ನಿಮಗೆ ಗೊತ್ತಿರದ ಸುಷ್ಮಾ ಸ್ವರಾಜ್ ಹೆಜ್ಜೆ ಗುರುತುಗಳು
ಸುಷ್ಮಾ ಸ್ವರಾಜ್ ಅವರ ಮೂಲ ಹೆಸರು ಸುಷ್ಮಾ ಶರ್ಮಾ. ಹರಿಯಾಣ ಜಿಲ್ಲೆಯ ಅಂಬಾಲದಲ್ಲಿ 1952, ಫೆ. 14ರಂದು ಜನನ.
ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಸುಷ್ಮಾ ತಂದೆ ಹರ್ದೇವ್ ಶರ್ಮಾ ಆರ್ಎಸ್ಎಸ್ನ ಕಟ್ಟಾಳುವಾಗಿದ್ದರು. ಹರಿಯಾಣದಲ್ಲಿ ಕಾಲೇಜು ವಿದ್ಯಾಭ್ಯಾಸ ಮುಗಿಸಿ, ಚಂಡೀಗಢದ 'ಪಂಜಾಬ್ ವಿಶ್ವವಿದ್ಯಾನಿಲಯದಲ್ಲಿ ಕಾನೂನು ಪದವಿ ಪಡೆದುಕೊಂಡರು. 1973ರಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದರು.
ಸುಷ್ಮಾ ಸ್ವರಾಜ್ ನೆನಪು ಹಸಿರಾಗಿಸುವ ಸುಂದರ ಚಿತ್ರಗಳು
ವಿದ್ಯಾರ್ಥಿ ದೆಸೆಯಿಂದಲೇ ಹಿಂದುತ್ವದ ಸಂಘಟನೆಗಳ ಜತೆ ಗುರುತಿಸಿಕೊಂಡಿದ್ದ ಅವರು, ರಾಜಕೀಯ ಚಟುವಟಿಕೆಗಳಲ್ಲಿ ಕ್ರೀಯಾಶೀಲರಾಗಿದ್ದರು. 1975ರಲ್ಲಿ ವಕೀಲರು ಹಾಗೂ ರಾಜಕಾರಣಿಯೂ ಆಗಿದ್ದ ಸ್ವರಾಜ್ ಕೌಶಲ್ ಅವರನ್ನು ವಿವಾಹವಾದರು. ಗಮನಾರ್ಹ ಸಂಗತಿ ಏನೆಂದರೆ ಕೌಶಲ್ 1990-93ರವರೆಗೆ ವಿಝೋರಾಂ ರಾಜ್ಯದ ರಾಜ್ಯಪಾಲರಾಗಿದ್ದರು.
'ಮತ್ತೆ ನಿಮ್ಮನ್ನು ನೋಡುವ ಯೋಗ ನಮಗಿಲ್ಲ', ಬಿಕ್ಕಿದ ಆನಂದ್ ಮಹೀಂದ್ರಾ
ಸುಷ್ಮಾ ಅವರ ಬದುಕಿನ ಪುಟಗಳಿಗೆ ವಾಪಾಸ್ ಮರಳುವುದಾದರೆ 1977ರಲ್ಲಿ ಜನತಾ ಪಾರ್ಟಿ ಅಡಿಯಲ್ಲಿ ಹರಿಯಾಣದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಾರೆ ಮತ್ತು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸುತ್ತಾರೆ. 1977-82 ಅವಧಿಗೆ ಕಾರ್ಮಿಕ ಹಾಗೂ ಉದ್ಯೋಗ ಸಚಿವೆಯಾಗಿಯೂ ಸೇವೆ ಸಲ್ಲಸುವ ಅವಕಾಶ ಅವರಿಗೆ ಒದಗಿ ಬರುತ್ತದೆ.
ಎರಡನೇ ಬಾರಿಗೆ ಮತ್ತೆ ಹರಿಯಾಣ ವಿಧಾನಸಭೆಗೆ ಆಯ್ಕೆಯಾದ ಅವರು 1987-90ರ ಅವಧಿಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವೆಯಾಗಿ ಸೇವೆ ಸಲ್ಲಿಸುತ್ತಾರೆ.
