ರೊಹಿಂಗ್ಯಾ ನಿರಾಶ್ರಿತರ ಗಡಿಪಾರು: ಕೇಂದ್ರದ ನಿರ್ಧಾರಕ್ಕೆ ಅಡ್ಡಿ ಬರಲ್ಲ ಎಂದ ಸುಪ್ರೀಂ
ಏಳು ಮಂದಿ ರೊಹಿಂಗ್ಯಾ ನಿರಾಶ್ರಿತರನ್ನು ಗಡಿಪಾರು ಮಾಡುವ ಕೇಂದ್ರ ಸರ್ಕಾರದ ನಿರ್ಧಾರದ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಸುಪ್ರೀಂಕೋರ್ಟ್ ಗುರುವಾರ ಸ್ಪಷ್ಟಪಡಿಸಿದೆ.
ಅಸ್ಸಾಂನ ಸಿಲ್ಚಾರ್ ಬಂಧನ ಕೇಂದ್ರದಿಂದ ಏಳು ಮಂದಿ ರೊಹಿಂಗ್ಯಾ ನಿರಾಶ್ರಿತರನ್ನು ಮಯನ್ಮಾರ್ಗೆ ಮರಳಿ ಕಳುಹಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಇದಕ್ಕೆ ವಿವಿಧ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
ರೊಹಿಂಗ್ಯಾ ಮುಸ್ಲಿಮರಿಂದ ಆಗಸ್ಟ್ನಲ್ಲಿ 99 ಹಿಂದೂಗಳ ಹತ್ಯೆ
ಕೇಂದ್ರ ಸರ್ಕಾರವು ಏಳು ಮಂದಿ ನಿರಾಶ್ರಿತರನ್ನು ಗಡಿಪಾರು ಮಾಡುವುದನ್ನು ತಡೆಯಬೇಕು ಎಂದು ಕೋರಿ ಸುಪ್ರೀಂಕೋರ್ಟ್ಗೆ ಬುಧವಾರ ಸಂಜೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಲಾಗಿತ್ತು.
ಅರ್ಜಿಯ ತುರ್ತು ವಿಚಾರಣೆಗೆ ಅನುಮತಿ ನೀಡಿದ ಸುಪ್ರೀಂಕೋರ್ಟ್, ಗಡಿಪಾರು ಮಾಡುವ ಸರ್ಕಾರದ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿತು.
ಯಾರು ಈ ಏಳು ಮಂದಿ?
ಮಯನ್ಮಾರ್ನಿಂದ ಅಕ್ರಮವಾಗಿ ಗಡಿ ದಾಟಿ ಅಸ್ಸಾಂಗೆ ಬಂದಿದ್ದ ಈ ಏಳು ಮಂದಿ ನಿರಾಶ್ರಿತರನ್ನು 2012ರಲ್ಲಿ ಬಂಧಿಸಿ ಸೆರೆಯಲ್ಲಿ ಇರಿಸಲಾಗಿತ್ತು. ಅಕ್ರಮವಾಗಿ ಒಳನುಸುಳಿರುವ ನಿರಾಶ್ರಿತರ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗಿರುವ ಕೇಂದ್ರ ಸರ್ಕಾರ, ಅದರ ಮೊದಲ ಹಂತವಾಗಿ ಈ ಏಳು ಮಂದಿಯನ್ನು ಗಡಿಪಾರು ನಿರ್ಧರಿಸಿದೆ. ಅವರನ್ನು ಬುಧವಾರ ಮಣಿಪುರದ ಗಡಿ ಪಟ್ಟಣ ಮೊರೆಹ್ಗೆ ಬಸ್ನಲ್ಲಿ ಕರೆತಂದು ಜೈಲಿನಲ್ಲಿ ಇರಿಸಲಾಗಿತ್ತು.
