ರಫೇಲ್ ಒಪ್ಪಂದ ವಿವಾದ: ಸುಪ್ರೀಂಕೋರ್ಟ್ನತ್ತ ಎಲ್ಲರ ಚಿತ್ತ
ನವದೆಹಲಿ, ನವೆಂಬರ್ 13: ರಫೇಲ್ ಯುದ್ಧ ವಿಮಾನಗಳ ಖರೀದಿಗಾಗಿ ಎನ್ಡಿಎ ಸರ್ಕಾರವು ಫ್ರಾನ್ಸ್ ಜತೆ ನಡೆಸಿದ ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ ಎಂಬ ಕಾಂಗ್ರೆಸ್ ಮತ್ತು ಇತರರ ಆರೋಪದ ಕುರಿತು ಡಿಸೆಂಬರ್ನಲ್ಲಿ ನೀಡಲಾಗಿದ್ದ ತೀರ್ಪಿನ ಅಂತಿಮ ಮರುಪರಿಶೀಲನಾ ತೀರ್ಪನ್ನು ಸುಪ್ರೀಂಕೋರ್ಟ್ ಗುರುವಾರ ನೀಡಲಿದೆ.
36 ರಫೇಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದ ಪ್ರಕರಣದಲ್ಲಿ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಡಿಸೆಂಬರ್ನಲ್ಲಿ ಕ್ಲೀನ್ ಚಿಟ್ ನೀಡಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ತೀರ್ಪು ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಈ ಕುರಿತಂತೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ನೇತೃತ್ವದ ನ್ಯಾ. ಸಂಜಯ್ ಕಿಶನ್ ಕೌಲ್ ಮತ್ತು ಕೆಎಂ ಜೋಸೆಫ್ ಅವರನ್ನು ಒಳಗೊಂಡ ಮೂವರು ಸದಸ್ಯರ ನ್ಯಾಯಪೀಠ ತೀರ್ಪು ಪ್ರಕಟಿಸಲಿದೆ.
ರಫೇಲ್ ಒಪ್ಪಂದ ತೀರ್ಪು ಮರುಪರಿಶೀಲನೆ: ಆದೇಶ ಕಾಯ್ದಿರಿಸಿದ ಸುಪ್ರೀಂಕೋರ್ಟ್
ಯುದ್ಧ ವಿಮಾನಗಳ ತಯಾರಿಕೆಗೆ ಫ್ರಾನ್ಸ್ನ ಡಸಾಲ್ಟ್ ಏವಿಯೇಷನ್ ಸಂಸ್ಥೆ ಜತೆ 59 ಸಾವಿರ ಕೋಟಿ ರೂ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇದರ ಕುರಿತು ತನಿಖೆ ನಡೆಯಬೇಕು ಎಂದು ಆಗ್ರಹಿಸಿ ಸಲ್ಲಿಸಲಾಗಿದ್ದ ಎಲ್ಲ ಅರ್ಜಿಗಳನ್ನೂ 2018ರ ಡಿಸೆಂಬರ್ನಲ್ಲಿ ಸುಪ್ರೀಂಕೋರ್ಟ್ ವಜಾಗೊಳಿಸಿತ್ತು.
ಈಗಾಗಲೇ ಈ ಒಪ್ಪಂದಕ್ಕೆ ಸಂಬಂಧಿಸಿದ ಒಂದು ರಫೇಲ್ ಯುದ್ಧ ವಿಮಾನ ಭಾರತೀಯ ರಕ್ಷಣಾ ಪಡೆಯನ್ನು ಸೇರಿಕೊಂಡಿದೆ. ಉಳಿದ ವಿಮಾನಗಳು ಶೀಘ್ರದಲ್ಲಿಯೇ ಸೇರ್ಪಡೆಯಾಗಲಿವೆ ಎಂದು ಸರ್ಕಾರ ಹೇಳಿದೆ. ಗುರುವಾರ ಪ್ರಕಟವಾಗಲಿರುವ ತೀರ್ಪು ಒಪ್ಪಂದದ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬ ಕುತೂಹಲ ಮೂಡಿಸಿದೆ.
ತೀರ್ಪು ಮರುಪರಿಶೀಲಿಸಲು ಮನವಿ
ಮಾಜಿ ಸಚಿವರಾದ ಯಶ್ವಂತ್ ಸಿನ್ಹಾ ಮತ್ತು ಅರುಣ್ ಶೌರಿ, ವಕೀಲ ಪ್ರಶಾಂತ್ ಭೂಷಣ್ ಸೇರಿದಂತೆ ಅನೇಕರು ಸಲ್ಲಿಸಿದ ಮರುಪರಿಶೀಲನಾ ಅರ್ಜಿಯಲ್ಲಿ, ತೀರ್ಪನ್ನು ಪರಾಮರ್ಶಿಸಬೇಕು ಮತ್ತು ನ್ಯಾಯಾಲಯಕ್ಕೆ ಹೊಸದಾಗಿ ಕೆಲವು ಮಹತ್ವದ ಪುರಾವೆಗಳನ್ನು ಒದಗಿಸಲಾಗಿದ್ದು, ಅವುಗಳನ್ನು ಪರಿಗಣಿಸಬೇಕು ಎಂದು ಕೋರಿದ್ದರು. ರಕ್ಷಣಾ ಇಲಾಖೆಯಿಂದಲೇ ಪಡೆದಿದ್ದು ಎನ್ನಲಾದ ದಾಖಲೆಗಳು ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ವಾದಿಸಿದ್ದರು.
