ಹಬ್ಬದ ಸಮಯ ದೇಶಾದ್ಯಂತ ಕಟ್ಟೆಚ್ಚರದಿಂದಿರುವಂತೆ ಸೂಚನೆ
ನವದೆಹಲಿ, ಸೆಪ್ಟೆಂಬರ್ 30 : ಅಕ್ಟೋಬರ್ 1ರಿಂದ ಶುರುವಾಗಲಿರುವ ನವರಾತ್ರಿ ಮತ್ತು ತಿಂಗಳ ಕೊನೆಯಲ್ಲಿ ಬರುವ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕಟ್ಟೆಚ್ಚರದಿಂದಿರುವಂತೆ ಗೃಹ ಸಚಿವಾಲಯ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿದೆ. ದೇಶದ ಎಲ್ಲ ಮೆಟ್ರೋಗಳು ಕೂಡ ಇಡೀ ಅಕ್ಟೋಬರ್ ತಿಂಗಳು ಜಾಗೃತರಾಗಿರುವಂತೆ ಸೂಚಿಸಿದೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸೆಪ್ಟೆಂಬರ್ 29ರಂದು ಭಾರತೀಯ ಸೇನೆ 'ಸರ್ಜಿಕಲ್ ಸ್ಟ್ರೈಕ್' ನಡೆಸಿ 38 ಉಗ್ರರನ್ನು ಹತ್ಯೆಗೈದ ನಂತರ, ಉಗ್ರರು ಪ್ರತಿದಾಳಿ ನಡೆಸುವ ಸಾಧ್ಯತೆಗಳಿರುವುದರಿಂದ ಎಲ್ಲ ರಾಜ್ಯಗಳು ಹಬ್ಬದ ಸಂದರ್ಭದಲ್ಲಿ ಅತ್ಯಂತ ಕಟ್ಟೆಚ್ಚರದಿಂದಿರುವಂತೆ ಸೂಚಿಸಿದೆ. [ಸರ್ಜಿಕಲ್ ಸ್ಟ್ರೈಕ್ ನಡೆದದ್ದು ಹೇಗೆ? 10 ಬೆಳವಣಿಗೆಗಳು]
ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿರುವ ಎಲ್ಲ ರಾಜ್ಯಗಳಲ್ಲಿ ಈಗಾಗಲೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮುನ್ನೆಚ್ಚರಿಕೆಯ ದೃಷ್ಟಿಯಿಂದ ಗಡಿಯಿಂದ ಹತ್ತು ಕಿ.ಮೀ. ದೂರದವರೆಗೆ ಇರುವ ಗ್ರಾಮಗಳಲ್ಲಿ ಎಲ್ಲರನ್ನೂ ಸ್ಥಳಾಂತರಿಸಲಾಗಿದೆ. ಶಾಲಾಕಾಲೇಜುಗಳಿಗೂ ರಜಾ ಘೋಷಣೆ ಮಾಡಲಾಗಿದೆ. ಭಾರತ ಮತ್ತು ಪಾಕ್ ಗಡಿಗುಂಟ ಯುದ್ಧದ ವಾತಾವರಣ ಸೃಷ್ಟಿಯಾಗಿದೆ.
ತೀವ್ರವಾಗಿ ಘಾಸಿಗೊಂಡಿರುವ ಪಾಕಿಸ್ತಾನ ಯಾವುದೇ ಕ್ಷಣದಲ್ಲಿ ಭಾರತದ ಮೇಲೆ ತಿರುಗಿಬೀಳುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಈಗಾಗಲೆ ಹೇಳಿದೆ. ಭಾರತದ ಪ್ರಮುಖ ನಗರಗಳಲ್ಲಿ ಸರಣಿ ಹತ್ಯಾಕಾಂಡಗಳನ್ನೂ ಅಲ್ಲಗಳೆಯುವಂತಿಲ್ಲ ಎಂದು ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ. [ಸರ್ಜಿಕಲ್ ಸ್ಟ್ರೈಕ್ : ಮೋದಿಯನ್ನು ಅಭಿನಂದಿಸಿದ ರಾಹುಲ್ ಗಾಂಧಿ]
ಹೆಚ್ಚಾಗಿ ಜನನಿಬಿಡ ಪ್ರದೇಶಗಳಲ್ಲಿ, ಮಾಲ್ ಗಳಲ್ಲಿ, ಬಸ್ ರೈಲು ಮತ್ತು ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸುವಂತೆ ಸೂಚಿಸಲಾಗಿದೆ. ಭಾರತದ ಗಡಿಯಲ್ಲಿ ಸೇನಾ ಕ್ಯಾಂಪ್ ಮತ್ತು ಚೆಕ್ ಪೋಸ್ಟ್ ಗಳಲ್ಲಿಯೂ ಹದ್ದಿನ ಕಣ್ಣಿನಿಂದ ಎಲ್ಲರ ಚಲನವಲನಗಳ ಮೇಲೆ ನಿಗಾವಹಿಸಲು ಹೇಳಲಾಗಿದೆ.
ದೇಶದಲ್ಲಿ ಅಶಾಂತಿ ಹಬ್ಬಿಸಲು ತುದಿಗಾಲ ಮೇಲೆ ನಿಂತಿರುವ ಕೆಲ ಸಂಘಟನೆಗಳ ಮೇಲೆಯೂ ಒಂದು ಕಣ್ಣಿಡುವಂತೆ ಗುಪ್ತಚರ ಇಲಾಖೆ ಗೃಹ ಮಂತ್ರಾಲಯಕ್ಕೆ ಮಾಹಿತಿ ನೀಡಿದ್ದು, ಯಾವುದೇ ಘಟನೆಯನ್ನು ಸಮರ್ಥವಾಗಿ ಎದುರಿಸಲು ಸನ್ನದ್ಧವಾಗಿರಬೇಕೆಂದು ಸ್ಪಷ್ಟ ಸೂಚನೆ ನೀಡಲಾಗಿದೆ. [ಗಡಿ ನಿಯಂತ್ರಣಾ ರೇಖೆ ದಾಟಿ ಉಗ್ರರ ಸದ್ದಡಗಿಸಿದ ಭಾರತೀಯ ಸೇನೆ]