ನೋಟು ನಿಷೇಧ: ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್ ಪ್ರಶ್ನೆ
ದೊಡ್ಡ ಮುಖಬೆಲೆಯ ನೋಟನ್ನು ನಿಷೇಧಗೊಳಿಸುವ ನಿರ್ಧಾರ ತೆಗೆದುಕೊಂಡಾಗ ಅದು ಗೌಪ್ಯವಾಗಿತ್ತೇ, ವಾರವೊಂದಕ್ಕೆ 24 ಸಾವಿರ ರೂಪಾಯಿ ಹಣ ಹಿಂಪಡೆಯುವ ನಿರ್ಧಾರಕ್ಕೆ ಬಂದಿದ್ದು ಯಾಕೆ ಎಂದು ಕೇಂದ್ರ ಸರಕಾರವನ್ನು ಸುಪ್ರೀಂಕೋರ್ಟ್ ಪ್ರಶ್ನಿಸಿದೆ.
ನವದೆಹಲಿ, ಡಿ 9: ಐನೂರು ಮತ್ತು ಸಾವಿರ ರೂಪಾಯಿ ನೋಟನ್ನು ನಿಷೇಧಗೊಳಿಸುವ ನಿರ್ಧಾರ ತೆಗೆದುಕೊಂಡಾಗ ಅದು ಗೌಪ್ಯವಾಗಿತ್ತೇ ಎಂದು ಸರ್ವೋಚ್ಚ ನ್ಯಾಯಾಲಯ ಕೇಂದ್ರ ಸರಕಾರವನ್ನು ಪ್ರಶ್ನಿಸಿದೆ.
ಶುಕ್ರವಾರ (ಡಿ 9) ನೋಟು ನಿಷೇಧದ ಸಂಬಂಧ ಅರ್ಜಿಯೊಂದರ ವಿಚಾರಣೆಯ ವೇಳೆ, ವಾರವೊಂದಕ್ಕೆ 24 ಸಾವಿರ ರೂಪಾಯಿ ಹಣ ಹಿಂಪಡೆಯುವ ನಿರ್ಧಾರಕ್ಕೆ ಬಂದಿದ್ದು ಯಾಕೆ ಎಂದು ನ್ಯಾಯಮೂರ್ತಿ ಟಿ ಎಸ್ ಠಾಕೂರ್ ಕೇಂದ್ರ ಸರಕಾರವನ್ನು ಕೇಳಿದ್ದಾರೆ. (ರೈಲು ಟಿಕೆಟ್ ಖರೀದಿಗೂ ಹಳೇ ನೋಟು ನಡೆಯಲ್ಲಾ)
ಅರ್ಜಿದಾರರ ಪರ ವಾದ ಮಾಡುತ್ತಿದ್ದ ವಕೀಲ ಪ್ರಶಾಂತ್ ಭೂಷಣ್, ನೋಟು ನಿಷೇಧದಂತಹ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಮುನ್ನ ಕೇಂದ್ರ ಸರಕಾರ ಯಾವುದೇ ರೀತಿಯ ಪೂರ್ವ ತಯಾರಿ ಮಾಡಿಕೊಂಡಿರಲಿಲ್ಲ ಎಂದು ಹೇಳಿದ್ದಾರೆ.
ಎಟಿಎಂ ನಲ್ಲಿ ಮತ್ತು ಬ್ಯಾಂಕ್ ನಲ್ಲೂ ದುಡ್ಡಿಲ್ಲ, ಕೋಪರೇಟಿವ್ ಬ್ಯಾಂಕುಗಳಿಗೂ ನಿರ್ಭಂದ ಹೇರಲಾಗಿದೆ. ಜನರು ಕೇಂದ್ರದ ನಿರ್ಧಾರದಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆಂದು ಕೋರ್ಟಿನಲ್ಲಿ ಹೇಳಿಕೆ ನೀಡಿದ್ದಾರೆ.
ಸರಕಾರದ ಪರವಾಗಿ ಮಾತನಾಡುತ್ತಿದ್ದ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ, ಜನರಿಗೆ ಆಗುತ್ತಿರುವ ಸಮಸ್ಯೆಯ ಬಗ್ಗೆ ಸಂಪೂರ್ಣ ಅರಿವಿದೆ. ಸರಕಾರ ಎಲ್ಲಾ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ನ್ಯಾಯಾಲಯಕ್ಕೆ ಹೇಳಿದ್ದಾರೆ.
ಸರಕಾರ ಈ ವಿಚಾರದಲ್ಲಿ ಸುಮ್ಮನೆ ಕೂತಿಲ್ಲ, ಮುಂದಿನ 10-15 ದಿನಗಳಲ್ಲಿ ಎಲ್ಲಾ ಸಮಸ್ಯೆಗಳು ಬಗೆಹರಿಯಲಿದೆ ಎಂದು ರೋಹ್ಟಗಿ, ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.