ಸಾಹಸಗಾಥೆ ಬಲುರೋಚಕ: ಹಸಿದಹೊಟ್ಟೆ, ಹರಿದ ಬಟ್ಟೆಯ ಕರುಳು ಹಿಂಡುವ ಕಥಾನಕ
ಚೆನ್ನೈ, ಫೆಬ್ರವರಿ.03: ನೆತ್ತಿ ಮೇಲೊಂದು ಸೂರಿಲ್ಲ, ಹಸಿದ ಹೊಟ್ಟೆಗೆ ಊಟವಿಲ್ಲ. ಕಣ್ಣು ಎದುರಿಗೆ ಪುಟ್ಟ ಕಂದಮ್ಮಗಳು ಊಟ ಊಟ ಎನ್ನುತ್ತಿದ್ದರೂ ಮಕ್ಕಳ ತುತ್ತಿನ ಚೀಲ ತುಂಬಿಸಲಾಗದ ಅಸಹಾಯಕ ಪರಿಸ್ಥಿತಿ. ಇದು ಸಾವಿನ ಮನೆ ಬಾಗಿಲನ್ನು ತಟ್ಟಿ ಬಂದ ಹೆತ್ತವಳ ನೋವಿನ ಕಥೆ.. ಬಡತನದಲ್ಲಿ ನೊಂದು ಬೆಂದ ಮಹಿಳೆಯ ಬದುಕಿನ ವ್ಯಥೆ.
ಪ್ರೇಮಾ ಎಂಬ ಮಹಿಳೆಯು ತನ್ನ ಮಕ್ಕಳ ಹಸಿದ ಹೊಟ್ಟೆಗೆ ಹಾಲುಣಿಸಲು ತನ್ನ ತಲೆಗೂದಲನ್ನೇ ಮಾರಾಟ ಮಾಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಚಿಕ್ಕ ವಯಸ್ಸಿನಲ್ಲೇ ಪತಿಯನ್ನು ಕಳೆದುಕೊಂಡು 3 ಮಕ್ಕಳ ಸಂಸಾರದ ಬಂಡಿಯನ್ನು ಎಳೆದ ಮಹಿಳೆಯ ನೋವು ಮತ್ತು ಸಾಧನೆಯ ಪರಿ ಎಂಥವರಿಗೂ ಸ್ಪೂರ್ತಿ.
ಬೀದಿಯಲ್ಲಿ ಕಿತ್ತಳೆ ಹಣ್ಣು ಮಾರಿ ಶಾಲೆ ಕಟ್ಟಿದವಗೆ ಪದ್ಮಶ್ರೀ ಗೌರವ
ಅಸಲಿಗೆ ಪ್ರೇಮಾ ಅವರನ್ನು ಒಂದು ಸುಂದರ ಸಂಸಾರ. ಪತಿ-ಪತ್ನಿ ಮೂವರು ಮುದ್ದಾದ ಮಕ್ಕಳು. ಪತಿ-ಪತ್ನಿ ಇಬ್ಬರೂ ಇಟ್ಟಿಗೆ ತಯಾರಿಕಾ ಕಾರ್ಖಾನೆಯಲ್ಲಿ ದಿನಗೂಲಿ ಕೆಲಸ ಮಾಡಿಕೊಂಡಿದ್ದರು. ನಂತರ ಆದಾಯವನ್ನೆಲ್ಲ ಸಂಗ್ರಹಿಸಿ ಬ್ಯಾಂಕ್ ನಿಂದ ಸ್ವಲ್ಪ ಸಾಲವನ್ನು ಪಡೆದು ಹೊಸದಾಗಿ ತಾವೇ ಇಟ್ಟಿಗೆ ತಯಾರಿಕಾ ಕಾರ್ಖಾನೆಯನ್ನೂ ಆರಂಭಿಸಿದ್ದರು.
ಸುಂದರ ಸಂಸಾರಕ್ಕೆ ಬಂದೆರಗಿದ ಬರಸಿಡಿಲು
ಬದುಕಿಗೆ ಹೊಸ ರೂಪ ನೀಡಲು ಆರಂಭಿಸಿದ ಇಟ್ಟಿಗೆ ತಯಾರಿಕಾ ಕಾರ್ಖಾನೆಯೇ ಕುಟುಂಬಕ್ಕೆ ಉರುಳಾಗಿ ಬಿಟ್ಟಿತು. ಬ್ಯಾಂಕ್ ಸಾಲ ಕುಗ್ಗಿದ ವ್ಯಾಪಾರದಿಂದ ಪ್ರೇಮಾ ಅವರ ಪತಿ ಮಾನಸಿಕ ಖಿನ್ನತೆಗೆ ಒಳಗಾದರು. ಸಾಲದ ಶೂಲವನ್ನು ಎದುರಿಸಲಾಗಿದೇ ಆತ್ಮಹತ್ಯೆಗೆ ಶರಣಾದರು. ಅಂದು ಇಡೀ ಕುಟುಂಬಕ್ಕೆ ಬರಸಿಡಿಲೇ ಬಂದು ಎರಗಿದಂತೆ ಆಗಿತ್ತು.
