ಅದಮ್ಯ ಚೇತನ ವಿವೇಕರ ಜನ್ಮದಿನ: ಎಲ್ಲೆಲ್ಲಿ ಯುವದಿನದ ಸಂಭ್ರಮ?
"ನಾವು ಏನನ್ನು ಯೋಚಿಸುತ್ತೀವೋ ಅದೇ ನಮ್ಮನ್ನು ರೂಪಿಸುತ್ತದೆ. ಆದ್ದರಿಂದ ನೀವು ಏನು ಯೋಚಿಸುತ್ತೀರಿ ಎಂಬುದರ ಬಗ್ಗೆ ಎಚ್ಚರಿಕೆ ಇರಲಿ. ಮಾತು ಮುಖ್ಯವಲ್ಲ, ಯೋಚನೆ ಜೀವಂತವಾಗಿರುತ್ತದೆ... ಅದು ಬಹುದೂರ ಪ್ರಯಾಣಿಸುತ್ತದೆ!"
ಈ ಜಗತ್ತು ಕಂಡ ಅದಮ್ಯ ಚೇತನ ಸ್ವಾಮಿ ವಿವೇಕಾನಂದ(ಜನವರಿ 12, 1863 -ಜುಲೈ 4, 1902)ರ ಅದೆಷ್ಟೋ ಸ್ಫೂರ್ತಿ ವಾಣಿಗಳಲ್ಲಿ ಇದೂ ಒಂದು. ಮೃಗಸದೃಶನಾದವನನ್ನು ಮನುಷ್ಯನನ್ನಾಗಿ ಮಾಡುವ, ಮನುಷ್ಯನನ್ನು ದೇವರನ್ನಾಗಿ ಮಾಡುವ ಉದಾತ್ತ ಚಿಂತನೆಯ ಹರಿಕಾರ ವಿವೇಕಾನಂದರು.
ಕೇವಲ ಹೇಳಿದ್ದಷ್ಟೇ ಅಲ್ಲ, ತಮ್ಮ ತತ್ತ್ವಗಳನ್ನೆಲ್ಲ ತಾವೇ ಪಾಲಿಸಿ ಆದರ್ಶರಾದವರು ವಿವೇಕಾನಂದರು. ಒಂದರ್ಥದಲ್ಲಿ ತಮ್ಮ ಬದುಕನ್ನೇ ಪ್ರಯೋಗಕ್ಕೊಡ್ಡಿಕೊಂಡವರು. ಸನಾತನ ಧರ್ಮ, ಭಾರತೀಯತೆ, ಹಿಂದುತ್ವ, ಅಧ್ಯಾತ್ಮದ ಬಗೆಗೆ ಎಳೆ ವಯಸ್ಸಿನಲ್ಲೇ ಅವರಿಗಿದ್ದ ಅದಮ್ಯ ಉತ್ಸಾಹ, ಅಭಿಮಾನ ಅವರನ್ನು ಚಿಕಾಗೋದ ವಿಶ್ವಧರ್ಮ ಸಮ್ಮೇಳನದವರೆಗೂ ಕೊಂಡೊಯ್ದಿತ್ತು. ಇಡೀ ವಿಶ್ವದ ದೃಷ್ಟಿಯಲ್ಲಿ ಭಾರತವೆಂಬ ಮಹೋನ್ನತ ದೇಶದ ಕೀರ್ತಿಯನ್ನು ಮತ್ತಷ್ಟು ಔನ್ನತ್ಯಕ್ಕೇರಿಸಿದ ದೇಶಪ್ರೇಮಿ ವಿವೆಕಾನಂದರು.
