ನಗದು ಅಪಮೌಲ್ಯ : ಒನ್ಇಂಡಿಯಾ ಜನ-ಗಣ-ಮನ ದರ್ಪಣ
ನ್ನಡ, ತೆಲುಗು, ಮಲಯಾಳಂ, ಹಿಂದಿ, ಇಂಗ್ಲಿಷ್, ಬಂಗಾಳಿ, ಗುಜರಾತ್ ಭಾಷೆಗಳಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗಿದೆ. ಒಟ್ಟಾರೆ 31 ಸಾವಿರಕ್ಕೂ ಹೆಚ್ಚು ನೆಟ್ಟಿಗರು ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ.
ಬೆಂಗಳೂರು, ನವೆಂಬರ್ 25 : ನೋಟು ನಿಷೇಧದ ಬಗ್ಗೆ ಸಂಸತ್ತಿನಲ್ಲಿ, ವಿಧಾನಸಭೆಗಳಲ್ಲಿ, ಟಿವಿ ಡಿಬೇಟುಗಳಲ್ಲಿ, ಹಣಕಾಸು ಪಂಡಿತರಲ್ಲಿ ಮಾತ್ರ ಚರ್ಚೆಯಾಗುತ್ತಿಲ್ಲ, ಬೀದಿಬೀದಿಗಳಲ್ಲಿ ಚರ್ಚೆಯಾಗುತ್ತಿದೆ, ಅಡುಗೆಮನೆಗಳಲ್ಲಿ ಮಹಿಳೆಯರು ಸೌಟು ಕೆಲಸಮಯ ಕೆಳಗೆ ಇಟ್ಟು ಇದರ ಬಗ್ಗೆ ಚಿಂತಿಸುತ್ತಿದ್ದಾರೆ.
ಗಂಟೆಗಟ್ಟಲೆ ಕ್ಯೂ ನಿಂತರೂ ಎಟಿಎಂನಲ್ಲಿ ಹಣ ಪಡೆಯಲಾಗುತ್ತಿರಲಿಲ್ಲ, ಸಿಕ್ಕರೂ 2000 ರು. ನೋಟು ಇಟ್ಟುಕೊಂಡು ಚಿಲ್ಲರೆಗಳಿಗೆ ಅಲೆಯುವುದು ತಪ್ಪುತ್ತಿಲ್ಲ, ಆ ನೋಟುಗಳೂ ಮುಗಿದುಹೋದರೆ ಮುಂದೇನು ಎಂಬ ಬಗ್ಗೆ ಅನೇಕರಲ್ಲಿ ಉತ್ತರವಿಲ್ಲ. ಈ ಕಾಂಚಾಣದ ವಿಪ್ಲವದಿಂದ ಅನೇಕರು ತತ್ತರಿಸಿಹೋಗಿದ್ದಾರೆ.
ಆದರೆ, ಬಹುಸಂಖ್ಯಾತರಲ್ಲಿ ಬರುತ್ತಿರುವುದು ಒಂದೇ ಮಾತು, 'ನರೇಂದ್ರ ಮೋದಿ ಒಳ್ಳೆ ಕೆಲಸ ಮಾಡುತ್ತಿದ್ದಾರೆ'. ಕನಿಷ್ಠ ಈ ದಾರಿಯಿಂದಲಾದರು ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುತ್ತದೆ, ಕಪ್ಪು ಹಣ ವಾಪಸ್ ಬಂದು ಆರ್ಥಿಕತೆ ಬಲಗೊಳ್ಳುತ್ತದೆ, ಜನಜೀವನ ಇನ್ನಷ್ಟು ಸುಧಾರಿಸುತ್ತದೆ ಎಂಬ ದೂರಗಾಮಿ ನಿರೀಕ್ಷೆ ಇಟ್ಟುಕೊಂಡು ಬಹುತೇಕ ಜನರು ಕಾಯುತ್ತಿದ್ದಾರೆ.
