ಮತ್ತೊಂದು ವಿವಾದ ಸೃಷ್ಟಿಸಿದ ತನಿಷ್ಕ್ ಆಭರಣದ ಹೊಸ ಜಾಹೀರಾತು
ನವದೆಹಲಿ, ನವೆಂಬರ್ 9: 'ಲವ್ ಜಿಹಾದ್ಗೆ ಉತ್ತೇಜನ' ನೀಡುವಂತಹ ಜಾಹೀರಾತು ನಿರ್ಮಿಸಿದ ಆರೋಪದಲ್ಲಿ ತೀವ್ರ ವಿವಾದ ಸೃಷ್ಟಿಸಿದ್ದ ತನಿಷ್ಕ್ ಆಭರಣ ಸಂಸ್ಥೆ ಮತ್ತೊಮ್ಮೆ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಈ ಬಾರಿ ದೀಪಾವಳಿ ಹಬ್ಬದ ಆಚರಣೆ ಸಂಬಂಧ ಅದರ ಜಾಹೀರಾತು ವಿಡಿಯೋ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.
ಸಯಾನಿ ಗುಪ್ತಾ, ಅಲಯಾ ಎಫ್, ನೀನಾ ಗುಪ್ತಾ ಮತ್ತು ನಿಮ್ರತ್ ಕೌರ್ ಕಾಣಿಸಿಕೊಂಡಿರುವ ಈ ಹೊಸ ಜಾಹೀರಾತಿನಲ್ಲಿ ಅವರು ತಮ್ಮ ಪಾಲಿಗೆ ದೀಪಾವಳಿ ಎಂದರೇನು ಹಾಗೂ ಈ ವರ್ಷ ಕೊರೊನಾ ವೈರಸ್ ಪಿಡುಗಿನ ನಡುವೆ ದೀಪಾವಳಿಯನ್ನು ಹೇಗೆ ಆಚರಿಸಲಿದ್ದೇವೆ ಎಂಬ ಬಗ್ಗೆ ಮಾತನಾಡಿಕೊಳ್ಳುತ್ತಾರೆ. ಸುರಕ್ಷಿತ ದೀಪಾವಳಿ ಆಚರಿಸಿ ಎಂದು ಜನರಲ್ಲಿ ಮನವಿ ಮಾಡುವ ಈ ತಾರೆಯರು, ಪಟಾಕಿಗಳನ್ನು ಸಿಡಿಸಬೇಡಿ ಎಂದು ಕಿವಿಮಾತು ಹೇಳಿದ್ದಾರೆ. ಇದು ಮತ್ತೊಮ್ಮೆ ಜನರನ್ನು ಕೆರಳಿಸಿದೆ.
ಜಾಹೀರಾತು ವಿವಾದಕ್ಕೆ ಕ್ಷಮೆ ಕೋರಿದ ತನಿಷ್ಕ್: ತಣಿಯದ ನೆಟ್ಟಿಗರ ಆಕ್ರೋಶ
ಹಬ್ಬವೊಂದನ್ನು ಹೇಗೆ ಆಚರಿಸಬೇಕು ಎಂದು ನಮಗೆ ಯಾರಾದರೂ ಏಕೆ ಹೇಳಬೇಕು? ತನಿಷ್ಕ್ ಅನ್ನು ಬಹಿಷ್ಕರಿಸಿ ಎಂಟು ಟ್ವಿಟ್ಟರಿಗರು ಮತ್ತೊಂದು ಸುತ್ತಿನ ಬಾಯ್ಕಾಟ್ ಅಭಿಯಾನ ಆರಂಭಿಸಿದ್ದಾರೆ. ತನಿಷ್ಕ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. 'ಏಕತ್ವಂ' ಜಾಹೀರಾತಿನಲ್ಲಿ ಮುಸ್ಲಿಂ ಕುಟುಂಬದಲ್ಲಿ ಹಿಂದೂ ಸೊಸೆಗೆ ಸೀಮಂತ ಮಾಡುವ ವಿಡಿಯೋ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದರಿಂದ ತನಿಷ್ಕ್ ಅದನ್ನು ಹಿಂಪಡೆದಿತ್ತು. ಈಗ ಸಾಮಾಜಿಕ ಜಾಲತಾಣಗಳಿಂದ ದೀಪಾವಳಿ ಜಾಹೀರಾತಿನ ವಿಡಿಯೋವನ್ನೂ ಅಳಿಸಿಹಾಕಿದೆ. ಮುಂದೆ ಓದಿ.
