ಮೋದಿ ರಾಜಕೀಯ ಸೇರಲು ಪ್ರೇರಣೆ ನೀಡಿದ್ದ ಆತ್ಮಸ್ಥಾನಾನಂದಜೀ ನಿಧನ
ಕೋಲ್ಕತ್ತಾ, ಜೂನ್ 19: ನರೇಂದ್ರ ಮೋದಿ ಪ್ರಧಾನಿಯಾಗಲು, ಜನರ ಸೇವೆ ಮಾಡಲು ಸ್ಫೂರ್ತಿ ಎಂದು ಅನುಮಾನವೇ ಇಲ್ಲದೆ ಹೇಳಬಹುದಾದ ವ್ಯಕ್ತಿ ಭಾನುವಾರ ಇಹಲೋಕದ ವ್ಯಾಪಾರ ಮುಗಿಸಿದ್ದಾರೆ. ರಾಮಕೃಷ್ಣ ಮಿಶನ್ ಹಾಗೂ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಆತ್ಮಸ್ಥಾನಾನಂದಜೀ ಮಹಾರಾಜ್ ಭಾನುವಾರ ಕೊನೆಯುಸಿರು ಎಳೆದಿದ್ದಾರೆ.
ಅನಾಥ ಮಕ್ಕಳ ಪತ್ರಕ್ಕೆ ಸ್ಪಂದಿಸಿದ ಪ್ರಧಾನಿಯಿಂದ ಐವತ್ತು ಸಾವಿರ ನೆರವು
ಆತ್ಮಸ್ಥಾನಾನಂದಜೀ ಮಹಾರಾಜ್ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಆಧ್ಯಾತ್ಮಿಕ ಗುರುಗಳಾಗಿದ್ದರು. ಕಳೆದ ಎರಡೂ ಕಾಲು ವರ್ಷಗಳಿಂದ ವಯೋ ಸಹಜವಾದ ಕಾಯಿಲೆಯಿಂದ ಬಳಲುತ್ತಿದ್ದರು. ಕೋಲ್ಕತ್ತಾದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇತ್ತೀಚೆಗೆ ಕೋಲ್ಕತ್ತಾಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ, ತಮ್ಮ ಆಧ್ಯಾತ್ಮಿಕ ಗುರುಗಳ ಆರೋಗ್ಯ ವಿಚಾರಿಸಿದ್ದರು. ಆತ್ಮಸ್ಥಾನಾನಂದಜೀ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಅನೇಕರು ತಮ್ಮ ದುಃಖ ವ್ಯಕ್ತಪಡಿಸಿದ್ದಾರೆ.
ಮೋದಿ ಇನ್ನೂ ಯುವಕರಾಗಿದ್ದ ಸಂದರ್ಭದಲ್ಲಿ ಸನ್ಯಾಸ ದೀಕ್ಷೆ ಪಡೆಯಲೆಂದು ಬೇಲೂರು ಮಠಕ್ಕೆ ತೆರಳಿದ್ದರು. ಆಗ, "ನೀನು ಇರಬೇಕಾದ್ದು ಇಲ್ಲಲ್ಲ. ನಿನ್ನ ಕೆಲಸ ಬೇರೆ ಇದೆ" ಎಂದು ಹೇಳಿ, ಸನ್ಯಾಸ ನೀಡುವುದಕ್ಕೆ ತಿರಸ್ಕರಿಸಿ, ವಾಪಸ್ ಕಳಿಸಿದ್ದರಂತೆ ಆತ್ಮಸ್ಥಾನಾನಂದಜೀ ಮಹಾರಾಜ್.