ಸುಶಾಂತ್ ಪ್ರಕರಣದಲ್ಲಿ 142ನೇ ವಿಧಿ ಬಳಕೆ: ಏನಿದು ಸುಪ್ರೀಂಕೋರ್ಟ್ ವಿಶೇಷ ಅಧಿಕಾರ?
ನವದೆಹಲಿ, ಆಗಸ್ಟ್ 20: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ ಬುಧವಾರ ಸುಪ್ರೀಂಕೋರ್ಟ್ ಆದೇಶ ಹೊರಡಿಸಿತ್ತು. ಸುಪ್ರೀಂಕೋರ್ಟ್ನ ಇತಿಹಾಸದಲ್ಲಿಯೇ ಏಕಸದಸ್ಯ ನ್ಯಾಯಪೀಠವು ಸಂವಿಧಾನದ 142ನೇ ವಿಧಿಯಡಿ ತನ್ನ ಅಸಾಮಾನ್ಯ ಶಕ್ತಿಯನ್ನು ಬಳಸಿಕೊಂಡಿದ್ದು ಇದೇ ಮೊದಲು.
ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ಏಕಸದಸ್ಯ ನ್ಯಾಯಪೀಠದ ನ್ಯಾಯಮೂರ್ತಿ ಹೃಷಿಕೇಶ್ ರಾಯ್ ಅವರು, ಅರ್ಜಿಗಳ ವಿಚಾರಣೆ ನಡೆಸಿ ಸಿಬಿಐ ತನಿಖೆಗೆ ಆದೇಶಿಸಿದ್ದಾರೆ. ಈ ತನಿಖೆಯಲ್ಲಿ ಸಾರ್ವಜನಿಕ ವಿಶ್ವಾಸವನ್ನು ಗಳಿಸಲು ಮತ್ತು ಈ ಪ್ರಕರಣದಲ್ಲಿ ಸಂಪೂರ್ಣ ನ್ಯಾಯ ಪಡೆಯಲು ನ್ಯಾಯಾಲಯವು ಸಂವಿಧಾನದ 142ನೇ ವಿಧಿಯಲ್ಲಿನ ಅಧಿಕಾರವನ್ನು ಬಳಸಿಕೊಳ್ಳುವುದು ಸೂಕ್ತ ಎಂದು ಭಾವಿಸಿದೆ ಎಂಬುದಾಗಿ ನ್ಯಾ. ರಾಯ್ ಹೇಳಿದ್ದರು.
ಸುಶಾಂತ್ ಸಿಂಗ್ ಸಾವಿನ ಪ್ರಕರಣ ಸಿಬಿಐಗೆ: ಸುಪ್ರೀಂಕೋರ್ಟ್ ಮಹತ್ವದ ಆದೇಶ
ಈ ಪ್ರಕರಣದಲ್ಲಿ ಮಹಾರಾಷ್ಟ್ರ ಸರ್ಕಾರದ ಪರ ಹಾಜರಿದ್ದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಸಂವಿಧಾನದ 142ನೇ ವಿಧಿಯಡಿ ಇರುವ ಅಧಿಕಾರವನ್ನು ಏಕ ಸದಸ್ಯ ನ್ಯಾಯಪೀಠ ಬಳಸಲು ಸಾಧ್ಯವಿಲ್ಲ ಎಂದು ಎತ್ತಿದ ಆಕ್ಷೇಪವನ್ನು ನ್ಯಾಯಮೂರ್ತಿ ತಳ್ಳಿ ಹಾಕಿದರು. ಮುಂದೆ ಓದಿ.
ಅಧಿಕಾರ ಬಳಸಿಕೊಳ್ಳಲು ಅಡ್ಡಿಯಿಲ್ಲ
ಪ್ರಸ್ತುತ ವಿಷಯದಲ್ಲಿ ಸಂಬಂಧಿತ ಅಧಿಕಾರವನ್ನು ಬಳಸಿಕೊಳ್ಳಲು ಯಾವುದೇ ಅಡೆತಡೆಗಳಿಲ್ಲ. ಈ ಕಾನೂನಾತ್ಮಕ ಅಧಿಕಾರವನ್ನು ನ್ಯಾಯಾಲಯ ಬಳಸಿಕೊಳ್ಳಲು ತೊಂದರೆಯಿಲ್ಲ. ಸಂಪೂರ್ಣ ನ್ಯಾಯ ಒದಗಿಸುವ ಸಂದರ್ಭದಲ್ಲಿ ಅಗತ್ಯವೆನಿಸಿದಾಗ ಸುಪ್ರೀಂಕೋರ್ಟ್ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಸೂಕ್ತ ಆದೇಶವನ್ನು ಹೊರಡಿಸಬಹುದು ಎಂದು 142ನೇ ವಿಧಿ ಹೇಳುತ್ತದೆ. ಹೀಗಾಗಿ ಒಂದು ಪ್ರಕರಣದ ವಿಚಾರಣೆ ನಡೆಸುತ್ತಿರುವ ಏಕ ಸದಸ್ಯ ನ್ಯಾಯಪೀಠ ಕೂಡ 142ನೇ ವಿಧಿಯಡಿ ತನ್ನ ಅಧಿಕಾರವನ್ನು ಬಳಸಿಕೊಳ್ಳಬಹುದು ಎಂದು ನ್ಯಾ. ರಾಯ್ ಹೇಳಿದರು.
