ರಾಷ್ಟ್ರಪತಿ ಅಭ್ಯರ್ಥಿ ಮೀರಾ ವಿರುದ್ದ ಸುಷ್ಮಾ ಟೀಕೆ: ಕಾಂಗ್ರೆಸ್ ತಿರುಗೇಟು
ನವದೆಹಲಿ, ಜೂ 26: ಮುಂದಿನ ತಿಂಗಳು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಯುಪಿಎ ಮೈತ್ರಿಕೂಟದ ಅಭ್ಯರ್ಥಿ ಮೀರಾ ಕುಮಾರ್ ಅವರ ಹಿಂದಿನ ಕಾರ್ಯಶೈಲಿಯ ಬಗ್ಗೆ ವಿದೇಶಾಂಗ ಖಾತೆಯ ಸಚಿವೆ ಸುಷ್ಮಾ ಸ್ವರಾಜ್ ನೀಡಿದ್ದ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
ಲೋಕಸಭೆಯ ಮೊದಲ ಮಹಿಳಾ ಸ್ಪೀಕರ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿರುವ ಮೀರಾ ಕುಮಾರ್, ನಾನು ವಿರೋಧ ಪಕ್ಷದ ನಾಯಕಿಯಾಗಿದ್ದಾಗ ಆರು ನಿಮಿಷದ ನನ್ನ ಭಾಷಣಕ್ಕೆ ಅರವತ್ತು ಬಾರಿ ತಡೆಯೊಡ್ಡಿದ್ದರು ಎಂದು ಸುಷ್ಮಾ ಸ್ವರಾಜ್ ತನ್ನ ಹಿಂದಿನ ನೆನಪನ್ನು ಟ್ವೀಟ್ ಮೆಲುಕು ಹಾಕಿಕೊಂಡಿದ್ದರು.
ರಾಷ್ಟ್ರಪತಿ ಚುನಾವಣೆ ಲೆಕ್ಕಾಚಾರ: ಬಿಜೆಪಿಗೆ ಎಷ್ಟು, ಇತರರಿಗೆ ಎಷ್ಟು
ಇದಕ್ಕೆ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಪ್ರತ್ಯುತ್ತರ ನೀಡಿರುವ ಕಾಂಗ್ರೆಸ್, ಈ ಹಿಂದೆ ಸುಷ್ಮಾ ಸ್ವರಾಜ್ ಲೋಕಸಭಾ ಸ್ಪೀಕರ್ ಮೀರಾ ಅವರ ಕಾರ್ಯವೈಖರಿಯನ್ನು ಶ್ಲಾಘಿಷಿದ್ದ ಭಾಷಣದ ತುಣುಕನ್ನು ಹಾಕಿ ತಿರುಗೇಟು ನೀಡಿದೆ.
2013ರಲ್ಲಿ ಸುಷ್ಮಾ ಸ್ವರಾಜ್ ವಿರೋಧ ಪಕ್ಷದ ನಾಯಕಿಯಾಗಿದ್ದ ವೇಳೆ, ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಭಾಷಣ ಮಾಡುತ್ತಿದ್ದಾಗ, ಮೀರಾ ಕುಮಾರ್ ಅದಕ್ಕೆ ತಡೆಯೊಡ್ದಿದ್ದರು.
ಆ ವಿಡಿಯೋದ ತುಣುಕನ್ನು ಸುಷ್ಮಾ ತನ್ನ ಟ್ವೀಟ್ ನಲ್ಲಿ ಹಾಕಿ, " ನೋಡಿ, ಲೋಕಸಭೆಯ ಸ್ಪೀಕರ್ ನನ್ನ ಜೊತೆ ಯಾವ ರೀತಿ ವರ್ತಿಸಿದ್ದರು" ಎಂದು ಒಕ್ಕಣೆ ಬರೆದು ಪೋಸ್ಟ್ ಮಾಡಿದ್ದರು.
ಇದಾದ ನಂತರ ಅಂದಿನ ಲೋಕಸಭಾ ಅಧಿವೇಶನದ ಕೊನೆಯ ಕಲಾಪದ ವೇಳೆ, ಈ ಲೋಕಸಭಾ ಅಧಿವೇಶನ ಸಸೂತ್ರವಾಗಿ ನಡೆಯಲು, ನಿಮ್ಮ ತಾಳ್ಮೆ ಪ್ರಮುಖ ಕಾರಣ ಎಂದು ಸುಷ್ಮಾ ಲೋಕಸಭೆಯಲ್ಲಿ ಮೀರಾ ಕುಮಾರ್ ಕಾರ್ಯವೈಖರಿ ಶ್ಲಾಘಿಸಿದ್ದರು.
ಆ ವಿಡಿಯೋ ತುಣುಕನ್ನು @INCIndia ಟ್ವಿಟ್ಟರ್ ಅಕೌಂಟಿನ ಮೂಲಕ ಕಾಂಗ್ರೆಸ್ ಟ್ವೀಟ್ ಮಾಡಿ, ಸುಷ್ಮಾ ಸ್ವರಾಜ್ ಅವರಿಗೆ ತಿರುಗೇಟು ನೀಡಿದೆ.