ಅತ್ತ ಗಡಿ ಕಾಯುತ್ತಿರುವ ವೀರ ಯೋಧರು: ಇತ್ತ ಮೂರೂ ಬಿಟ್ಟ ರಾಜಕೀಯ!
ದೇಶದ ಭದ್ರತೆಯ ವಿಚಾರದಲ್ಲಿ ನಾವೆಲ್ಲಾ ಒಂದೇ ಎಂದು ಪರದೆಯ ಮುಂದೆ ಹೇಳಿಕೆ ನೀಡುವ ರಾಜಕೀಯ ಧುರೀಣರು, ಪರದೆಯ ಹಿಂದೆ ಹುತಾತ್ಮ ಯೋಧರ ವಿಚಾರದಲ್ಲೂ ರಾಜಕೀಯ ಲಾಭ/ನಷ್ಟದ ಲೆಕ್ಕಾಚಾರ ಹಾಕುವವರು ಎನ್ನುವುದು ಮಗುದೊಮ್ಮೆ ಸಾಬೀತಾಗಿದೆ.
ಪಾಕ್ ಆಕ್ರಮಿತ ಕಾಶ್ಮೀರದ ಭಾಗದಲ್ಲಿ ಸರ್ಜಿಕಲ್ ದಾಳಿ ನಡೆದಿದ್ದು ಹೌದು ಎಂದು ಪಾಕ್ ಮಿಲಿಟರಿ ವಿಶೇಷ ದಳದ ಅಧಿಕಾರಿ ಸ್ಪಷ್ಟ ಪಡಿಸಿದ್ದರೂ, ಜೊತೆಗೆ ದಾಳಿಯ ವಿಡಿಯೋ ಬಿಡುಗಡೆ ಮಾಡಲು ಸಿದ್ದ ಎಂದು ಭಾರತದ ಮಿಲಿಟರಿ ಮುಖ್ಯಸ್ಥರು ಹೇಳಿದ್ದರೂ, ದಾಳಿ ನಡೆದಿರುವ ಬಗ್ಗೆ 'ರಾಜಕೀಯ ಸಂಶಯ' ಮುಂದುವರಿದಿದೆ. (ಸೈನಿಕರ ಸಾವಿನ ಹಿಂದೆ ಬಚ್ಚಿಟ್ಟುಕೊಂಡಿದ್ದಾರೆ ಮೋದಿ)
ಸೀಮಿತ ದಾಳಿ ನಡೆಸಿ ಪ್ರಧಾನಿಗಳು ಡೈನಾಮಿಕ್ ನಿರ್ಧಾರ ತೆಗೆದುಕೊಂಡಿದ್ದಾರೆಂದು ಅವರಿಗೆ ಸೆಲ್ಯೂಟ್ ಹೊಡೆದಿದ್ದ ದೆಹಲಿ ಸಿಎಂ ಕೇಜ್ರಿವಾಲ್, ಕೆಲಸವಿಲ್ಲದ ಬಡಿಗ ಇನ್ನೇನೋ ಮಾಡಿದ ಎನ್ನುವ ಗಾದೆಯ ಮಾತಿನಂತೆ, ದಾಳಿಯ 'ಸಾಕ್ಷಿ' ಬಿಡುಗಡೆ ಮಾಡಿ ಎನ್ನುವ ಮೂಲಕ ಸೈನಿಕರನ್ನು ಅವಮಾನಿಸುವ ಚರ್ಚೆಗೆ ನಾಂದಿ ಹಾಡಿದರು.
ರಾಜಕೀಯ ಮಾಡುವುದಕ್ಕೆ ಯಾವುದನ್ನು ವೇದಿಕೆಯಾಗಿ ಬಳಸಿಕೊಳ್ಳಬೇಕು ಎನ್ನುವ ಕನಿಷ್ಟ ಅರಿವಿಲ್ಲದ ಶತಮಾನಗಳ ಇತಿಹಾಸವಿರುವ ಪಕ್ಷದ ಮುಖಂಡರು, ಮಾತಾಡಿದ್ದೇ ಮಾತಾಡಿದ್ದು.. ಒಬ್ಬರ ಮೇಲೆ ಒಬ್ಬರು ಪೈಪೋಟಿಗೆ ಬಿದ್ದಂತೆ ಹೇಳಿಕೆ ನೀಡಿ ಸೈನಿಕರ ಜೊತೆ ಭಾರತೀಯರೂ ಅಸಹ್ಯ ಪಡುವಂತೆ ಮಾಡಿದರು.
