ಯುಜಿಸಿ ಪರೀಕ್ಷೆ: ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಏನಿದೆ? ಸಮಗ್ರ ವಿವರ ಇಲ್ಲಿದೆ
ನವದೆಹಲಿ, ಆಗಸ್ಟ್ 28: ರಾಜ್ಯ ಸರ್ಕಾರಗಳು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೆಯೇ ಅವರನ್ನು ತೇರ್ಗಡೆ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿದೆ. ಯುಜಿಸಿ ಆದೇಶದಂತೆ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲೇಬೇಕು ಎಂದು ಅದು ಸೂಚನೆ ನೀಡಿದೆ. ಇದರಿಂದ ಕೊರೊನಾ ವೈರಸ್ ಭೀತಿಯ ನಡುವೆ ಪರೀಕ್ಷೆ ಬರೆಯದೆಯೇ ಪದವಿ ಪೂರೈಸಬಹುದೆಂಬ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳ ಬಯಕೆಗೆ ತಣ್ಣೀರೆರಚಿದಂತಾಗಿದೆ.
ಕೋವಿಡ್ ಭೀತಿಯ ನಡುವೆಯೇ ಸೆ. 30ರ ಒಳಗೆ ಅಂತಿಮ ವರ್ಷದ ಪದವಿ ಪರೀಕ್ಷೆಗಳನ್ನು ನಡೆಸುವಂತೆ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳಿಗೆ ಯುಜಿಸಿ ಮಾರ್ಗದರ್ಶಿ ಸೂಚನೆ ನೀಡಿತ್ತು. ಅದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಅನೇಕರು ಅರ್ಜಿ ಸಲ್ಲಿಸಿದ್ದರು. ಇದನ್ನು ನ್ಯಾಯಾಲಯ ತಿರಸ್ಕರಿಸಿದೆ. ಆದರೆ ಕೊರೊನಾ ವೈರಸ್ ಸಂಕಷ್ಟ ತೀವ್ರವಾಗಿರುವುದರಿಂದ ಸೆ. 30ರ ನಂತರದ ದಿನಾಂಕಗಳಲ್ಲಿ ಪರೀಕ್ಷೆ ಆಯೋಜಿಸಲು ರಾಜ್ಯ ಸರ್ಕಾರ ಕೇಳಬಹುದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಸ್ನಾತಕೋತ್ತರ ಪದವಿ ಪರೀಕ್ಷೆ ರದ್ದುಗೊಳಿಸಲು 'ಇದೊಂದು' ಕಾರಣ ಸಾಕಾ?
ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆ ಅವರ ಯುವ ಸೇನಾ ಸೇರಿದಂತೆ ಹಲವಾರು ಅರ್ಜಿದಾರರು ಅಂತಿಮ ವರ್ಷದ ಪರೀಕ್ಷೆಗಳನ್ನು ರದ್ದುಪಡಿಸುವಂತೆ ಕೋರಿದ್ದರು. ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್. ಸುಭಾಷ್ ರೆಡ್ಡಿ ಮತ್ತು ಎಂಆರ್ ಶಾ ಅವರನ್ನು ಒಳಗೊಂಡ ನ್ಯಾಯಪೀಠ, ಎರಡು ದಿನಗಳ ಸುದೀರ್ಘ ವಿಚಾರಣೆ ಬಳಿಕ ಆಗಸ್ಟ್ 28ರಂದು ತೀರ್ಪು ಕಾಯ್ದಿರಿಸಿತ್ತು. ಮುಂದೆ ಓದಿ...
ವಿವಿಧ ಅರ್ಜಿಗಳು
ಅಂತಿಮ ವರ್ಷದ ಪದವಿ ಪರೀಕ್ಷೆಗಳ ರದ್ದತಿ ವಿಚಾರದಲ್ಲಿ ಸುಪ್ರೀಂಕೋರ್ಟ್ ಮಧ್ಯ ಪ್ರವೇಶ ಮಾಡುವಂತೆ ಕೋರಿ ದೇಶದ ವಿವಿಧ ಭಾಗಗಳ 11 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಮಹಾರಾಷ್ಟ್ರ ಸರ್ಕಾರದ ಪರವಾಗಿ ಯುವಸೇನಾ ಹಾಗೂ ಒಬ್ಬ ಕಾನೂನು ವಿದ್ಯಾರ್ಥಿ ಕೂಡ ಅರ್ಜಿ ಸಲ್ಲಿಸಿದ್ದರು. ಈ ವಿಚಾರದ ಬಗ್ಗೆ ಸುಪ್ರೀಂಕೋರ್ಟ್ ಹಲವು ವಿಚಾರಣೆಗಳನ್ನು ನಡೆಸಿತ್ತು.