ಇಂಥವರ ನಡುವೆ, ಮೋದಿಯ ಈ ನಡೆಯನ್ನು ಟೀಕಿಸುವವರಿಗೆ ಕಡಿಮೆಯೇನಿಲ್ಲ. ನಮ್ಮ ಜೀವನ ಅಸ್ತವ್ಯಸ್ತವಾಗಿದೆ ಎಂದು ಹಿಡಿಶಾಪ ಹಾಕುವವರಿಗೂ ಕಮ್ಮಿಯಿಲ್ಲ. ಇನ್ನು ವಿರೋಧಪಕ್ಷದವರಂತೂ ನರೇಂದ್ರ ಮೋದಿ ಮತ್ತು ಎನ್ಡಿಎ ಸರಕಾರವನ್ನು ಇದೇ ನೆಪ ಇಟ್ಟುಕೊಂಡು ಸದೆಬಡಿಯಲು ಒಗ್ಗಟ್ಟಾಗುತ್ತಿದ್ದಾರೆ.
ಆದರೆ, ಈ ಬಗ್ಗೆ ನಮ್ಮ ಓದುಗರು ಏನಂತಾರೆ? ಡಿಮಾನಿಟೈಸೇಷನ್ (ಅಪನಗದೀಕರಣ) ಕುರಿತು ಅವರ ವಸ್ತುನಿಷ್ಠ ಅಭಿಪ್ರಾಯಗಳೇನು? ಎಂಬಿತ್ಯಾದಿ ಹತ್ತನ್ನೊಂದು ಪ್ರಶ್ನೆಗಳನ್ನು ಅವರ ಮುಂದಿಟ್ಟಿದ್ದೆವು.
ಕನ್ನಡ, ತೆಲುಗು, ಮಲಯಾಳಂ, ಹಿಂದಿ, ಇಂಗ್ಲಿಷ್, ಬಂಗಾಳಿ, ಗುಜರಾತ್ ಭಾಷೆಗಳಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗಿದೆ. ಒಟ್ಟಾರೆ 31 ಸಾವಿರಕ್ಕೂ ಹೆಚ್ಚು ನೆಟ್ಟಿಗರು ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. ಅತ್ಯಂತ ಉತ್ಸಾಹದಿಂದ ಈ ಸಮೀಕ್ಷೆಯಲ್ಲಿ ಭಾಗವಹಿಸಿರುವ ಓದುಗರ ಅಭಿಮತವೇನು ಮುಂದೆ ಓದಿರಿ. [ಸಮೀಕ್ಷೆ ತೆರೆದಿಟ್ಟ ರಹಸ್ಯ: ನೋಟು ರದ್ದು ಬಗ್ಗೆ ಜನ ಏನಂತಾರೆ?]
ಸರಕಾರದ ಅಪನಗದೀಕರಣವನ್ನು ನೀವು ಬೆಂಬಲಿಸುತ್ತೀರಾ?
ಈ ಪ್ರಶ್ನೆಗೆ ಶೇ.71.7ರಷ್ಟು ಜನರು ಹೌದು ನಾವು ಬೆಂಬಲಿಸುತ್ತೇವೆ ಎಂದು ಅಭಿಮತ ವ್ಯಕ್ತಪಡಿಸಿ, ಮೋದಿ ಬೆನ್ನಿಗೆ ನಿಂತಿದ್ದಾರೆ. ಇಲ್ಲ ಅನ್ನುವವರು ಶೇ.25.7ರಷ್ಟಿದ್ದರೆ, ಇದರ ಬಗ್ಗೆ ನನಗೇನೂ ಗೊತ್ತಿಲ್ಲ ಅನ್ನುವರು ಉಳಿದವರು.
ಇದು ಪ್ರಚಾರದ ಗೀಳಲ್ಲದೆ ಮತ್ತೇನೂ ಅಲ್ಲ ಅಂತ ನಿಮ್ಮ ಭಾವನೆಯೆ?
