ಗಂಗಾ ಶುದ್ಧೀಕರಣ ವಿಳಂಬ: ಕೇಂದ್ರಕ್ಕೆ ಸುಪ್ರೀಂ ಚಾಟಿ
ನವದೆಹಲಿ, ಅ. 16: ಗಂಗಾ ನದಿ ಶುದ್ಧೀಕರಣ ಯೋಜನೆ ಹಿಂದೆ ಬಿದ್ದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದೆ. ಇಂಥ ಯೋಜನೆಗೆ ದೆಹಲಿ ಮೆಟ್ರೋ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇ.ಶ್ರೀಧರನ್ ಅಂಥವರ ನೆರವು ಪಡೆಯಲು ಸೂಚನೆ ನೀಡಿದೆ.
ನ್ಯಾಯಮೂರ್ತಿಗಳಾದ ಟಿ.ಎಸ್.ಠಾಕೂರ್, ಆದರ್ಶ ಕುಮಾರ್ ಗೋಯೆಲ್, ಆರ್.ಭಾನುಮತಿ ಅವರನ್ನು ಒಳಗೊಂಡ ಪೀಠ ಯೋಜನೆಯಲ್ಲಿ ದೂರದೃಷ್ಟಿ ಕೊರತೆಯಿದೆ. ಕಾಮಗಾರಿಯ ಸರಿಯಾದ ನಿರ್ವಹಣೆಗೆ ಉನ್ನತ ಮಟ್ಟದ ಸಮಿತಿಯೊಂದನ್ನು ನೇಮಿಸುವ ಅಗತ್ಯವಿದೆ ಎಂದು ಪ್ರತಿಪಾದಿದೆ.[ದೇಣಿಗೆ ನೀಡಿ, ತೆರಿಗೆ ಲಾಭ ಪಡೆಯಿರಿ]
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಳೆದ ಆರು ತಿಂಗಳಿಂದ ಅಧ್ಯಕ್ಷರ ನೇಮಕವಾಗಿಲ್ಲ. ಈ ಬಗ್ಗೆ ಯಾರೂ ಸಮರ್ಪಕ ಉತ್ತರ ನೀಡದಿರುವುದು ಬೇಸರ ತಂದಿದೆ ಎಂದು ಪೀಠ ಆಕ್ಷೇಪ ವ್ಯಕ್ತಪಡಿಸಿದೆ.[ಕೇಂದ್ರದ ಗಂಗಾ ಶುದ್ಧೀಕರಣ ನೀಲನಕ್ಷೆಯಲ್ಲೇನಿದೆ?]
ಗಂಗಾ ಶುದ್ಧೀಕರಣ ಕೇವಲ ಒಂದು ಸರ್ಕಾರದ ಯೋಜನೆಯಲ್ಲ. ಅಥವಾ ಇದೊಂದು ಚುನಾವಣಾ ತಂತ್ರವಲ್ಲ. ಜನರು ಮತ್ತು ಸರ್ಕಾರ ಯೋಜನೆ ಅನುಷ್ಠಾನಕ್ಕೆ ಕೈ ಜೋಡಿಸಬೇಕಿದೆ. ಸರ್ಕಾರ ಇದಕ್ಕೆ ಎನ್ ಆರ್ ಐ ಮತ್ತು ಎನ್ ಜಿಒಗಳ ಸಹಕಾರವನ್ನು ಪಡೆಯಬಹುದು ಎಂದು ಸುಪ್ರೀಂ ಸಲಹೆ ನೀಡಿದೆ.