ಡಿಕೆ ಶಿವಕುಮಾರ್ಗೆ ಮತ್ತೆ ಸಂಕಷ್ಟ: ಶುಕ್ರವಾರ ಇ.ಡಿ ಮೇಲ್ಮನವಿ ವಿಚಾರಣೆ
Recommended Video
ನವದೆಹಲಿ, ನವೆಂಬರ್ 14: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸುಮಾರು 50 ದಿನ ತಿಹಾರ್ ಜೈಲು ಹಾಗೂ ಇ.ಡಿ. ವಶದಲ್ಲಿ ಕಳೆದು ದೆಹಲಿ ಹೈಕೋರ್ಟ್ನಿಂದ ಜಾಮೀನು ಪಡೆದು ಬಿಡುಗಡೆ ಹೊಂದಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಕಳವಳ ಇನ್ನೂ ಶಮನವಾಗಿಲ್ಲ. ಡಿಕೆ ಶಿವಕುಮಾರ್ ಅವರ ಭವಿಷ್ಯವನ್ನು ಸುಪ್ರೀಂಕೋರ್ಟ್ ಶುಕ್ರವಾರ ನಿರ್ಧರಿಸಲಿದೆ.
ಡಿಕೆ ಶಿವಕುಮಾರ್ ಅವರಿಗೆ ಜಾಮೀನು ಮಂಜೂರು ಮಾಡಿದ ದೆಹಲಿ ಹೈಕೋರ್ಟ್ನ ತೀರ್ಪು ಪ್ರಶ್ನಿಸಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ಶುಕ್ರವಾರ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆಗೆ ಒಳಪಡಿಸಲಿದೆ. ಡಿಕೆ ಶಿವಕುಮಾರ್ ಅವರಿಗೆ ಅ.23ರಂದು ಜಾಮೀನು ಮಂಜೂರಾದ ಕೂಡಲೇ ಇ.ಡಿ. ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.
ಡಿ. ಕೆ. ಶಿವಕುಮಾರ್ಗೆ ಜಾಮೀನು ಸಿಕ್ಕಿದ್ದು ಹೇಗೆ?; 3 ಅಂಶಗಳು
ಈ ಅರ್ಜಿಯ ವಿಚಾರಣೆ ಶುಕ್ರವಾರ ನಡೆಯಲಿದ್ದು, ಎಲ್ಲರ ಗಮನ ಸೆಳೆದಿದೆ. ಒಂದು ವೇಳೆ ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದರೆ ಡಿ.ಕೆ. ಶಿವಕುಮಾರ್ ಮತ್ತು ಅವರ ಬೆಂಬಲಿಗರು ನಿರಾಳರಾಗಲಿದ್ದಾರೆ. ಆದರೆ ಜಾಮೀನು ನೀಡಿದ್ದ ಕ್ರಮ ಸರಿಯಿಲ್ಲ ಎಂದು ಹೈಕೋರ್ಟ್ ತೀರ್ಪನ್ನು ವಜಾಗೊಳಿಸಿದರೆ ಡಿಕೆ ಶಿವಕುಮಾರ್ ಪುನಃ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಅವರನ್ನು ಇ.ಡಿ. ಅಧಿಕಾರಿಗಳು ಮತ್ತೆ ಬಂಧನಕ್ಕೆ ಒಳಪಡಿಸುವ ಸಾಧ್ಯತೆ ಕೂಡ ಇದೆ.
ಷರತ್ತುಬದ್ಧ ಜಾಮೀನು
ಅ.23ರಂದು ದೆಹಲಿ ಹೈಕೋರ್ಟ್ ಡಿಕೆ ಶಿವಕುಮಾರ್ ಅವರಿಗೆ ಷರತ್ತುಬದ್ಧ ಜಾಮೀನು ನೀಡಿತ್ತು. ಆರೋಪಿ ಸಾಕ್ಷ್ಯ ನಾಶಮಾಡುವುದಿಲ್ಲ. ಸಾಕ್ಷಿಗಳನ್ನು ಬೆದರಿಸುವುದಿಲ್ಲ ಮತ್ತು ಪರಾರಿಯಾಗುವ ಭಯವಿಲ್ಲ ಎಂದು ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆದರೆ ಅಕ್ರಮ ಹಣ ವರ್ಗಾವಣೆ ಕಾಯ್ದೆಯಲ್ಲಿನ ಅಂಶಗಳನ್ನು ಪರಿಗಣಿಸಿಲ್ಲ ಎಂದು ಇ.ಡಿ. ಮೇಲ್ಮನವಿ ಅರ್ಜಿಯಲ್ಲಿ ವಾದಿಸಿದೆ.
