OROP: ಕೇಂದ್ರ ಸರ್ಕಾರದ ವಾದವನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್
ನವದೆಹಲಿ, ಮಾರ್ಚ್ 16: ಭಾರತದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಿದ "ಒಂದು ಶ್ರೇಣಿ ಒಂದು ಪಿಂಚಣಿ"(OROP) ಯೋಜನೆ ಅನ್ನು ಬುಧವಾರ ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಕಳೆದ 2015ರ ನವೆಂಬರ್ 7ರಂದು ಜಾರಿಗೊಳಿಸಿದ ನೀತಿಯಲ್ಲಿ ಯಾವುದೇ ಲೋಪ ಕಂಡು ಬರುತ್ತಿಲ್ಲ ಎಂದಿದೆ.
ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ಸೂರ್ಯ ಕಾಂತ್ ಹಾಗೂ ವಿಕ್ರಮ್ ನಾಥ್ ಅವರಿದ್ದ ತ್ರಿಸದಸ್ಯ ಪೀಠ ನೀಡಿದ ಆದೇಶ ಸರ್ಕಾರಕ್ಕೆ ಕೊಂಚ ನೆಮ್ಮದಿ ತಂದಿದೆ. ಏಕೆಂದರೆ ಒಂದೇ ಶ್ರೇಣಿಯಲ್ಲಿರುವ ಎಲ್ಲ ವ್ಯಕ್ತಿಗಳೂ ಒಂದೇ ಬಗೆಯ ಪಿಂಚಣಿ ಪಡೆಯಬೇಕು ಎಂಬುದಕ್ಕೆ ಯಾವುದೇ ಕಾನೂನಾತ್ಮಕ ಬೆಂಬಲವಿಲ್ಲ ಎಂದು ಕೋರ್ಟ್ ಹೇಳಿದೆ.
ಏಕಶ್ರೇಣಿ ಏಕ ಪಿಂಚಣಿ ಯೋಜನೆ ಜಾರಿಗೊಳಿಸಿದ ಎನ್ ಡಿಎ
ಒಆರ್ಓಪಿ ಯೋಜನೆ ಕೇಂದ್ರ ಸರ್ಕಾರವು ತೆಗೆದುಕೊಂಡಿರುವ ನೀತಿಯ ನಿರ್ಧಾರವಾಗಿದೆ. ಆ ನಿರ್ಧಾರ ಸರ್ಕಾರದ ನೀತಿನಿರೂಪಣಾ ಅಧಿಕಾರದ ವ್ಯಾಪ್ತಿಯೊಳಗೆ ಇದೆ. ಇದರಲ್ಲಿ ನಮಗೆ ಯಾವುದೇ ಬಗೆಯ ಸಾಂವಿಧಾನಿಕ ಲೋಪ ಕಂಡು ಬರುತ್ತಿಲ್ಲ ಎಂದು ಕೋರ್ಟ್ ಹೇಳಿದೆ. ಅರ್ಜಿದಾರರು ವಾದಿಸಿದಂತೆ ಒಆರ್ಒಪಿ ಕುರಿತ ವ್ಯಾಖ್ಯಾನ ಮನಬಂದಂತೆ ಇದೆ ಕಂಡು ಬಂದಿಲ್ಲ. "ಜುಲೈ 1, 2019 ರಿಂದ ಮರುನಿಗದಿ ಪ್ರಕ್ರಿಯೆ ಕೈಗೊಳ್ಳಬೇಕು ಮತ್ತು 3 ತಿಂಗಳೊಳಗೆ ಸೇನಾ ಸಿಬ್ಬಂದಿಗೆ ಬಾಕಿ ನೀಡಬೇಕು," ಎಂದು ಪೀಠ ಆದೇಶಿಸಿದೆ.
ಐದು ವರ್ಷಕ್ಕೊಮ್ಮೆ ಪಿಂಚಣಿ ಮೊತ್ತ ಮರುನಿಗದಿ:
ಒಂದು ಶ್ರೇಣಿ, ಒಂದು ಪಿಂಚಣಿ ಯೋಜನೆಯು ಜುಲೈ 1, 2014ರ ಕಡಿತದ ದಿನಾಂಕದಿಂದ ಪಿಂಚಣಿದಾರರಿಗೆ ಪ್ರಯೋಜನಗಳು ಪರಿಣಾಮಕಾರಿ ಸಿಗಲಿವೆ ಎಂದು ಷರತ್ತು ವಿಧಿಸಿದೆ. ಹಿಂದಿನ ಪಿಂಚಣಿದಾರರ ಪಿಂಚಣಿಗಳನ್ನು 2013ರ ಕ್ಯಾಲೆಂಡರ್ ವರ್ಷದಲ್ಲಿ ನಿವೃತ್ತಿ ವೇತನದಾರರ ಪಿಂಚಣಿ ಆಧಾರದ ಮೇಲೆ ಮರು-ನಿಗದಿಗೊಳಿಸಲಾಗುತ್ತದೆ. ಹೆಚ್ಚುವರಿ ಸಾಲಿಸಿಟರ್-ಜನರಲ್ ಎನ್. ವೆಂಕಟರಾಮನ್ ಪ್ರತಿನಿಧಿಸುವ ಕೇಂದ್ರವು "ಎಲ್ಲಾ ಪಿಂಚಣಿದಾರರ ಪಿಂಚಣಿಗಳನ್ನು ರಕ್ಷಿಸಲಾಗುವುದು" ಎಂದು ಭರವಸೆ ನೀಡಿತ್ತು. ಅಂತಿಮವಾಗಿ, ಯೋಜನೆಯು ಪ್ರತಿ ಐದು ವರ್ಷಗಳಿಗೊಮ್ಮೆ ಪಿಂಚಣಿ ಮರುನಿಗದಿ ಮಾಡುವುದನ್ನು ಕಡ್ಡಾಯಗೊಳಿಸಿತು.
