ತಾಜ್ ಮಹಲ್ ಮತ್ತು 20 ರಹಸ್ಯ ಕೊಠಡಿಗಳು: ಕೋರ್ಟ್ ಮೊರೆ
ಲಕ್ನೋ: ದೆಹಲಿ ಬಳಿಯ ಆಗ್ರಾದಲ್ಲಿರುವ ವಿಶ್ವವಿಖ್ಯಾತ ತಾಜ್ ಮಹಲ್ (Taj Mahal) ಕಟ್ಟಡದಲ್ಲಿ ಹಿಂದೂ ವಿಗ್ರಹಗಳು ಹಾಗೂ ಶಾಸನಗಳು ಇವೆ. ತಾಜ್ ಮಹಲ್ನಲ್ಲಿ ರಹಸ್ಯವಾಗಿರುವ ಹಾಗೂ ಸದಾ ಮುಚ್ಚೇ ಇರುವ 20 ಕೊಠಡಿಗಳನ್ನ ತೆರೆಸುವಂತೆ ನಿರ್ದೇಶನ ಕೊಡಿ ಎಂದು ಕೋರಿ ಲಕ್ನೋ ಪೀಠದ ಅಲಹಾಬಾದ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ.
ತಾಜ್ಮಹಲ್ಗೆ 3 ದಿನಗಳ ಕಾಲ ಉಚಿತ ಭೇಟಿಗೆ ಅವಕಾಶ
ಈ ಇಪ್ಪತ್ತು ರೂಮುಗಳಲ್ಲಿ ಹಿಂದೂ ದೇವರ ವಿಗ್ರಹ ಅಥವಾ ಶಾಸನಗಳು (Scriptures) ಇವೆಯಾ ಎಂಬುದನ್ನು ಪರಿಶೀಲಿಸಲು ಒಂದು ಸಮಿತಿ ರಚನೆ ಮಾಡುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿ ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ. ಉತ್ತರಪ್ರದೇಶದ ಅಯೋಧ್ಯ ಜಿಲ್ಲೆಯ ಬಿಜೆಪಿ ಮಾಧ್ಯಮ ಉಸ್ತುವಾರಿ ಡಾ. ರಜನೀಶ್ ಈ ಅರ್ಜಿ ಹಾಕಿದ್ದಾರೆ. ಲಕ್ನೋ ಪೀಠದಲ್ಲಿ ಈ ಪ್ರಕರಣ ಲಿಸ್ಟ್ ಆದ ಬಳಿಕ ಅರ್ಜಿದಾರರ ಪರವಾಗಿ ವಕೀಲ ರುದ್ರ ವಿಕ್ರಮ್ ಸಿಂಗ್ ವಾದ ಮಂಡನೆ ಮಾಡಲಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ತಾಜ್ ಮಹಲ್ಗೆ 'ರಾಮ ಮಹಲ್' ಎಂದು ಮರುನಾಮಕರಣ: ಬಿಜೆಪಿ ಶಾಸಕ
ತಾಜ್ ಮಹಲ್ ಹಳೆಯ ವಿವಾದ:
"ತಾಜ್ ಮಹಲ್ಗೆ ಸಂಬಂಧಪಟ್ಟಂತೆ ಹಳೆಯ ವಿವಾದವೊಂದು ಇದೆ. ಅಲ್ಲಿ 20 ಕೊಠಡಿಗಳನ್ನು ಬಂದ್ ಮಾಡಲಾಗಿದೆ. ಅಲ್ಲಿಗೆ ಹೋಗಲು ಯಾರಿಗೂ ಪ್ರವೇಶ ಇಲ್ಲ. ಈ ರೂಮುಗಳಲ್ಲಿ ಹಿಂದೂ ದೇವರುಗಳ ವಿಗ್ರಹಗಳು ಮತ್ತು ಧರ್ಮಗ್ರಂಥಗಳು ಇವೆ ಎಂದು ನಂಬಲಾಗಿದೆ. ಈ ರೂಮುಗಳನ್ನ ತೆರೆದು ಒಳಗೆ ಏನಿದೆ ಎಂದು ಪರಿಶೀಲಿಸಿ ಖಚಿತಪಡಿಸಿಕೊಳ್ಳಲು ಭಾರತೀಯ ಪುರಾತತ್ವ ಇಲಾಖೆಗೆ ನಿರ್ದೇಶನ ನೀಡುವಂತೆ ಹೋಕೋರ್ಟ್ನಲ್ಲಿ ಪೆಟಿಶನ್ ಫೈಲ್ ಮಾಡಿದ್ದೇನೆ. ಈ ರೂಮುಗಳನ್ನ ತೆರೆದು ಒಳಗೆ ಪರಿಶೀಲನೆ ಮಾಡಿ ಎಲ್ಲಾ ಅನುಮಾನಗಳನ್ನ ಬಗೆಹರಿಸಿಕೊಳ್ಳುವುದರಲ್ಲಿ ತಪ್ಪೇನು ಇಲ್ಲ" ಎಂದು ಅರ್ಜಿದಾರ ಡಾ. ರಜನೀಶ್ ಮಾಧ್ಯಮಗಳಿಗೆ ಹೇಳಿದ್ದಾರೆ.
