ನೀವೇನ್ ಮಾಡ್ತಿದ್ರಿ? ಸೋನಿಯಾಗೆ ಸುಷ್ಮಾ ನೇರ ಪ್ರಶ್ನೆ
ನವದೆಹಲಿ, ಆ. 06: ಲಲಿತ್ ಮೋದಿ ವೀಸಾ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷಗಳು ನಿರಂತರವಾಗಿ ಸಂಸತ್ತಿನ ಕಲಾಪಕ್ಕೆ ಅಡ್ಡಿಪಡಿಸುತ್ತಿರುವುದರಿಂದ ಆಕ್ರೋಶಗೊಂಡ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮೊದಲ ಬಾರಿಗೆ ಮೌನ ಮುರಿದಿದ್ದು ರಾಜ್ಯಸಭೆಯಲ್ಲಿ ಸವಾಲು ಹಾಕಿದ್ದಾರೆ.
ನನ್ನ ಸ್ಥಾನದಲ್ಲಿ ನೀವು ಇದ್ದರೇ ಏನು ಮಾಡುತ್ತಿದ್ದೀರಿ ಎಂದು ಸೋನಿಯಾ ಗಾಂಧಿ ಅವರನ್ನು ಉದ್ದೇಶಿಸಿ ಪ್ರಶ್ನೆ ಮಾಡಿದ್ದಾರೆ. ಕ್ಯಾನ್ಸರ್ ಪೀಡಿತ ಮಹಿಳೆಯನ್ನು(ಲಲಿತ್ ಮೋದಿ ಹೆಂಡತಿ) ಸುಮ್ಮನೆ ಸಾಯಲು ಬಿಡುತ್ತಿದ್ದಿರೇ? ಎಂದು ಪ್ರಶ್ನೆ ಮಾಡಿದ್ದಾರೆ. ಪ್ರಕರಣದಲ್ಲಿ ನನ್ನ ಪಾತ್ರವಿರುವ ಬಗ್ಗೆ ವಿಪಕ್ಷಗಳು ಸಾಕ್ಷ್ಯಾಧಾರಗಳನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ.[ಲಲಿತ್ ಮೋದಿ-ಸುಷ್ಮಾ ವಿವಾದದ ಸಂಪೂರ್ಣ ಚಿತ್ರಣ]
ಮುಂಗಾರು ಅಧಿವೇಶನದಲ್ಲಿ ಇನ್ನು ಸರಿಯಾದ ಚರ್ಚೆಗಳೇ ಆರಂಭವಾಗಿಲ್ಲ. 25 ಕಾಂಗ್ರೆಸ್ ಸದಸ್ಯರನ್ನು ಕಲಾಪದಿಂದ ಅಮಾನತು ಮಾಡಲಾಗಿದ್ದು ಎಲ್ಲ ಕಾಂಗ್ರೆಸ್ ಸದಸ್ಯರು ಸಂಸತ್ ಭವನದ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಹಾಗೂ ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ರಾಜೀನಾಮೆ ನೀಡಬೇಕು ಎಂದು ವಿಪಕ್ಷಗಳು ಘೋಷಣೆ ಕೂಗುತ್ತಲೇ ಇವೆ.[ಲಲಿತ್ ಮೋದಿ ವೀಸಾ ವಿವಾದದಲ್ಲಿ ಸುಷ್ಮಾ, ಟ್ವಿಟ್ಟರ್ ಪ್ರತಿಕ್ರಿಯೆ]
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ನೀವು ಕ್ಯಾನ್ಸರ್ ರೋಗಿಗಳಿಗೆ ಸಹಾಯ ಮಾಡುವುದು ಬೇಡ ಎಂದು ನಾನು ಹೇಳುವುದಿಲ್ಲ. ಆದರೆ ಅವರ ಆರ್ಥಿಕ ಸ್ಥಿತಿ ಗತಿ ಅರಿತು ಕೆಲಸ ಮಾಡಿ ಎಂದಿದ್ದರು.