'ಕೈಲಾಸ'ಕ್ಕೆ ಮಾನ್ಯತೆ: ವಿಶ್ವಸಂಸ್ಥೆಗೆ ಅರ್ಜಿ ಸಲ್ಲಿಸಲಿರುವ ನಿತ್ಯಾನಂದ ಸ್ವಾಮಿ
ನವದೆಹಲಿ, ಡಿಸೆಂಬರ್ 5: ಲ್ಯಾಟಿನ್ ಅಮೆರಿಕದ ಈಕ್ವೆಡಾರ್ ಸಮೀಪದಲ್ಲಿ ದ್ವೀಪವೊಂದನ್ನು ಖರೀದಿಸಿರುವ ನಿತ್ಯಾನಂದ ಸ್ವಾಮಿ, ಅದಕ್ಕೆ 'ಕೈಲಾಸ' ದೇಶ ಎಂಬ ನಾಮಕರಣ ಮಾಡಿದ್ದಾರೆ. ಅದು ಜಗತ್ತಿನ ಏಕೈಕ ಹಿಂದೂ ರಾಷ್ಟ್ರ ಎಂದೂ ಘೋಷಿಸಿದ್ದಾರೆ. ಇದಕ್ಕೆ ಜಾಗತಿಕ ಮಾನ್ಯತೆ ಪಡೆದುಕೊಳ್ಳಲೂ ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ಒಂದು ಹೊಸ ರಾಷ್ಟ್ರ ಸ್ಥಾಪನೆಗೆ ಅನೇಕ ಕಾನೂನಾತ್ಮಕ ಕ್ರಮಗಳಿವೆ. ಮುಖ್ಯವಾಗಿ ವಿಶ್ವಸಂಸ್ಥೆಯಲ್ಲಿ ಅದಕ್ಕೆ ಅನುಮೋದನೆ ದೊರಕಬೇಕಿದೆ. ಈ ನಿಟ್ಟಿನಲ್ಲಿ ನಿತ್ಯಾನಂದ ಸ್ವಾಮಿಯ ಕಾನೂನು ತಂಡ ಕಾರ್ಯನಿರ್ವಹಿಸುತ್ತಿದೆ. ವಿಶ್ವಸಂಸ್ಥೆಗೆ ಸಲ್ಲಿಸಲು ಕರಡು ಅರ್ಜಿ ಸಿದ್ಧಪಡಿಸಲಾಗುತ್ತಿದ್ದು, 'ಕೈಲಾಸ' ದೇಶಕ್ಕೆ ಸಾರ್ವಭೌಮ ಅಸ್ಮಿತೆ ಪಡೆದುಕೊಳ್ಳುವ ಸಲುವಾಗಿ ಶೀಘ್ರದಲ್ಲಿಯೇ ವಿಶ್ವಸಂಸ್ಥೆಗೆ ಮನವಿ ಸಲ್ಲಿಸಲಿದ್ದಾರೆ.
ಗುಜರಾತ್ ನಿಂದ ಕಾಲ್ಕಿತ್ತ ನಿತ್ಯಾನಂದ ಶಿಷ್ಯರು ಬಿಡದಿ ಆಶ್ರಮದಲ್ಲಿ ಪ್ರತ್ಯಕ್ಷ
ಇದರ ಜತೆಯಲ್ಲಿ ನಿತ್ಯಾನಂದ ಭಾರತದ ವಿರುದ್ಧ ದೂರು ನೀಡಲು ಸಹ ಉದ್ದೇಶಿಸಿದ್ದಾರೆ ಎಂದೂ ಹೇಳಲಾಗಿದೆ. ಭಾರತದಲ್ಲಿ ಹಿಂದುತ್ವವನ್ನು ಪಾಲಿಸುತ್ತಿರುವುದಕ್ಕೆ ಮತ್ತು ಪ್ರಚಾರ ಮಾಡುತ್ತಿರುವುದಕ್ಕೆ ತನ್ನ ಜೀವಕ್ಕೆ ಬೆದರಿಕೆ ಇದೆ ಎಂದು ವಿಶ್ವಸಂಸ್ಥೆಗೆ ದೂರು ನೀಡಲು ನಿತ್ಯಾನಂದ ತೀರ್ಮಾನಿಸಿದ್ದಾರೆ.