ಶೇ.65.7ರಷ್ಟು ಜನರು ಮೋದಿ ನೋಟು ನಿಷೇಧವನ್ನು ಪ್ರಚಾರದ ಗೀಳಿನಿಂದ ಮಾಡಿಲ್ಲ, ಬದಲಿಗೆ ಜನರಿಗೆ ಲಾಭವಾಗಲಿ ಎಂದು ಮಾಡಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕೆ ತದ್ವಿರುದ್ಧವಾಗಿ ಚಿಂತಿಸುವ ಜನರು ಶೇ.34.3ರಷ್ಟು, ಇದರಿಂದ ಸಾಮಾನ್ಯರ ಜನಜೀವನ ದಾರುಣವಾಗಿದೆ ಎಂದಿದ್ದಾರೆ.
ಕಪ್ಪು ಹಣ ತಡೆಗಟ್ಟಲು 1,000 ರು. ಹಿಂತೆಗೆದುಕೊಳ್ಳಲಾಯಿತು. 2,000 ರು. ಬಿಡುಗಡೆಯಿಂದ ಇದು ಇನ್ನೂ ತೀವ್ರವಾಗುವುದಿಲ್ಲವೆ?
ಈ ಪ್ರಶ್ನೆಗೆ ಹೆಚ್ಚೂಕಡಿಮೆ 50-50ಯಷ್ಟು ಮತಗಳು ಬಿದ್ದಿವೆ. ಶೇ.51.7ರಷ್ಟು ಜನತೆ ಮೋದಿಯವರ ಈ ನಿರ್ಧಾರದಿಂದ ಕಪ್ಪುಹಣದಾಹಿಗಳಿಗೆ ಸಹಾಯವಾಗುತ್ತದೆ ಎಂದಿದ್ದರೆ, ಶೇ.48.3ರಷ್ಟು ಜನರು ಸಾಧ್ಯವೇ ಇಲ್ಲ, ಕಪ್ಪು ಹಣ ಹಿಂತಿರುಗಿ ಬರಲು ಬಹುಕಾಲ ಬೇಕು ಎಂದು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಸರಕಾರ ಸಂಪೂರ್ಣವಾಗಿ ಸಿದ್ಧತೆ ಮಾಡಿಕೊಂಡಿರಲಿಲ್ಲವೆ? ಇನ್ನೂ ಹೆಚ್ಚು ಹೊಸ ನೋಟುಗಳನ್ನು ಪ್ರಿಂಟ್ ಮಾಡಬೇಕಿತ್ತಲ್ಲವೆ?
ಶೇ.59.3ರಷ್ಟು ನೆಟ್ಟಿಗರು ಮೋದಿ ತಮ್ಮ ನಿರ್ಧಾರ ಪ್ರಕಟಿಸುವ ಮುನ್ನ ಸಾಕಷ್ಟು ಸಿದ್ಧತೆ ಮಾಡಿಕೊಂಡಿರಲಿಲ್ಲ ಎಂದು ವಸ್ತುನಿಷ್ಠವಾಗಿ ಹೇಳಿದ್ದಾರೆ. ಇನ್ನು, ಉಳಿದ 40.7ರಷ್ಟು ಜನರು ಮೋದಿಯ ಬೆಂಬಲಕ್ಕೆ ನಿಂತಿದ್ದು, ಇದನ್ನು ನಿಭಾಯಿಸಲು ಬೇರೆ ಮಾರ್ಗಗಳಿವೆ ಎಂದು ಹೇಳಿದ್ದಾರೆ.
ರಹಸ್ಯ ಕಾಪಾಡಬೇಕೆನ್ನುವ ಸರಕಾರದ ಉದ್ದೇಶದಿಂದ ಈ ಪ್ರಕ್ರಿಯೆ ನಿಧಾನವಾಯಿತು ಎಂಬುದು ನಿಮ್ಮ ಅನಿಸಿಕೆಯೆ?