ವಿವೇಕಾನಂದರ ನೆನಪಲ್ಲಿ ಜ.12ರಂದು ಮಲ್ಲೇಶ್ವರದಲ್ಲಿ ರಾಷ್ಟ್ರೀಯ ಯುವದಿನ
ಅವರ ಜನ್ಮದಿನವಾದ ಜನವರಿ 12 ನ್ನು ಪ್ರತಿ ವರ್ಷ 'ರಾಷ್ಟ್ರೀಯ ಯುವದಿನ'ವನ್ನಾಗಿ ಆಚರಿಸಲಾಗುತ್ತದೆ. ಈ ದಿನ ದೇಶದ ವಿವಿಧ ರಾಜ್ಯಗಳಲ್ಲಿ ತರಹೇವಾರಿ ಕಾರ್ಯಕ್ರಮಗಳನ್ನು ಮಾಡಿ 'ಯುವದಿನ'ದ ಆಶಯವನ್ನು ತೋರಿಸಿಕೊಡಲಾಗುತ್ತದೆ.
ಅಷ್ಟಕ್ಕೂ ಇಂದು ದೇಶದ ಯಾವ ಯಾವ ಭಾಗಗಳಲ್ಲಿ ಯುವ ದಿನವನ್ನು ಹೇಗೆ ಆಚರಿಸಲಾಗುತ್ತದೆ? ಇಲ್ಲಿದೆ ವಿವರ.
ಅರಮನೆ ನಗರಿ ಮೈಸೂರಿನಲ್ಲಿ
ಇಲ್ಲಿನ ಚೆಲುವಾಂಬ ಪಾರ್ಕಿನಲ್ಲಿ ಬೇರೆ ಬೇರೆ ಶಾಲೆಯ 1500 ಕ್ಕೂ ಹೆಚ್ಚು ಮಕ್ಕಳು ಮೆರವಣಿಗೆ ಮೂಲಕ ಸಾಗಿ ಸ್ವಾಮಿ ವಿವೇಕಾನಂದರ ಪುತ್ಥಳಿಗೆ ಪುಷ್ಪಾರ್ಪಣೆ ಮಾಡಲಿದ್ದಾರೆ. ಈ ಮೆರವಣಿಗೆಯಲ್ಲಿ ರಾಮಕೃಷ್ಣ ಇನ್ ಸ್ಟಿಟ್ಯೂಟ್ ಆಪ್ ಮಾರಲ್ ಅಂಡ್ ಸ್ಪಿರಿಚ್ಯುವಲ್ ಎಜ್ಯುಕೇಶನ್ ಮತ್ತು ಯಾದಗಿರಿಯ ಶ್ರೀ ರಾಮಕೃಷ್ಣ ವಿದ್ಯಾಶಾಲೆಯ ಸದಸ್ಯರು ಸಹ ಭಾಗಿಯಾಗಿದ್ದಾರೆ. ಈ ಮೆರವಣಿಗೆ ಕಾಳಿದಾಸ ರಸ್ತೆಯ ಮೂಲಕ ಮಾತೃಮಂಡಳಿ ಸರ್ಕಲ್ ಗುಂಟ ಸಾಗಿ ಒಂಟಿಕೊಪ್ಪಲ್ ಪೋಸ್ಟ್ ಆಫೀಸ್ ವರೆಗೂ ತೆರಳಲಿದೆ.
ಮಹನೀಯರು ಕಂಡಂತೆ ಅದಮ್ಯ ಚೇತನ ಸ್ವಾಮಿ ವಿವೇಕಾನಂದ
ರಾಜಧಾನಿ ದೆಹಲಿಯಲ್ಲಿ
ನೀತಿ ಆಯೋಗ ಮತ್ತು ಡೆಲ್ ಸಂಸ್ಥೆಯ ಅಹಯೋಗದಲ್ಲಿ ಹತ್ತು ತಿಂಗಳ ಕಾಲ ವಿದ್ಯಾರ್ಥಿಗಳಿಗೆ ಉದ್ಯಮಶೀಲತೆಯ ತರಬೇತಿ ನಡೆಸಲಿದೆ. ಮ್ಯಾರಥಾನ್, ವಿಚಾರ ಸಂಕಿರಣ ಸೇರಿದಂತೆ ಆರಕ್ಕೂ ಹೆಚ್ಚು ಯೋಜನೆಗಳನ್ನು ಈ ಕಾರ್ಯಕ್ರಮ ಹೊಂದಿದೆ.
