ಬಿಡದಿ ನಿತ್ಯಾನಂದಸ್ವಾಮಿ ದೇಶ ಬಿಟ್ಟು ಪರಾರಿ: ಪಾಸ್ಪೋರ್ಟ್ ಯಾರದ್ದು?
ಬಿಡದಿ ಧ್ಯಾನಪೀಠದ ಸ್ವಯಂಘೋಷಿತ ದೇವಮಾನವ ನಿತ್ಯಾನಂದಸ್ವಾಮಿ ದೇಶ ಬಿಟ್ಟು ಪರಾರಿಯಾಗಿದ್ದಾರೆ ಎಂದು ಗುಜರಾತ್ ಪೊಲೀಸರು ಅಧಿಕೃತವಾಗಿ ಹೇಳಿಕೆಯನ್ನು ನೀಡಿದ್ದಾರೆ.
ಅಸಲಿಗೆ ಸುಮಾರು ಎರಡು ತಿಂಗಳ ಹಿಂದೆಯೇ ನಿತ್ಯಾನಂದಸ್ವಾಮಿ ಭಾರತದಲ್ಲಿರುವ ಬಗ್ಗೆ ಹಲವು ಅನುಮಾನಗಳಿದ್ದವು. ಕೆರಬಿಯನ್ ಅಥವಾ ಆಸ್ಟ್ರೇಲಿಯಾ ದ್ವೀಪಕ್ಕೆ ಹಾರಿ ಕೆಲವು ದಿನಗಳಾದವು ಎನ್ನುವ ಸುದ್ದಿಗಳು ಹರಿದಾಡುತ್ತಿದ್ದವು.
ಸ್ವಯಂಘೋಷಿತ ದೇವಮಾನವ ನಿತ್ಯಾನಂದ ವಿದೇಶಕ್ಕೆ ಪರಾರಿ
ಯೋಗಿನಿ ಸರ್ವಜ್ಞಪೀಠಂ ಆಶ್ರಮದಲ್ಲಿನ ವಿದ್ಯಾರ್ಥಿಗಳ ಅಪಹರಣದ ವಿರುದ್ದ ಗುಜರಾತ್ ಪೊಲೀಸರು ನಿತ್ಯಾನಂದ ವಿರುದ್ದ FIR ದಾಖಲಿಸಿದ್ದರು. ನಕಲಿ ಪಾಸ್ಪೋರ್ಟ್ ಬಳಸಿ ವಿದೇಶಕ್ಕೆ ನಿತ್ಯಾನಂದ ಹೋಗಿರಬಹುದು ಎಂದು ಅಂದಾಜಿಸಲಾಗಿದೆ.
ಭಕ್ತರ ಭೇಟಿಗೆ ನೇರವಾಗಿ ಸಿಗದ ಸ್ವಾಮಿ ನಿತ್ಯಾನಂದ; ಎಲ್ಲಿದ್ದೀರಾ ಬಿಡದಿ ಸ್ವಾಮಿ?
ನಿತ್ಯಾನಂದ ತನ್ನ ಅಧಿಕೃತವಾದ ಪಾಸ್ಪೋರ್ಟ್ ಬಳಸಿ, ವಿದೇಶಕ್ಕೆ ಹಾರಲು ಸಾಧ್ಯವೇ ಇಲ್ಲ. ಹಾಗಾದರೆ, ಬೇರೊಬ್ಬರ ಪಾಸ್ಪೋರ್ಟ್ ಮೂಲಕ ನಿತ್ಯಾನಂದ ವಿದೇಶಕ್ಕೆ ಹಾರಿದರೇ ಎನ್ನುವ ಪ್ರಶ್ನೆಗೆ 'ಸೂಕ್ತ ವಿಚಾರಣೆ'ಯಂದಷ್ಟೇ ಉತ್ತರ ಸಾಧ್ಯ.
ಖಚಿತ ಪಡಿಸಿದ ಗುಜರಾತ್ ಪೊಲೀಸ್
ಗುಜರಾತ್ ಪೊಲೀಸರಲ್ಲದೇ, ಕರ್ನಾಟಕದಲ್ಲೂ ನಿತ್ಯಾನಂದ ಅವರ ಮೇಲೆ ಹಲವು ಕ್ರಿಮಿನಲ್ ಕೇಸ್ ಗಳಿವೆ. 2018ರಲ್ಲಿ ನಿತ್ಯಾನಂದ ತಮ್ಮ ಪಾಸ್ಪೋರ್ಟ್ ನವೀಕರಣಕ್ಕೆ ರಾಮನಗರ ಪೊಲೀಸ್ ವರಿಷ್ಠರಿಗೆ ಅರ್ಜಿ ಸಲ್ಲಿಸಿದ್ದರು. ನವೀಕರಣಕ್ಕೆ ಪೊಲೀಸರ ಧೃಡೀಕರಣ ಅಗತ್ಯವಾಗಿರುವುದರಿಂದ, ನಿತ್ಯಾನಂದ ತಮ್ಮ PROಗಳ ಮೂಲಕ ಎಸ್ಪಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.