1980ರಲ್ಲಿ ಬಿಜೆಪಿ ರಚನೆಯಾದ ನಂತರ ಸುಷ್ಮಾ ಭಾರತೀಯ ಜನತಾ ಪಕ್ಷದ ಸದಸ್ಯತ್ವದ ಜತೆಗೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿಯೂ ಆಯ್ಕೆಯಾಗುತ್ತಾರೆ.
ಹರಿಯಾಣದಲ್ಲಿ ಸತತ ಗೆಲುವುಗಳನ್ನು ಕಂಡಿದ್ದ ಅವರು ಲೋಕಸಭೆ ಚುನಾವಣೆ ಅಖಾಡಕ್ಕೆ ಇಳಿಯುತ್ತಾರೆ. ಆದರೆ ವಿಧಾನಸಭೆಯಲ್ಲಿ ಸತತ ಗೆಲುವಿನ ರುಚಿ ಕಂಡಿದ್ದ ಸುಷ್ಮಾ, ಲೋಕಸಭೆ ವಿಚಾರದಲ್ಲಿ ಸತತ ಮೂರು ಬಾರಿ ಸೋಲಿನ ಕಹಿ ಉಣ್ಣಬೇಕಾಯಿತು.
ಅಂಬಾಲ ಕಂಟೋನ್ಮೆಂಟ್ ನ ಗಟ್ಟಿಗಿತ್ತಿ ಹೆಣ್ಣುಮಗಳು ಸುಷ್ಮಾ ಸ್ವರಾಜ್
ಆದರೆ ಪಕ್ಷದಲ್ಲಿ ಹೊಂದಿದ್ದ ಪ್ರಭಾವದಿಂದಾಗಿ 1990ರಲ್ಲಿ ಮೊದಲ ಬಾರಿಗೆ ರಾಜ್ಯಸಭೆ ಸದಸ್ಯರಾಗಿ ದಿಲ್ಲಿಯ ಅಧಿಕಾರ ರಾಜಕಾರಣಕ್ಕೆ ಪ್ರವೇಶ ಪಡೆಯುತ್ತಾರೆ. ಇದಾದ ನಂತರ 6 ವರ್ಷಗಳ ನಂತರ ಮತ್ತೆ ಲೋಕಸಭೆ ಚುನಾವಣೆಗೆ ನಿಂತು, ಅಂದಿನ ವಾಜಿಪೇಯಿ ನೇತೃತ್ವದ 13 ದಿನಗಳ ಸರಕಾರದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಖಾತೆಯನ್ನು ನಿಭಾಯಿಸುತ್ತಾರೆ.
ಇದಾದ ಎರಡು ವರ್ಷಗಳಿಗೆ ಮತ್ತೆ ಎದುರಾದ ಲೋಕಸಭೆ ಚುನಾವಣೆಯಲ್ಲಿ ಸುಷ್ಮಾ ಆರಿಸಿ ಬರುತ್ತಾರೆ. ಆ ಸಮಯದಲ್ಲಿ 8 ತಿಂಗಳ ಅವಧಿಗೆ ಮತ್ತದೇ ಖಾತೆಯ ಹೊಣೆಯನ್ನು ಹೊರುತ್ತಾರೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ದಿಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಾರೆ. ಈ ಮೂಲಕ ದಿಲ್ಲಿಯ ಮೊದಲ ಮಹಿಳಾ ಮುಖ್ಯಮಂತ್ರಿ ಎಂದು ಇತಿಹಾಸ ಪುಟಗಳಲ್ಲಿ ದಾಖಲಾಗುತ್ತಾರೆ. ವಿಪರ್ಯಾಸ ಏನೆಂದರೆ, ಇದೂ ಕೂಡ ಕೇವಲ 2 ತಿಂಗಳ ಅವಧಿಗೆ ಕೊನೆಯಾಗುತ್ತದೆ.
ಸುಷ್ಮಾ ಸ್ವರಾಜ್ ವಿಧಿವಶ: ಅಂತಿಮಕಾರ್ಯದ ಸ್ಥಳ, ಸಮಯದ ಮಾಹಿತಿ
ದಿಲ್ಲಿಯ ಮುಖ್ಯಮಂತ್ರಿ ಗಾಧಿಯಿಂದ ಇಳಿದ ಸುಷ್ಮಾ ರಾಷ್ಟ್ರ ರಾಜಕಾರಣಕ್ಕೆ ಮರಳುವ ಇಂಗಿತ ವ್ಯಕ್ತಪಡಿಸುತ್ತಾರೆ.
