11 ಮಂದಿ ಭಾರತೀಯರಿಗೆ ಸ್ವಿಸ್ ಬ್ಯಾಂಕ್ ನೋಟಿಸ್
ನವದೆಹಲಿ, ಮೇ 27: ತಮ್ಮ ಹಣದ ಮೂಲ, ಸಂಪೂರ್ಣ ಹೆಸರು ಮತ್ತು ವಿವಿಧ ವಿವರಗಳನ್ನು ನೀಡುವಂತೆ ಭಾರತದ 11 ಮಂದಿಗೆ ಸ್ವಿಸ್ ಬ್ಯಾಂಕ್ ನೋಟಿಸ್ ಜಾರಿ ಮಾಡಿದೆ.
ಮೇ 21ರಂದು ಒಂದೇ ದಿನ ಒಟ್ಟು 11 ಬಾರತೀಯರಿಗೆ ಈ ನೋಟಿಸ್ ಕಳುಹಿಸಿದ್ದು, ಮಾರ್ಚ್ ತಿಂಗಳನಿಂದ ಇದುವರೆಗೂ ಕನಿಷ್ಠ 25 ನೋಟಿಸ್ಗಳನ್ನು ತನ್ನ ಭಾರತೀಯ ಗ್ರಾಹಕರಿಗೆ ಕಳುಹಿಸಿದ್ದು, ಭಾರತ ಸರ್ಕಾರದ ಮುಂದೆ ಅವರ ಮಾಹಿತಿಗಳನ್ನು ಹಂಚಿಕೊಳ್ಳುವ ಮುನ್ನ ಮನವಿ ಸಲ್ಲಿಸಲು ಅವರಿಗೆ ಒಂದು ಅವಕಾಶ ನೀಡಿದೆ.
ಸ್ವಿಸ್ ಬ್ಯಾಂಕ್ ಕಪ್ಪು ಹಣದ ಪ್ರಮಾಣ ಶೇ 80ರಷ್ಟು ಇಳಿಕೆ: ಕೇಂದ್ರ
ಸ್ವಿಟ್ಜರ್ಲೆಂಡ್ ಸರ್ಕಾರದ ನೋಡಲ್ ಇಲಾಖೆ 'ಫೆಡರಲ್ ಟ್ಯಾಕ್ಸ್ ಅಡ್ಮಿನಿಸ್ಟ್ರೇಷನ್', ಈ ನೋಟಿಸ್ಗಳನ್ನು ಜಾರಿ ಮಾಡಿದೆ. ಸ್ವಿಸ್ ಬ್ಯಾಂಕ್ಗಳಲ್ಲಿ ಹಣ ಇರಿಸಿರುವ ಭಾರತೀಯರ ವಿವರಗಳನ್ನು ಹಂಚಿಕೊಳ್ಳುವಂತೆ ಸಿಬಿಐ ಸೇರಿದಂತೆ ಅನೇಕ ತನಿಖಾ ಸಂಸ್ಥೆಗಳು ಸ್ವಿಟ್ಜರ್ಲೆಂಡ್ ಸರ್ಕಾರದ ಮೇಲೆ ಒತ್ತಡ ಹೇರಿದ್ದವು. ಅದರ ಫಲವಾಗಿ ಸ್ವಿಟ್ಜರ್ಲೆಂಡ್ ಈ ಕ್ರಮ ತೆಗೆದುಕೊಂಡಿದೆ.
ಈ ನೋಟಿಸ್ಗಳ ಮೂಲಕ ಭಾರತಕ್ಕೆ ಆಡಳಿತಾತ್ಮಕ ನೆರವು ಒದಗಿಸದೆ ಇರಲು ಅಗತ್ಯ ಎಲ್ಲ ದಾಖಲೆ ಪುರಾವೆಗಳನ್ನು 30 ದಿನಗಳ ಒಳಗೆ ಸಲ್ಲಿಕೆ ಮಾಡುವಂತೆ ಖಾತೆದಾರರು ಅಥವಾ ಅವರಿಗೆ ಸಂಬಂಧಿಸಿದ ಅಧಿಕೃತ ಪ್ರತಿನಿಧಿಗಳಿಗೆ ಸೂಚಿಸಲಾಗಿದೆ.
ಸ್ವಿಸ್ ಬ್ಯಾಂಕ್ಗಳಲ್ಲಿರುವ ಎಲ್ಲ ಹಣವೂ ಕಪ್ಪುಹಣವಲ್ಲ: ಅರುಣ್ ಜೇಟ್ಲಿ
ಮೇ 7ರಂದು ಸ್ವಿಸ್ ಬ್ಯಾಂಕ್ ಭಾರತದ ರತನ್ ಸಿಂಗ್ ಚೌಧರಿ ಎಂಬುವವರಿಗೆ ನೋಟಿಸ್ ಜಾರಿ ಮಾಡಿತ್ತು. ಅವರಿಗೆ ಮಾಹಿತಿ ಒದಗಿಸಲು ಹತ್ತು ದಿನಗಳ ಅವಕಾಶ ನೀಡಲಾಗಿತ್ತು. ಇದಕ್ಕೂ ಮೊದಲು ಏಪ್ರಿಲ್ನಲ್ಲಿ ಜೆಎನ್ವಿ, ಕುಲದೀಪ್ ಸಿಂಗ್ ಡಿಂಗ್ರಾ ಮತ್ತು ಅನಿಲ್ ಭಾರದ್ವಾಜ್ ಎಂಬುವವರಿಗೆ 30 ದಿನಗಳ ಕಾಲಾವಕಾಶ ನೀಡಿ ನೋಟಿಸ್ ನೀಡಲಾಗಿತ್ತು.