ಈ ನಿರಾಶ್ರಿತರನ್ನು ಗುರುವಾರ ಮಯನ್ಮಾರ್ ಗಡಿ ಭದ್ರತಾ ಪಡೆಗಳ ಸುಪರ್ದಿಗೆ ಒಪ್ಪಿಸಲು ಭಾರತ ತೀರ್ಮಾನಿಸಿದೆ. ಅದಕ್ಕಾಗಿ ಮ್ಯಾನ್ಮಾರ್ ಅಧಿಕಾರಿಗಳಿಂದ ಗಡಿಯೊಳಗೆ ಪ್ರಯಾಣ ಮಾಡುವ ಅನುಮತಿ ಪಡೆದುಕೊಂಡಿದೆ.
ಪ್ರಶಾಂತ್ ಭೂಷಣ್ಗೆ ಜಸ್ಟೀಸ್ ಕ್ಲಾಸ್
ರೊಹಿಂಗ್ಯಾ ನಿರಾಶ್ರಿತರನ್ನು ಮ್ಯಾನ್ಮಾರ್ಗೆ ವಾಪಸ್ ಕಳುಹಿಸುವ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್, ಇದರಲ್ಲಿ ಮಧ್ಯಪ್ರವೇಶ ಮಾಡಲು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿತು.
ರೊಹಿಂಗ್ಯಾಗಳಿಗೆ ಗುರುತಿನ ಪ್ರಮಾಣಪತ್ರ ನೀಡಲು ಮ್ಯಾನ್ಮಾರ್ ರಾಯಭಾರ ಕಚೇರಿ ಸಿದ್ಧವಿದೆ ಎಂದು ಸರ್ಕಾರದ ಹಿರಿಯ ವಕೀಲ ತುಷಾರ್ ಮೆಹ್ತಾ ಹೇಳಿದರು.
ಸರ್ಕಾರದ ನಡೆ ವಿಶ್ವಸಂಸ್ಥೆಯ ಉದ್ದೇಶಗಳಿಗೆ ವಿರುದ್ಧವಾಗಿದೆ ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, 'ಎಲ್ಲಕ್ಕಿಂತ ಮುಖ್ಯವಾಗಿ ಅವರೆಲ್ಲರನ್ನೂ ಮ್ಯಾನ್ಮಾರ್ ಪ್ರಜೆಗಳೆಂದು ಗುರುತಿಸಲಾಗಿದೆ. ನೀವೇನು ಹೇಳುತ್ತೀರಿ?' ಎಂದು ಪ್ರಶ್ನಿಸಿದರು.
ಇದು ತಪ್ಪು. ಅವರನ್ನು ಗುರುತಿಸಿಲ್ಲ. ಅದು ಕೋರ್ಟ್ನ ಜವಾಬ್ದಾರಿ ಎಂದು ಭೂಷಣ್ ಪ್ರತಿಕ್ರಿಯಿಸಿದರು.
ಇದರಿಂದ ಅಸಮಾಧಾನಗೊಂಡ ನ್ಯಾಯಮೂರ್ತಿ, 'ನಮ್ಮ ಜವಾಬ್ದಾರಿಗಳನ್ನು ನೀವು ನೆನಪಿಸುವ ಅಗತ್ಯವಿಲ್ಲ' ಎಂದು ಅವರನ್ನು ತರಾಟೆಗೆ ತೆಗೆದುಕೊಂಡು ಅರ್ಜಿಯನ್ನು ತಿರಸ್ಕರಿಸಿದರು.
ಎಲ್ಲಿಂದಲೋ ಬಂದವರು, ಎಲ್ಲೂ ಇಲ್ಲವಾದ ರೋಹಿಂಗ್ಯಾ ಮುಸ್ಲಿಮರ ಸುತ್ತಮುತ್ತ
ಯುಎನ್ಎಚ್ಸಿಆರ್ ವಿರೋಧ
ಭಾರತದಲ್ಲಿರುವ ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್ ಕಚೇರಿಯು ರೊಹಿಂಗ್ಯಾ ಮುಸ್ಲಿಮರ ಗಡಿಪಾರಿಗೆ ವಿರೋಧ ವ್ಯಕ್ತಪಡಿಸಿದೆ. ಮ್ಯಾನ್ಮಾರ್ನ ರಖಿನೆ ರಾಜ್ಯದ ಪರಿಸ್ಥಿತಿ ಸುಧಾರಿಸದ ಕಾರಣ ಅಲ್ಲಿಗೆ ನಿರಾಶ್ರಿತರನ್ನು ಮರಳಿ ಕಳುಹಿಸುವುದು ಅಪಾಯಕಾರಿ ಎಂದು ಹೇಳಿದೆ. ವ್ಯಕ್ತಿಯೊಬ್ಬ ಒಂದು ದೇಶಕ್ಕೆ ಮರಳುವುದು ಆತನ ಜೀವಕ್ಕೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸುರಕ್ಷಿತವಲ್ಲ ಎಂಬ ಅಂಶಗಳನ್ನು ಪರಿಗಣಿಸಿ ಭಾರತ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಕೋರಿದೆ.
