ಕೋವಿಡ್ ಮರಣ ಪ್ರಮಾಣಪತ್ರ; ಸೆಪ್ಟೆಂಬರ್ 11ರೊಳಗೆ ಮಾರ್ಗಸೂಚಿ ರೂಪಿಸಲು ಕೋರ್ಟ್ ಸೂಚನೆ
ನವದೆಹಲಿ, ಸೆಪ್ಟೆಂಬರ್ 3: ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ಪರಿಹಾರ ಹಾಗೂ ಮರಣ ಪ್ರಮಾಣ ಪತ್ರ ನೀಡುವ ಸಂಬಂಧ ಮಾರ್ಗಸೂಚಿಗಳನ್ನು ಸೆಪ್ಟೆಂಬರ್ 11ರೊಳಗೆ ರೂಪಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರಕ್ಕೆ ಸೂಚನೆ ನೀಡಿದೆ.
ಸೆಪ್ಟೆಂಬರ್ 11ರ ಹೊತ್ತಿಗೆ ಜೂನ್ 30ರಂದು ನೀಡಿದ ನ್ಯಾಯಾಂಗ ನಿರ್ದೇಶನಕ್ಕೆ ಅನುಸಾರ ಅಫಿಡವಿಟ್ ಸಲ್ಲಿಸುವಂತೆ ಕೇಂದ್ರಕ್ಕೆ ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಹಾಗೂ ಅನಿರುದ್ಧ್ ಬೋಸ್ ಅವರನ್ನೊಳಗೊಂಡ ಪೀಠ ನಿರ್ದೇಶನ ನೀಡಿದೆ.
ಕೋವಿಡ್ನಿಂದ ಸಾವು; 1 ಲಕ್ಷ ರೂ. ಪರಿಹಾರಕ್ಕೆ ಅರ್ಜಿ ಸಲ್ಲಿಕೆ ಹೇಗೆ?
ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಮರಣ ಪ್ರಮಾಣ ಪತ್ರ ನೀಡುವ ಸಂಬಂಧ ಸೆಪ್ಟೆಂಬರ್ 3ರೊಳಗೆ ಅಫಿಡವಿಟ್ ಸಲ್ಲಿಸಲು ಆಗಸ್ಟ್ 16ರಂದು ಕೋರ್ಟ್ ತಿಳಿಸಿತ್ತು. ಆದರೆ ಶುಕ್ರವಾರ, ಕೇಂದ್ರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಒಂದು ವಾರ ಹೆಚ್ಚುವರಿ ಕಾಲಾವಕಾಶ ಕೋರಿದ್ದಾರೆ.
ಕೇಂದ್ರದ ಈ ವಿಳಂಬ ಧೋರಣೆ ಕುರಿತು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.
ಜೂನ್ 30ರಂದು ನೀಡಿದ ನಿರ್ದೇಶನದಲ್ಲಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬದವರಿಗೆ ಅಥವಾ ಅವಲಂಬಿತರಿಗೆ ಪರಿಹಾರ ನೀಡಲು ಆರು ವಾರಗಳೊಳಗೆ ಮಾರ್ಗಸೂಚಿ ರೂಪಿಸುವಂತೆ ನ್ಯಾಯಾಲಯ ಸೂಚನೆ ನೀಡಿತ್ತು. ಇದರೊಂದಿಗೆ, ಮರಣ ಪ್ರಮಾಣ ಪತ್ರ ನೀಡುವ ಪ್ರಕ್ರಿಯೆಯನ್ನು ಸರಳಗೊಳಿಸಬೇಕು ಎಂದು ಹೇಳಿತ್ತು. ಆದರೆ ಇನ್ನೂ ಈ ಕುರಿತು ಮಾರ್ಗಸೂಚಿ ರೂಪಿಸಲು ಕೇಂದ್ರಕ್ಕೆ ಸಾಧ್ಯವಾಗಿಲ್ಲ.
ಗದ್ದಲದ ನಡುವೆ ಸಂಸತ್ತಿನಲ್ಲಿ ನಡೆಯದ ಚರ್ಚೆ: ಅಸಮಧಾನ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ
ಈ ಕುರಿತು ನ್ಯಾಯಪೀಠ ಶುಕ್ರವಾರ ಅಸಮಾಧಾನ ವ್ಯಕ್ತಪಡಿಸಿದೆ. 'ಬಹಳ ಹಿಂದೆಯೇ ಈ ಆದೇಶವನ್ನು ಹೊರಡಿಸಿದ್ದೆವು. ಜೊತೆಗೆ ಕಾಲಾವಕಾಶವನ್ನೂ ಒಮ್ಮೆ ವಿಸ್ತರಿಸಿದ್ದೆವು. ನೀವು ಮಾರ್ಗಸೂಚಿಗಳನ್ನು ರೂಪಿಸುವ ಹೊತ್ತಿಗೆ ಕೊರೊನಾ ಮೂರನೇ ಅಲೆಯೂ ಬಂದು ಹೋಗಿರುತ್ತದೆ. ಆಗ ಇದು ಇನ್ನಷ್ಟು ದೊಡ್ಡ ಸವಾಲನ್ನು ನೀಡಿರುತ್ತದೆ' ಎಂದು ನ್ಯಾಯಮೂರ್ತಿ ಷಾ ಕೇಂದ್ರ ಸರ್ಕಾರದ ನಡೆಯನ್ನು ಟೀಕಿಸಿದ್ದಾರೆ.
ಕೊರೊನಾ ಸೋಂಕಿನಿಂದ ಸಾವು ಸಂಭವಿಸಿದ್ದರೆ, ಮರಣ ಪ್ರಮಾಣ ಪತ್ರದಲ್ಲಿ ಸಾವಿನ ಕಾರಣವನ್ನು ಕೋವಿಡ್ ಎಂದು ಸ್ಪಷ್ಟವಾಗಿ ಉಲ್ಲೇಖಿಸಬೇಕು. ಮರಣ ಹೊಂದಿದ ದಿನ ಹಾಗೂ ಕಾರಣವನ್ನು ನಮೂದಿಸಿರಬೇಕು ಎಂದು ಪೀಠ ಸ್ಪಷ್ಟಪಡಿಸಿದೆ.
ಮರಣ ಪ್ರಮಾಣ ಪತ್ರ ಪಡೆಯುವ ಪ್ರಕ್ರಿಯೆಯು ಜನರಿಗೆ ಸರಳವೆನಿಸಿರಬೇಕು. ಇದಕ್ಕಾಗಿ ಕೇಂದ್ರ ಸರ್ಕಾರ ಸರಳೀಕೃತ ವಿಧಾನ/ ಮಾರ್ಗಸೂಚಿಗಳನ್ನು ಹೊರತರುವ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿದೆ.
ಇದಕ್ಕೆ ಸೆಪ್ಟೆಂಬರ್ 11ರ ಒಳಗೆ ಅಫಿಡವಿಟ್ ಸಲ್ಲಿಸಲು ಸೂಚನೆ ನೀಡಿದೆ.