ತಾಜ್ ಮಹಲ್ ಶಿವನ ಮಂದಿರವಾಗಿತ್ತಾ?
ತಾಜ್ ಮಹಲ್ ಅನ್ನು ಇತಿಹಾಸ ಪಾಠದಲ್ಲಿರುವಂತೆ ಮೊಘಲ್ ದೊರೆ ಶಾಹಜಹಾನ್ ಕಟ್ಟಿಸಿದ್ದಲ್ಲ, ಅದು ಹಿಂದೆ ಶಿವನ ದೇವಾಲಯವಾಗಿತ್ತು ಎಂಬ ವಾದ ಹಲವು ದಶಕಗಳಿಂದ ಗಟ್ಟಿಯಾಗಿ ಕೇಳಿಬರುತ್ತಿದೆ. 2015ರಲ್ಲಿ ತಾಜ್ ಮಹಲ್ ಮೂಲತಃ ಶಿವನ ಮಂದಿರವಾಗಿತ್ತು ಎಂದು ವಾದಿಸಿ ಆರು ವಕೀಲರು ಪ್ರಕರಣಗಳನ್ನು ದಾಖಲಿಸಿದ್ದರು.
ಅನಂತಕುಮಾರ್ ಹೆಗಡೆ, ಕಟಿಯಾರ್ ಹೇಳಿಕೆಗಳು:
2017ರಲ್ಲಿ ಬಿಜೆಪಿ ನಾಯಕ ವಿನಯ್ ಕಟಿಯಾರ್ ಕೂಡ ಇದೇ ವಾದ ಮುಂದಿಟ್ಟು, ತಾಜ್ ಮಹಲ್ ಒಳಗೆ ಹೋಗಿ ಹಿಂದೂ ಧರ್ಮದ ಕುರುಹುಗಳೇನಾದರೂ ಇವೆಯಾ ಎಂಬುದನ್ನು ಪರಿಶೀಲಿಸುವಂತೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನ ಕೇಳಿಕೊಂಡಿದ್ದರು. 2019ರಲ್ಲಿ ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಹಿಂದೂ ದೊರೆ ಜಯಸಿಂಹ ಅವರಿಂದ ಶಿವನ ದೇವಾಲಯವನ್ನು ಖರೀದಿಸಿದ ಬಳಿಕ ಅದನ್ನು ಶಾಹಜಹಾನ್ ತಾಜ್ ಮಹಲ್ ಆಗಿ ಪರಿವರ್ತಿಸಿದರೆಂದು ಹೇಳಿಕೊಂಡಿದ್ದರು.
ಪುರಾತತ್ವ ಇಲಾಖೆ ಅಭಿಪ್ರಾಯವೇನು?
ತಾಜ್ ಮಹಲ್ ಮೂಲತಃ ಹಿಂದೂ ಮಂದಿರವಾಗಿತ್ತು ಎಂಬುದು ಪಿಎನ್ ಓಕ್ ಸೇರಿದಂತೆ ಕೆಲ ಇತಿಹಾಸಕಾರರ ವಾದ. ಆದರೆ, ಬಹುತೇಕ ಇತಿಹಾಸಕಾರರು ತಾಜ್ ಮಹಲ್ ಅನ್ನು ಶಾಹಜಹಾನನೇ ಕಟ್ಟಿಸಿದ್ದು ಎಂದು ದೃಢಪಡಿಸಿದ್ದಾರೆ. ಭಾರತದ ಪುರಾತತ್ವ ಇಲಾಖೆ (Archaelogical Survey of India) ಕೂಡ ತಾಜ್ ಮಹಲ್ ಹಿಂದೂ ಮಂದಿರವಾಗಿತ್ತೆಂಬುದಕ್ಕೆ ಯಾವುದೇ ಸ್ಪಷ್ಟ ಸಾಕ್ಷಿ ಇಲ್ಲ ಎಂದು ಆಗಾಗ್ಗೆ ಸ್ಪಷ್ಟನೆ ಕೊಟ್ಟಿರುವುದಂಟು. 2018ರ ಫೆಬ್ರವರಿ ತಿಂಗಳಲ್ಲಿ ಪುರಾತ್ವ ಇಲಾಖೆ ಅಗ್ರಾ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್ನಲ್ಲಿ, ತಾಜ್ ಮಹಲ್ ಅನ್ನು ಕಟ್ಟಿಸಿದ್ದು ಶಾಹಜಹಾನ್ನೇ. ಮುಮ್ತಾಜ್ ಮಹಲ್ಗೆ ಸಮಾಧಿಯಾಗಿ (Tomb) ತಾಜ್ ಮಹಲ್ ಕಟ್ಟಲಾಗಿದೆ ಎಂದು ಬಹಳ ಸ್ಪಷ್ಟವಾಗಿ ಅಭಿಪ್ರಾಯಪಟ್ಟಿತ್ತು.
(ಒನ್ಇಂಡಿಯಾ ಸುದ್ದಿ)