ಏಕತ್ವಂ ಅರ್ಥ ಆಗಲು ನಮ್ಮ ಜತೆ ಬನ್ನಿ
'ನಮ್ಮ ಹಬ್ಬಗಳನ್ನು ಹೇಗೆ ಆಚರಿಸಬೇಕೆಂದು ಯಾರು ಏಕೆ ಹಿಂದೂಗಳಿಗೆ ಸಲಹೆ ನೀಡಬೇಕು? ಕಂಪೆನಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದರ ಮೇಲೆ ಗಮನ ಹರಿಸಬೇಕೇ ವಿನಾ ಪಟಾಕಿಗಳನ್ನು ಹೊಡೆಯುವುದರಿಂದ ದೂರ ಇರಿ ಎಂದು ನಮಗೆ ಬೋಧನೆ ಮಾಡುವುದರಲ್ಲಿ ಅಲ್ಲ. ನಾವು ದೀಪಗಳನ್ನು ಹಚ್ಚುತ್ತೇವೆ, ಸಿಹಿಗಳನ್ನು ಹಂಚುತ್ತೇವೆ ಮತ್ತು ಹಸಿರು ಪಟಾಕಿಗಳನ್ನು ಹೊಡೆಯುತ್ತೇವೆ. ದಯವಿಟ್ಟು ನಮ್ಮ ಜತೆಗೂಡಿ. ನಿಮಗೆ ಏಕತ್ವ ಎಂದರೆ ಏನು ಎನ್ನುವುದು ಅರ್ಥವಾಗುತ್ತದೆ' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ತೀಕ್ಷ್ಣವಾಗಿ ಹೇಳಿದ್ದಾರೆ.
ಮುಸ್ಲಿಮರಿಗೆ ಬೋಧನೆ ಮಾಡುತ್ತೀರಾ
ಈದ್ ಹಬ್ಬದಂದು ಕುರಿಯನ್ನು ಬಲಿಕೊಡಬಾರದು ಎಂದು ಮುಸ್ಲಿಮರಿಗೆ ಏಕತ್ವಂ ಉಪದೇಶ ನೀಡುತ್ತದೆಯೇ? ಒಂದೇ ಒಂದು ಸಲವಾದರೂ ಮುಸ್ಲಿಮರಿಗೆ ಬೋಧನೆ ಮಾಡಲು ಅವರು ಧೈರ್ಯ ಮಾಡುತ್ತಾರೆಯೇ ನೋಡೋಣ. ದೀಪಾವಳಿ ಹಿಂದೂಗಳದ್ದು ಎಂದು ವೀರೇಂದ್ರ ದುಬೆ ಟ್ವೀಟ್ ಮಾಡಿದ್ದಾರೆ.
ಜಾಹೀರಾತು ವಿವಾದ: ಗುಜರಾತ್ ತನಿಷ್ಕ್ ಆಭರಣ ಮಳಿಗೆ ಮೇಲಿನ ದಾಳಿ ವರದಿ ಸುಳ್ಳು
ಜಾತ್ಯತೀತ ಮಾಡೆಲ್ಗಳು
ಈ ದೀಪಾವಳಿಯಂದು ಸಂಪ್ರದಾಯವನ್ನು, ಹಿಂದೂ ಸಂಸ್ಕೃತಿಯನ್ನು ಸಾಯಿಸೋಣ ಮತ್ತು ಕೊಳ್ಳುಭಾಕತನವನ್ನು ಪ್ರಚಾರ ಮಾಡೋಣ. ಏಕೆಂದರೆ ಫೋಟೊಶಾಪ್ನ ಜಾತ್ಯತೀತ ಮಾಡಲ್ಗಳು ನಕಲಿ ನಗು ಮತ್ತು ವಿಎಫ್ಎಕ್ಸ್ ದೇಹಗಳು ಚಿನ್ನದ ಆಭರಣ ಹೊತ್ತು ನಮ್ಮನ್ನು ಏಕತ್ವಂ ಕಡೆಗೆ ಕರೆದೊಯ್ಯುತ್ತಾರೆ ಎಂದು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ವ್ಯಂಗ್ಯವಾಡಿದ್ದಾರೆ.
ಸ್ಥಳೀಯರಿಂದ ಖರೀದಿಸಿ
'ನಾನು ಹೇಳಿದ್ದನ್ನು ಪುನರಾವರ್ತಿಸಿ. ತನಿಷ್ಕ್ ಆಭರಣ ಖರೀದಿಸಬೇಡಿ. ತನಿಷ್ಕ್ ಆಭರಣ ಉಡುಗೊರೆಯಾಗಿ ನೀಡಬೇಡಿ. ಅವರು ದುಬಾರಿ ತಯಾರಕಾ ವೆಚ್ಚ ಹಾಕುತ್ತಾರೆ ಮತ್ತು ಅವರ ವಿನ್ಯಾಸಗಳೂ ಅಷ್ಟೇನೂ ಅದ್ಭುತವಾಗಿರುವುದಿಲ್ಲ. ನಿಮ್ಮ ಸ್ಥಳೀಯ ಆಭರಣಕಾರರಿಂದ ಅಥವಾ ಹೆಮ್ಮೆಯ ಹಿಂದೂ ಬ್ರ್ಯಾಂಡ್ಗಳಿಂದ ಖರೀದಿಸಿ. ತನಿಷ್ಕ್ ಒಂದು ಅವಮಾನ' ಎಂದು ಶೆಫಾಲಿ ವೈದ್ಯ ಹೇಳಿದ್ದಾರೆ.