ಅನಾರೋಗ್ಯದಿಂದ ಕೂಲಿ ಕೆಲಸಕ್ಕೂ ಕುತ್ತು
ಪತಿಯನ್ನು ಕಳೆದುಕೊಂಡ ಮೇಲೆಯೂ ಪ್ರೇಮಾ ತಾವೇ ದುಡಿದು ಮಕ್ಕಳನ್ನು ಸಾಕುತ್ತಿದ್ದರು. ಇಟ್ಟಿಗೆ ತಯಾರಿಕಾ ಕಾರ್ಖಾನೆಗೆ ಕೆಲಸಕ್ಕೆ ತೆರಳಿದರೆ ದಿನಕ್ಕೆ 200 ರುಪಾಯಿ ಕೂಲಿ ಕೊಡುತ್ತಿದ್ದರು. ಆದರೆ, ಅನಾರೋಗ್ಯಕ್ಕೆ ತುತ್ತಾದ ಬಳಿಕ ಇಟ್ಟಿಗೆಗಳನ್ನು ನನ್ನಿಂದ ಎತ್ತುವುದಕ್ಕೆ ಆಗುತ್ತಿರಲಿಲ್ಲ. ಜ್ವರದಿಂದ ಬಹಳಷ್ಟು ಕಾಲ ಮನೆಯಲ್ಲೇ ಇರುವಂತಾ ಸ್ಥಿತಿ ಎದುರಾಯಿತು. ಮೂರು ತಿಂಗಳು ಅನಾರೋಗ್ಯದಿಂದ ಮನೆಯಲ್ಲಿ ತುತ್ತು ಅನ್ನಕ್ಕೂ ಪರದಾಡುವಂತಾ ಸ್ಥಿತಿ ನಿರ್ಮಾಣವಾಯಿತು.
ಹಸಿದ ಹೊಟ್ಟೆ ತುಂಬಲಿಲ್ಲ, ಹರಿದ ಬಟ್ಟೆ ಹೊಲೆಯಲಿಲ್ಲ
ಯಜಮಾನ ಇಲ್ಲದ ಮನೆಯನ್ನು ಬಡತನ ಕಿತ್ತು ತಿನ್ನುತ್ತಿತ್ತು. ಮೈ ಮೇಲೆ ತುಂಡಾದ ಬಟ್ಟೆಯೇ ಗತಿಯಾಯಿತು. ಹಸಿದ ಹೊಟ್ಟೆಗೆ ಊಟವೂ ಸಿಗದಂತಾ ದುಸ್ಥಿತಿ ಬಂದೊದಗಿತು. ಹೆತ್ತವಳ ಎದುರಿಗೆ ಪುಟ್ಟ ಮಕ್ಕಳು ತುತ್ತು ಅನ್ನಕ್ಕಾಗಿ ಕಣ್ಣೀರು ಹಾಕುವಂತಾ ಪರಿಸ್ಥಿತಿ ಎದುರಾಯಿತು. ಏಳು ವರ್ಷದ ತಮ್ಮ ಮಗ ಕಾಲಿಯಪ್ಪನ್ ಶಾಲೆಯಿಂದ ಬಂದು ಊಟವನ್ನು ಕೇಳಿದನು. ಊಟವಿಲ್ಲದೇ ಹಸಿವೆಯಿಂದ ಕಣ್ಣೀರು ಹಾಕಿದ್ದನು ಎಂದು ನೊಂದು ಹೇಳುತ್ತಾರೆ ಪ್ರೇಮಾ.
