ಬೇಕಿದ್ದರೆ ಬಾಂಬೆ ಹೈಕೋರ್ಟ್ಗೆ ಹೋಗಿ: ರಿಪಬ್ಲಿಕ್ ಟಿವಿಗೆ ಸುಪ್ರೀಂಕೋರ್ಟ್ ಸೂಚನೆ
ನವದೆಹಲಿ, ಅಕ್ಟೋಬರ್ 15: ನಕಲಿ ಟಿಆರ್ಪಿ ಹಗರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ಗೆ ಹೋಗುವಂತೆ ರಿಪಬ್ಲಿಕ್ ಟಿವಿ ಮತ್ತು ಅದರ ಮುಖ್ಯ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರಿಗೆ ಸುಪ್ರೀಂಕೋರ್ಟ್ ಸೂಚಿಸಿದೆ.
ಟಿಆರ್ಪಿ ಹಗರಣದ ತನಿಖೆಗೆ ಸಂಬಂಧಿಸಿದಂತೆ ಚಾನೆಲ್ನ ಅಧಿಕಾರಿಗಳಿಗೆ ನೀಡಿದ ಸಮನ್ಸ್ ವಿರುದ್ಧ ರಿಪಬ್ಲಿಕ್ ಟಿವಿ ಮತ್ತು ಅರ್ನಾಬ್ ಗೋಸ್ವಾಮಿ ಸುಪ್ರೀಂಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಗೆ ಮುಂಬೈ ಪೊಲೀಸರು ವಿರೋಧ ವ್ಯಕ್ತಪಡಿಸಿದ್ದರು. ಅರ್ಜಿದಾರರ ಮೇಲೆ ದೊಡ್ಡ ಪ್ರಮಾಣದ ದಂಡ ವಿಧಿಸಿ ಅರ್ಜಿಯನ್ನು ತಿರಸ್ಕರಿಸುವಂತೆ ಮುಂಬೈ ಪೊಲೀಸರು ಅಫಿಡವಿಟ್ನಲ್ಲಿ ಮನವಿ ಮಾಡಿದ್ದರು.
ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿಗೆ ಮುಂಬೈ ಪೊಲೀಸರಿಂದ ಸಮನ್ಸ್ ಜಾರಿ
ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಯಾರು ಬೇಕಾದರೂ ಯಾವುದೇ ಅಪರಾಧ ತನಿಖೆಯಿಂದ ವಿನಾಯಿತಿ ಕೇಳಬಹುದಾಗಿದೆ ಎಂದು ಅರ್ಜಿಗೆ ವಿರೋಧ ವ್ಯಕ್ತಪಡಿಸಿದ್ದ ಮುಂಬೈ ಪೊಲೀಸರು, ತನಿಖೆಯ ಸ್ವರೂಪವನ್ನು ಆರೋಪಿ ವ್ಯಕ್ತಿ ನಿರ್ಧರಿಸುವ ಅಥವಾ ನಿರ್ದೇಶಿಸುವ ಅಧಿಕಾರ ಹೊಂದಿಲ್ಲ ಎಂದು ವಾದಿಸಿದ್ದರು.
ಇತರೆ ಚಾನೆಲ್ಗಳು ಪೊಲೀಸ್ ತನಿಖೆಗೆ ಸಹಕರಿಸುತ್ತಿವೆ. ಆದರೆ ರಿಪಬ್ಲಿಕ್ ಟಿವಿ ಮಾತ್ರ ಈ ಪ್ರಕ್ರಿಯೆಗೆ ಅಡ್ಡಿಯುಂಟುಮಾಡುತ್ತಿದೆ. ಪ್ರಕರಣದ ತನಿಖೆಯು ಆರಂಭಿಕ ಹಂತದಲ್ಲಿದೆ. ಇದನ್ನು ಸಿಬಿಐಗೆ ಒಪ್ಪಿಸಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿದ್ದರು.
ಟಿಆರ್ಪಿ ಹಗರಣದ ತನಿಖೆ ವಿರುದ್ಧ ರಿಪಬ್ಲಿಕ್ ಟಿವಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಲು ನಿರಾಕರಿಸಿದ ಸುಪ್ರೀಂಕೋರ್ಟ್, ಬೇಕಾದರೆ ವಿನಾಯಿತಿಗಾಗಿ ಎಲ್ಲ ನಾಗರಿಕರಂತೆ ಮೊದಲು ಬಾಂಬೆ ಹೈಕೋರ್ಟ್ಗೆ ಹೋಗಬಹುದು ಎಂದು ಹೇಳಿತು.
ನಕಲಿ ಟಿಆರ್ ಪಿ ಹಗರಣ: ತನಿಖೆಗೆ ಹಾಜರಾಗದ ರಿಪಬ್ಲಿಕ್ ನೆಟವರ್ಕ್ ಸಿಎಫ್ಓ
ಈ ಪ್ರಕರಣದ ಕುರಿತು ಮುಂಬೈ ಪೊಲೀಸ್ ಆಯುಕ್ತ ಪರಮ್ ವೀರ್ ಸಿಂಗ್ ಸಂದರ್ಶನಗಳನ್ನು ನೀಡಲು ಆರಂಭಿಸಿದ್ದಾರೆ ಎಂದು ಸುಪ್ರೀಂಕೋರ್ಟ್ ಇದೇ ವೇಳೆ ಅಸಮಾಧಾನ ವ್ಯಕ್ತಪಡಿಸಿತು.