ವಿವೇಕಾನಂದರ ನೆನೆದು 'ಯುವದಿನ'ಕ್ಕೆ ಶುಭನುಡಿದ ಗಣ್ಯರು
ರಾಂಚಿ ಜಾರ್ಖಂಡ್
ರಾಂಚಿ-ಜಾರ್ಖಂಡ್: ಜಾರ್ಖಂಡದ ರಾಂಚಿಯಲ್ಲಿ ಒಂದು ತಿಂಗಳ ಅವಧಿಯ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಆಯೋಜಿಸಿದೆ. ಇಂಥ ಕಾರ್ಯಕ್ರಮ ಇದೇ ಮೊದಲು ಈ ರಾಜ್ಯದಲ್ಲಿ ನಡೆಯುತ್ತಿದೆ. ತನ್ನಿಮಿತ್ತ ವಿಚಾರ ಸಂಕಿರಣ, ಚರ್ಚಾ ಸ್ಪರ್ಧೆ, ರಸಪ್ರಶ್ನೆ ಮತ್ತು ಇನ್ನುತರ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ನಡೆಯುತ್ತವೆ. ಜ.12 ರಂದು ಅಪರಾಹ್ನ 4 ಗಂಟೆಗೆ ರಾಂಚಿ ಸರೋವರದ ತಟದಲ್ಲಿ ನಿರ್ಮಿಸಲಾದ ವಿವೇಕಾನಂದರ 33 ಅಡಿ ಎತ್ತರದ ಕಂಚಿನ ಪುತ್ಥಳಿಯನ್ನು ಅನಾವರಣಗೊಳಿಸಲಾಗುತ್ತದೆ.
ಮುತ್ತಿನ ನಗರಿಯಲ್ಲಿ...
"ರಾಷ್ಟ್ರ ನಿರ್ಮಾಣದಲ್ಲಿ ಯುವಕರನ್ನು ತೊಡಗಿಸುವುದು" ಎಂಬ ವಿಷಯವನ್ನಿಟ್ಟುಕೊಂಡು ತೆಲಂಗಾಣದ ಹೈದರಾಬಾದಿನಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಈ ಕಾರ್ಯಕ್ರಮವನ್ನು ವಿವೇಕಾನಂದ ಇನ್ ಸ್ಟಿಟ್ಯೂಟ್ ಆಫ್ ಹ್ಯೂಮನ್ ಎಕ್ಸಲೆನ್ಸ್ ಆಯೋಜಿಸಿದೆ. ಇಲ್ಲಿನ ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ವಿವೇಕಾನಂದರ ವಿಗ್ರಹಕ್ಕೆ ಮಾಲಾರ್ಪಣೆ ಮಾಡಿ, ನಂತರ ರಾಮಕೃಷ್ಣ ಮಠದವರೆಗೂ ಜಾಥಾ ನಡೆಯಲಿದೆ.
ಪಂಜಾಬ್ ರಾಜ್ಯದಲ್ಲಿ
ಇರಾಷ್ಟ್ರೀಯ ಯುವ ಸಮಿತಿಯ ಏಳನೇ ಆವೃತ್ತಿಯ ವೋಕ್ 2019 ಅನ್ನು ಪಂಜಾಬಿನ ಚಂಡಿಗಢ ವಿಶ್ವ ವಿದ್ಯಾಲಯ ಆಯೋಜಿಸಿದೆ. ಈ ಕಾರ್ಯಕ್ರಮದ ಥೀಮ್ "ಭಾರತೀಯ ಯುವಕರು: ಉನ್ ಪಾಲಿಶ್ಡ್ ಡೈಮಂಡ್" ಎಂಬುದು. ಈ ಕುರಿತು ವಿವಿಧ ವಿದ್ವಾಂಸರು ಮಾತನಾಡಲಿದ್ದಾರೆ.