ಪರೀಕ್ಷೆ ರದ್ದುಗೊಳಿಸಿದ್ದ ಮಹಾರಾಷ್ಟ್ರ
ಮಹಾರಾಷ್ಟ್ರ ಸರ್ಕಾರವು ಪದವಿ ಪರೀಕ್ಷೆಗಳನ್ನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಯುಜಿಸಿಗಿಂತಲೂ ರಾಜ್ಯಗಳ ವಿಪತ್ತು ನಿರ್ವಹಣಾ ಕಾಯ್ದೆಗೆ ಆದ್ಯತೆ ನೀಡಲಾಗುತ್ತದೆ. ಹೀಗಾಗಿ ರಾಜ್ಯಗಳು ಪರೀಕ್ಷೆಗಳನ್ನು ರದ್ದುಗೊಳಿಸಲು ಅವಕಾಶವಿದೆ. ಆದರೆ ಅಂತಿಮ ವರ್ಷದ ಪರೀಕ್ಷೆಗಳನ್ನು ನಡೆಸದೆಯೇ ಪದವಿ ಪ್ರಮಾಣ ಪತ್ರ ನೀಡಲು ಸಾಧ್ಯವೇ ಇಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಯುಜಿಸಿ ಪರೀಕ್ಷೆಗಳ ಪರಿಷ್ಕೃತ ದಿನಾಂಕ ಪ್ರಕಟಿಸಿದ NTA
ಪ್ರಮೋಟ್ ಮಾಡಲು ಸಾಧ್ಯವಿಲ್ಲ
* 2020ರ ಜುಲೈ 6ರಂದು ಯುಜಿಸಿ ಹೊರಡಿಸಿದ್ದ ಪರಿಷ್ಕೃತ ಮಾರ್ಗದರ್ಶಿಯನ್ನು ರದ್ದುಗೊಳಿಸುವಂತೆ ಕೋರಲಾಗಿತ್ತು. ಇದನ್ನು ತಿರಸ್ಕರಿಸಿರುವ ನ್ಯಾಯಾಲಯ ಯುಜಿಸಿ ಆದೇಶವನ್ನು ಎತ್ತಿಹಿಡಿದಿದೆ.
* ಅಂತಿಮ ವರ್ಷ ಅಥವಾ ಸೆಮೆಸ್ಟರ್ನ ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸದೆಯೇ ಪ್ರಮೋಟ್ (ಉತ್ತೀರ್ಣ) ಮಾಡಲು ಸಾಧ್ಯವಿಲ್ಲ.
ಡಿಎಂ ಕಾಯ್ದೆಯಡಿ ಚರ್ಚಿಸಬಹುದು
* ಕೊರೊನಾ ವೈರಸ್ ತೀವ್ರವಾಗಿರುವುದರಿಂದ ಯುಜಿಸಿ ನಿಗದಿಪಡಿಸಿರುವ ಸೆ. 30ರ ದಿನಾಂಕದಾಚೆಗೆ ಅಂತಿಮ ಪರೀಕ್ಷೆಗಳನ್ನು ನಿಗದಿಪಡಿಸಲು ರಾಜ್ಯ ಸರ್ಕಾರಗಳ ವಿಪತ್ತು ನಿರ್ವಹಣಾ ಪ್ರಾಧಿಕಾರಗಳು ವಿಪತ್ತು ನಿರ್ವಹಣಾ ಕಾಯ್ದೆಯಡಿ ಯುಜಿಸಿ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬಹುದು.