ಸುಪ್ರೀಂಕೋರ್ಟ್ ವಿಶೇಷಾಧಿಕಾರ
ತನ್ನ ಮುಂದೆ ಬಾಕಿ ಇರುವ ಯಾವುದೇ ಪ್ರಕರಣ ಅಥವಾ ವಿಷಯಕ್ಕೆ ಸಂಪೂರ್ಣ ನ್ಯಾಯ ನೀಡಲು ಅಗತ್ಯ ಕಾಣಿಸಿದಾಗ ತನ್ನ ವ್ಯಾಪ್ತಿಯಲ್ಲಿ ಇಂತಹ ಆದೇಶ ಅಥವಾ ಸೂಚನೆ ಹೊರಡಿಸುವ ವಿಶೇಷ ಅಧಿಕಾರ ಸುಪ್ರೀಂಕೋರ್ಟ್ಗೆ ಇದೆ. ಈ ರೀತಿ ಹೊರಡಿಸುವ ಆದೇಶ ಅಥವಾ ಸೂಚನೆಗಳು ಸಂಸತ್ತು ರೂಪಿಸುವ ಯಾವುದೇ ಕಾನೂನಿನ ಅಡಿಯಲ್ಲಿ ಭಾರತದ ಪ್ರದೇಶದುದ್ದಕ್ಕೂ ಜಾರಿ ಮಾಡಬಹುದಾಗಿದೆ ಎಂದು 142ನೇ ವಿಧಿ ಹೇಳುತ್ತದೆ.
ಸುಶಾಂತ್ ಸಾವಿನ ದಿನ ಕಾಣಿಸಿಕೊಂಡಿದ್ದ ಮುಸುಕುಧಾರಿ ಮಹಿಳೆಯ ಗುರುತು ಪತ್ತೆ
ಎಲ್ಲ ಪ್ರಕರಣ ಸಿಬಿಐ ವ್ಯಾಪ್ತಿಗೆ
ಸುಶಾಂತ್ ಸಿಂಗ್ ಅವರ ಸಾವಿಗೆ ಸಂಬಂಧಿಸಿದಂತೆ ದಾಖಲಾಗುವ ಯಾವುದೇ ಇತರೆ ಪ್ರಕರಣಗಳನ್ನೂ ತಾನೇ ನೋಡಿಕೊಳ್ಳುವಂತೆ ಕೂಡ ಸಿಬಿಐಗೆ ಸುಪ್ರೀಂಕೋರ್ಟ್ ಸೂಚಿಸಿದೆ. ಬಿಹಾರ ಪೊಲೀಸರು ಮತ್ತು ಮುಂಬೈ ಪೊಲೀಸರ ನಡುವಿನ ತನಿಖಾ ವ್ಯಾಪ್ತಿಯ ಬಗ್ಗೆ ಕಿತ್ತಾಟ ನಡೆದಿತ್ತು. ಈಗ ಬಿಹಾರ ಪೊಲೀಸರು ದಾಖಲಿಸಿದ್ದ ಎಫ್ಐಆರ್ ಕಾನೂನು ಬದ್ಧವಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಸಹಕಾರ ನೀಡಬೇಕು
ಸುಪ್ರೀಂಕೋರ್ಟ್ನ ನ್ಯಾಯಮೂರ್ತಿ ಹೃಷಿಕೇಶ್ ರಾಯ್ ಅವರ ಏಕ ಸದಸ್ಯ ನ್ಯಾಯಪೀಠ ನೀಡಿರುವ ತೀರ್ಪನ್ನು ಪ್ರಶ್ನಿಸುವ ಸ್ವಾತಂತ್ರ್ಯ ನೀಡುವಂತೆ ಕೋರಿ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಕೂಡ ತಿರಸ್ಕರಿಸಲಾಗಿದೆ. ಸಿಬಿಐ ತನಿಖೆಗೆ ಸ್ವತಃ ನ್ಯಾಯಾಲಯವೇ ಆದೇಶ ನೀಡಿರುವುದರಿಂದ ಮಹಾರಾಷ್ಟ್ರ ಸರ್ಕಾರವು ಸಿಬಿಐ ತನಿಖೆಗೆ ಸಹಕಾರ ನೀಡಲೇಬೇಕಾಗಿದೆ.