ಪುಂಖಾನುಪುಂಖವಾಗಿ ಇವರು ನೀಡುತ್ತಿದ್ದ ಹೇಳಿಕೆಗಳು, ಎಲ್ಲಿ ಸರ್ಜಿಕಲ್ ದಾಳಿಯ ನಂತರ ಪ್ರಧಾನಿ ಮೋದಿಯ ಜನಪ್ರಿಯತೆ ಇನ್ನಷ್ಟು ಹೆಚ್ಚಲಿದೆಯೋ, ದಶಕಗಳಿಂದ ಅಧಿಕಾರದ ರುಚಿ ಅನುಭವಿಸಿ ಇನ್ನೆಷ್ಟು ದಿನ ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವ ಪರಿಸ್ಥಿತಿ ಬರಬಹೊದೋ ಎನ್ನುವ ಭಯ ಇವರುಗಳಿಗೆ ಕಾಡಿದಂತಿರುವುದು ಮೇಲ್ನೋಟಕ್ಕೆ ಕಾಣುವ ಸತ್ಯ. (ಭಾರತ, ಪಾಕ್ ಮಧ್ಯೆ ಯುದ್ಧ ನಡೆಯುತ್ತೆ, ಭವಿಷ್ಯ)
ಸರ್ಜಿಕಲ್ ದಾಳಿಯ ವಿಷಯದಲ್ಲಿ ಯಾವುದೇ ಎದೆ ಉಬ್ಬಿಸುವ ಹೇಳಿಕೆಯನ್ನು ನೀಡಬಾರದು ಎನ್ನುವ ಪ್ರಧಾನಿ ಮೋದಿಯ ಖಡಕ್ ಆದೇಶದಿಂದಾಗಿ, ಬಿಜೆಪಿ ಮುಖಂಡರಿಂದ ಈ ಬಗ್ಗೆ ಹೆಚ್ಚಿನ ಹೇಳಿಕೆಗಳು ಬರುತ್ತಿಲ್ಲ. ಸರ್ಜಿಕಲ್ ದಾಳಿಯ ವಿಷಯದಲ್ಲಿ ರಾಜಕೀಯ ಮುಖಂಡರ ಕೆಲವೊಂದು ಹೇಳಿಕೆಗಳು, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..
ಬಿಜೆಪಿ ರಾಷ್ಟ್ರಾಧ್ಯಕ್ಷ
ತಮ್ಮ ಜೀವವನ್ನೇ ಮುಡಿಪಾಗಿಟ್ಟು ದೇಶವನ್ನು ಕಾಯುವ ಯೋಧರ ಬೆಲೆ ನಿಮಗೆ ತಿಳಿದಿದೆಯಾ? ಸೈನಿಕರ ರಕ್ತ ಮಾರಾಟದ ವಸ್ತು ಎಂದು ಕೊಂಡಿದ್ದೀರಾ- ಅಮಿತ್ ಶಾ
ಎಐಸಿಸಿ ಉಪಾಧ್ಯಕ್ಷ
ನಮ್ಮ ಸೈನಿಕರು ಪ್ರಾಣ ತ್ಯಾಗ ಮಾಡಿದ್ದಾರೆ. ಕಾಶ್ಮೀರದಲ್ಲಿ ಪ್ರಾಣ ನೀಡಿದ್ದಾರೆ. ಅವರು ಭಾರತಕ್ಕಾಗಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದಾರೆ. ಅವರ ಸಾವಿನ ಹಿಂದೆ ನೀವು ಬಚ್ಚಿಟ್ಟುಕೊಂಡಿದ್ದೀರಿ. ಅವರ ಸಾವಿನ ಮಾರಾಟ ಮಾಡ್ತಿದ್ದೀರಿ ಎಂದು ಮೋದಿ ವಿರುದ್ದ ರಾಹುಲ್ ಕಿಡಿ.