ಸರ್ಕಾರದ ವಾದ ತಿರಸ್ಕೃತ
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸರ್ಕಾರ, ಈ ಒಪ್ಪಂದವು ರಕ್ಷಣೆಗೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು, ಈ ದಾಖಲೆಗಳನ್ನು ಅಕ್ರಮವಾಗಿ ನಕಲು ಮತ್ತು ಸೋರಿಕೆ ಮೂಲಕ ಪಡೆಯಲಾಗಿದೆ ಎಂದು ಆರೋಪಿಸಿತ್ತು. ಆದರೆ ಸರ್ಕಾರದ ವಾದವನ್ನು ಏಪ್ರಿಲ್ನಲ್ಲಿ ತಿರಸ್ಕರಿಸಿದ್ದ ಸುಪ್ರೀಂಕೋರ್ಟ್, ಈ ಪ್ರಕರಣವನ್ನು ನೂತನ ದಾಖಲೆಗಳ ಆಧಾರದಲ್ಲಿ ವಿಚಾರಣೆಗೆ ಒಳಪಡಿಸುವುದಾಗಿ ಹೇಳಿತ್ತು.
ರಫೇಲ್ ಒಪ್ಪಂದ: ಸುಪ್ರೀಂಕೋರ್ಟ್ನಲ್ಲಿ ಕೇಂದ್ರ ಸರ್ಕಾರಕ್ಕೆ ಹಿನ್ನಡೆ
ವಿಚಾರಣೆಗೆ ಆಗ್ರಹ
ಅಂತಿಮ ವಾದ ವಿವಾದ ಮುಗಿದು ನ್ಯಾಯಾಲಯ ತೀರ್ಪು ಕಾಯ್ದಿರಿಸಿತ್ತು. ರಕ್ಷಣಾ ಖರೀದಿಗೆ ಸಂಬಂಧಿಸಿದ ಒಪ್ಪಂದಗಳ ಬಗ್ಗೆ ಜಗತ್ತಿನ ಯಾವುದೇ ನ್ಯಾಯಾಲಯ ಪರಿಶೀಲನೆ ಮಾಡುವುದಿಲ್ಲ ಎಂದಿದ್ದ ಸರ್ಕಾರ ಪ್ರಕರಣವನ್ನು ಪುನಃ ಆರಂಭಿಸುವುದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಇನ್ನೊಂದೆಡೆ ಅರ್ಜಿದಾರರು, ಒಪ್ಪಂದದ ಕುರಿತು ತನಿಖೆ ನಡೆಯಬೇಕು ಮತ್ತು ಸರ್ಕಾರದ ವಿರುದ್ಧ ವಿಚಾರಣೆ ಆಗಬೇಕು ಎಂದು ಒತ್ತಾಯಿಸಿದ್ದರು.
ರಾಹುಲ್ ಗಾಂಧಿ ವಿವಾದ
ಸರ್ಕಾರದ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 'ಚೌಕಿದಾರ್ ಚೋರ್ ಹೈ' ಎಂಬುದನ್ನು ಸುಪ್ರೀಂಕೋರ್ಟ್ ಕೂಡ ಒಪ್ಪಿಕೊಂಡಿದೆ ಎಂದು ಹೇಳಿದ್ದರು. ಇದನ್ನು ಖಂಡಿಸಿ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಮಾನನಷ್ಟ ಮೊಕದ್ದಮೆ ದಾಖಲಿಸಿತ್ತು. ಚುನಾವಣಾ ಪ್ರಚಾರದಲ್ಲಿದ್ದ ತಾವು ಬಿಜೆಪಿಯನ್ನು ಟೀಕಿಸುವ ಆವೇಶದಲ್ಲಿ ಈ ರೀತಿ ಹೇಳಿಕೆ ನೀಡಿದ್ದಾಗಿ ರಾಹುಲ್ ಗಾಂಧಿ ವಿಷಾದ ವ್ಯಕ್ತಪಡಿಸಿದ್ದರು.
ರಫೇಲ್ ತೀರ್ಪು: ಕೇಂದ್ರಕ್ಕೆ ಹಿನ್ನಡೆ, ಸತ್ಯಮೇವ ಜಯತೆ ಎಂದ ಕಾಂಗ್ರೆಸ್!