'ನಾನಿನ್ನು ಕುಡಿಯೋಲ್ಲ', ತಂದೆಯ ಆ ಮಾತು ಕೇಳೋಕೆ ಮಗ ಬದುಕಿಲ್ಲ!
'ನಾನಿನ್ನು ಯಾವತ್ತಿಗೂ ಕುಡಿಯೋದಿಲ್ಲ. ಮಗನೇ ನನ್ನ ಕ್ಷಮಿಸಿಬಿಡು, ನೀನು ವಾಪಸ್ ಬಂದುಬಿಡು...' ತಂದೆಯೊಬ್ಬ ಮಗನ ಕಳೇಬರದೆದುರು ಹೀಗೆ ಬಿಕ್ಕುತ್ತಿರುವ ದೃಶ್ಯ ಯಾರಲ್ಲಿ ಕಣ್ಣೀರು ಭರಿಸದಿದ್ದೀತು?
ತಂದೆಯ ಕುಡಿತದ ಚಟಕ್ಕೆ ನೊಂದು ಮಗನೊಬ್ಬ ಆತ್ಮಹತ್ಯೆ ಮಾಡಿಕೊಂಡ ಕರುಣಾಜನಕ ಕತೆ ಇದು. ತಮಿಳು ನಾಡಿನ ತಿರುನೆಲ್ವೆಲಿ ಜಿಲ್ಲೆಯಲ್ಲಿ ಕಳೆದ ವಾರ 18 ವರ್ಷದ ದಿನೇಶ್ ನಲಸಿವನ್ ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ ಡೆತ್ ನೋಟಿನಲ್ಲಿ ಬರೆದಿಟ್ಟ ಒಂದೊಂದು ಸಾಲುಗಳು ಕುಡಿತದ ಚಟಕ್ಕೆ ದಾಸರಾದವರಿಗೆ ಛಾಟಿ ಏಟು!
ಉಡುಪಿಯಲ್ಲಿ ತಾಯಿಯೊಬ್ಬಳ ಕೊನೆಯಾಸೆ ತೀರಿಸಿದ ಮಗನಲ್ಲದ ಮಗ
"ನಾನು ಸತ್ತಮೇಲೆ ನೀನು ಕುಡಿಯಬಾರದು. ನೀನು ಕುಡಿಯುತ್ತಿಯಾದರೆ ನನ್ನ ಶವಕ್ಕೆ ಬೆಂಕಿ ಹಚ್ಚಬೇಡ, ಕೇಶ ಮುಂಡನ ಮಾಡಿಕೊಳ್ಳಬೇಡ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ನನ್ನ ಅಂತ್ಯಸಂಸ್ಕಾರ ಮಾಡಬೇಡ. ಇದು ನನ್ನ ಬೇಡಿಕೆ. ಆಗ ಮಾತ್ರ ನನ್ನ ಆತ್ಮಕ್ಕೆ ಶಾಂತಿ ಸಿಗುವುದಕ್ಕೆ ಸಾಧ್ಯ. ಈಗಲಾದರೂ ಕುಡಿಯುವುದನ್ನು ನಿಲ್ಲಿಸು ಅಪ್ಪ..." ಎಂದು ಡೆತ್ ನೋಟ್ ಬರೆದಿಟ್ಟು ದಿನೇಶ್ ನೇಣು ಹಾಕಿಕೊಂಡು ಸಾವಿಗೀಡಾಗಿದ್ದಾನೆ.
ಮಗನ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ತಂದೆ ಮದಸಾಮಿ(48) ದಿಗ್ಭ್ರಮೆಗೊಳಗಾಗಿದ್ದಾರೆ. ಒಂಬತ್ತು ವರ್ಷದ ಹಿಂದೆ ತನ್ನ ತಾಯಿಯನ್ನು ಕಳೆದುಕೊಂಡ ದಿನೇಶ್, ತಂದೆಯನ್ನು ಸಾಕಷ್ಟು ಪ್ರೀತಿಸುತ್ತಿದ್ದ. ಪರೀಕ್ಷೆಯಲ್ಲೂ ಉತ್ತಮ ಅಂಕ ಗಳಿಸುತ್ತಿದ್ದ ದಿನೇಶ್ ಗೆ ಡಾಕ್ಟರ್ ಆಗುವ ಕನಸಿತ್ತು. ಆದರೆ ತಂದೆಯ ಕುಡಿತದ ಚಟಕ್ಕಾಗಿ ಬಹಳ ನೊಂದಿದ್ದ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. "ನಾನು ಕುಡಿಯುತ್ತಿದ್ದಿದ್ದು ನಿಜ, ಆದರೆ ಕುಡಿದು ಯಾರಿಗೂ ತೊಂದರೆ ಕೊಡುತ್ತಿರಲಿಲ್ಲ. ನನ್ನ ಮಗ ನನ್ನನ್ನು ಬಹಳ ಪ್ರೀತಿಸುತ್ತಿದ್ದ. ಆದರೆ ನನ್ನ ಚಟ ಅವನನ್ನು ಬಲಿತೆಗೆದುಕೊಳ್ಳುತ್ತದೆ ಎಂದುಕೊಂಡಿರಲಿಲ್ಲ. ನಾನು ಇನ್ನು ಮೇಲೆ ಯಾವತ್ತಿಗೂ ಕುಡಿಯೋಲ್ಲ. ಕ್ಷಮಿಸು ಮಗನೇ. ನಾನು ನಿನ್ನ ತಂದೆಯಾಗಿ ನಿನ್ನ ಅಂತ್ಯಸಂಸ್ಕಾರ ಮಾಡುತ್ತೇನೆ. ನನ್ನನ್ನು ಕ್ಷಮಿಸು" ಎಂದು ಮದಸಾಮಿ ರೋದಿಸುತ್ತಿದ್ದಾರೆ.
ತಮಿಳುನಾಡಿನಾದ್ಯಂತ ಸಾರಾಯಿ ನಿಷೇಧದ ಕೂಗು ಕೇಳಿಬರುತ್ತಿರುವ ಹೊತ್ತಲ್ಲಿ, ಇದೇ ಉದ್ದೇಶಕ್ಕಾಗಿಯೇ ಯುವಕನೊಬ್ಬ ತನ್ನ ಪ್ರಾಣವನ್ನು ಬಲಿಕೊಟ್ಟಿದ್ದು ದುರಂತವೇ ಸರಿ. ಈ ಘಟನೆ ಮದ್ಯಪಾನ ನಿಷೇಧ ತುರ್ತಾಗಿ ಆಗಬೇಕಾದ ಕೆಲಸ ಎಂಬುದನ್ನು ಸಾರಿ ಹೇಳಿದೆ.