1999ರ ಲೋಕಸಭಾ ಚುನಾವಣೆ ಎದುರಾದಾಗ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕರ್ನಾಟಕದ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುತ್ತಾರೆ. ಅವರಿಗೆ ಎದುರಾಗಿ ಚುನಾವಣಾ ಅಖಾಡಕ್ಕೆ ಇಳಿದವರು ಸುಷ್ಮಾ ಸ್ವರಾಜ್. ರಾಷ್ಟ್ರದ ಗಮನ ಸೆಳೆದ ಈ ಚುನಾವಣೆಯಲ್ಲಿ ಕೇವಲ 55 ಸಾವಿರ ಮತಗಳಿಂದ ಸುಷ್ಮಾ ಪರಾಭವಗೊಂಡರು.
2000ನೇ ಇಸವಿಯಲ್ಲಿ ರಾಜ್ಯಸಭೆ ಸದಸ್ಯೆಯಾಗಿ ಮತ್ತೆ ಸಂಸತ್ ಪ್ರವೇಶ ಪಡೆದುಕೊಂಡರು ಸುಷ್ಮಾ. ವಾಜಿಪೇಯಿ ಸರಕಾರದಲ್ಲಿ 2000- 2003 ತನಕ ಮಾಹಿತಿ ಮತ್ತು ಪ್ರಸಾರ ಖಾತೆಯ ಹೊಣೆ ವಹಿಸಿಕೊಳ್ಳುತ್ತಾರೆ. 2003-04ರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಂಸದೀಯ ವ್ಯವಹಾರಗಳ ಖಾತೆಗೆ ಅವರನ್ನು ವರ್ಗಾವಣೆ ಮಾಡಲಾಗುತ್ತದೆ.
2004ರಲ್ಲಿ ಎದುರಾದ ಲೋಕಸಭಾ ಚುನಾವಣೆಯಲ್ಲಿ ಯುಪಿಎ ಅಧಿಕಾರಕ್ಕೆ ಬಂತಾದರೂ ಸುಷ್ಮಾ ಸ್ವರಾಜ್ ರಾಜ್ಯಸಭೆಯಲ್ಲಿ ಉಳಿದುಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಸೋನಿಯಾ ಗಾಂಧಿ ಪ್ರಧಾನಿ ಹುದ್ದೆ ಅಲಂಕರಿಸಿದರೆ ತಾವು ತಲೆ ಬೋಳಿಸಿಕೊಳ್ಳುವುದಾಗಿ ಸುಷ್ಮಾ ಸವಾಲು ಎಸೆಯುತ್ತಾರೆ.
ಸುಷ್ಮಾ ಸ್ವರಾಜ್ ವಿಧಿವಶ: ರಾಜ್ಯದ ನಾಯಕರ ಕಣ್ಣೀರು
ಹೀಗೆ ಹರಿಯಾಣದಿಂದ ದಿಲ್ಲಿಯ ರಾಜಕೀಯ ಪಡಸಾಲೆಗೆ ಅನಾಯಾಸವಾಗಿ ನಡೆದು ಬಂದ ಸುಷ್ಮಾ ಮೂರನೇ ಬಾರಿಗೆ ರಾಜ್ಯಸಭೆಗೆ ಆಯ್ಕೆಯಾಗುತ್ತಾರೆ. ಅಲ್ಲಿ ಅವರು ವಿರೋಧಪಕ್ಷ ಉಪನಾಯಕಿಯಾಗಿಯೂ ಕಾರ್ಯನಿರ್ವಹಿಸುತ್ತಾರೆ. 2009ರ ಲೋಕಸಭೆ ಚುನಾವಣೆಯಲ್ಲಿ ದೊಡ್ಡ ಅಂತರದಲ್ಲಿ (3.89 ಲಕ್ಷ ಮತಗಳು) ಗೆದ್ದು ಬಂದ ಸುಷ್ಮಾ ತಮ್ಮ ಮೇಲಿದ್ದ 'ಹಿಂಬಾಗಿಲ ಪ್ರವೇಶ'ದ ಆರೋಪದಿಂದ ಮುಕ್ತರಾಗುತ್ತಾರೆ. ಜತೆಗೆ ವಿರೋಧ ಪಕ್ಷದ ನಾಯಕಿಯಾಗಿ ಕಾರ್ಯನಿರ್ವಹಿಸುತ್ತಾರೆ.