ಕೇಂದ್ರ ಗೃಹ ಸಚಿವ
ಸರ್ಜಿಕಲ್ ಸ್ಟ್ರೈಕ್ ನಡೆದಿದೆಯೋ, ಇಲ್ಲವೋ ಎನ್ನುವುದನ್ನು ಯಾರಿಗೂ ರುಜುವಾತು ಪಡಿಸುವ ಅವಶ್ಯಕತೆಯಿಲ್ಲ. ಹಾಗೆ ಮಾಡಿದ್ದಲ್ಲಿ ಸೈನಿಕರನ್ನು ಅವಮಾನಿಸಿದಂತೆ. ಕಾಂಗ್ರೆಸ್ಸಿನವರು ಜವಾಬ್ದಾರಿಯುತವಾಗಿ ನಡೆದುಕೊಳ್ಳಲಿ - ರಾಜನಾಥ್ ಸಿಂಗ್
ಮಹಾರಾಷ್ಟ್ರದ ಕಾಂಗ್ರೆಸ್ ಮುಖಂಡ
ಪಾಕ್ ಗಡಿ ಭಾಗದಲ್ಲಿ ಭಾರತದ ಯೋಧರು ನಡೆಸಿದ ಸೀಮಿತ ದಾಳಿ (ಸರ್ಜಿಕಲ್ ಸ್ಟ್ರೈಕ್) ಬರೀ ಕಟ್ಟುಕಥೆ, ಸುಳ್ಳಿನ ಕಂತೆ. ರಾಜಕೀಯ ಲಾಭ ಗಿಟ್ಟಿಸಿಕೊಳ್ಳಲು ಬಿಜೆಪಿ ಇಂಥ ಪ್ರಚಾರ ಮಾಡುತ್ತಿದೆ - ಕಾಂಗ್ರೆಸ್ ಮುಖಂಡ ಸಂಜಯ್ ನಿರುಪಮ್ ಗಂಭೀರ ಹೇಳಿಕೆ.
ಎಐಸಿಸಿ ವಕ್ತಾರ
ಅಗತ್ಯಕ್ಕೆ ಅನುಗುಣವಾಗಿ ಸೇನಾ ಪಡೆಗಳು ಈ ಹಿಂದೆಯೂ ದಾಳಿ ನಡೆಸಿವೆ. ಉಗ್ರರ ಶಿಬಿರಗಳ ಮೇಲೆ ನಿರ್ದಿಷ್ಟ ದಾಳಿ ನಡೆದಿರುವುದು, ಸೇನೆ ನಡೆಸಿದ ಈ ಮಾದರಿಯ ಮೊದಲ ಕಾರ್ಯಾಚರಣೆ ಎನ್ನುವುದನ್ನು ನಾವು ಒಪ್ಪುವುದಿಲ್ಲ - ಕಾಂಗ್ರೆಸ್ ಮುಖಂಡ ಆನಂದ ಶರ್ಮಾ.
ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ
ಈ ರೀತಿಯ ದಾಳಿ ಹಿಂದೆ ಕೂಡಾ ನಡೆದಿತ್ತು ಎಂದು ಜನರಲ್ ಬಿಕ್ರಂ ಸಿಂಗ್ ಕೂಡಾ ಖಚಿತ ಪಡಿಸಿದ್ದಾರೆ. ಬಿಜೆಪಿ ರಾಜಕೀಯ ಲಾಭಕ್ಕೆ ಇದನ್ನು ಬಳಸಿಕೊಳ್ಳುತ್ತಿದೆ, ಸರ್ಜಿಕಲ್ ಸ್ಟ್ರೈಕಿನ ಸಾಕ್ಷಿ ಬಿಡುಗಡೆ ಮಾಡಲಿ - ಪಿ ಚಿದಂಬರಂ.