ಹಿಂದೂ ಧರ್ಮಕ್ಕಾಗಿ ದೇಶ!
ಅತ್ಯಾಚಾರ ಪ್ರಕರಣ ಸೇರಿದಂತೆ ವಿವಿಧ ಆರೋಪಗಳನ್ನು ಎದುರಿಸುತ್ತಿರುವ ನಿತ್ಯಾನಂದ ದೇಶಬಿಟ್ಟು ಪರಾರಿಯಾಗಿದ್ದು ಯಾವಾಗ ಎಂಬ ಮಾಹಿತಿ ಕೂಡ ಲಭ್ಯವಾಗಿಲ್ಲ. ಈಗ ದ್ವೀಪವೊಂದನ್ನು ಖರೀದಿಸಿ ಅಲ್ಲಿ 'ಕೈಲಾಸ' ಎಂಬ ಮಹಾನ್ ಹಿಂದೂ ರಾಷ್ಟ್ರ ನಿರ್ಮಿಸುತ್ತಿರುವುದಾಗಿ ಘೋಷಿಸುವ ಮೂಲಕ ಮತ್ತೆ ಸುದ್ದಿಗೆ ಬಂದಿದ್ದಾರೆ. ತಮ್ಮ ದೇಶದಲ್ಲಿ ಹಿಂದೂ ಧರ್ಮದ ಆಚರಣೆಗಳನ್ನು ಪಾಲನೆ ಮಾಡಲು ಸಾಧ್ಯವಾಗದೆ ಇರುವವರು ಮತ್ತು ಜಗತ್ತಿನಾದ್ಯಂತ ಶೋಷಣೆಗೆ ಒಳಗಾದ ಹಿಂದೂಗಳು ತನ್ನ ದೇಶಕ್ಕೆ ಎಂದು ನಿತ್ಯಾನಂದನ 'ಕೈಲಾಸ' ತಿಳಿಸಿದೆ.
ಕೈಲಾಸವಾಸಿಗಳಾಗಲು ಅನುಮತಿ ಬೇಕು
ನಿತ್ಯಾನಂದನ 'ಕೈಲಾಸ'ದ ಒಳಗೆ ಹೋಗಲು ಎಲ್ಲರಿಗೂ ಪ್ರವೇಶವಿಲ್ಲ. ನಿತ್ಯಾನಂದನ ಭಕ್ತರಿಗೆ ಮಾತ್ರ ಮುಕ್ತ ಪ್ರವೇಶವಿದೆ. ಮುಖ್ಯವಾಗಿ 'ಕೈಲಾಸ'ದಲ್ಲಿನ ಪ್ರಧಾನಿ ಮತ್ತು ಸಚಿವ ಸಂಪುಟದಿಂದ ಅನುಮೋದನೆ ಪಡೆದುಕೊಂಡರೆ ಮಾತ್ರ ಪ್ರದೇಶ ಸಿಗಲಿದೆ. ಕೈಲಾಸ ದೇಶ ತನ್ನದೇ ಪಾಸ್ಪೋರ್ಟ್ ಹೊಂದಿರಲಿದ್ದು, ಎಲ್ಲ 11 ಆಯಾಮಗಳು ಮತ್ತು 14 ಲೋಕಗಳಿಂದ ಉಚಿತ ಪ್ರವೇಶವಿದೆ. ಇಲ್ಲಿ ಇಂಗ್ಲಿಷ್, ಸಂಸ್ಕೃತ ಮತ್ತು ತಮಿಳು ಭಾಷೆಯನ್ನು ಅಧಿಕೃತ ಭಾಷೆಗಳೆಂದು ಪರಿಗಣಿಸಲಾಗಿದೆ. ಇಲ್ಲಿನ ರಾಷ್ಟ್ರೀಯ ಹೂವು ಕಮಲ. ರಾಷ್ಟ್ರೀಯ ಮರ ಆಲದಮರ. ರಾಷ್ಟ್ರೀಯ ಧ್ವಜ ವೃಷಭ ಧ್ವಜ. ರಾಷ್ಟ್ರೀಯ ಪಕ್ಷಿ ಶರಬಂ. ರಾಷ್ಟ್ರೀಯ ಪ್ರಾಣಿ ನಂದಿ.
