ನಟ ಚಿರಂಜೀವಿಗೆ ಮುಖ್ಯಮಂತ್ರಿಯಾಗುವ ಯೋಗ!
ಇಂತಹ ಒಂದು ಸುಸಂದರ್ಭ ತಮಗೆ ಒದಗಿಬರಲಿದೆ ಎಂಬುದನ್ನು ಸೂಕ್ಷ್ಮವಾಗಿ ಅರಿತ ನಟ ಚಿರಂಜೀವಿ ಅವರು ಕಾಂಗ್ರೆಸ್ ಜತೆಗಿನ ತಮ್ಮ ಮೈತ್ರಿಯನ್ನು ಜಾರಿಯಲ್ಲಿಟ್ಟಿದ್ದಾರೆ. ತೆಲಂಗಾಣ ಪ್ರತ್ಯೇಕ ರಾಜ್ಯ ಉದಯಿಸಿದ ಮೇಲೆ ಉಳಿದ ಆಂಧ್ರಕ್ಕೆ ತಾವೇ ಮುಖ್ಯಮಂತ್ರಿಯಾಗಬಹುದು ಎಂಬುದು ಚಿರಂಜೀವಿ ಕಿವಿಗೆ ಬಿದ್ದಿದೆ. ಕಾಪು-ಹಿಂದುಳಿದ ವರ್ಗ-ದಲಿತ ಜಾತಿ ಸಂಯೋಜನೆ ತಮ್ಮ ಕೈಹಿಡಿಯಲಿದೆ ಎಂಬುದು ನಟ ಚಿರಂಜೀವಿ ಅವರ ಎಣಿಕೆಯಾಗಿದೆ. ( ಕರ್ನಾಟಕಕ್ಕೆ ಕಾದಿದೆ ಮತ್ತೊಂದು ಗಡಿ ತಂಟೆ !)
ಹಾಗಾಗಿ, 2009ರ ಚುನಾವನೆಯಲ್ಲಿ ತಮ್ಮ ಪ್ರಜಾರಾಜ್ಯಂ ಪಾರ್ಟಿ ನೆಲೆಯಲ್ಲಿ ಗೆದ್ದುಬಂದ ಶಾಸಕರು/ಸಂಸದರ ಜತೆ ಮತ್ತೆ ನಿಕಟ ಸಂಪರ್ಕ ಸಾಧಿಸಿರುವ ನಟ ಚಿರಂಜೀವಿ ಅವರು ಈಗಿನ ಸಂಕಷ್ಟದ ಸಮಯದಲ್ಲಿ ಕಾಂಗ್ರೆಸ್ ಕೈ ಬಿಟ್ಟುಹೋಗದಂತೆ ಮನವರಿಕೆ ಮಾಡಿಕೊಡುತ್ತಿದ್ದಾರೆ. ಏಕೆಂದರೆ ಪ್ರಜಾರಾಜ್ಯಂ ಪಾರ್ಟಿಯು ಕಾಂಗ್ರೆಸ್ ಪಕ್ಷದಲ್ಲಿ ವಿಲೀನವಾದ ಬಳಿಕ ಚಿರಂಜೀವಿ ಪಾರ್ಟಿಯಿಂದ ಗೆದ್ದುಬಂದವರು ಹಸಿರು ಹುಲ್ಲುಗಾವಲುಗಳನ್ನು ಅರಸಿಕೊಂಡು ಬೇರೆ ಪಕ್ಷಗಳತ್ತ ಮುಖ ಮಾಡಿದ್ದಾರೆ.
