ಇರಾಕ್ನ ಆ ದಿಬ್ಬದ ಅಡಿಯಲ್ಲಿತ್ತು 39 ಭಾರತೀಯರ ಶವ
ನವ ದೆಹಲಿ, ಮಾರ್ಚ್ 20: ಇರಾಕ್ನಲ್ಲಿ ನಾಲ್ಕು ವರ್ಷದ ಹಿಂದೆ ಅಪಹರಣಕ್ಕೊಳಗಾಗಿದ್ದ ಭಾರತೀಯರ ಶವ ದೊರೆತದ್ದು ದೊಡ್ಡ ದಿಬ್ಬವೊಂದರ ಬುಡದಲ್ಲಿ ಎಂಬ ಮಾಹಿತಿಯನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೊರಹಾಕಿದರು.
ನವ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ಭಾರತೀಯ ಪ್ರಜೆಗಳು ಅಪಹರಣಕ್ಕೊಳಗಾಗಿ ಈ ನಾಲ್ಕು ವರ್ಷದಲ್ಲಿ ಭಾರತ ಸರ್ಕಾರವು ಅವರನ್ನು ಹುಡುಕಲು ಮತ್ತು ಅವರ ಬಗ್ಗೆ ಸುಳಿವು ಪಡೆಯಲು ಸಂಪೂರ್ಣ ಪ್ರಯತ್ನ ಮಾಡಿದೆ' ಎಂದು ಅವರು ಹೇಳಿದರು.
ಇರಾಕ್ ನಲ್ಲಿ ಅಪಹರಣಕ್ಕೊಳಗಾಗಿದ್ದ 39 ಭಾರತೀಯರು ಸಾವು: ಸುಷ್ಮಾ
ಮೊಸೂಲ್ನ ವಿಮೋಚನೆ ಆದ ನಂತರ ಭಾರತವು ಅಪಹರಣಕ್ಕೊಳಗಾದವರ ಹುಡುಕಾಟವನ್ನು ತೀವ್ರಗೊಳಿತು. ಮೊಸೂಲ್ನಲ್ಲಿ ಸಾಮೂಹಿಕವಾಗಿ ಹೂತುಹಾಕಲಾಗಿದ್ದ ಲಕ್ಷಾಂತರ ಶವಗಳ ಮಧ್ಯೆ ನಮ್ಮವರನ್ನು ಹುಡುಕುವುದು ಭಾರಿ ತಲೆನೋವಿನ ಕಾರ್ಯವೆಂದು ಭಾವಿಸಲಾಗಿತ್ತು. ಆದರೆ ಭಾರತೀಯರ ಶವ ಮೊಸೂಲ್ನಿಂದ ಸ್ವಲ್ಪ ದೂರದಲ್ಲಿದ್ದ ಬದೂಷ್ ಎಂಬ ಹಳ್ಳಿಯಲ್ಲಿ ಒಂದು ದೊಡ್ಡ ಗುಡ್ಡದ ಅಡಿಯಲ್ಲಿ ದೊರೆತವು, ಅಲ್ಲಿ ಕೇವಲ ಭಾರತೀಯರದ್ದು ಮಾತ್ರವೇ 39 ಶವಗಳು ದೊರೆತವು ಎಂದರು.
ಡಿಎಸ್ಎ ಜೊತೆ ಮ್ಯಾಚ್ ಆಯಿತು
ಶವದ ಜೊತೆಗೆ ಉದ್ದನೆಯ ಕೂದಲು, ಸಿಖ್ಖರು ಧರಿಸುವ ಪೇಟ, ಕಡಗಗಳೆಲ್ಲವೂ ದೊರೆತವು ಹಾಗಾಗಿ ಅದು ಭಾರತೀಯರದ್ದೇ ಎಂದು ಮೊದಲು ಅಂದಾಜಿಸಲಾಯಿತು. ಆ ನಂತರ ಅಪಹರಣಕ್ಕೊಳಗಾದವರ ಕುಟುಂಬದವರಿಂದ ಪಡೆದ ಡಿಎನ್ಎ ಅನ್ನು ದಿಬ್ಬದ ಕೆಳಗೆ ದೊರೆತ ಶವಗಳ ಡಿಎನ್ಎ ಒಂದಿಗೆ ಹೋಲಿಸಿ ನೋಡಿದ ಮೇಲೆ ಅದು ಭಾರತೀಯರದ್ದೇ ಎಂಬುದು ಸ್ಪಷ್ಟವಾಯಿತು ಎಂದರು.