ನಿತ್ಯಾನಂದ ಸ್ವಾಮಿಯ ಮಹಾನ್ ಹಿಂದೂ ರಾಷ್ಟ್ರ 'ಕೈಲಾಸ' ಹೇಗಿದೆ? ಅಲ್ಲಿ ಏನೇನಿದೆ?
ಬ್ಲೂಕಾರ್ನರ್ ನೋಟಿಸ್ಗೆ ಸಿದ್ಧತೆ
ಬೆಂಗಳೂರು ಮೂಲದ ಇಬ್ಬರು ಸಹೋದರಿಯರ ಅಪಹರಣ, ಅಕ್ರಮ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ನಿತ್ಯಾನಂದ ಸ್ವಾಮಿ ವಿರುದ್ಧ ಬ್ಲೂಕಾರ್ನರ್ ನೋಟಿಸ್ ಹೊರಡಿಸಲು ಸಿದ್ಧತೆ ನಡೆಸಲಾಗಿದೆ. ಗುಜರಾತ್ನಲ್ಲಿ ಎಫ್ಐಆರ್ ದಾಖಲಾಗಿ ತಿಂಗಳು ಕಳೆದರೂ, ದೇಶಬಿಟ್ಟು ಪರಾರಿಯಾಗಿರುವ ನಿತ್ಯಾನಂದನ ವಿರುದ್ಧ ಬ್ಲೂಕಾರ್ನರ್ ನೋಟಿಸ್ ಹೊರಡಿಸುವಂತೆ ಇಂಟರ್ಪೋಲ್ ಅನ್ನು ಪೊಲೀಸರು ಸಂಪರ್ಕಿಸುವ ಪ್ರಯತ್ನ ಮಾಡಿಲ್ಲ ಎಂದು ಆರೋಪಿಸಲಾಗಿತ್ತು.
ಸಿಬಿಐ ಮೂಲಕ ಹುಡುಕಾಟ
ಗಾಂಧಿನಗರದ ಸಿಐಡಿ ವಿಭಾಗಕ್ಕೆ ಬ್ಲೂಕಾರ್ನರ್ ನೋಟಿಸ್ಗೆ ಸಂಬಂಧಿಸಿದ ಅರ್ಜಿಯನ್ನು ತಲುಪಿಸಲಾಗಿದೆ. ಇದು ನಿತ್ಯಾನಂದ ಇರುವ ಸ್ಥಳವನ್ನು ಪತ್ತೆಹಚ್ಚಿ ಮಾಹಿತಿ ಕಲೆಹಾಕುವ ಸಲುವಾಗಿ ಸಲ್ಲಿಸಲಾಗಿದೆ. ಸಿಐಡಿ ಅರ್ಜಿ ಸಲ್ಲಿಸಿದ ಬಳಿಕ ಸಿಬಿಐ ಇಂಟರ್ಪೋಲ್ ಸಹಾಯವನ್ನು ಕೇಳಲಿದೆ. ಬ್ಲೂಕಾರ್ನರ್ ನೋಟಿಸ್, ಅಪರಾಧ ತನಿಖೆಗೆ ಬೇಕಾಗಿರುವ ವ್ಯಕ್ತಿ ಇರುವ ಸ್ಥಳ, ಆತ ಗುರುತು ಮತ್ತು ವಿವರಗಳನ್ನು ಕಲೆಹಾಕುವ ಸಲುವಾಗಿ ಹೊರಡಿಸಲಾಗುತ್ತದೆ. ಆ ವ್ಯಕ್ತಿ ತಮ್ಮ ದೇಶದಲ್ಲಿ ಇದ್ದರೆ, ಆ ಕುರಿತ ಮಾಹಿತಿಯನ್ನು ಹಂಚಿಕೊಳ್ಳುತ್ತದೆ.