ಮಕ್ಕಳ ಊಟಕ್ಕಾಗಿ ತಲೆಗೂದಲು ಮಾರಿದ ಪ್ರೇಮಾ
ಈ ಮೊದಲು ದುಡಿಯುತ್ತಿದ್ದ ಸಂದರ್ಭದಲ್ಲಿ ಸಂಪಾದಿಸಿದ್ದ ಚಿನ್ನ, ಬೆಳ್ಳಿ, ಒಡವೆಗಳನ್ನೆಲ್ಲ ಮಾರಾಟ ಮಾಡಿದ್ದಾಯ್ತು. ಹಸಿದ ಹೊಟ್ಟೆ ತುಂಬಿಸಲು ಇಷ್ಟು ಸಾಕಾಗಲಿಲ್ಲ. ಮಕ್ಕಳಿಗೆ ಊಟ ಕೊಡಿಸುವುದಕ್ಕೂ ಕೈಯಲ್ಲಿ 10 ರುಪಾಯಿ ಇರಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ಪ್ರೇಮಾ ತಮ್ಮ ತಲೆಗೂದಲನ್ನು 150 ರುಪಾಯಿಗೆ ಮಾರಾಟ ಮಾಡಿದ್ದರು. ಈ ಹಣದಲ್ಲಿ 20 ರುಪಾಯಿಯ ಮೂರು ರೈಸ್ ಬಾತ್ ಪ್ಯಾಕೇಟ್ ಗಳನ್ನು ತಮ್ಮ ಮಕ್ಕಳಿಗಾಗಿ ಖರೀದಿಸಿದ್ದರು.
ಪ್ರೇಮಾ ಸಾವಿನ ಮನೆ ಬಾಗಿಲು ತಟ್ಟಿದ್ದು ಸುಳ್ಳಲ್ಲ
20 ರುಪಾಯಿಯಲ್ಲಿ ಖರೀದಿಸಿದ ಊಟ ಒಂದು ಹೊತ್ತಿನ ಹಸಿವು ನೀಗಿಸುತ್ತದೆ. ಮುಂದೇನು ಗತಿ ಎಂದು ಯೋಚಿಸಿದ ಪ್ರೇಮಾ ಆತ್ಮಹತ್ಯೆಯ ದಾರಿಯನ್ನು ಹಿಡಿದಿದ್ದರು. ಆದರೆ, ನೆರೆ ಮನೆಯವರು ಪ್ರೇಮಾ ಆತ್ಮಹತ್ಯೆಯನ್ನು ತಡೆದಿದ್ದರು. ಇದಾಗಿ ಕೆಲವು ದಿನಗಳಲ್ಲೇ ಬಡತನದಲ್ಲಿ ನರಳುತ್ತಿದ್ದ ಕುಟುಂಬದ ಮೇಲೆ ಆಶಾಕಿರಣ ಮೂಡಿತು.
ಪ್ರೇಮಾ ನೆರವಿಗೆ ಧಾವಿಸಿದ ಬಾಲಾ ಮುರುಗನ್
ತಮಿಳುನಾಡಿನಲ್ಲೇ ಕಂಪ್ಯೂಟರ್ ಗ್ರಾಫಿಕ್ಸ್ ಸೆಂಟರ್ ಇಟ್ಟುಕೊಂಡಿದ್ದ ಬಾಲಾ ಮುರಗನ್, ಪ್ರೇಮಾ ಅವರ ಬಗ್ಗೆ ತಿಳಿದುಕೊಳ್ಳುತ್ತಾರೆ. ನಂತರ ಬಡತನದಲ್ಲಿ ನೊಂದು ಬೇಯುತ್ತಿರುವ ಮಹಿಳೆಗೆ ನೆರವು ನೀಡಲು ಮುಂದಾಗುತ್ತಾರೆ. ಪ್ರೇಮಾ ಅವರಲ್ಲಿ ಆತ್ಮಸ್ಥೈರ್ಯವನ್ನು ತುಂಬುತ್ತಾರೆ. ತಮ್ಮ ಬದುಕಿನ ದಾರಿಯನ್ನೇ ಉದಾಹರಣೆಯಾಗಿ ನೀಡುತ್ತಾರೆ. ಬಾಲಾ ಮುರುಗನ್ ಕೂಡ ಚಿಕ್ಕಂದಿನಲ್ಲಿ ತೀರಾ ಬಡತನದ ಕುಟುಂಬದಿಂದ ಬಂದಿದ್ದು, ಈ ಹಿಂದೆ ಅವರ ತಾಯಿ ಕೂಡಾ ಆತ್ಮಹತ್ಯೆಗೆ ಯತ್ನಿಸಿದ್ದರು. ಊಟಕ್ಕೆ ಇಲ್ಲದ ಸಂದರ್ಭದಲ್ಲಿ ಮನೆಯಲ್ಲಿನ ಪೇಪರ್, ಕಬ್ಬಿಣದ ವಸ್ತುಗಳನ್ನು ಮಾರಾಟ ಮಾಡಿ ಅಕ್ಕಿಯನ್ನು ಖರೀದಿಸಿದ್ದೆವು ಎಂದು ಸ್ಪೂರ್ತಿಯ ಮಾತುಗಳನ್ನು ಹೇಳುತ್ತಾರೆ.
