ಇಂದಿರಾ ಗಾಂಧಿಯನ್ನು ನಿಂದಿಸಿದ್ದ ನಿಕ್ಸನ್ ಹೇಳಿಕೆ ಪರಿಣಾಮ ನೆನಪಿಸಿದ ಸುರ್ಜೇವಾಲ
ನವದೆಹಲಿ, ನವೆಂಬರ್ 13: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ತಮ್ಮ ಹೊಸ ಪುಸ್ತಕ 'ಎ ಪ್ರಾಮಿಸ್ಡ್ ಲ್ಯಾಂಡ್'ನಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರನ್ನು 'ಶಿಕ್ಷಕರನ್ನು ಮೆಚ್ಚಿಸಲು ಬಯಸಿರುವ ವಿದ್ಯಾರ್ಥಿಯಂತೆ, ಆದರೆ ಅಧ್ಯಯನ ಮಾಡಬೇಕಿರುವ ವಿಚಾರದಲ್ಲಿ ಅವರಿಗೆ ಪ್ರಾವೀಣ್ಯ ಸಾಧಿಸಲು ಬೇಕಾದ ಉತ್ಸಾಹ ಮತ್ತು ಅರ್ಹತೆಯ ಕೊರತೆ ಇದೆ' ಎಂದು ಟೀಕಿಸಿದ್ದರು. ಇದು ಬಿಹಾರ ಚುನಾವಣೆಯಲ್ಲಿ ಸೋತ ಸುಣ್ಣವಾಗಿರುವ ಕಾಂಗ್ರೆಸ್ಗೆ ಮತ್ತೊಂದು ಮುಜುಗರ ಉಂಟುಮಾಡಿದೆ.
ರಾಹುಲ್ ಗಾಂಧಿ ಅವರ ಕುರಿತು ಒಬಾಮಾ ವೈಯಕ್ತಿಕ ಗ್ರಹಿಕೆಯು ಬಹಿರಂಗವಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಯಾಗಿದೆ. ಈ ಹಿಂದೆ ಅಮೆರಿಕದ ಅಧ್ಯಕ್ಷರಾಗಿದ್ದವರೊಬ್ಬರು ಭಾರತದ ಮಹಿಳಾ ಪ್ರಧಾನಿ ಬಗ್ಗೆ ಕಟುವಾದ ಟೀಕೆ ಮಾಡಿದ್ದರು. ಆದರೆ ಬಾಂಗ್ಲಾದೇಶ ವಿಮೋಚನೆ ಮತ್ತು ಹಸಿರು ಕ್ರಾಂತಿ ನಡೆಯಿತು ಎಂದು ರಣದೀಪ್ ಸರ್ಜೇವಾಲ ಹೇಳಿದ್ದಾರೆ.
ಬರಾಕ್ ಒಬಾಮ ಹೊಸ ಪುಸ್ತಕದಲ್ಲಿ ರಾಹುಲ್ ಗಾಂಧಿ ಬಗ್ಗೆ ಲೇವಡಿ
'ನಾನು ಮಾಧ್ಯಮ ಮಿತ್ರರಿಗೂ ನೆನಪಿಸಬಹುದೇ? ಒಬ್ಬ ಅಧ್ಯಕ್ಷರು ಭಾರತದ ಮಹಿಳಾ ಪ್ರಧಾನಿಯ ಬಗ್ಗೆ ಲಘುವಾಗಿ ಮಾತನಾಡಿದ್ದರು. ಕಾಂಗ್ರೆಸ್ ಮತ್ತು ಅದರ ಸರ್ಕಾರವು ರಾಷ್ಟ್ರೀಯ ಹಿತಾಸಕ್ತಿಯ ಕೆಲಸದಲ್ಲಿ ಮುಂದುವರಿದು ಬಾಂಗ್ಲಾದೇಶವನ್ನು ವಿಮೋಚನೆಗೊಳಿಸಿತು ಮತ್ತು ಹಸಿರು ಕ್ರಾಂತಿ ನಡೆಯಿತು. ಕಾಂಗ್ರೆಸ್ ಈ ರೀತಿಯ ಸೇವೆಯನ್ನು ಮುಂದುವರಿಸಲಿದೆ' ಎಂದು ಸುರ್ಜೇವಾಲಾ ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ ಅವರು, ಮಾಧ್ಯಮಗಳು ಪ್ರಾಯೋಚಿತ ಕಾರ್ಯಸೂಚಿಯನ್ನು ನಡೆಸುತ್ತಿವೆ. ಪುಸ್ತಕದಲ್ಲಿನ ವ್ಯಕ್ತಿಗಳ ವೈಯಕ್ತಿಕ ಅಭಿಪ್ರಾಯದ ಬಗ್ಗೆ ಪಕ್ಷ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ. ಪ್ರಧಾನಿ ಮೋದಿ ಅವರನ್ನು ಪರೋಕ್ಷವಾಗಿ ಟೀಕಿಸಿದ ಸುರ್ಜೇವಾಲ, ಜನರು ಮತ್ತು ಸಂಸ್ಥೆಗಳು ಹಿಂದೆ ನಾಯಕನೊಬ್ಬನನ್ನು ಮನೋವಿಕೃತ ಮತ್ತು ದೊಡ್ಡ ವಿಭಜಕ ಎಂದು ಆರೋಪಿಸಿದ್ದವು ಎಂದಿದ್ದಾರೆ.
ಲೆಕ್ಕವಿಲ್ಲದಷ್ಟು ಮನೆಗಳನ್ನು ನಾಶಪಡಿಸಿದ ಮೋದಿ ಸರ್ಕಾರ: ರಾಹುಲ್ ಗಾಂಧಿ ಆರೋಪ
ಅಮೆರಿಕದ ಅಧ್ಯಕ್ಷರಾಗಿದ್ದ ನಿಕ್ಸನ್, ಆಗ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರನ್ನು 'ಮುದಿ ಮಾಟಗಾತಿ' ಎಂದು ನಿಂದಿಸಿದ್ದರು. ಬಾಂಗ್ಲಾದೇಶದ ವಿಮೋಚನೆಗಾಗಿ ಭಾರತ ಯುದ್ಧ ಮುಂದುವರಿಸಿದರೆ ಪಾಕಿಸ್ತಾನದ ಪರ ಹೋರಾಡಲು ಅಮೆರಿಕ ಸೈನ್ಯ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದರು. ಆದರೆ ಇಂತಹ ಗೊಡ್ಡು ಬೆದರಿಕೆಗಳಿಗೆ ಮಣಿಯುವುದಿಲ್ಲ ಎಂದು ಇಂದಿರಾ ಗಾಂಧಿ ಖಡಕ್ ಉತ್ತರ ನೀಡಿದ್ದರು. ಪಾಕಿಸ್ತಾನದ ಭಾಗವಾಗಿದ್ದ ಬಾಂಗ್ಲಾದೇಶವನ್ನು ಸ್ವತಂತ್ರಗೊಳಿಸಿದ್ದರು.