ನಿತ್ಯಾನಂದನ ಹೊಸ ದೇಶಕ್ಕೆ ಪ್ರಧಾನಿ, ಕ್ಯಾಬಿನೆಟ್ ರಚನೆ
ಪುತ್ರಿಯರ ಅಪಹರಣದ ದೂರು
ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ನಿತ್ಯಾನಂದ ಅಪಹರಿಸಿ ಅಕ್ರಮವಾಗಿ ಬಂಧನದಲ್ಲಿ ಇರಿಸಿದ್ದಾನೆ ಎಂದು ಬೆಂಗಳೂರಿನ ಗಜಾನನ ಶರ್ಮಾ ಎಂಬುವವರು ದೂರು ಸಲ್ಲಿಸಿದ್ದರು. ಈ ದೂರಿನ ಸಂಬಂಧ ನಿತ್ಯಾನಂದ ಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ, ಅವರ ಪುತ್ರಿಯರು ಎಲ್ಲಿದ್ದಾರೆ ಎಂಬ ಸುಳಿವು ಸಿಕ್ಕಿಲ್ಲ. ಭಾರತದಿಂದ ಪರಾರಿಯಾಗಿದ್ದ ಆತ ಟ್ರೆನಿಡಾಡ್ ಆಂಡ್ ಟೊಬಾಗೋದಲ್ಲಿ ಅಡಗಿದ್ದಾನೆ ಎಂದು ಹೇಳಲಾಗಿತ್ತು.
ಹೊಸ ದೇಶ ಸ್ಥಾಪನೆ ಸಾಧ್ಯವೇ?
ನಿತ್ಯಾನಂದ ಹೊಸ ರಾಷ್ಟ್ರವನ್ನೇ ಕಟ್ಟುತ್ತಿರುವ ಸುದ್ದಿ ಅವನು ಸೂರ್ಯನನ್ನು ಅರ್ಧ ಗಂಟೆ ತಡೆಹಿಡಿದಷ್ಟೇ ಬೊಗಳೆ. ಲ್ಯಾಟಿನ್ ಅಮೆರಿಕ ದೇಶಗಳಿಗೆ ಸೇರಿದ ನೂರಾರು ಸಣ್ಣಪುಟ್ಟ ದ್ವೀಪಗಳು ಮಾರಾಟಕ್ಕಿವೆ. 5 ಎಕರೆಯಿಂದ ಹಿಡಿದು 5 ಸಾವಿರ ಎಕರೆ ವಿಸ್ತ್ರೀರ್ಣದ ದ್ವೀಪಗಳನ್ನು ಮಾರಾಟ ಮಾಡಲಾಗುತ್ತದೆ. ಇದು ಶುದ್ಧ ರಿಯಲ್ ಎಸ್ಟೇಟ್ ಬಿಜಿನೆಸ್. ಕೆಲವು ದ್ವೀಪಗಳನ್ನು ಡೆವಲಪ್ ಮಾಡಿ ಮಾರಲಾಗುತ್ತದೆ, ಮತ್ತೆ ಕೆಲವು ಕಚ್ಚಾ ಸ್ಥಿತಿಯಲ್ಲೇ ಇರುತ್ತದೆ. ನೀವು ಕೊಂಡುಕೊಂಡ ದ್ವೀಪ ನಿಮ್ಮದಾದರೂ ಅಲ್ಲಿ ನೀವು ಹೊಸತೊಂದು ದೇಶ ಕಟ್ಟಲಾರಿರಿ. ಲ್ಯಾಟಿನ್ ಅಮೆರಿಕ ಭಾಗದಲ್ಲಿ 20 ದೇಶಗಳಿವೆ. ಒಂದೊಂದು ದ್ವೀಪ ಒಂದೊಂದು ದೇಶಕ್ಕೆ ಸೇರಿರುವುದರಿಂದ ಅದನ್ನು ಯಾರೂ ಹೊಸ ದೇಶ ಕಟ್ಟಲು ಕೊಡುವುದಿಲ್ಲ. ಇದು ನನ್ನದೇ ದೇಶ ಎಂದರೆ ಅಲ್ಲಿನ ಸರ್ಕಾರಗಳು ಇವನ ಹೆಡೆಮುರಿ ಕಟ್ಟಿ ಇಂಡಿಯಾಗೆ ಪಾರ್ಸಲ್ ಮಾಡಿಬಿಡುತ್ತವೆ.
