ಭಾರತೀಯ ಕಾರ್ಮಿಕರ ಬೆವರು, ರಕ್ತದಿಂದ ತಾಜ್ ಮಹಲ್ ನಿರ್ಮಾಣ: ಯೋಗಿ
"ತಾಜ್ ಮಹಲ್ ನಿರ್ಮಾಣವಾಗಿದ್ದು ಭಾರತೀಯ ಕಾರ್ಮಿಕದ ಬೆವರು ಹಾಗೂ ರಕ್ತದಿಂದ. ಅದನ್ನು ನಿರ್ಮಿಸಿದವರು ಯಾರು- ಯಾವ ಕಾರಣಕ್ಕೆ ಎಂಬುದು ಮುಖ್ಯವಲ್ಲ. ಆದರೆ ಅದು ನಿರ್ಮಾಣವಾಗಿದ್ದು ಭಾರತೀಯ ಕಾರ್ಮಿಕರ ರಕ್ತ ಹಾಗೂ ಬೆವರಿನಿಂದ" ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಉತ್ತರಪ್ರದೇಶವನ್ನು ಕೇಸರೀಕರಣ ಮಾಡೋಕೆ ಹೊರಟ್ರಾ ಸಿಎಂ ಯೋಗಿ?
ಸುದ್ದಿ ಸಂಸ್ಥೆಯೊಂದರ ಜತೆ ಮಂಗಳವಾರ ಮಾತನಾಡಿದ ಅವರು, ಪ್ರವಾಸಿಗರ ದೃಷ್ಟಿಯಿಂದ ಮಾತ್ರ ತಾಜ್ ಮಹಲ್ ಮುಖ್ಯವಾದ ಸ್ಮಾರಕ. ಪ್ರವಾಸಿಗರ ಸುರಕ್ಷತೆ ಮತ್ತು ಅವರಿಗೆ ಅನುಕೂಲ ಒದಗಿಸುವುದು ಉತ್ತರಪ್ರದೇಶ ಸರಕಾರದ ಆದ್ಯತೆ ಎಂದು ಅವರು ಹೇಳಿದ್ದಾರೆ.
ಆಗ್ರಾದ ತಾಜ್ ಮಹಲ್ ಸೇರಿದಂತೆ ವಿವಿಧ ಸ್ಮಾರಕಗಳಿಗೆ ಅಕ್ಟೋಬರ್ ಇಪ್ಪತ್ತೈದರಂದು ಯೋಗಿ ಆದಿತ್ಯನಾಥ್ ಭೇಟಿ ಮಾಡಲಿದ್ದಾರೆ. ಈಚೆಗೆ ಉತ್ತರಪ್ರದೇಶದ ಪ್ರವಾಸೋದ್ಯಮ ಬುಕ್ ಲೆಟ್ ನಿಂದ ತಾಜ್ ಮಹಲ್ ಅನ್ನು ತೆಗೆದು ಹಾಕಲಾಗಿದೆ.
ಬಿಜೆಪಿ ಮುಖಂಡರಾದ ಸಂಗೀತ್ ಸೋಮ್ ಈಚೆಗೆ, ಐತಿಹಾಸಿಕ ಸ್ಥಳಗಳ ಪಟ್ಟಿಯಿಂದ ತಾಜ್ ಮಹಲ್ ಅನ್ನು ತೆಗೆದುಹಾಕಿರುವುದಕ್ಕೆ ಕೆಲವರು ನೋವು ವ್ಯಕ್ತಪಡಿಸಿದ್ದಾರೆ. ಏನು ಇತಿಹಾಸ, ಯಾವ ಇತಿಹಾಸ? ತಾಜ್ ಮಹಲ್ ಕಟ್ಟಿಸಿದ ವ್ಯಕ್ತಿ ತನ್ನ ತಂದೆಯನ್ನು ಜೈಲಿಗಟ್ಟಿದ. ಹಿಂದೂಗಳನ್ನು ಗುರಿಯಾಗಿರಿಸಿಕೊಂಡು ದಾಳಿ ಮಾಡಿದ. ಈ ಜನರು ಈಗಲೂ ಇತಿಹಾಸ ಹುಡುಕುತ್ತಾರೆ ಅಂದರೆ ಅದು ದುರದೃಷ್ಟ ಎಂದು ಸೋಮ್ ಹೇಳಿದ್ದರು.