ಶೇ.35.8ರಷ್ಟು
ಜನರು
ಕಳಪೆ
ಪರಿಪಾಲನೆಯಿಂದ
ತನ್ನನ್ನು
ರಕ್ಷಿಸಿಕೊಳ್ಳಲು
ಸರಕಾರ
ನೀಡುತ್ತಿರುವ
ಕಾರಣವಷ್ಟೆ
ಎಂದು
ಮೂಗು
ಮುರಿದಿದ್ದರೆ,
ಶೇ.64.3ರಷ್ಟು
ಜನರು
ಇದನ್ನು
ಜಾರಿಗೆ
ತರಲು
ಬೇರೆ
ಮಾರ್ಗವೇ
ಇದ್ದಿದ್ದಿಲ್ಲ,
ರಹಸ್ಯ
ಕಾಪಾಡಲೇಬೇಕಿತ್ತು
ಎಂದು
ಮೋದಿಗೆ
ಶಭಾಸ್
ಎಂದಿದ್ದಾರೆ.
ಈ ಅಪನಗದೀಕರಣದಿಂದ ಸಾಮಾನ್ಯ ಜನರಿಗೆ ಎಷ್ಟು ಲಾಭವಾಗಿದೆ?
ಶೇ.40.7ರಷ್ಟು ನೆಟ್ಟಿಗರು ಶ್ರೀಸಾಮಾನ್ಯರಿಗೆ ಇದರಿಂದ ಲಾಭವಾಗಿಲ್ಲ. ಬ್ಯಾಂಕಿನ ಮುಂದೆ ಇದರಿಂದ ಕ್ಯೂ ಹೆಚ್ಚಾಗುತ್ತಲೇ ಇದೆ ಎಂದಿದ್ದಾರೆ. ಆದರೆ, ಶೇ.59.3ರಷ್ಟು ಜನರುಮುಂದೆ ಈ ನಡೆಯಿಂದ ಶ್ರೀಸಾಮಾನ್ಯರಿಗೆ ತುಂಬಾ ಸಹಾಯವಾಗುತ್ತದೆ ಎಂದು ಆಪ್ಟಿಮಿಸ್ಟಿಕ್ ಆಗಿ ಹೇಳಿದ್ದಾರೆ.
ಕಪ್ಪು ಹಣ ಸಂಪೂರ್ಣವಾಗಿ ನಿರ್ನಾಮವಾಗುತ್ತದೆಯೆ?
ಈ ಪ್ರಶ್ನೆಗೆ ಜನ ಇಂಟರೆಸ್ಟಿಂಗ್ ಆಗಿ ಉತ್ತರಿಸಿದ್ದಾರೆ. ಶೇ.45.7ರಷ್ಟು ಜನರು 2,000 ರು.ಗಳ ಚಲಾವಣೆಯಿಂದ ಕಪ್ಪು ಹಣ ಇನ್ನಷ್ಟು ಜಾಸ್ತಿಯಾಗುತ್ತದೆ ಎಂದು ನುಡಿದಿದ್ದರೆ, ಶೇ.54.3ರಷ್ಟು ಜನರು ಹಾಗೇನೂ ಆಗುವುದಿಲ್ಲ ಇದರಿಂದ ಕಪ್ಪುಹಣಕ್ಕೆ ಕಡಿವಾಣ ಬೀಳುತ್ತದೆ ಎಂದಿದ್ದಾರೆ.
ಸರಕಾರ ವಿಫಲವಾಗಿದ್ದು, ತನ್ನ ನಿರ್ಧಾರವನ್ನು ಹಿಂದಕ್ಕೆ ಪಡೆಯಬೇಕೆ?