ಕರ್ನಾಟಕದ 1 ನಕಲಿ ವಿವಿ ಸೇರಿ 23 ಅನಧಿಕೃತ ಸಂಸ್ಥೆ ಪಟ್ಟಿ ಬಹಿರಂಗ
ಹಿಂದಿನ ಫಲಿತಾಂಶ ಪರಿಗಣಿಸಲಾಗದು
* ಅಂತಿಮ ವರ್ಷದ ವಿದ್ಯಾರ್ಥಿಗಳ ಹಿಂದಿನ ಸೆಮೆಸ್ಟರ್ ಅಥವಾ ಹಿಂದಿನ ವರ್ಷದ ಪರೀಕ್ಷಾ ಫಲಿತಾಂಶ ಹಾಗೂ ಆಂತರಿಕ ಪರೀಕ್ಷೆಗಳ ಆಧಾರದಲ್ಲಿ ಅವರನ್ನು ಉತ್ತೀರ್ಣ ಮಾಡುವ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ನಿರ್ಧಾರವು ಅವರ ವ್ಯಾಪ್ತಿ/ಅಧಿಕಾರವನ್ನು ಮೀರಿದ್ದು. ಇಲ್ಲಿ ಯುಜಿಸಿಯ ಮಾರ್ಗದರ್ಶಿಗಳನ್ನೇ ಪಾಲಿಸಬೇಕಾಗುತ್ತದೆ.
ಗಡುವು ವಿಸ್ತರಿಸಲು ಅವಕಾಶ
* ಒಂದು ವೇಳೆ ಯಾವುದೇ ರಾಜ್ಯ/ಕೇಂದ್ರಾಡಳಿತ ಪ್ರದೇಶ ಅಂತಿಮ ಸೆಮೆಸ್ಟರ್/ವರ್ಷದ ಪರೀಕ್ಷೆಯನ್ನು ನಡೆಸಲು ಸಾಧ್ಯವಾಗದೆ ಇದ್ದಲ್ಲಿ ಸೆ. 30ರ ಗಡುವನ್ನು ಮುಂದೂಡಿ ದಿನಾಂಕ ವಿಸ್ತರಣೆ ಮಾಡುವಂತೆ ಯುಜಿಸಿಗೆ ಪತ್ರ ಬರೆಯಬಹುದು. ಇದರ ಪರಿಗಣನೆ ಯುಜಿಸಿ ವಿವೇಚನೆಗೆ ಬಿಟ್ಟಿದ್ದು.
ನಾಲ್ಕು ರಾಜ್ಯಗಳ ಆಕ್ಷೇಪ
* ಪರಿಸ್ಥಿತಿಗಳು ಸೂಕ್ತವಾಗಿರದೆ ಹೋದಾಗ ಅಂತಿಮ ವರ್ಷದ ಪರೀಕ್ಷೆಗಳನ್ನು ರದ್ದುಗೊಳಿಸಬಹುದು ಎಂದು ಅರ್ಜಿದಾರರು ವಾದಿಸಿದ್ದರು.
* ಅರ್ಜಿಗಳ ಮೂಲಕ ಪ್ರತಿಕ್ರಿಯೆ ನೀಡಿದ್ದ ನಾಲ್ಕು ರಾಜ್ಯಗಳು, ತಮ್ಮ ರಾಜ್ಯಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳು ತೀವ್ರವಾಗುತ್ತಿರುವುದರಿಂದ ಪರೀಕ್ಷೆಗಳನ್ನು ನಡೆಸಲು ಅನುಮತಿ ನೀಡುವುದಿಲ್ಲ ಎಂದಿದ್ದವು.
ರಾಜ್ಯಗಳಿಗೆ ಅಧಿಕಾರವಿಲ್ಲ
* ಪರೀಕ್ಷೆಗಳನ್ನು ರದ್ದುಗೊಳಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿಲ್ಲ ಎಂದು ಯುಜಿಸಿ ಪ್ರತಿಪಾದಿಸಿತ್ತು.
* ಪದವಿಗಳನ್ನು ನೀಡುವುದು ಯುಜಿಸಿ. ಹೀಗಾಗಿ ಪರೀಕ್ಷೆಗಳನ್ನು ನಡೆಸಲು ಆದೇಶ ನೀಡುವ ಅಧಿಕಾರ ಯುಜಿಸಿಗೆ ಮಾತ್ರವೇ ಇದೆ.
* ರಾಜ್ಯ ಸರ್ಕಾರಗಳು ಪರೀಕ್ಷೆಗಳನ್ನು ಮುಂದೂಡವಂತೆ ಕೇಳಿಕೊಳ್ಳಬಹುದು. ಆದರೆ ಯಾವುದೇ ಪರೀಕ್ಷೆಗಳನ್ನು ನಡೆಸದೆಯೇ ಯಾವ ಪದವಿಗಳನ್ನೂ ನೀಡಲಾಗುವುದಿಲ್ಲ ಎಂದು ಯುಜಿಸಿ ವಾದಿಸಿತ್ತು.