ವಿಷ್ಣು ಅವತಾರ ಪ್ರಕರಣ: ಧೋನಿ ವಿರುದ್ಧದ ಪ್ರಕರಣ ವಜಾ
2013ರಲ್ಲಿ ಜನಪ್ರಿಯ ನಿಯತಕಾಲಿಕೆಯೊಂದರ ಮುಖಪುಟದಲ್ಲಿ ಧೋನಿ ಅವರನ್ನು ಹಿಂದೂಗಳ ಆರಾಧ್ಯ ದೈವವಾದ ವಿಷ್ಣುವಿನಂತೆ ಬಿಂಬಿಸಿದ ಫೋಟೋ ಹಾಕಲಾಗಿದ್ದ ವಿರುದ್ಧ ದಾಖಲಾಗಿದ್ದ ಪ್ರಕರಣ.
ನವದೆಹಲಿ, ಏಪ್ರಿಲ್ 20: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿರುದ್ಧ ದಾಖಲಾಗಿದ್ದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ ಆರೋಪಗಳ ಪ್ರಕರಣವನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ.
ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವ ಬಗ್ಗೆ ಧೋನಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಧೋನಿ ವಿರುದ್ಧ ದಾಖಲಾಗಿರುವ ಆರೋಪಗಳು ನ್ಯಾಯ ಸಮ್ಮತವಾಗಿಲ್ಲ ಎಂದು ಹೇಳಿದೆ.
2013ರಲ್ಲಿ ಜನಪ್ರಿಯ ನಿಯತಕಾಲಿಕೆಯೊಂದರ ಮುಖಪುಟದಲ್ಲಿ ಧೋನಿ ಅವರನ್ನು ಹಿಂದೂಗಳ ಆರಾಧ್ಯ ದೈವವಾದ ವಿಷ್ಣುವಿನಂತೆ ಬಿಂಬಿಸಿದ ಫೋಟೋ ಹಾಕಲಾಗಿತ್ತು. ಇದು ವಿವಾದಕ್ಕೆ ಕಾರಣವಾಗಿ, ಕರ್ನಾಟಕ ಹೈಕೋರ್ಟ್ ನಲ್ಲಿ ಧೋನಿ ವಿರುದ್ಧ ಪ್ರಕರಣ ದಾಖಲಾಗಿತ್ತು.
ಮೊದಲಿಗೆ ಈ ಪ್ರಕರಣ ಕರ್ನಾಟಕ ಹೈಕೋರ್ಟ್ ನಲ್ಲಿ ದಾಖಲಾಗಿತ್ತು. ಆ ಪ್ರಕರಣದ ವಿಚಾರಣೆ ನಡೆಸಿದ್ದ ರಾಜ್ಯ ಹೈಕೋರ್ಟ್, ಧೋನಿಗೆ ಸಮನ್ಸ್ ಜಾರಿಗೊಳಿಸಿತ್ತು. ಆನಂತರ ಧೋನಿ ಇದರ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. 2016ರಲ್ಲಿ, ಸುಪ್ರೀಂ ಕೋರ್ಟ್ ಆ ಪ್ರಕರಣವನ್ನು ರದ್ದುಗೊಳಿಸಿತ್ತು.
ಆದರೆ, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಂದು ಎಫ್ ಐಆರ್ ದಾಖಲಾಗಿದ್ದರಿಂದಾಗಿ, ಧೋನಿ ಮತ್ತೆ ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು. ಅದರ ವಿಚಾರಣೆಯ ಕೆಲವಾರು ದಿನಗಳಿಂದ ನಡೆಯುತ್ತಲೇ ಇತ್ತು.