ಅರವಿಂದ್ ಕೇಜ್ರಿವಾಲ್
ನನ್ನ ಮತ್ತು ಪ್ರಧಾನಿಗಳ ನಡುವೆ ಭಿನ್ನಾಭಿಪ್ರಾಯವಿದೆ. ಆದರೆ ಸರ್ಜಿಕಲ್ ದಾಳಿಯ ವಿಚಾರದಲ್ಲಿ ನಾನು ಮತ್ತು ಇಡೀ ದೇಶ ಮೋದಿ ಬೆನ್ನಿಗಿದೆ. ಅವರ ನಿರ್ಧಾರ ಪ್ರಶಂಸನಾರ್ಹ, ಅವರಿಗೆ ನನ್ನದೊಂದು ಸೆಲ್ಯೂಟ್. ಪಾಕಿಸ್ತಾನ ತನ್ನ ಮಾಧ್ಯಮಗಳ ಮೂಲಕ ವಿಶ್ವಕ್ಕೆ ಸುಳ್ಳು ಸಂದೇಶ ನೀಡುತ್ತಿದೆ. ಪಾಕಿಸ್ತಾನದ ಮಾಡುತ್ತಿರುವ ಈ ಅಪಪ್ರಚಾರದಿಂದ ನನ್ನ ರಕ್ತ ಕುದಿಯುತ್ತಿದೆ, ಪಾಕ್ ಅಪಪ್ರಚಾರಕ್ಕೆ ಪ್ರಧಾನಿಗಳು ಉತ್ತರ ನೀಡಬೇಕಿದೆ - ಕೇಜ್ರಿವಾಲ್.
ಬಾಲಿವುಡ್ ನಟ
ಪಾಕಿಸ್ತಾನದ ಕಲಾವಿದರು ಭಯೋತ್ಪಾದಕರಲ್ಲ ಅವರು ಕಲಾವಿದರು. ಎರಡು ದೇಶದ ನಡುವೆ ಬೇಕಾಗಿರುವುದು ಸೌಹಾರ್ದತೆ ಮತ್ತು ಶಾಂತಿಯೇ ಹೊರತು ಯುದ್ದವಲ್ಲ. ಆದರೆ, ಉರಿಯಲ್ಲಿ ನಮ್ಮ ಸೈನಿಕರ ಮೇಲೆ ದಾಳಿ ನಡೆದ ನಂತರ, ತಕ್ಕ ಪಾಠ ಕಲಿಸಲೇಬೇಕಾಗಿತ್ತು, ಯಾಕೆಂದರೆ ಅವರು ಉಗ್ರರು - ಸಲ್ಮಾನ್ ಖಾನ್.
ಮತ್ತೋರ್ವ ಹಿಂದಿ ನಟ
ಪಾಕಿಸ್ತಾನದ ಕಲಾವಿದರೆಲ್ಲಾ ಆಮೇಲೆ, ಮೊದಲು ನಮ್ಮ ದೇಶ ಮತ್ತು ನಮ್ಮ ಸೈನಿಕರು. ಅವರ ಮುಂದೆ ನಾವೆಲ್ಲಾ ನಗಣ್ಯರು, ಪಾಕ್ ಕಲಾವಿದರನ್ನು ಸಮರ್ಥಿಸಿಕೊಳ್ಳುತ್ತಿರುವವರ ಬಗ್ಗೆ ಹೆಚ್ಚಿನ ಚರ್ಚೆ ಅನಗತ್ಯ -ನಾನಾ ಪಟೇಕರ್
ಸಲ್ಮಾನ್ ಹೇಳಿಕೆಗೆ ಅಕ್ಷಯ್ ತಿರುಗೇಟು
ಸೈನಿಕರ ವಿಚಾರದಲ್ಲಿ ಮೂರ್ಖತನದ ಚರ್ಚೆಯನ್ನು ಮೊದಲು ನಿಲ್ಲಿಸಬೇಕು. ಈಗ ಸೇನೆ ಬಗ್ಗೆ ಚಿಂತಿಸಬೇಕಾಗಿದೆಯೇ ಹೊರತು, ಕಲಾವಿದರ ನಿಷೇಧದ ವಿಚಾರವಲ್ಲ ಎಂದು ಸಲ್ಮಾನ್ ಖಾನ್ ಹೇಳಿಕೆಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ತಿರುಗೇಟು ನೀಡಿದ್ದಾರೆ.