ಪ್ರೇಮಾ ನಿಲುವು ಸ್ವಾವಲಂಬನೆಗೆ ಸ್ಪೂರ್ತಿ
ಮಹಿಳೆಯ ದುಸ್ಥಿತಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಾಲಾ ಮುರುಗನ್ ಒಂದು ಲೇಖನವನ್ನು ಬರೆದು ಪೋಸ್ಟ್ ಮಾಡುತ್ತಾರೆ. ಅದಾಗಿ ಕೆಲವು ದಿನಗಳಲ್ಲೇ ಪ್ರೇಮಾ ಅವರ ಖಾತೆಗೆ ಬರೋಬ್ಬರಿ 1 ಲಕ್ಷ 20 ಸಾವಿರ ರುಪಾಯಿ ಸಹಾಯಧನ ಹರಿದು ಬರುತ್ತದೆ. 1 ಲಕ್ಷ 20 ಸಾವಿರ ರುಪಾಯಿ ನೆರವಿನ ಹಣದಲ್ಲಿ ತಮ್ಮ ಸಾಲವೆಲ್ಲ ತೀರುತ್ತದೆ. ಇನ್ನು, ಯಾರೂ ಕೂಡಾ ಹಣವನ್ನು ನೀಡದಂತೆ ಪ್ರೇಮಾ ಮನವಿ ಮಾಡಿಕೊಳ್ಳುತ್ತಾರೆ. ಇದರ ಜೊತೆಗೆ ತಾವೇ ದುಡಿದು ತಿಂಗಳಿಗೆ 700 ರುಪಾಯಿ ಅಂತೆ ತಮಗೆ ಹಣ ನೀಡಿದ ಜನರಿಗೆ ಹಣವನ್ನು ವಾಪಸ್ ನೀಡುವುದಾಗಿ ಪ್ರೇಮಾ ತಿಳಿಸಿದ್ದಾರೆ.
ಮಹಿಳೆಯ ನೆರವಿಗೆ ಬಂದ ಜಿಲ್ಲಾಡಳಿತ
ಇನ್ನು, ಮಹಿಳೆ ಸ್ವಾವಲಂಬಿ ಬದುಕಿನ ಕುರಿತು ವರದಿಯಾಗುತ್ತಿದ್ದಂತೆ ಜಿಲ್ಲಾಡಳಿತ ಕೂಡಾ ಪ್ರೇಮಾ ನೆರವಿಗೆ ಧಾವಿಸಿದೆ. ಯಾವುದೇ ಡೆಪಾಸಿಟ್ ಇಲ್ಲದೇ ಸರ್ಕಾರದ ವತಿಯಿಂದ ಹಾಲು ವಿತರಣೆಯ ಡೀಲರ್ ಶಿಪ್ ನೀಡುವುದಾಗಿ ಭರಸೆ ನೀಡಿದೆ.
ಸಾವಿಗೆ ಶರಣಾದರೆ ಬದುಕಿಗೆ ಅರ್ಥ ಇರೋದಿಲ್ಲ ಎಂದ ಪ್ರೇಮಾ
ಓದಲು ಬರೆಯಲು ಬಾರದ ಪ್ರೇಮಾ ಇಂದು ಉತ್ತಮ ಸ್ವಾವಲಂಬಿ ಬದುಕು ಸಾಗಿಸುತ್ತಿದ್ದಾರೆ. ಈ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ಅವರು, ಆತ್ಮಹತ್ಯೆ ಮಾಡಿಕೊಳ್ಳುವುದು ಯಾವುದೇ ಕಾರಣಕ್ಕೂ ಉತ್ತಮ ನಿರ್ಧಾರವಲ್ಲ. ಸಾವಿಗೆ ಶರಣಾದರೆ ಬದುಕಿಗೆ ಅರ್ಥ ಇರುವುದಿಲ್ಲ. ಯಾರೂ ಕೂಡಾ ಆತ್ಮಹತ್ಯೆಯಂತಾ ತೀರ್ಮಾನವನ್ನು ತೆಗೆದುಕೊಳ್ಳಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ಇಂದಿನ ಬದುಕಿಗೆ ಬುನಾದಿ ಹಾಕಿಕೊಟ್ಟ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
ವರದಿ ಮತ್ತು ಚಿತ್ರಗಳು: BBC