ಅರ್ಜಿ ಸಲ್ಲಿಸಿದ್ದು ಯಾರು?
ಒಂದೇ ಶ್ರೇಣಿಯ ಸಿಬ್ಬಂದಿಗೆ ವಿವಿಧ ಪಿಂಚಣಿಯನ್ನು ನೀಡಲಾಗುತ್ತದೆ ಎಂದು ದೂರಿ ಹಿರಿಯ ವಕೀಲ ಹುಝೆಫಾ ಅಹ್ಮದಿ ಮತ್ತು ವಕೀಲ ಬಾಲಾಜಿ ಶ್ರೀನಿವಾಸನ್ ಸಲ್ಲಿಸಿದ ಅರ್ಜಿಯನ್ನು ಕೋರ್ಟ್ ವಿಚಾರಣೆ ನಡೆಸಿ ತೀರ್ಪು ನೀಡಿದೆ. ಒಂದು ಶ್ರೇಣಿಯಲ್ಲಿ ನಿವೃತ್ತಿ ಹೊಂದುವ ಪ್ರತಿಯೊಬ್ಬ ಸೇನಾ ಯೋಧರಿಗೂ ಸಮಾನ ಪಿಂಚಣಿ ನೀಡಬೇಕು ಎನ್ನುವುದು ಅರ್ಜಿಯ ಪ್ರಮುಖ ಉಲ್ಲೇಖವಾಗಿತ್ತು. ಶ್ರೇಣಿ ಮತ್ತು ಸೇವೆಯ ಅವಧಿಯನ್ನು ಸಮಾನವಾಗಿಸುವ ಸಿಬ್ಬಂದಿಗಳಲ್ಲಿ OROP ಪ್ರತ್ಯೇಕ ವರ್ಗವನ್ನು ರಚಿಸಿದೆ ಎಂದು ಅವರು ವಾದಿಸಿದ್ದರು.
ಕೇಂದ್ರ ಸರ್ಕಾರದ ವಾದವೇನು?:
ಒಂದು ಶ್ರೇಣಿ ಒಂದು ಪಿಂಚಣಿಯ ಮೂಲ ಮೌಲ್ಯಗಳಲ್ಲಿ ಒಂದೇ ಬಗೆಯ ಶ್ರೇಣಿ ಮಾತ್ರವೇ ಅಲ್ಲ, ಒಂದೇ ಪ್ರಮಾಣದ ಸೇವಾವಧಿಯೂ ಸಹ ಸೇರಿದೆ ಎಂದು ಕೇಂದ್ರ ಸರ್ಕಾರದ ವಾದವಾಗಿತ್ತು. ಇದು ಅರ್ಜಿದಾರರ ವಾದವನ್ನು ಪರಿಗಣಿಸಲು ಸಾಧ್ಯವಿಲ್ಲ ಎನ್ನುವಂತೆ ಮಾಡಿತು. ಈ ಎರಡೂ ಅಂಶಗಳನ್ನು ಬೇರ್ಪಡಿಸಲಾಗದು. ಕೇವಲ ಒಂದು ಶ್ರೇಣಿಯನ್ನು ಮಾತ್ರವೇ ಪರಿಗಣಿಸಿ ದೀರ್ಘತೆಯ ಸೇವಾವಧಿಯ ಅನ್ನು ನಿರ್ಲಕ್ಷಿಸಲಾಗುವುದಿಲ್ಲ. ಅದೇ ರೀತಿ ಕೇವಲ ಸೇವಾವಧಿಯ ದೀರ್ಘತೆಯನ್ನು ಪರಿಗಣಿಸಿ ಶ್ರೇಣಿಯನ್ನು ನಿರ್ಲಕ್ಷಿಸುವುದಕ್ಕೂ ಸಾಧ್ಯವಿಲ್ಲ. ಒಆರ್ಒಪಿ ಮೂಲ ಅಂಶ ಒಂದು ಶ್ರೇಣಿ ಮತ್ತು ಒಂದೇ ಪ್ರಮಾಣದ ಸೇವಾವಧಿ ಆಗಿದೆ. ಇಲ್ಲಿ ಒಂದು ಎಂಬ ಪದ ʼಒಂದು ಶ್ರೇಣಿ ಮತ್ತು ಒಂದು ಸೇವಾವಧಿ ಎನ್ನುವಲ್ಲಿ ಎರಡು ಬಾರಿ ಬರುತ್ತದೆ. ಇದನ್ನು ಪ್ರಮುಖವಾಗಿ ಗಮನಿಸಬೇಕಾಗುತ್ತದೆ," ಎಂದು ಕೇಂದ್ರ ಸರ್ಕಾರ ವಾದಿಸಿತ್ತು.