ಹೊಸ ದೇಶ ಎನ್ನೋದೆಲ್ಲ ನಿತ್ಯಾನಂದ ಕಟ್ಟಿರುವ ಸುಳ್ಳಿನ ಕಂತೆ. ಅಬ್ಬಬ್ಬಾ ಎಂದರೆ ನಿತ್ಯಾನಂದ ತಾನು ಕೊಂಡುಕೊಂಡ ದ್ವೀಪದಲ್ಲಿ ಒಂದು ಟೌನ್ ಶಿಪ್ ಕಟ್ಟಬಹುದಷ್ಟೆ. ಅದೂ ಕೂಡ ದುಬಾರಿ. ಅಲ್ಲಿ ಉಳಿಯುವ ಜನರಿಗೆ ಕುಡಿಯುವ ನೀರು, ವಿದ್ಯುತ್, ಇಂಟರ್ ನೆಟ್, ದೂರವಾಣಿ, ಆಹಾರ ಒದಗಿಸುವುದು ಕಷ್ಟಸಾಧ್ಯ. ಎಲ್ಲದಕ್ಕೂ ಪಕ್ಕದ ದೇಶವನ್ನೇ ನೆಚ್ಚಿಕೊಳ್ಳಬೇಕು. ಅಲ್ಲಿಂದ ಇಲ್ಲಿಗೆ ಓಡಾಡುವುದೂ ಅಷ್ಟು ಸುಲಭವಲ್ಲ. ಯಾಕೆಂದರೆ ನೆಲಮಾರ್ಗವೇ ಇರುವುದಿಲ್ಲ. ಬೋಟ್ ಅಥವಾ ವಿಮಾನವನ್ನೇ ನೆಚ್ಚಿಕೊಳ್ಳಬೇಕು. ನಿತ್ಯಾನಂದ ಹತ್ತು ಕೋಟಿ ಜನರಿಗೆ ತನ್ನ ದೇಶದಲ್ಲಿ ಅವಕಾಶ ಕಲ್ಪಿಸುವುದಾಗಿ ಹೇಳಿದ್ದಾನೆ.
ಹತ್ತು ಕೋಟಿಯಲ್ಲ, ಹತ್ತು ಸಾವಿರ ಜನರನ್ನು ಈತ ಇಟ್ಟುಕೊಳ್ಳಲು ಸಾಧ್ಯವಿಲ್ಲ. ನಿತ್ಯಾನಂದ ಬಿಗ್ ಬಾಸ್ ಶೋನ ಟಾಸ್ಕ್ ಗಳ ಹಾಗೆ ಒಂದು ಕಲ್ಪಿತ ಸರ್ಕಾರ, ವ್ಯವಸ್ಥೆ ನಿರ್ಮಿಸಿಕೊಂಡು ಇರಬಹುದಷ್ಟೆ. ಮತ್ತೆ ಯಾಕೆ ಇಂಥದ್ದೆಲ್ಲ ತನ್ನ ವೆಬ್ ಸೈಟ್ ನಲ್ಲಿ ಬರೆದುಕೊಂಡಿದ್ದಾನೆಂದರೆ, ಅವನಿಗೀಗ ದುಡ್ಡು ಬೇಕಿದೆ. ಇಂಡಿಯಾದಲ್ಲಿರುವ ಅವನ ಮಠಗಳನ್ನು ಮಾರಾಟ ಮಾಡುವುದು ಸದ್ಯಕ್ಕೆ ಕಷ್ಟಸಾಧ್ಯ. ಹೀಗಾಗಿ ಹಿಂದೂರಾಷ್ಟ್ರದ ಹೆಸರಲ್ಲಿ ಒಂದಷ್ಟು ಕಾಸು ಮಾಡಿಕೊಳ್ಳುವ ಸಂಚು ಇದ್ದಂತಿದೆ. ಭಕ್ತರು ಬೆರಗಾಗಿ ದುಡ್ಡು ಕಳಿಸಿದರೆ ಅದು ಅವರ ಪಾಡು. - ದಿನೇಶ್ ಕುಮಾರ್ (ಫೇಸ್ಬುಕ್ ಬರಹ)