ಕರ್ನಾಟಕ ಅಥವ ಮಹಾರಾಷ್ಟ್ರ ನಾಯಕರಿಗೆ ಎಐಸಿಸಿ ಅಧ್ಯಕ್ಷ ಹುದ್ದೆ?
ಬೆಂಗಳೂರು, ಜುಲೈ 03 : ಕಾಂಗ್ರೆಸ್ ಪಕ್ಷದ ಸಾರಥ್ಯ ಕರ್ನಾಟಕ ಅಥವ ಮಹಾರಾಷ್ಟ್ರ ರಾಜ್ಯದ ನಾಯಕರಿಗೆ ಒಲಿಯುವ ಸಾಧ್ಯತೆ ಇದೆ. ಲೋಕಸಭಾ ಚುನಾವಣೆ ಸೋಲಿನ ಬಳಿಕ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ಅವರು ರಾಜೀನಾಮೆ ನೀಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷರು ಯಾರಾಗಲಿದ್ದಾರೆ? ಎಂಬ ಚರ್ಚೆ ದೇಶವ್ಯಾಪಿ ನಡೆಯುತ್ತಿದೆ. ನೆಹರೂ ಕುಟುಂಬದ ಹೊರತಾದ ನಾಯಕರಿಗೆ ಈ ಬಾರಿ ಅಧ್ಯಕ್ಷ ಪಟ್ಟ ಒಲಿದು ಬರಲಿದೆ ಎಂಬುದು ಸುದ್ದಿ. ಯಾವ ರಾಜ್ಯದ ನಾಯಕರು ಸಾರಥ್ಯ ವಹಿಸಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.
ಕಾಂಗ್ರೆಸ್ ನೂತನ ಅಧ್ಯಕ್ಷ ಹುದ್ದೆಗೆ ಶಿಂಧೆ ಹೆಸರು ಪ್ರಸ್ತಾಪ
ಲೋಕಸಭಾ ಕಾಂಗ್ರೆಸ್ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಹೆಸರುಗಳು ಪ್ರಬಲವಾಗಿ ಕೇಳಿಬರುತ್ತಿವೆ. ಬೇಗ ಚುನಾವಣೆ ನಡೆಸಿ ಅಧ್ಯಕ್ಷರನ್ನು ಆಯ್ಕೆ ಮಾಡಿ ಎಂದು ರಾಹುಲ್ ಗಾಂಧಿ ಅವರು ಬುಧವಾರ ಹೇಳಿದ್ದಾರೆ.
ಇದು ಅಧಿಕೃತ! ರಾಹುಲ್ ಗಾಂಧಿ ಇನ್ನು ಕಾಂಗ್ರೆಸ್ ಅಧ್ಯಕ್ಷರಲ್ಲ!
ನೂತನ ಕಾಂಗ್ರೆಸ್ ಅಧ್ಯಕ್ಷರು ಯಾರಾಗಬೇಕು? ಎಂಬುದನ್ನು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಅವರು ತೀರ್ಮಾನಿಸಲಿದ್ದಾರೆ. ಪಿ.ವಿ.ನರಸಿಂಹರಾವ್, ಸೀತಾರಾಂ ಕೇಸರಿ ಅವರ ಬಳಿಕ ನೆಹರೂ ಕುಟುಂಬದ ಹೊರತಾದ ವ್ಯಕ್ತಿಗೆ ಕಾಂಗ್ರೆಸ್ ಅಧ್ಯಕ್ಷ ಪಟ್ಟ ಸಿಗುವ ನಿರೀಕ್ಷೆ ಇದೆ....
ರಾಹುಲ್ ಗಾಂಧಿ ರಾಜೀನಾಮೆ: ಮೆಚ್ಚಿನ ನಾಯಕಗೆ ಭಾವುಕ ಸಂದೇಶ
ಸುಶೀಲ್ ಕುಮಾರ್ ಶಿಂಧೆ ಹೆಸರು
ಕೇಂದ್ರ ಮಾಜಿ ಸಚಿವ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಹೆಸರು ಕೇಳಿಬರುತ್ತಿದೆ. 77 ವರ್ಷದ ಶಿಂಧೆ ಅವರು ದಲಿತ ಸಮುದಾಯದ ಪ್ರಬಲ ನಾಯಕರು. ಗಾಂಧಿ ಕುಟುಂಬದವರು ಅವರ ಮೇಲೆ ಸಂಪೂರ್ಣ ವಿಶ್ವಾಸ ಹೊಂದಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ
76 ವರ್ಷದ ಮಲ್ಲಿಕಾರ್ಜುನ ಖರ್ಗೆ ಕರ್ನಾಟಕದ ಪಕ್ಷದ ಹಿರಿಯ ನಾಯಕರು. ದಲಿತ ಸಮುದಾಯಕ್ಕೆ ಸೇರಿದ ಖರ್ಗೆ ಅವರು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿದ್ದವರು. ಕೇಂದ್ರ ಸಚಿವರಾಗಿದ್ದ ಅವರು ರಾಹುಲ್ ಗಾಂಧಿ ಅವರಿಗೂ ಆಪ್ತರು.
ಒಂದು ವಾರದಲ್ಲಿ ನೇಮಕ
2019ರ ಲೋಕಸಭಾ ಚುನಾವಣೆ ಸೋಲಿನ ಬಳಿಕ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದ್ದಾರೆ. ಹೊಸ ಅಧ್ಯಕ್ಷರ ಹುಡುಕಾಟ ಅರಂಭವಾಗಿದ್ದು, ಒಂದು ವಾರದಲ್ಲಿ ಹೊಸ ಅಧ್ಯಕ್ಷರ ನೇಮಕವಾಗಲಿದೆ ಎಂಬ ಮಾಹಿತಿ ಸಿಕ್ಕಿದೆ.
ಹೆಸರನ್ನು ಶಿಫಾರಸು ಮಾಡಲು ಒತ್ತಾಯ
ಎಐಸಿಸಿಯ ಅಧ್ಯಕ್ಷರು ಯಾರಾಗಬೇಕು? ಎಂದು ಹೆಸರನ್ನು ಶಿಫಾರಸು ಮಾಡಿ ಎಂದು ರಾಹುಲ್ ಗಾಂಧಿ ಅವರನ್ನು ಒತ್ತಾಯಿಸಲಾಗುತ್ತಿದೆ. ಆದರೆ, ರಾಹುಲ್ ಗಾಂಧಿ ಅವರು ಇದುವರೆಗೂ ಯಾರ ಹೆಸರನ್ನು ಸಹ ಶಿಫಾರಸು ಮಾಡಿಲ್ಲ.