ಇದಾದ ನಂತರ ಬಿಜೆಪಿ ಮಟ್ಟಿಗೆ ಐತಿಹಾಸಿಕ ದೊಡ್ಡ ಗೆಲುವು ತಂದುಕೊಟ್ಟ 2014ರ ಲೋಕಸಭಾ ಚುನಾವಣೆಯಲ್ಲಿ ಹಿಂದೆಂದಿಗಿಂತೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು ನರೇಂದ್ರ ಮೋದಿ ಸಂಪುಟದಲ್ಲಿ ಪ್ರಭಾವಿ ಖಾತೆಯನ್ನು ಹೊಂದುವಂತೆ ಮಾಡಿತು.
ಪ್ರೀತಿ ಕೊಟ್ಟ ತಾಯಿ ಸುಷ್ಮಾ ಅಗಲಿಕೆ ನೋವಲ್ಲಿ ಗಾಲಿ ರೆಡ್ಡಿ ಕಣ್ಣೀರು
ಈ ಅವಧಿಯಲ್ಲಿ ಸುಷ್ಮಾ ವಿದೇಶಾಂಗ ಖಾತೆ ಸಚಿವೆಯಾಗಿ ಗಮನ ಸೆಳೆದರು. ಟ್ವಿಟರ್ನಂತ ಸಾಮಾಜಿಕ ಜಾಲತಾಣವನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸುವ ಮೂಲಕ ಸುಷ್ಮಾ ಸುದ್ದಿ ಕೇಂದ್ರವನ್ನು ಆವರಿಸಿಕೊಂಡರು.
2019ರ ಲೋಕಸಭೆ ಚುನಾವಣೆ ಹೊತ್ತಿಗೆ ಆರೋಗ್ಯ ಕಾರಣ ಮುಂದಿಟ್ಟು ಸ್ಪರ್ಧೆಯಿಂದ ಹಿಂದೆ ಸರಿದರು ಸುಷ್ಮಾ. ಹಾಗಂತ ಅವರು ಸಕ್ರಿಯ ರಾಜಕಾರಣದಿಂದ ದೂರವಾದರು ಎಂದು ಅನ್ನಿಸಿರಲಿಲ್ಲ. ಈ ನಡುವೆ ಕರ್ನಾಟಕದ ರಾಜ್ಯಪಾಲೆಯಾಗಿಯೂ ಸುಷ್ಮಾ ನೇಮಕವಾಗುವ ಸಾಧ್ಯತೆಗಳ ಸುತ್ತ ಚರ್ಚೆಯೊಂದು ಆರಂಭಗೊಂಡಿತ್ತು.
ಮಂಗಳವಾರ ಲೋಕಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ವಿಶೇಷಾಧಿಕಾರ ರದ್ದತಿ ಕುರಿತಂತೆ ಗೃಹ ಸಚಿವ ಅಮಿತ್ ಶಾ ಮಂಡಿಸಿದ್ದ ಮಸೂದೆ ಅಂಗೀಕಾರವಾಯಿತು. ಇದನ್ನು ನೆನೆದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸುಷ್ಮಾ ಶುಭ ಕೋರಿದ್ದರು. "ತಮ್ಮ ಇಡೀ ಬದುಕಿನಲ್ಲಿ ಈ ದಿನಕ್ಕಾಗಿ ಕಾಯುತ್ತಲಿದ್ದೆ,'' ಎಂದವರು ಟ್ವೀಟ್ನಲ್ಲಿ ಭಾವನೆಗಳನ್ನು ಹಂಚಿಕೊಂಡಿದ್ದರು ಮತ್ತು ಅದೇ ಅವರ ಕೊನೆಯ ಟ್ವೀಟ್ ಆಯಿತು. ಇದಾದ ಮೂರು ಗಂಟೆಗಳ ಅಂತರದಲ್ಲಿ ಸುಷ್ಮಾ ಸ್ವರಾಜ್ ಬದುಕಿಗೆ ವಿದಾಯ ಹೇಳಿದ್ದಾರೆ.