ತ್ರಿಪುರಾ ಹಿಂಸಾಚಾರ: ಮಂಗಳವಾರ ಸುಪ್ರೀಂ ಕೋರ್ಟ್ನಲ್ಲಿ ಟಿಎಂಸಿ ಅರ್ಜಿ ವಿಚಾರಣೆ
ನವದೆಹಲಿ, ನವೆಂಬರ್ 22: ತ್ರಿಪುರಾ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಸುಪ್ರೀಂ ಕೋರ್ಟ್ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ. ರಾಜ್ಯದಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ ಎಂದು ಟಿಎಂಸಿ ನ್ಯಾಯಾಲಯಕ್ಕೆ ತಿಳಿಸಿದ್ದು, ನವೆಂಬರ್ 23ರ ಮಂಗಳವಾರ ಈ ಅರ್ಜಿ ವಿಚಾರಣೆ ಮಾಡುವುದಾಗಿ ಹೇಳಿದೆ.
ತ್ರಿಪುರಾದಲ್ಲಿನ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸುಳ್ಳು ಪ್ರಕರಣಗಳಿಂದ ತನ್ನ ಸದಸ್ಯರಿಗೆ ರಕ್ಷಣೆ ಕೋರಿ ಟಿಎಂಸಿ ಈ ಹಿಂದೆ ಸುಪ್ರೀಂ ಕೋರ್ಟ್ಗೆ ಮೊರೆ ಹೋಗಿತ್ತು. ತ್ರಿಪುರಾದಲ್ಲಿ ಕೊಲೆ ಯತ್ನದ ಆರೋಪದಡಿ ಭಾನುವಾರ ಟಿಎಂಸಿ ನಾಯಕಿ ಸಯೋನಿ ಘೋಷ್ ರನ್ನು ಬಂಧಿಸಲಾಗಿತ್ತು. ಪೊಲೀಸ್ ಠಾಣೆಗೆ ವಿಚಾರಣೆಗೆ ಹೋದ ಸಂದರ್ಭದಲ್ಲಿ ಟಿಎಂಸಿ ಪಕ್ಷದ ಕಾರ್ಯಕರ್ತರನ್ನು ಠಾಣೆಯೊಳಗೆ ಬಿಜೆಪಿ ಸದಸ್ಯರು ಪೊಲೀಸರ ಸಮ್ಮುಖದಲ್ಲಿಯೇ ಥಳಿಸಿದ್ದಾರೆ ಎಂದು ಆರೋಪಿಸಲಾಗಿತ್ತು.
ತ್ರಿಪುರಾ ವರದಿಯ ಮೇರೆಗೆ ಬಂಧಿತರಾದ ಇಬ್ಬರು ಮಹಿಳಾ ಪತ್ರಕರ್ತರಿಗೆ ಜಾಮೀನು
ಕಳೆದ ಭಾನುವಾರ ಬೆಳಗ್ಗೆ ಸಯೋನಿ ಘೋಷ್ ಅವರನ್ನು ವಿಚಾರಣೆಗೆ ಕರೆದೊಯ್ದ ನಂತರ ಟಿಎಂಸಿ ಸದಸ್ಯರು ಪೊಲೀಸ್ ಠಾಣೆಯಲ್ಲಿ ಜಮಾಯಿಸಿದ್ದರು. ಅಗರ್ತಲಾದ ಪೊಲೀಸ್ ಠಾಣೆಯೊಳಗೆ ಬಿಜೆಪಿ ಸದಸ್ಯರು ತಮ್ಮ ಪಕ್ಷದ ಕಾರ್ಯಕರ್ತರನ್ನು ದೊಣ್ಣೆ ಮತ್ತು ಕಲ್ಲುಗಳಿಂದ ಹೊಡೆದಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ. ಟಿಎಂಸಿ ಮಾಡಿರುವ ಆರೋಪವನ್ನು ಬಿಜೆಪಿ ನಿರಾಕರಿಸಿದೆ.
ಟಿಎಂಸಿ ಮುಖಂಡನ ಮನೆ ಮೇಲೆ ದಾಳಿ:
ಅಗರ್ತಲಾದ ಭಗಬನ್ ಠಾಕೂರ್ ಚೌಮುನಿ ಪ್ರದೇಶದಲ್ಲಿರುವ ಟಿಎಂಸಿ ರಾಜ್ಯ ಘಟಕದ ಸ್ಟೀರಿಂಗ್ ಕಮಿಟಿ ಮುಖ್ಯಸ್ಥ ಸುಬಾಲ್ ಭೌಮಿಕ್ ನಿವಾಸದ ಮೇಲೆ ಭಾನುವಾರ ರಾತ್ರಿ ನಡೆದ ದಾಳಿಯಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ. ಮಾಧ್ಯಮಗಳ ಸದಸ್ಯರನ್ನು ಸಹ ಕಟ್ಟಿ ಹಾಕಲಾಗಿದೆ ಎಂದು ಟಿಎಂಸಿ ಆರೋಪಿಸಿದೆ. ಪೊಲೀಸರು ಮತ್ತು ತ್ರಿಪುರಾ ರಾಜ್ಯ ರೈಫಲ್ಸ್ ಸಿಬ್ಬಂದಿಯನ್ನು ಪ್ರದೇಶದಲ್ಲಿ ನಿಯೋಜಿಸಲಾಗಿದೆ.