ಒಂದು ಶವದ 75% ಡಿಎನ್ಎ ಮ್ಯಾಚ್ ಆಗಿದೆ
ಸಿಕ್ಕ 39 ಶವಗಳಲ್ಲಿ 38 ಶವಗಳು ಡಿಎನ್ಎ ಜೊತೆ ಸರಿಯಾಗಿ ಹೊಂದಿಕೆ ಆಗಿದ್ದು, ಇನ್ನೊಂದು ಶವ ಕೇವಲ 75 ಪ್ರತಿಶತ ಮಾತ್ರ ಹೊಂದಿಕೆ ಆಗಿದೆ. ಆ ವ್ಯಕ್ತಿಯ ತಂದೆ-ತಾಯಿ ಮರಣ ಹೊಂದಿದ್ದ ಕಾರಣ ಆತನ ಸಂಬಂಧಿಕರ ಡಿಎನ್ಎ ಸಂಗ್ರಹಿಸಿ ಕಳುಹಿಸಿದ್ದ ಕಾರಣ ಆತನ ಗುರುತು ಪತ್ತೆ ತಡವಾಗುತ್ತಿದ್ದು, ಆದಷ್ಟು ಬೇಗ ಆ ಶವದ ಗುರುತೂ ಸಹ ಪತ್ತೆಯಾಗಲಿದೆ ಎಂದು ಅವರು ಹೇಳಿದರು.
ರಾಜ್ಯಸಭೆಗೆ, ಲೋಕಸಭೆಗೆ ಮಾಹಿತಿ
ಇದೇ ವೇಳೆ ನಾವು ಬೇರೆ ಸರ್ಕಾರದಂತೆ 'ಕಳೆದು ಹೋದವರನ್ನು ಸತ್ತು ಹೋಗಿದ್ದಾರೆಂದು ಪರಿಗಣಿಸಲಾಗುವುದು' ಎಂದು ಹೇಳದೆ ಸ್ಪಷ್ಟ ಸಾಕ್ಷ್ಯ ದೊರೆಕುವವರೆಗೂ ಅವರನ್ನು ಮೃತರು ಎಂದು ಘೋಷಿಸಲಿಲ್ಲ, ಕೊನೆಗೆ ನಿನ್ನೆ ನಮಗೆ ಸಾಕ್ಷ್ಯ ದೊರೆಯಿತು ಹಾಗಾಗಿ ಇಂದು ರಾಜ್ಯಸಭೆ ಮತ್ತು ಲೋಕಸಭೆಗೆ ಈ ಬಗ್ಗೆ ಮಾಹಿತಿ ನೀಡಿದ್ದೇವೆ, ಮೃತರ ಸಂಬಂಧಿಗಳಿಗೂ ಮಾಹಿತಿ ನೀಡಿದ್ದೇವೆ ಎಂದರು.
ಕುಟುಂಬ ಸದಸ್ಯರಿಗೆ ಹಸ್ತಾಂತರ
ಶವ ಹಸ್ತಾಂತರಿಸಲು ಅಲ್ಲಿನ ಸರ್ಕಾರಿ ವಿಧಿ ವಿಧಾನಗಳು ಪೂರ್ಣಗೊಂಡ ಕೂಡಲೇ 38 ಶವಗಳನ್ನೂ ಭಾರತಕ್ಕೆ ತರುತ್ತಿದ್ದು, ಪಂಜಾಬ್ನ 27, ಹಿಮಾಚಲ ಪ್ರದೇಶದ 4, ಬಿಹಾರದ 6 ಮತ್ತು ಪಶ್ಚಿಮ ಬಂಗಾಳದ 4 ಜನರ ಶವಗಳನ್ನು ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುವುದು ಎಂದಿದ್ದಾರೆ. ಡಿಎನ್ಎ ಪೂರ್ಣ ಹೊಂದಿಕೆ ಆಗದ ಒಬ್ಬ ವ್ಯಕ್ತಿ ಬಿಹಾರದವನು ಎಂದು ಅಂದಾಜಿಸಲಾಗಿದ್ದು, ಆತನ ಡಿಎಸ್ಎ ಪರೀಕ್ಷೆ ವರದಿ ಬಂದ ಕೂಡಲೇ ಆತನ ಶವವನ್ನೂ ತರಲಾಗುವುದು ಎಂದು ಅವರು ಹೇಳಿದರು.