ಈ ವಾರಾತ್ಯದಲ್ಲಿ ಇಂತಹ ಜನಪ್ರತಿನಿಧಿಗಳ ಜತೆ ಮಾತುಕತೆ ನಡೆಸಿರುವ ಚಿರಂಜೀವಿ ಅವರು ತಮ್ಮ ಕೈಬಿಡದಂತೆ ಮನವಿ ಮಾಡಿಕೊಂಡಿದ್ದಾರೆ. ಚಿರಂಜೀವಿಗೆ ಹತ್ತಿರವಾಗಿರುವ ಸಚಿವರಾದ ಗಂಟಾ ಶ್ರೀನಿವಾಸ ರಾವ್ (ಮೂಲತಃ ಟಿಡಿಪಿ ಪಕ್ಷಕ್ಕೆ ಸೇರಿದವರು), ಸಿ ರಾಮಚಂದ್ರಯ್ಯ ಅಲ್ಲದೆ ಕಾಂಗ್ರೆಸ್ ಶಾಸಕರಾದ ತೋಟಾ ತಿರುಮೂರ್ತಲು, ಶ್ರೀಧರ ಕೃಷ್ಣ ರೆಡ್ಡಿ, ಕನ್ನಬಾಬು, ವೇಲಂಪಲ್ಲಿ ಶ್ರೀನಿವಾಸ್, ವಂಗಾ ಗೀತಾ, ಯೆಲಮಂಚಿಲಿ ರವಿ, ಪಂಥಮ್ ಗಂಧಿ ಮೋಹನ್, ಆವಂತಿ ಶ್ರೀನಿವಾಸ್ ಮತ್ತು ಜಿ ವೆಂಕಟರಾಮಯ್ಯ ಅವರನ್ನು ಭೋಜನಕೂಟಕ್ಕೆ ಆಹ್ವಾನಿಸಿ, ನಟ ಚಿರಂಜೀವಿ ಮಾತುಕತೆ ನಡೆಸಿದ್ದಾರೆ.
ತಮ್ಮದೇ ಕಾಪು ಜನಾಂಗದಿಂದ ಗೆದ್ದುಬಂದ ಈ ಶಾಸಕರು ಸಂಕಷ್ಟ ಸಮಯದಲ್ಲಿ ಕಾಂಗ್ರೆಸ್ ಕೈಬಿಡುವುದು ಎಷ್ಟರಮಟ್ಟಿಗೆ ಸರಿ? ಎಂದು ಅಸಮಾಧಾನ ವ್ಯಕ್ತಪಡಿಸಿದ ಚಿರು, ತಮ್ಮ ಕೈಬಿಡಬಾರದು ಎಂದು ಅಲವತ್ತುಕೊಂಡರು ಎಂದು ಮೂಲಗಳು ಹೇಳಿವೆ. 2009ರಲ್ಲಿ ತನ್ನ PRP ಟಿಕೆಟಿನಿಂದ ಗೆದ್ದುಬಂದ ಈ ಜನನಾಯಕರು ಈಗ ತಮ್ಮ ಕೈಬಿಡುವುದು ಸರ್ವತಾಸಾಧುವಲ್ಲ ಎಂಬುದನ್ನು ಚಿರು ಮನದಟ್ಟು ಪಡಿಸಿದ್ದಾರೆ. ( ತೆಲಂಗಾಣ ತಳಮಳ: 72 ಶಾಸಕರಿಂದ ರಾಜೀನಾಮೆ )
ಏಕೆಂದರೆ AICC ನಾಯಕರ ಜತೆ ತಾವು ಸತತ ಸಂಪರ್ಕದಲ್ಲಿದ್ದು, ಆಂಧ್ರ ವಿಭಜನೆಗೆ ತಾವು ಸಮ್ಮತಿ ಸೂಚಿಸಿರುವುದಾಗಿ ಅವರು ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಮುಂದೆ ಆಂಧ್ರ ಇಬ್ಭಾಗವಾದಾಗ ತಾವೇ ಮುಖ್ಯಮಂತ್ರಿಯಾಗುವುದನ್ನು ಚಿರು ಖಾತ್ರಿ ಪಡಿಸಿಕೊಂಡಿದ್ದಾರೆ. ಹಾಗಾಗಿಯೇ ಕಾಪು ಶಾಸಕರಾದಿಯಾಗಿ ಪಕ್ಷದಿಂದ ಗೆದ್ದುಬಂದವರಾರೂ ತಮ್ಮ ಕೈಬಿಡಬಾರದು ಎಂದು ಚಿರು ಒತ್ತಿ ಒತ್ತಿ ಹೇಳಿದ್ದಾರೆ ಎಂದು ಮೂಲಗಳು ಹೇಳಿವೆ.