ಸೋಮವಾರ ನಗರದಲ್ಲಿ ಮೆರವಣಿಗೆಗಳು ಮತ್ತು ರೋಡ್ಶೋಗಳನ್ನು ನಡೆಸಲು ಪೊಲೀಸರು ಬಿಜೆಪಿ ಅಥವಾ ಟಿಎಂಸಿಗೆ ಅನುಮತಿ ನೀಡದಿದ್ದರು. ಈ ಹಿನ್ನೆಲೆ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಸೋಮವಾರ ಅಗರ್ತಲಾ ತಲುಪಿದರು. ಆದಾಗ್ಯೂ, ಬೀದಿ ಮೂಲೆಗಳಲ್ಲಿ ಸಭೆಗಳನ್ನು ನಡೆಸಲು ಅವರಿಗೆ ಅನುಮತಿ ನೀಡಲಾಯಿತು.
ಸರ್ಕಾರದ ವಿರುದ್ಧ ಅಭಿಷೇಕ್ ಬ್ಯಾನರ್ಜಿ ವಾಗ್ದಾಳಿ:
ರಾಜ್ಯಕ್ಕೆ ಆಗಮಿಸಿದ ಅಭಿಷೇಕ್ ಬ್ಯಾನರ್ಜಿ, "ತ್ರಿಪುರಾ ಬನಾನಾ ರಿಪಬ್ಲಿಕ್ ಆಗಿ ಮಾರ್ಪಟ್ಟಿದೆ. ನಿಮಗೆ ನನ್ನ ವಿರುದ್ಧ ಅಸಮಾಧಾನವಿದ್ದರೆ, ರಾಜ್ಯದ ಜನರಿಗೆ ಏಕೆ ಕಿರುಕುಳ ನೀಡುತ್ತೀರಿ? ಸಾಮಾನ್ಯ ಜನರ ಮೇಲೆ ದಾಳಿ ಮಾಡಲಾಗುತ್ತಿದೆ, ಮಾಧ್ಯಮಗಳ ಮೇಲೆ ದಾಳಿ ಮಾಡಲಾಗುತ್ತಿದೆ, ನಾನು ಸುದೀರ್ಘವಾಗಿ ಮಾತನಾಡುತ್ತೇನೆ. ಸ್ವಲ್ಪ ಸಮಯದ ನಂತರ, ನಾನು ಇಲ್ಲಿಗೆ ಬಂದಾಗಲೆಲ್ಲಾ ಅವರು ನನ್ನ ಕಾರ್ಯಕ್ರಮಗಳನ್ನು ರದ್ದುಗೊಳಿಸುತ್ತಾರೆ. ಈ ಬಾರಿಯೂ, ನಿನ್ನೆ, ಅವರು ನನ್ನ ಮೆರವಣಿಗೆಗೆ ಅನುಮತಿಯನ್ನು ರದ್ದುಗೊಳಿಸಿದರು," ಎಂದು ಆರೋಪಿಸಿದರು.
ಸಯೋನಿ ಘೋಷ್ ಬಂಧನಕ್ಕೆ ವಿರೋಧ:
ಟಿಎಂಸಿ ನಾಯಕಿ ಸಯೋನಿ ಘೋಷ್ ಬಂಧನದ ಕುರಿತು ಸೋಮವಾರ ಮಾತನಾಡಿದ ಅಭಿಷೇಕ್ ಬ್ಯಾನರ್ಜಿ, "ಅವರು ಏನನ್ನೂ ಮಾಡಲಿಲ್ಲ, ಅವರು ಕೇವಲ 'ಖೇಲಾ ಹೋಬೆ' ಎಂದು ಹೇಳಿದ್ದರು. ಈ ಹಿಂದೆ ನರೇಂದ್ರ ಮೋದಿ ಕೂಡ ಬಂಗಾಳದಲ್ಲಿ ಖೇಲಾ ಹೋಬೆ ಎಂದು ಹೇಳಿದ್ದಾರೆ," ಎಂದರು. ನವೆಂಬರ್ 25 ರಂದು ನಾಗರಿಕ ಸಂಸ್ಥೆ ಚುನಾವಣೆ ನಡೆಯಲಿರುವ ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ಈ ಹಿಂಸಾಚಾರ ನಡೆದಿದೆ.
ಕೇಂದ್ರ ಗೃಹ ಸಚಿವಾಲಯದ ಎದುರು ಪ್ರತಿಭಟನೆ:
ತ್ರಿಪುರಾ ಪೊಲೀಸರ ಕೈಯಲ್ಲಿ ಟಿಎಂಸಿ ಕಾರ್ಯಕರ್ತರು ಎದುರಿಸುತ್ತಿರುವ ಪೊಲೀಸ್ ದೌರ್ಜನ್ಯದ ಬಗ್ಗೆ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಚರ್ಚಿಸಲು 15ಕ್ಕೂ ಹೆಚ್ಚು ಟಿಎಂಸಿ ಸಂಸದರ ನಿಯೋಗವು ಅಪಾಯಿಂಟ್ಮೆಂಟ್ ಕೇಳಿದೆ. ಆದರೆ ಈವರೆಗೂ ಅಮಿತ್ ಶಾ ಅವರು ಭೇಟಿಗೆ ಅನುಮತಿ ನೀಡದ ಹಿನ್ನೆಲೆ ಸೋಮವಾರ ಕೇಂದ್ರ ಗೃಹ ಸಚಿವರ ಕಚೇರಿ ಎದುರು ಟಿಎಂಸಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನೊಂದು ದಿಕ್ಕಿನಲ್ಲಿ ದೆಹಲಿಯಲ್ಲಿ ಟಿಎಂಸಿ ಸಂಸದರ ಸಭೆ ನಡೆಯುತ್ತಿದೆ. ಸಭೆಯಲ್ಲಿ ತ್ರಿಪುರಾ ಹಿಂಸಾಚಾರದ ವಿರುದ್ಧ ಧರಣಿ ನಡೆಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಅವರು ನಿರ್ಧರಿಸಲಿದ್ದಾರೆ.
Recommended Video