ಇಬ್ಬರ ಹೆಸರು ಮಾತ್ರ ಬಹಿರಂಗ
ಈ 11 ಮಂದಿಯಲ್ಲಿ ಇಬ್ಬರ ಹೆಸರನ್ನು ಮಾತ್ರ ಬಹಿರಂಗಪಡಿಸಲಾಗಿದೆ. ಉಳಿದ 9 ಜನರ ಹೆಸರಿನ ಬದಲು ಅವರ ಹೆಸರಿನ ಇನಿಷಿಯಲ್ಗಳು ಮತ್ತು ಜನ್ಮದಿನಾಂಕವನ್ನು ಮಾತ್ರ ನೀಡಲಾಗಿದೆ. ಕೃಷ್ಣ ಭಗವಾನ್ ರಾಮಚಂದ್ (ಹುಟ್ಟಿದ ದಿನಾಂಕ ಮೇ 1949) ಮತ್ತು ಕಲ್ಪೇಶ್ ಹರ್ಷದ್ ಕಿನರಿವಾಲಾ (ಜನ್ಮದಿನಾಂಕ ಸೆಪ್ಟೆಂಬರ್ 1949) ಅವರ ಹೆಸರನ್ನು ಬಹಿರಂಗಪಡಿಸಲಾಗಿದೆ.
9 ಮಂದಿಯ ಇನಿಷಿಯಲ್ ಮಾತ್ರ ಪ್ರಕಟ
ಉಳಿದ 9 ಮಂದಿಯ ಹೆಸರಿನ ಮೊದಲಾಕ್ಷರಗಳನ್ನು ಮಾತ್ರ ತಿಳಿಸಲಾಗಿದೆ. ಶ್ರೀಮತಿ ಎಎಸ್ಬಿಕೆ (ನವೆಂಬರ್ 24, 1944), ಶ್ರೀಮತಿ ಪಿಎಎಸ್ (ನವೆಂಬರ್ 1, 1983), ಶ್ರೀ ಎಪಿಎಸ್ (ನವೆಂಬರ್ 27, 1944), ಶ್ರೀ ಎಬಿಕೆಐ (ಜುಲೈ 9, 1944), ಶ್ರೀಮತಿ ಆರ್ಎಸ್ (ನವೆಂಬರ್ 22, 1973), ಶ್ರೀಮತಿ ಎಡಿಎಸ್ (ಆಗಸ್ಟ್ 14, 1949), ಶ್ರೀ ಎಂಎಲ್ಎ (ಮೇ 20, 1935), ಶ್ರೀ ಎನ್ಎಂಎ (ಫೆಬ್ರವರಿ 21, 1968), ಶ್ರೀ ಎಂಎಂಎ (ಜೂನ್ 27, 1973).
ಕಪ್ಪು ಹಣದ ಅಂದಾಜಿನ ಮಾಹಿತಿ ಆರ್ಥಿಕ ಸಚಿವಾಲಯದ ಬಳಿಯಿಲ್ಲ
ಗ್ರಾಹಕರ ವಿವರ ಹಂಚಿಕೊಳ್ಳುವುದಿಲ್ಲ
ಕಪ್ಪುಹಣ ಮತ್ತು ಕಾನೂನಿಗೆ ವಿರುದ್ಧವಾಗಿ ಸಂಪಾದಿಸಿದ ಹಣವನ್ನು ಇರಿಸಿಕೊಳ್ಳಲು ಸ್ವಿಸ್ ಬ್ಯಾಂಕ್ ಅವಕಾಶ ನೀಡುವುದಿಲ್ಲ. ಭಾರತ ಸೇರಿದಂತೆ ವಿವಿಧ ದೇಶಗಳು ನಡೆಸುತ್ತಿರುವ ತನಿಖೆಗಳಿಗೆ ಬ್ಯಾಂಕ್ ಸಹಕರಿಸುತ್ತಾ ಬಂದಿದೆ. ಆದರೆ, ಹಾಗೆಂದ ಮಾತ್ರಕ್ಕೆ ಬ್ಯಾಂಕಿನ ಗ್ರಾಹಕರ ವಿವರಗಳನ್ನು ಬ್ಯಾಂಕ್ ಎಂದಿಗೂ ಹಂಚಿಕೊಳ್ಳುವುದಿಲ್ಲ ಎಂದು ತಿಳಿಸಿದೆ.
ಸ್ವಯಂಚಾಲಿತ ಮಾಹಿತಿ ವಿನಿಮಯ
ಮುಂದಿನ ವರ್ಷದಿಂದ ಬ್ಯಾಂಕ್ ಹೊಸ ನೀತಿ ನಿಯಮಗಳನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದೆ. ಇದರಲ್ಲಿ ಸ್ವಯಂಚಾಲಿತ ಮಾಹಿತಿ ವಿನಿಮಯ ಪದ್ಧತಿ ಜಾರಿಗೆ ತರಲು ಉದ್ದೇಶಿಸಲಾಗಿದೆ. ಸ್ವಿಟ್ಜರ್ಲೆಂಡ್ ಸರ್ಕಾರವು ಅನೇಕ ದೇಶಗಳೊಂದಿಗೆ ತನ್ನ ಗ್ರಾಹಕರ ಮಾಹಿತಿಗಳನ್ನು ಹಂಚಿಕೊಂಡಿದೆ. ಭಾರತದ ತನಿಖಾ ಸಂಸ್ಥೆಗಳಿಗೂ ಮಾಹಿತಿ ನೀಡಲು ಮುಂದಾಗಿದೆ. ಹಣದ ಮೂಲ ತಿಳಿಸದ ವ್ಯಕ್ತಿಗಳಿಗೆ ನೋಟಿಸ್ ನೀಡಲಾಗಿದೆ.