40 ಸಾವಿರ ಮಂದಿ ಭಾರತದಲ್ಲಿ
ಮ್ಯಾನ್ಮಾರ್ ಸೇನೆಯ ದಾಳಿಗೆ ಕಂಗೆಟ್ಟ ಸುಮಾರು ಏಳು ಲಕ್ಷ ರೊಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶಕ್ಕೆ ವಲಸೆ ಹೋಗಿದ್ದರೆ, ಭಾರತದಲ್ಲಿ 40 ಸಾವಿರ ನಿರಾಶ್ರಿತರು ಒಳನುಗ್ಗಿರಬಹುದು ಎಂದು ಅಂದಾಜಿಸಲಾಗಿದೆ. ಅದರಲ್ಲಿ 15 ಸಾವಿರಕ್ಕೂ ಕಡಿಮೆ ಮಂದಿ ನಿರಾಶ್ರಿತರಿಗಾಗಿ ಇರುವ ವಿಶ್ವಸಂಸ್ಥೆಯ ಹೈ ಕಮಿಷನರ್ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ.
ಹೆಚ್ಚಿನವರು ಮುಸ್ಲಿಮರ ಸಂಖ್ಯೆ ಬಾಹುಳ್ಯ ಇರುವ ಪ್ರದೇಶಗಳಲ್ಲಿ ನೆಲೆಸಿದ್ದಾರೆ. ಹೈದರಾಬಾದ್, ಉತ್ತರ ಪ್ರದೇಶ, ನವದೆಹಲಿ, ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಶ್ರಯ ಕಂಡುಕೊಂಡಿದ್ದಾರೆ.
ನಿರ್ಜೀವ ಕಂದನಿಗೆ ಲಾಲಿ ಹಾಡುತ್ತಿರುವ ರೊಹಿಂಗ್ಯಾ ತಾಯಿ ಈಕೆ!
ಬಯೋಮೆಟ್ರಿಕ್ ಪಡೆಯಲು ಸೂಚನೆ
ದೇಶದೊಳಗೆ ಪ್ರವೇಶಿಸಿರುವ ರೊಹಿಂಗ್ಯಾ ನಿರಾಶ್ರಿತರ ಸ್ಥಿತಿಗತಿಗಳನ್ನು ಗುರುತಿಸಿ ಅವರ ಬಯೋಮೆಟ್ರಿಕ್ ಮಾಹಿತಿಗಳನ್ನು ಸಂಗ್ರಹಿಸಲು ರಾಜ್ಯಗಳಿಗೆ ಸೂಚಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಇತ್ತೀಚೆಗೆ ತಿಳಿಸಿದ್ದರು. ಹೀಗೆ ರಾಜ್ಯಗಳಿಂದ ಪಡೆದ ಬಯೋಮೆಟ್ರಿಕ್ ವರದಿಗಳನ್ನು ಕೇಂದ್ರ ಸರ್ಕಾರವು ರಾಜತಾಂತ್ರಿಕ ಮಾರ್ಗದ ಮೂಲಕ ಮ್ಯಾನ್ಮಾರ್ ಸರ್ಕಾರಕ್ಕೆ ಕಳಹಿಸಲಿದೆ ಎಂದು ಹೇಳಿದ್ದರು.