ನಿಯಮ ಗಮನಿಸಿಲ್ಲ
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಗೆ ಜಾಮೀನು ನೀಡುವ ಮುನ್ನ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಲು ಪಬ್ಲಿಕ್ ಪ್ರಾಸಿಕ್ಯೂಟರ್ಗೆ ಅವಕಾಶ ನೀಡಬೇಕು ಮತ್ತು ಆರೋಪಿ ತಪ್ಪಿತಸ್ಥನಲ್ಲ ಎಂದು ಮನವರಿಕೆಯಾದ ಮೇಲೆಯೇ ನ್ಯಾಯಾಲಯ ಜಾಮೀನು ನೀಡಬೇಕು ಎಂಬ ನಿಯಮಗಳನ್ನು ಅದು ಗಮನಿಸಿಲ್ಲ ಎಂದು ವಿವರಿಸಿದೆ.
ಡಿಕೆ ಶಿವಕುಮಾರ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಆರೋಗ್ಯ ಸಮಸ್ಯೆ ಇಲ್ಲ
ಡಿ.ಕೆ. ಶಿವಕುಮಾರ್ ಅವರಿಗೆ ಜಾಮೀನು ಮಂಜೂರು ಮಾಡುವಾಗ ಅವರ ಅನಾರೋಗ್ಯದ ಸಮಸ್ಯೆಯನ್ನು ಮುಖ್ಯವಾಗಿ ಪರಿಗಣಿಸಲಾಗಿದೆ. ಆದರೆ ಅವರಿಗೆ ಹೊಸದಾಗಿ ಯಾವುದೇ ವೈದ್ಯಕೀಯ ಸಮಸ್ಯೆ ಉಂಟಾಗಿಲ್ಲ. ಸೆ. 15 ರಿಂದ ಸೆ. 18ರವರೆಗೆ ಅವರು ಆಸ್ಪತ್ರೆಯಲ್ಲಿದ್ದು, ಸೂಕ್ತ ಚಿಕಿತ್ಸೆ ನೀಡಲಾಗಿದೆ. ಅವರ ಆರೋಗ್ಯ ಸುಧಾರಿಸಿ ಸ್ಥಿರವಾದ ಬಳಿಕವಷ್ಟೇ ತಿಹಾರ್ ಜೈಲಿಗೆ ವಾಪಸ್ ಕರೆದೊಯ್ಯಲಾಗಿತ್ತು ಎಂದು ವಾದಿಸಿದೆ.
ಆರೋಪ ಗಂಭೀರವಾಗಿದೆ
ಡಿ.ಕೆ. ಶಿವಕುಮಾರ್ ಅವರ ಮೇಲಿರುವ ಆರೋಪ ಬಹಳ ಗಂಭೀರವಾದದ್ದು. ಇದರ ತೀವ್ರತೆಯನ್ನು ನ್ಯಾಯಾಲಯ ಗಮನಿಸಿಲ್ಲ. ಜತೆಗೆ ಸಾಕ್ಷ್ಯಗಳ ಮೇಲೆ ಡಿಕೆ ಶಿವಕುಮಾರ್ ಪ್ರಭಾವ ಬೀರಿರುವುದಕ್ಕೆ ಪುರಾವೆಗಳನ್ನು ನೀಡಿದ್ದರೂ ಅದನ್ನು ಪುರಸ್ಕರಿಸದೆ ಜಾಮೀನು ನೀಡಿದೆ. ಹೀಗಾಗಿ ಈ ಅಂಶಗಳನ್ನು ಪರಿಗಣಿಸಿ ಡಿಕೆ ಶಿವಕುಮಾರ್ ಅವರಿಗೆ ಮಂಜೂರಾಗಿರುವ ಜಾಮೀನನ್ನು ರದ್ದುಗೊಳಿಸಬೇಕು ಎಂದು ಇ.ಡಿ. ಹೇಳಿದೆ.