗಿದ ಜನರ ಗುಂಪೊಂದು ದಾಂಧಲೆ ನಡೆಸಿದೆ. ಬಳಿಕ ಮಳಿಗೆಯ ಮ್ಯಾನೇಜರ್ರಿಂದ ಕ್ಷಮಾಪಣೆ ಪತ್ರ ಬರೆಸಿಕೊಂಡಿದ್ದಾರೆ.
ಮುಸ್ಲಿಂ ಸೊಸೆ ಏಕಿಲ್ಲ?
ತನಿಷ್ಕ್ ಸಂಸ್ಥೆಯು ಹಿಂದೂ ಕುಟುಂಬದಲ್ಲಿ ಮುಸ್ಲಿಂ ಸೊಸೆಯೊಂದಿಗೆ ಸಂಭ್ರಮಾಚರಿಸುವ ದೃಶ್ಯಗಳನ್ನು ಏಕೆ ತೋರಿಸಲಿಲ್ಲ? ಏಕತ್ವಂ ಎಂದರೆ ಹಿಂದೂಗಳನ್ನು ಮುಸ್ಲಿಮರು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದೇ? ಹಿಂದೂಗಳಿಗೆ ಆಭರಣ ಮಾರಾಟ ಮಾಡಲು ಹಿಂದೂಗಳನ್ನೇ ಅಣಕಿಸಲಾಗುತ್ತಿದೆ. ಇದಕ್ಕೆ ಕ್ಷಮೆ ಸಾಲುವುದಿಲ್ಲ. ಈ ಹಬ್ಬದ ಅವಧಿಯಲ್ಲಿ ಹಿಂದೂಗಳು ತನಿಷ್ಕ್ನಿಂದ ಆಭರಣ ಖರೀದಿ ಮಾಡುವುದನ್ನು ಬಹಿಷ್ಕರಿಸಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ.