ಕುತೂಹಲ ಕೆರಳಿಸಿದ ಪಳನಿಸ್ವಾಮಿ, ನರೇಂದ್ರ ಮೋದಿ ಭೇಟಿ
ಪ್ರಧಾನಿ ಮೋದಿ ಭೇಟಿ ಮಾಡಿದ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ. ಎಐಎಡಿಎಂಕೆಯ ಎರಡು ಬಣಗಳೂ ಒಗ್ಗೂಡುತ್ತಿರುವ ವದಂತಿಗಳು ಹರದಾಡಿದ ಬೆನ್ನಲ್ಲೇ ಆಗಿರುವ ಈ ಭೇಟಿ ಕುತೂಹಲ ಮೂಡಿಸಿದೆ.
ನವದೆಹಲಿ, ಆಗಸ್ಟ್ 11: ಎರಡು ಧೃವಗಳಾಗಿ ವಿಭಜನೆಗೊಂಡಿದ್ದ ಎಐಎಡಿಕೆಎಂಕೆಯ ಎರಡು ಬಣಗಳು ವಿಲೀನಗೊಂಡಿದ್ದು, ಶೀಘ್ರದಲ್ಲೇ ಆ ಬಗ್ಗೆ ಅಧಿಕೃತ ಹೇಳಿಕೆ ಹೊರಬೀಳಲಿದೆ ಎಂಬ ವರದಿಗಳು ಹರಿದಾಡುತ್ತಿರುವ ಬೆನ್ನಲ್ಲೇ ಶುಕ್ರವಾರ (ಆಗಸ್ಟ್ 11) ತಮಿಳುನಾಡಿನ ಮುಖ್ಯಮಂತ್ರಿ ಪಳನಿ ಸ್ವಾಮಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ.
ಶಶಿಕಲಾ, ದಿನಕರನ್ ಉಚ್ಛಾಟನೆಗೆ ಎಐಎಡಿಂಕೆ ನಿರ್ಧಾರ; ಪನ್ನೀರ್, ಪಳನಿ ಬಣ ವಿಲೀನ?
ಚೆನ್ನೈನಲ್ಲಿ ಗುರುವಾರ ನಡೆದಿದ್ದ ಎಐಎಡಿಎಂಕೆ ಪಕ್ಷದ ಸಭೆಯಲ್ಲಿ, ಪಕ್ಷದ ಅಧಿನಾಯಕಿಯಾಗಿದ್ದ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ನಿಧನದ ನಂತರ, ಪಕ್ಷದ ಉಸ್ತುವಾರಿ ಹೊತ್ತಿದ್ದ ಶಶಿಕಲಾ ಅವರನ್ನು ಪಕ್ಷದಿಂದ ಉಚ್ಛಾಟಿಸುವ ಹಾಗೂ ಶಶಿಕಲಾ ಅವರಿಂದ ಪಕ್ಷದ ಉಪ ಮಹಾ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದ ದಿನಕರನ್ ಅವರನ್ನು ಆ ಸ್ಥಾನದಿಂದ ಕೆಳಗಿಳಿಸುವ ಕುರಿತಂತೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗಿತ್ತು.
ಮಾಜಿ ಮುಖ್ಯಮಂತ್ರಿ ಹಾಗೂ ಜಯಲಲಿತಾ ಅವರ ಆಪ್ತರಾದ ಪನ್ನೀರ್ ಸೆಲ್ವಂ ಅವರ ಬಣವು, ಪಳನಿ ಸ್ವಾಮಿ ಬಣದೊಂದಿಗೆ ವಿಲೀನಗೊಳ್ಳಲು ಹಾಕಲಾಗಿದ್ದ ಷರತ್ತಿನಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಎರಡೂ ಬಣಗಳ ವಿಲೀನಕ್ಕೆ ಇದು ಆರಂಭವಷ್ಟೇ ಎಂದೂ ಹೇಳಲಾಗಿತ್ತು. ಅದರ ಬೆನ್ನಲ್ಲೇ, ಶುಕ್ರವಾರ ದೆಹಲಿಗೆ ಹಾರಿ, ಅಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿರುವುದು ತಮಿಳುನಾಡಿನ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಕೆರಳಿಸಿದೆ.
ಪ್ರಧಾನಿಯೊಂದಿಗೆ ಚರ್ಚಿಸಿದ ವಿಚಾರದ ಬಗ್ಗೆ ಮಾತನಾಡಿದ ಪಳನಿಸ್ವಾಮಿ, ತಮಿಳುನಾಡಿನ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆಯಿಂದಾಗಿರುವ ಕೆಲ ತೊಡಕುಗಳ ನಿವಾರಣೆ ಬಗ್ಗೆ ಮಾತನಾಡಿದ್ದಾಗಿ ತಿಳಿಸಿದ್ದಾರೆ. ಆದರೆ, ಅಸಲಿ ವಿಷಯ ಬೇರೆಯದ್ದೇ ಇದೆ ಎಂದು ಹೇಳಲಾಗಿದೆ.
'ಉನ್ನತ ಹುದ್ದೆಯಲ್ಲಿ ಸಾಮಾನ್ಯ ವ್ಯಕ್ತಿ:' ನಾಯ್ಡುಗೆ ಮೋದಿ ಅಭಿನಂದನೆ
ಏಕೆಂದರೆ, ಈ ಹಿಂದೆ, ಜಯಲಲಿತಾ ಅವರು ತೀರಿಹೋದಾಗ ಎಐಎಡಿಎಂಕೆಯಲ್ಲಿ ಅಲ್ಲೋಲ ಕಲ್ಲೋಲ ಎದ್ದು, ಮುಂದಿನ ನಾಯಕರು ಯಾರಾಗಬೇಕು ಎಂಬ ಕೋಲಾಹಲ ಕಾಣಿಸಿಕೊಂಡಿದ್ದಾಗ ಕೇಂದ್ರ ಸರ್ಕಾರದ ಪರವಾಗಿ ಸಂಧಾನ ಮಾತುಕತೆ ನಡೆಸಿದ್ದ ಈಗಿನ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪನ್ನೀರ್ ಸೆಲ್ವಂ ಅವರನ್ನೇ ಜಯಲಲಿತಾ ಅವರ ಉತ್ತರಾಧಿಕಾರಿಯಾಗಿ ಘೋಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.