'ಸ್ವಚ್ಛ ಭಾರತ'ಕ್ಕೆ 2 ಲಕ್ಷ ಮಕ್ಕಳ ಪ್ರಾಣ ಉಳಿಸಿದ ಪುಣ್ಯ; ಇದು 'ವಿಶ್ವ' ಪ್ರಶಂಸೆ
Recommended Video
ಸ್ವಚ್ಛ ಭಾರತದ ಪ್ರಧಾನಿ ಮೋದಿ ಮಾತನಾಡಿದಾಗ, ಇದೇನೋ ಹೊಸ ವಿಷಯ ಅಂತ ದೊಡ್ಡದಾಗಿ ಹೇಳಲು ಬಂದುಬಿಟ್ಟರು ಅಂದುಕೊಂಡವರು ಬಹಳ ಮಂದಿ. ಆದರೆ ಮೋದಿ ಮನದ ಮಾತನ್ನು ಗ್ರಾಮೀಣ ಭಾರತ ಕೇಳಿಸಿಕೊಂಡಿತು. ತಮ್ಮ ಕಂದಮ್ಮಗಳ ಭವಿಷ್ಯಕ್ಕಾಗಿ ಅಷ್ಟು ಕಾಲದ ಅಭ್ಯಾಸವನ್ನು ಬದಲಿಸಿಕೊಂಡಿತು. ಅದರ ಫಲಿತಾಂಶ ಏನಾಗಿದೆ ಗೊತ್ತಾ?
ಭಾರತದಲ್ಲಿ 5 ವರ್ಷದೊಳಗಿನ ಮಕ್ಕಳ ಸಾವಿನ ಪ್ರಮಾಣ ಇಳಿಕೆಯಾಗಿದೆ. 2017ರಲ್ಲಿ 8,02,000 ಮಕ್ಕಳು ಸಾವನ್ನಪ್ಪಿದ್ದರೆ, ಅದಕ್ಕೂ 2 ವರ್ಷಗಳ ಹಿಂದೆ 10 ಲಕ್ಷದಷ್ಟು ಮಕ್ಕಳು ಸಾವನ್ನಪ್ಪಿದ್ದರು. ಇದರರ್ಥ 2 ಲಕ್ಷದಷ್ಟು ಮಕ್ಕಳ ಜೀವವನ್ನು ಉಳಿಸಲಾಗಿದೆ. ಇಲ್ಲದಿದ್ದರೆ ನಿಯಂತ್ರಿಸಬಹುದಾದ ಹಾಗೂ ಚಿಕಿತ್ಸೆ ನೀಡಬಹುದಾದ ಕಾಯಿಲೆಗಳಿಗೆ ಈ ಮಕ್ಕಳು ಬಲಿಯಾಗುತ್ತಿದ್ದರು.
ವಿಶ್ವಸಂಸ್ಥೆ ಪ್ರಶಂಸೆ
ಸುರಕ್ಷಿತ ಕುಡಿಯುವ ನೀರು, ಕೈ ತೊಳೆಯುವುದಕ್ಕೆ ಸೂಚನೆ, ಆಹಾರ ಸುರಕ್ಷತೆ, ಬಯಲು ಶೌಚ ತಡೆಯಲು ಶೌಚಾಲಯ ಬಳಕೆಯನ್ನು ಪ್ರೋತ್ಸಾಹಿಸುವುದು ಸೇರಿದಂತೆ ತೆಗೆದುಕೊಂಡ ಹಲವು ಕ್ರಮಗಳಿಂದಾಗಿ ಅತಿಸಾರದಿಂದ ಸಂಭವಿಸುತ್ತಿದ್ದ ಸಾವಿನ ಪ್ರಮಾಣದಲ್ಲಿ ಇಳಿಕೆ ಆಗಿದೆ.
ಸ್ವಚ್ಛ ಭಾರತಕ್ಕೆ ನಿಜವಾದ ಅರ್ಥ ನೀಡಿದ ಜಮ್ಮು ಕಾಶ್ಮೀರದ ಅಜ್ಜಿ!
ಅದನ್ನು ಲೆಕ್ಕಾಚಾರದಲ್ಲಿ ಅಂದಾಜು ಮಾಡಿ ಹೇಳುವುದಾದರೆ, 2017ರಲ್ಲಿ ಐದು ವರ್ಷದೊಳಗಿನ ಭಾರತದ ಮಕ್ಕಳಲ್ಲಿ 8%ಗೂ ಹೆಚ್ಚಿನಷ್ಟು ಅಂದರೆ 8,02,000 ಸಾವಾಗಿದೆ ಎಂದು ವಿಶ್ವಸಂಸ್ಥೆ ತನ್ನ ವರದಿಯಲ್ಲಿ ಬುಧವಾರ ತಿಳಿಸಿದೆ ಮತ್ತು ಈ ಅಭಿಯಾನವನ್ನು ಪ್ರಶಂಸಿಸಿದೆ.
ಮಕ್ಕಳ ಸಾವಿನ ಪ್ರಮಾಣದಲ್ಲಿ ಇಳಿಕೆ
ಒಳಚರಂಡಿ ಸಮಸ್ಯೆ ಹಾಗೂ ಕಲುಷಿತ ನೀರು 88% ನಷ್ಟು ಮಕ್ಕಳಲ್ಲಿ ಅತಿಸಾರ ಉಂಟು ಮಾಡುತ್ತವೆ. ಇದರಿಂದಲೇ ಅಪೌಷ್ಟಿಕತೆ, ರೋಗನಿರೋಧಕ ಶಕ್ತಿ ಕೊರತೆ ಮತ್ತು ತೀವ್ರ ಥರದ ಸೋಂಕು, ನ್ಯುಮೋನಿಯಾ ಹಾಗೂ ಕ್ಷಯದಂಥ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.
ಆರು ಹೊಸ ದಡಾರಗಳನ್ನು ಪರಿಚಯಿಸಿರುವುದರಿಂದ ಮಕ್ಕಳ ಸಾವಿನ ಪ್ರಮಾಣದಲ್ಲಿ ಇಳಿಕೆ ಆಗಿದೆ. ನ್ಯುಮೋನಿಯಾ, ಮಕ್ಕಳ ಅತಿಸಾರ, ಸೋಂಕು ಸೇರಿದಂತೆ ಇತರ ಸಮಸ್ಯೆಗಳಿಗೆ ಈ ದಡಾರ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. 2015ರಲ್ಲಿ ಮಕ್ಕಳ ಸಾವಿನ ಪ್ರಮಾಣ ಪ್ರತಿ 1000 ಮಕ್ಕಳಿಗೆ 43 ಇತ್ತು. 2016ರಲ್ಲಿ ಅದು 39ಕ್ಕೆ ಇಳಿದಿದೆ.
ಸ್ವಚ್ಛ ಭಾರತ ಯೋಜನೆಯಡಿ 2 ಲಕ್ಷ ಶೌಚಾಲಯ ನಿರ್ಮಾಣ
ಇವೆಲ್ಲಕ್ಕೂ ಮುಖ್ಯವಾಗಿ ಸ್ವಚ್ಛ ಭಾರತ್ ಅಭಿಯಾನ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಿದೆ. ಇದರ ಅಡಿಯಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡಿಕೊಳ್ಳಲು ಆದ್ಯತೆ ನೀಡಲಾಗುತ್ತಿದೆ. ಈ ಅಭಿಯಾನದ ಮೂಲಕ 2019ರ ಹೊತ್ತಿಗೆ ಭಾರತವನ್ನು ಬಯಲು ಶೌಚಮುಕ್ತವನ್ನಾಗಿ ಮಾಡುವ ಗುರಿ ಇರಿಸಿಕೊಳ್ಳಲಾಗಿದೆ.
718 ಜಿಲ್ಲೆಗಳ ಪೈಕಿ 459 ಜಿಲ್ಲೆ ಬಯಲುಶೌಚ ಮುಕ್ತ
2014ರಲ್ಲಿ ಸ್ವಚ್ಛ ಭಾರತ್ ಅಭಿಯಾನ ಆರಂಭಿಸಿದ ನಂತರ ದೇಶದ ಗ್ರಾಮೀಣ ಭಾಗಗಳಲ್ಲಿ 8.52 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ದೇಶದ 718 ಜಿಲ್ಲೆಗಳ ಪೈಕಿ 459 ಜಿಲ್ಲೆಗಳನ್ನು ಬಯಲುಶೌಚ ಮುಕ್ತ ಎಂದು ಘೋಷಣೆ ಮಾಡಲಾಗಿದೆ. ಬಯಲು ಶೌಚಮುಕ್ತ ಎಂದು ಘೋಷಣೆ ಮಾಡಿದ ಜಿಲ್ಲೆಗಳನ್ನು ಈಗಲೂ ಬಯಲು ಶೌಚ ಬಳಸುತ್ತಿರುವ ಜಿಲ್ಲೆಗೆ ಹೋಲಿಸಿ ಮಕ್ಕಳ ಆರೋಗ್ಯವನ್ನು ಸಹ ಪರಿಶೀಲಿಸಲಾಗಿದೆ.
ಇದಕ್ಕಾಗಿ ಕರ್ನಾಟಕ, ಮಹಾರಾಷ್ಟ್ರ, ರಾಜಸ್ತಾನ, ಉತ್ತರಪ್ರದೇಶ ಹಾಗೂ ಪಶ್ಚಿಮ ಬಂಗಾಲದ 10 ಜಿಲ್ಲೆಗಳನ್ನು ಆಯ್ದುಕೊಳ್ಳಲಾಗಿತ್ತು. ಅದರಲ್ಲಿ ಬಯಲು ಶೌಚಮುಕ್ತ ಗ್ರಾಮೀಣ ಭಾಗಗಳಲ್ಲಿ ಮಕ್ಕಳು ಹೆಚ್ಚು ಆರೋಗ್ಯವಾಗಿದ್ದಾರೆ. ಇದೇ ಅಂಶ ಮಕ್ಕಳ ತಾಯಂದಿರಿಗೂ ಅನ್ವಯಿಸುತ್ತದೆ ಎಂಬುದು ಅಧ್ಯಯನದಿಂದ ತಿಳಿಸುಬಂದಿದೆ.
ಅಪೌಷ್ಟಿಕತೆಯಿಂದ ಕೂಡಿರುವ ಮಕ್ಕಳು ತೂತಾಗಿರುವ ಮಡಿಕೆಯಿದ್ದಂತೆ. ಅವುಗಳಿಗೆ ನೀವು ಯಾವುದೇ ಪ್ರಮಾಣದಲ್ಲಿ ನೀರು ತುಂಬಿದರೂ ಪೂರ್ಣವಾಗಿ ತುಂಬಲ್ಲ. ಹಾಗೇ ಮಕ್ಕಳು ಪೂರ್ಣ ಪ್ರಮಾಣದಲ್ಲಿ ಆರೋಗ್ಯವಾಗಲ್ಲ. ಆದ್ದರಿಂದ ತಾಯಂದಿರು ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡಿಕೊಳ್ಳುವ ಜತೆಗೆ ಮಕ್ಕಳ ಆರೋಗ್ಯಪೂರ್ಣ ಜೀವನಕ್ಕೂ ಪ್ರಯತ್ನಿಸಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.