ಶೇ.70.4ರಷ್ಟು ಜನರು ಮೋದಿ ತಮ್ಮ ನಿರ್ಧಾರದಿಂದ ಹಿಂಜರಿಯಬಾರದು ಎಂದು ಒಕ್ಕೊರಲಿನಿಂದ ಹೇಳಿದ್ದರೆ, ಶೇ.29.6ರಷ್ಟು ಜನರು ಜನರು ತುಂಬಾ ಕಷ್ಟಪಡುತ್ತಿದ್ದಾರೆ, ಆದ್ದರಿಂದ ಮೋದಿ ತಮ್ಮ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಅಭಿಮತಿಸಿದ್ದಾರೆ.
ಜನಸಾಮಾನ್ಯರು ಪಡುತ್ತಿರುವ ಕಷ್ಟಕ್ಕೆ ಯಾರನ್ನು ಹೊಣೆಗಾರನನ್ನಾಗಿ ಮಾಡಬೇಕು?
ಜನರ ಕಷ್ಟಕ್ಕೆ ಹೊಣೆ ಯಾರು ಎಂಬ ಟ್ರಿಕ್ಕಿ ಪ್ರಶ್ನೆಗೆ, ಶೇ.50.1ರಷ್ಟು ಜನರು ಸರಕಾರವನ್ನು ಹೊಣೆಗಾರರನ್ನಾಗಿ ಮಾಡಿದ್ದಾರೆ. ಇನ್ನು, ಶೇ.29.8ರಷ್ಟು ಜನರು ಆರ್ಬಿಐ ಮೇಲೆ ಹೊಣೆ ಹೊರಿಸಿದ್ದರೆ, ಶೇ.20.1ರಷ್ಟು ಜನರು ಇದು ಬ್ಯಾಂಕಿನ ತಪ್ಪು ಎಂದು ಹೇಳಿದ್ದಾರೆ.
ಡಿಸೆಂಬರ್ ನಿಂದ ಪರಿಸ್ಥಿತಿ ಸುಧಾರಿಸುತ್ತದೆ ಎಂಬ ಮೋದಿ ಅವರ ಮಾತಿನಲ್ಲಿ ನಂಬಿಕೆಯಿದೆಯೆ?
ಈ ಪ್ರಶ್ನೆಗೆ ಶೇ.36ರಷ್ಟು ಮಂದಿ ಇಲ್ಲ, ಮೋದಿ ಅವರ ಮಾತಲ್ಲಿ ನಂಬಿಕೆ ಇಲ್ಲ, ಪರಿಸ್ಥಿತಿ ಸುಧಾರಿಸಲ್ಲ. ಮೋದಿ ಸುಮ್ಮನೆ ಕಾಲಹರಣ ಮಾಡುತ್ತಿದ್ದಾರೆ ಎಂದಿರುವರು. ಇನ್ನು. ಶೇ.64ರಷ್ಟು ಮಂದಿ ಮೋದಿಯಲ್ಲಿ ಪೂರ್ತಿನಂಬಿಕೆಯಿದೆ. ಪರಿಸ್ಥಿತಿ ಖಂಡಿತ ಸುಧಾರಿಸುತ್ತದೆ ಎಂದು ಕಷ್ಟದಲ್ಲಿಯೂ ಮುಗುಳ್ನಕ್ಕಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆಯ ಮೇಲೆ ಅಪನಗದೀಕರಣ ಎಂಥ ಪರಿಣಾಮ ಬೀರಲಿದೆ?
ಶೇ.20.3ರಷ್ಟು ಜನರು ಬಿಜೆಪಿ ಸೋಲುತ್ತದೆ ಎಂದಿದ್ದರೆ, ಶೇ.36.9ರಷ್ಟು ಜನರು ಬಿಜೆಪಿ ಖಂಡಿತ ಚುನಾವಣೆಯಲ್ಲಿ ಜಯ ಸಾಧಿಸುತ್ತದೆ ಎಂದು ನಂಬಿದ್ದಾರೆ. ಇನ್ನು, ಶೇ.42.8ರಷ್ಟು ಜನರು ಜನರ ನೆನಪಿನ ಶಕ್ತಿ ಚಿಕ್ಕದು, ಹಾಗಾಗಿ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.