ರಾಮನಗರದ ಎಸ್ಪಿ ರಮೇಶ್ ಬಾನೋತ್
"ನಿತ್ಯಾನಂದರ ಮೇಲೆ ಹಲವು ಕೇಸ್ ಗಳಿರುವುದರಿಂದ ರಾಮನಗರದ ಎಸ್ಪಿ ರಮೇಶ್ ಬಾನೋತ್, ಅವರ ಪಾಸ್ಪೋರ್ಟ್ ನವೀಕರಣಕ್ಕೆ ಪೊಲೀಸ್ ಧೃಡೀಕರಣ ನೀಡಿರಲಿಲ್ಲ. ಅವರು ದೇಶ ಬಿಟ್ಟು ಹೋಗುವ ಸಾಧ್ಯತೆ ಕಮ್ಮಿ. ಪಾಸ್ಪೋರ್ಟ್ ಅವಧಿ ಮುಕ್ತಾಯಗೊಂಡಿದೆ, ಕಾನೂನು ಪ್ರಕಾರ ಅವರು ದೇಶ ಬಿಟ್ಟು ಹೋಗುವ ಹಾಗಿಲ್ಲ. ಅವರು ಉತ್ತರ ಭಾರತದಲ್ಲಿದ್ದಾರೆ ಎನ್ನುವುದರ ಬಗ್ಗೆ ಮಾಹಿತಿಯಿದೆ" ಎಂದು ಐಜಿಪಿ ಬಿ.ದಯಾನಂದ, ಕಳೆದ ಡಿಸೆಂಬರ್ ನಲ್ಲಿ ಹೇಳಿದ್ದರು.
ನಿತ್ಯಾನಂದ ಅವರ ಮೂಲ ಹೆಸರು ಎ.ರಾಜಶೇಖರನ್
ನಿತ್ಯಾನಂದ ಅವರ ಮೂಲ ಹೆಸರು ಎ.ರಾಜಶೇಖರನ್, ಹುಟ್ಟಿದ್ದು ತಮಿಳುನಾಡಿನ ತಿರುವಣ್ಣಾಮಲೈನಲ್ಲಿ. ಬಿಡದಿ ಸೇರಿದಂತೆ, ಹಲವು ಕಡೆ ಇವರ ಆಶ್ರಮಗಳಿಗೆ ಮತ್ತು ಅಸಂಖ್ಯಾತ ಭಕ್ತಸಮೂಹವಿದೆ. ಸುಮಾರು ಒಂದು ವರ್ಷದಿಂದ, ನಿತ್ಯಾನಂದ ಯಾವುದೇ ತನ್ನ ಭಕ್ತರನ್ನು ನೇರವಾಗಿ ಭೇಟಿಯಾಗಿರಲಿಲ್ಲ. ಇದನ್ನು, ಹಲವು ಬಾರಿ ಅವರ ಭಕ್ತರೇ ಖಚಿತ ಪಡಿಸಿದ್ದರು.
ಯಾರ ಪಾಸ್ಪೋರ್ಟ್ ಬಳಸಿ ನಿತ್ಯಾನಂದ ದೇಶ ಬಿಟ್ಟು ಪರಾರಿಯಾಗಿರಬಹುದು?
ಈಗ ನಿತ್ಯಾನಂದ ದೇಶದಲ್ಲಿ ಇಲ್ಲ ಎನ್ನುವುದು ಖಚಿತವಾಗುತ್ತಿದ್ದಂತೆಯೇ,ಯಾರ ಪಾಸ್ಪೋರ್ಟ್ ಬಳಸಿಕೊಂಡು ನಿತ್ಯಾನಂದ ದೇಶ ಬಿಟ್ಟು ಪರಾರಿಯಾಗಿದ್ದಾರೆ ಎನ್ನುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ರಾಜಶೇಖರನ್ ಎನ್ನುವ ಮೂಲ ಹೆಸರಿನಲ್ಲಿ ನಿತ್ಯಾನಂದ ಇನ್ನೊಂದು ಪಾಸ್ಪೋರ್ಟ್ ಅನ್ನು ಹೊಂದಿದ್ದರೇ? ಅಥವಾ ಬೇರೊಬ್ಬರ ಪಾಸ್ಪೋರ್ಟ್ ಅನ್ನು ಎಡಿಟ್ ಮಾಡಿ ಹಾರಿದರೇ ಎನ್ನುವುದಿಲ್ಲಿ ಪ್ರಶ್ನೆ?
ನಿತ್ಯಾನಂದ ಪರಾರಿಯಾಗಿರುವ ಬಗ್ಗೆ ಹಲವು ವ್ಯಂಗ್ಯಗಳು
ನಿತ್ಯಾನಂದ ಪರಾರಿಯಾಗಿರುವ ಬಗ್ಗೆ ಹಲವು ವ್ಯಂಗ್ಯಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿವೆ. ನಲವತ್ತು ನಿಮಿಷ ಲೇಟ್ ಆಗಿ ಉದಯಿಸಬೇಕೆಂದು ಸೂರ್ಯ ದೇವರಿಗೆ ಆದೇಶ ಕೊಟ್ಟಿರುವ ನಿತ್ಯಾನಂದಗೆ, ನಕಲಿ ಪಾಸ್ಪೋರ್ಟ್ ಬಳಸಿ ಪರಾರಿಯಾಗುವುದು ಯಾವ ದೊಡ್ಡ ಕೆಲಸ ಎಂದು ತಮಾಷೆಯಾಡಲಾಗುತ್ತಿದೆ. "ನಲವತ್ತು ನಿಮಿಷ ಲೇಟ್ ಆಗಿ ನೀನು ಉದಯಿಸಬೇಕೆಂದು ಸೂರ್ಯ ದೇವರಿಗೆ ಆದೇಶ ಕೊಟ್ಟಿದ್ದೆ, ಇದೇ ಕಾರಣಕ್ಕೆ ಇಂದು ಸೂರ್ಯೋದಯ ಲೇಟ್ ಆಗಿರುವುದು" ಎಂದು ಬಿಡದಿ ಪೀಠದ ನಿತ್ಯಾನಂದ ಸ್ವಾಮೀಜಿಯ ಪ್ರವಚನದ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು.