ಭಾರತೀಯರು ಲಿಬಿಯಾ ಬಿಟ್ಟು ತಕ್ಷಣ ಹೊರಡುವಂತೆ ಸುಷ್ಮಾ ಸ್ವರಾಜ್ ಎಚ್ಚರಿಕೆ
ನವದೆಹಲಿ, ಏಪ್ರಿಲ್ 19: ಲಿಬಿಯಾ ದೇಶದ ಟ್ರಿಪೋಲಿಯಲ್ಲಿ ಇರುವ ಭಾರತೀಯರು ಕೂಡಲೇ ಆ ಸ್ಥಳವನ್ನು ಬಿಡುವಂತೆ ವಿದೇಶಾಂಗ ಸಚಿವೆ ಶುಕ್ರವಾರ ಹೇಳಿದ್ದಾರೆ. ಟ್ರಿಪೋಲಿಯಲ್ಲಿ ಹಿಂಸಾಚಾರ ವಿಪರೀತಕ್ಕೆ ಹೋಗಿದೆ. "ಟ್ರಿಪೋಲಿಯನ್ನು ತಕ್ಷಣವೇ ಬಿಡುವಂತೆ ನಿಮ್ಮ ಸಂಬಂಧಿಕರು, ಸ್ನೇಹಿತರಿಗೆ ತಿಳಿಸಿ. ಇಲ್ಲದಿದ್ದರೆ ನಂತರ ಅವರ ಸ್ಥಳಾಂತರ ಸಾಧ್ಯವಿಲ್ಲ" ಎಂದು ಸುಷ್ಮಾ ಟ್ವೀಟ್ ಮಾಡಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಕಳೆದ ಎರಡು ವಾರದಲ್ಲಿ ಟ್ರಿಪೋಲಿಯಲ್ಲಿ ಹಿಂಸಾಚಾರ ತೀವ್ರವಾಗಿದೆ. ಈ ನಗರದ ಮೇಲೆ ಹಿಡಿತ ಸಾಧಿಸಲು ಹಲವು ಗುಂಪುಗಳು ಪ್ರಯತ್ನಿಸುತ್ತಿವೆ. ಲಿಬಿಯಾದಿಂದ ದೊಡ್ಡ ಪ್ರಮಾಣದಲ್ಲಿ ಸ್ಥಳಾಂತರ ಹಾಗೂ ಪ್ರಯಾಣ ನಿರ್ಬಂಧ ಹೇರಿದ್ದರೂ ಈಗಲೂ ಟ್ರಿಪೋಲಿಯಲ್ಲಿ ಐನೂರಕ್ಕೂ ಹೆಚ್ಚು ಭಾರತೀಯರು ಇದ್ದಾರೆ. ಅಲ್ಲಿನ ಪರಿಸ್ಥಿತಿ ದಿನದಿನಕ್ಕೂ ಹದಗೆಡುತ್ತಿದೆ. ಸದ್ಯಕ್ಕೆ ಅಲ್ಲಿ ವಿಮಾನಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಅವರು ಹೇಳಿದ್ದಾರೆ.
ಇನ್ನು ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿ ತಿಳಿಸಿರುವ ಪ್ರಕಾರ, ಲಿಬಿಯಾದಿಂದ ನೈಜರ್ ಗೆ ನೂರಾ ಅರವತ್ಮೂರು ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. ಕಳೆದ ಎರಡು ವಾರಗಳಿಂದ ಲಿಬಿಯಾ ರಾಜಧಾನಿ ಟ್ರಿಪೋಲಿಯಲ್ಲಿ ಹೊಡೆದಾಟ ಆರಂಭವಾದಾಗಿನಿಂದ ಇಂಥ ಮೊದಲ ವಿಮಾನ ಇದು.
ಎಂಟು ವರ್ಷಗಳ ಹಿಂದೆ ದೀರ್ಘ ಕಾಲದ ಸರ್ವಾಧಿಕಾರಿ ಗಡಾಫಿಯನ್ನು ಉರುಳಿಸಿದ ವೇಳೆ ನಡೆದ ದಂಗೆಯ ಪರಿಸ್ಥಿತಿ ಈಗ ಮತ್ತೆ ಕಾಣುವಂತಾಗಿದೆ. ಮೂಲವೊಂದರ ಪ್ರಕಾರ, ಹೋರಾಟ ನಡೆಯುತ್ತಿರುವ ಸ್ಥಳದ ಬಳಿ ಮೂರು ಸಾವಿರಕ್ಕೂ ಹೆಚ್ಚು ವಲಸಿಗರು ಸಿಲುಕಿಕೊಂಡಿದ್ದಾರೆ.