ನಿಮಗೆ ಅಧಿಕಾರ ಕೊಟ್ಟವರು ಯಾರು?: ಚುನಾವಣಾ ಆಯೋಗದ ವಿರುದ್ಧ ಸುಪ್ರೀಂಕೋರ್ಟ್ ಕಿಡಿ
ನವದೆಹಲಿ, ನವೆಂಬರ್ 2: ಮಧ್ಯಪ್ರದೇಶ ಉಪ ಚುನಾವಣೆಯಲ್ಲಿ ತಾರಾ ಪ್ರಚಾರಕರ ಸ್ಥಾನದಿಂದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರನ್ನು ತೆಗೆದುಹಾಕಿರುವ ಚುನಾವಣಾ ಆಯೋಗದ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ. 'ಚುನಾವಣಾ ಆಯೋಗದ ಆದೇಶಕ್ಕೆ ನಾವು ತಡೆ ನೀಡುತ್ತಿದ್ದೇವೆ. ಚುನಾವಣಾ ಆಯೋಗಕ್ಕೆ ಯಾವುದೇ ಅಧಿಕಾರವಿಲ್ಲ' ಎಂದು ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ ಸೋಮವಾರ ಹೇಳಿದರು.
'ತಾರಾ ಪ್ರಚಾರಕರ ಪಟ್ಟಿಯಿಂದ ಒಬ್ಬ ಅಭ್ಯರ್ಥಿಯನ್ನು ತೆಗೆದುಹಾಕಲು ನಿಮಗೆ (ಚುನಾವಣಾ ಆಯೋಗ) ಈ ಅಧಿಕಾರವನ್ನು ನೀಡಿದವರು ಯಾರು? ಅದು ನೀವೇನಾ ಅಥವಾ ಪಕ್ಷದ ನಾಯಕ ನೀಡಿದ್ದಾ? ಎಂದು ಕಮಲ್ ನಾಥ್ ಅವರು ಚುನಾವಣಾ ಆಯೋಗದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು.
ಕಮಲ್ನಾಥ್ ಸ್ಟಾರ್ ಕ್ಯಾಂಪೇನರ್ ಮಾನ್ಯತೆ ರದ್ದು: ಸುಪ್ರೀಂ ಮೊರೆ
'ರಾಜಕೀಯ ಪಕ್ಷವೊಂದರ ನಾಯಕ ಯಾರಾಗಬೇಕೆಂದು ನಿರ್ಧರಿಸುವ ಅಧಿಕಾರ ನಿಮಗೆ ಎಲ್ಲಿಂದ ಸಿಕ್ಕಿತು? ತಾರಾ ಪ್ರಚಾರಕರು ಯಾರು ಎಂಬುದನ್ನು ನೀವು ನಿರ್ಧರಿಸುವುದೋ ಅಥವಾ ಪಕ್ಷವೋ?' ಎಂದು ಪ್ರಶ್ನಿಸಿದರು.
'ಐಟಂ' ಹೇಳಿಕೆ ನೀಡಿದ ಕಮಲ್ ನಾಥ್ 'ಸ್ಟಾರ್ ಕ್ಯಾಂಪೇನರ್' ಮಾನ್ಯತೆ ರದ್ದು
ಬಿಜೆಪಿಯ ಮಹಿಳಾ ಅಭ್ಯರ್ಥಿ ಇಮಾರ್ತಿ ದೇವಿ ಅವರನ್ನು 'ಐಟಂ' ಎಂದು ಲೇವಡಿ ಮಾಡುವ ಮೂಲಕ ವಿವಾದ ಸೃಷ್ಟಿಸಿದ್ದ ಕಮಲ್ ನಾಥ್ ಅವರ, ನಿರಂತರವಾಗಿ ನೀತಿ ಸಂಹಿತೆಗಳನ್ನು ಉಲ್ಲಂಘನೆ ಮಾಡಿದ ಕಾರಣಕ್ಕಾಗಿ ಅವರ ತಾರಾ ಪ್ರಚಾರಕ ಹುದ್ದೆಯ ಮಾನ್ಯತೆಯನ್ನು ತೆಗೆದುಹಾಕಿದ್ದ ಚುನಾವಣಾ ಆಯೋಗ, ಅವರಿಗೆ ಎಚ್ಚರಿಕೆ ನೀಡಿತ್ತು. ಇದನ್ನು ಕಮಲ್ ನಾಥ್ ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿದ್ದರು.